Advertisement

IND V/s SA: “ನ್ಯೂ ವಾಂಡರರ್ನ”ಲ್ಲಿ ಹೊಸ ಆರಂಭ

11:11 PM Dec 16, 2023 | Team Udayavani |

ಜೊಹಾನ್ಸ್‌ಬರ್ಗ್‌: ವಿಶ್ವಕಪ್‌ ಫೈನಲ್‌ನಲ್ಲಿ ಅನುಭವಿಸಿದ ಆಘಾತಕಾರಿ ಸೋಲಿನ ಬಳಿಕ “ರೀಬೂಟ್‌” ಆಗಬೇಕಾದ ಅಗತ್ಯ ದೊಂದಿಗೆ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಗೆ ಅಣಿಯಾಗಿದೆ. 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಮತ್ತು 2027ರ ವಿಶ್ವಕಪ್‌ ತಯಾರಿಯ ಮೊದಲ ಮೆಟ್ಟಿಲು ಇದಾಗಿದ್ದು, “ನ್ಯೂ -ಜೆನ್‌” ಆಟಗಾರರು ಭಾರತೀಯ ತಂಡದ ಭವಿಷ್ಯವನ್ನು ಬರೆಯುವ ಕಾಲ ಇದಾಗಿದೆ. ಮೊದಲ ಮುಖಾ ಮುಖೀ ರವಿವಾರ “ನ್ಯೂ ವಾಂಡರರ್”ನಲ್ಲಿ ನಡೆಯಲಿದೆ.

Advertisement

ಕಳೆದ ಒಂದೂವರೆ ದಶಕ ದಿಂದಲೂ ಸೀಮಿತ ಓವರ್‌ಗಳ ತಂಡದ ಭಾಗವಾಗಿದ್ದ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಈಗ ಸಂಧ್ಯಾಕಾಲದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಪಾಲ್ಗೊಳ್ಳದೆ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಇವರ ಗೈರಲ್ಲಿ ವಿಕೆಟ್‌ ಕೀಪರ್‌- ಬ್ಯಾಟರ್‌ ಕೆ.ಎಲ್‌. ರಾಹುಲ್‌ ಅವರಿಗೆ ನಾಯಕತ್ವ ವಹಿಸಲಾಗಿದೆ. ಇದೊಂದು ದೂರದೃಷ್ಟಿಯ ಆಯ್ಕೆ. ಇನ್ನು 4 ವರ್ಷಗಳ ಬಳಿಕ ನಡೆಯುವ ವಿಶ್ವಕಪ್‌ನಲ್ಲಿ ರೋಹಿತ್‌, ಕೊಹ್ಲಿ ಮೊದಲಾದವರು ಆಡುವ ಸಾಧ್ಯತೆ ಕಡಿಮೆ. ಹೀಗಾಗಿ ನಾಯಕತ್ವಕ್ಕೆ ರಾಹುಲ್‌ ಸೂಕ್ತ ಆಯ್ಕೆ ಎಂಬುದು ಬಿಸಿಸಿಐ ತೀರ್ಮಾನವಾಗಿದ್ದರಲ್ಲಿ ಅಚ್ಚರಿಯೇನಿಲ್ಲ.

