Advertisement

ಹೆಚ್ಚಿದ ನೀರಿನ ಹಾಹಾಕಾರ

10:02 AM May 29, 2019 | Suhan S |

ಬನಹಟ್ಟಿ: ಒಂದೂವರೆ ತಿಂಗಳಿಂದ ರಬಕವಿ- ಬನಹಟ್ಟಿ, ರಾಮಪುರ ಹಾಗೂ ಹೊಸೂರ ಜನತೆ ಹನಿ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಆದರೆ, ಕಳೆದ ಐದಾರು ದಿನಗಳಿಂದ ನೀರಿನ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.

Advertisement

ಸ್ಥಳೀಯ ಗುಡ್ಡದ ಪ್ರದೇಶದಲ್ಲಿ ಜನರು ನೀರಿಗಾಗಿ ನಾಲ್ಕಾರು ದಿನಗಳ ಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ. ಇಲ್ಲಿ ಸರತಿಯಲ್ಲಿಟ್ಟ ಕೊಡಗಳನ್ನು ಯಾರು ಮನೆಗೆ ತೆಗೆದುಕೊಂಡು ಹೋಗಿಲ್ಲ. ವಾರಕ್ಕೆ ಹತ್ತಾರು ಕೊಡು ನೀರು ಸಿಗುವುದು ಕೂಡಾ ದುರ್ಬಲವಾಗಿದೆ. ಬೋರವೆಲ್ ಸಮರ್ಪಕವಾಗಿ ನೀರು ಕೊಡುತ್ತಿಲ್ಲ. ಆದರೂ ಈ ಭಾಗದಲ್ಲಿ ಟ್ಯಾಂಕರ್‌ ಕಳುಹಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನೀರಿನ ಟ್ಯಾಂಕ್‌ ಹಿಂದುಗಡೆಯ ಸಾರ್ವಜನಿಕರು.

ಟ್ಯಾಂಕರ್‌ ನೀರು ಸಾಲುತ್ತಿಲ್ಲ: ಆದರೆ ನಗರಸಭೆಯವರು ಕೂಡಾ ನೀರು ಪೂರೈಸಲು ಹರಸಾಹಸ ಮಾಡುತ್ತಿದ್ದಾರೆ. ನೀರಿನ ಅವಶ್ಯಕತೆ ಇದ್ದ ಪ್ರದೇಶದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 8 ಟ್ಯಾಂಕರ್‌ಗಳ ಮೂಲಕ 28 ಟ್ರಿಪ್‌ ನೀರು ಪೂರೈಸಲಾಗುತ್ತಿದೆ. ಆದರೂ ನೀರಿನ ಸಮಸ್ಯೆ ಮಾತ್ರ ಕಡಿಮೆ ಆಗಿಲ್ಲ. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿದರೂ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ನೀರು ಎಲ್ಲೆಂದರಲ್ಲಿ ಸಾಕಾಗುತ್ತಿಲ್ಲ.

ಶುದ್ಧ ಕುಡಿಯುವ ನೀರಿನ ಘಟಕ ಬಂದ್‌: ಶುದ್ಧ ನೀರು ಪೂರೈಸುತ್ತಿದ್ದ ಕಾಡಸಿದ್ದೇಶ್ವರ ದೇವಸ್ಥಾನ ಹತ್ತಿರದ ಘಟಕ ಕೂಡಾ ಬಂದ್‌ ಆಗಿದೆ. ಇದರಿಂದ ತೀವ್ರ ತೊಂದರೆಯಾಗಿದೆ. ನಗರದಲ್ಲಿ ಸರಕಾರಿ 5 ಶುದ್ಧ ನೀರಿನ ಘಟಕಗಳಿದ್ದರೂ ಕೂಡ ನೀರಿಲ್ಲದೆ ತನ್ನ ಕಾರ್ಯ ಸ್ಥಗಿತಗೊಳಿಸಿವೆ. ಜನತೆಗೆ ಕುಡಿಯಲು ಶುದ್ಧ ನೀರಿಗಾಗಿ ಲಕ್ಷ್ಮೀ ನಗರ, ಮಂಗಳವಾರ ಪೇಟೆ ಹೊರತುಪಡಿಸಿದರೆ ದೂರದ 2-3 ಕಿ.ಮೀ. ದೂರ ಸಾಗಬೇಕಿದೆ.

ಆಡಳಿತ ಮತ್ತು ವಿರೋಧ ಪಕ್ಷದವರು ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಿಸುವಲ್ಲಿ ವಿಫಲರಾಗಿದ್ದಾರೆ. ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಲಾಯಿತು. ಆದರೆ, ರಬಕವಿ ಬನಹಟ್ಟಿ ಹತ್ತಿರ ಮಹಿಷವಾಡಗಿ ಬ್ಯಾರೇಜ್‌ಗೆ ಬಂದು ತಲುಪುವುದು ಕೂಡಾ ಕಷ್ಟವಾಗಿದೆ.

Advertisement

ಉತ್ತಮ ಮಳೆ ಬಿದ್ದರೂ ನೀರಿನ ಬವಣೆ ಮಾತ್ರ ತಪ್ಪಿಲ್ಲ. ನೇಕಾರಿಕೆಯ ನಗರಗಳು ಈಗ ನೀರಿಗಾಗಿ ಪರದಾಡುತ್ತಿವೆ. ನೇಕಾರರು ಮನೆಯ ಉದ್ಯೋಗವನ್ನು ಬಿಟ್ಟು ನೀರಿಗಾಗಿ ಹಗಲು ರಾತ್ರಿ ಪರದಾಡುವಂತಾಗಿದೆ.

ಸ್ಥಳೀಯ 31 ವಾರ್ಡ್‌ಗಳಲ್ಲಿ ತಾರತಮ್ಯ ಎಸಗದೆ ನೀರು ಪೂರೈಕೆಗೆ ಸನ್ನದ್ಧವಾಗಿದೆ. ಸದ್ಯಕ್ಕೆ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ. ಎಲ್ಲ ಕಡೆ ನಿಯಂತ್ರಣದಲ್ಲಿದೆ. ಬೋರವೆಲ್ಲಗಳು ಬಂದ್‌ ಆದ ಕಡೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದ್ದೇವೆ. ಅಲ್ಲದೇ ಖಾಸಗಿ ಬೋರವೆಲ್ಗಳ ಮಾಲೀಕರ ಮನವೊಲಿಸಿ ಅವರಿಂದಲು ನೀರು ಕೊಡಿಸುವ ವ್ಯವಸ್ಥೆ ಮಾಡಿದ್ದೇವೆ. •ಆರ್‌. ಎಂ. ಕೊಡಗೆ, ಪೌರಾಯುಕ್ತರು ರಬಕವಿ-ಬನಹಟ್ಟಿ ನಗರಸಭೆ
Advertisement

Udayavani is now on Telegram. Click here to join our channel and stay updated with the latest news.

Next