ಏಕದಿನ ತಂಡದಲ್ಲೂ ಹೊಸತನ
ಟಿ20ಯಂತೆ ದಕ್ಷಿಣ ಆಫ್ರಿಕಾಕ್ಕೆ ಬಂದಿಳಿದ ಏಕದಿನ ತಂಡದಲ್ಲೂ ಹೊಸತನ ಗೋಚರಿಸುತ್ತದೆ. ರೋಹಿತ್‌ ಜತೆಗಾರ ಶುಭಮನ್‌ ಗಿಲ್‌ ಕೂಡ ಇಲ್ಲಿ ಕಾಣಿಸಿಲ್ಲ. ಯಶಸ್ವಿ ಜೈಸ್ವಾಲ್‌, ಇಶಾನ್‌ ಕಿಶನ್‌ ಅವರನ್ನೂ ಹೊರಗಿಡಲಾಗಿದೆ. ಹೀಗಾಗಿ ಋತುರಾಜ್‌ ಗಾಯಕ್ವಾಡ್‌-ಸಾಯಿ ಸುದರ್ಶನ್‌ ರೂಪದ ನವ ಜೋಡಿಯೊಂದು ಭಾರತದ ಇನ್ನಿಂಗ್ಸ್‌ ಆರಂಭಿಸಬೇಕಿದೆ. ಇವರಲ್ಲಿ ಸಾಯಿ ಸುದರ್ಶನ್‌ ಈವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿ ದವರಲ್ಲ. ಆದರೆ 2023ರ ಐಪಿಎಲ್‌ನಲ್ಲಿ ಗುಜರಾತ್‌ ಪರ ಎಂಟೇ ಇನ್ನಿಂಗ್ಸ್‌ಗಳಲ್ಲಿ 362 ರನ್‌ ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಸದ್ಯ ಇಂಡಿಯಾದ ಸ್ಪೆಷಲಿಸ್ಟ್‌ ಓಪನರ್‌ಗಳೆಂದರೆ ಇವರಿಬ್ಬರು ಮಾತ್ರ. ಅನಿವಾರ್ಯವಾದರೆ ರಾಹುಲ್‌ ಬರಬೇಕಾದೀತು.

ಮಧ್ಯಮ ಕ್ರಮಾಂಕದ ಲೈನ್‌ಅಪ್‌ನಲ್ಲಿ ಶ್ರೇಯಸ್‌ ಅಯ್ಯರ್‌, ಕೆ.ಎಲ್‌. ರಾಹುಲ್‌, ತಿಲಕ್‌ ವರ್ಮ, ರಿಂಕು ಸಿಂಗ್‌, ಸಂಜು ಸ್ಯಾಮ್ಸನ್‌ ಇದ್ದಾರೆ. ಆದರೆ ಅಯ್ಯರ್‌ ಕೇವಲ ಮೊದಲ ಪಂದ್ಯಕ್ಕಷ್ಟೇ ಸೀಮಿತ. ಬಳಿಕ ಇವರು ಟೆಸ್ಟ್‌ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಆಲ್‌ರೌಂಡರ್‌ಗಳ ಯಾದಿಯಲ್ಲಿ ಇಬ್ಬರಿದ್ದಾರೆ-ಅಕ್ಷರ್‌ ಪಟೇಲ್‌ ಮತ್ತು ವಾಷಿಂಗ್ಟನ್‌ ಸುಂದರ್‌. ಇವರಲ್ಲೊಬ್ಬರು ಅವಕಾಶ ಪಡೆ ಯಬಹುದು.

Advertisement

ಸ್ಪಿನ್ನರ್‌ಗಳ ಅವಲಂಬನೆ
ಭಾರತದ ವೇಗದ ಬೌಲಿಂಗ್‌ ವಿಭಾಗ ಘಾತಕವಲ್ಲ. ಅನುಭವಿಗಳಾದ ಬುಮ್ರಾ, ಸಿರಾಜ್‌, ಶಮಿ ಗೈರು ಎದ್ದು ಕಾಣುತ್ತದೆ. ಅರ್ಷದೀಪ್‌ ಸಿಂಗ್‌, ಆವೇಶ್‌ ಖಾನ್‌, ಮುಕೇಶ್‌ ಕುಮಾರ್‌ ಬಿಗ್‌ ಹಿಟ್ಟರ್‌ಗಳನ್ನೊಳಗೊಂಡ ದಕ್ಷಿಣ ಆಫ್ರಿಕಾ ಸರದಿಯನ್ನು ಹೇಗೆ ನಿಯಂತ್ರಿಸಬಲ್ಲರು ಎಂಬುದು ದೊಡ್ಡ ಪ್ರಶ್ನೆ. ಹೀಗಾಗಿ ಭಾರತ ಸ್ಪಿನ್ನರ್‌ಗಳನ್ನೇ ಹೆಚ್ಚು ಅವಲಂಬಿಸುವುದು ಸೂಕ್ತ.
ಕೊನೆಯ ಟಿ20 ಪಂದ್ಯದಲ್ಲಿ ಹರಿಣಗಳನ್ನು ಹೆದರಿಸಿದ ಕುಲದೀಪ್‌ ಯಾದವ್‌, ಅಕ್ಷರ್‌ ಪಟೇಲ್‌ ಮತ್ತು ತಂಡಕ್ಕೆ ಮರಳಿದ ಯಜುವೇಂದ್ರ ಚಹಲ್‌ ಅವರನ್ನೊಳಗೊಂಡ ನಮ್ಮ ಸ್ಪಿನ್‌ ವಿಭಾಗ ಹೆಚ್ಚು ಬಲಿಷ್ಠ. ಆಫ್ಸ್ಪಿನ್ನಿಂಗ್‌ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಮತ್ತೂಂದು ಆಯ್ಕೆ. ಈ ದಕ್ಷಿಣ ಆಫ್ರಿಕನ್ನರು ಸ್ಪಿನ್‌ ದಾಳಿ ನಿಭಾಯಿಸುವುದರಲ್ಲೂ ಹಿಂದೆ ಎಂಬುದು ಈಗಾಗಲೇ ಸಾಬೀತಾಗಿರುವ ಸಂಗತಿ.

ದಕ್ಷಿಣ ಆಫ್ರಿಕಾ ಕೂಡ ಭಿನ್ನ
ಐಡನ್‌ ಮಾರ್ಕ್‌ರಮ್‌ ನೇತೃತ್ವದ ದಕ್ಷಿಣ ಆಫ್ರಿಕಾ ಕೂಡ ವಿಶ್ವಕಪ್‌ ತಂಡಕ್ಕಿಂತ ಭಿನ್ನವಾಗಿದೆ. ಅಲ್ಲಿ ಶತಕಗಳ ಮೇಲೆ ಶತಕ ಬಾರಿಸಿದ ಕ್ವಿಂಟನ್‌ ಡಿ ಕಾಕ್‌ ನಿವೃತ್ತಿ ಘೋಷಿಸಿದ್ದಾರೆ. ನಾಯಕ ಟೆಂಬ ಬವುಮ ಅವರನ್ನು ಕೈಬಿಡಲಾಗಿದೆ. ಹೀಗಾಗಿ ಆತಿಥೇಯ ತಂಡವೂ ನೂತನ ಆರಂಭಿಕ ಜೋಡಿಯನ್ನು ಅವಲಂಬಿಸಬೇಕಿದೆ. ರೀಝ ಹೆಂಡ್ರಿಕ್ಸ್‌ ಮತ್ತು ಎಡಗೈ ಆಟಗಾರ ಟೋನಿ ಡಿ ಝೋರ್ಜಿ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ.

ಡುಸೆನ್‌, ಮಾರ್ಕ್‌ರಮ್‌, ಮಿಲ್ಲರ್‌, ಕ್ಲಾಸೆನ್‌ ಅವರನ್ನೊಳಗೊಂಡ ತಂಡದ ಮಧ್ಯಮ ಕ್ರಮಾಂಕ ಬಲಿಷ್ಠವಷ್ಟೇ ಅಲ್ಲ, ಘಾತಕವೂ ಹೌದು. ಫೆಲುಕ್ವಾಯೊ, ಕೇಶವ್‌ ಮಹಾರಾಜ್‌, ಶಮ್ಸಿ, ಬರ್ಗರ್‌, ವಿಲಿಯಮ್ಸ್‌ ಬೌಲಿಂಗ್‌ ವಿಭಾಗವನ್ನು ನೋಡಿಕೊಳ್ಳಲಿದ್ದಾರೆ.

ವಿಶ್ವಕಪ್‌ ಸೆಮಿಫೈನಲ್‌ನಾಚೆ ಹೆಜ್ಜೆಯನ್ನೇ ಇಡದ ದಕ್ಷಿಣ ಆಫ್ರಿಕಾ ಕೂಡ ಹೊಸ ಆರಂಭದ ನಿರೀಕ್ಷೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next