Advertisement

ಹೆಚ್ಚಿದ ಸೋಂಕು.. ಡ್ಯೂಟಿಗೆ ಬಂಕು..

06:27 AM Jul 08, 2020 | Lakshmi GovindaRaj |

ಬೆಂಗಳೂರು: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೋವಿಡ್‌ 19 ಸೋಂಕು ಪ್ರಕರಣಗಳಿಗೂ, ಬಿಎಂಟಿಸಿಯಲ್ಲಿ ಚಾಲನಾ ಸಿಬ್ಬಂದಿ “ಡ್ಯೂಟಿ’ಗೆ ಚಕ್ಕರ್‌ ಹಾಕುವುದಕ್ಕೂ ಸಂಬಂಧ ಇದೆಯಾ? – ಅತ್ಯಂತ ನಿಕಟ ಸಂಬಂಧ ಇದೆ. ಈ ಕಾರಣಕ್ಕಾಗಿಯೇ ಚಾಲನಾ ಸಿಬ್ಬಂದಿ ಹಾಜರಾತಿಯಲ್ಲಿ ಕಳೆದ ಒಂದು ವಾರದಿಂದ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡುಬರುತ್ತಿದೆ ಎನ್ನುತ್ತವೆ ಬಿಎಂಟಿಸಿ ಮೂಲಗಳು. ಪ್ರಕರಣಗಳ ಸಂಖ್ಯೆ ಇದೇ ರೀತಿ ಏರಿಕೆ ಕ್ರಮದಲ್ಲಿ ಸಾಗಿದರೆ,  ಇನ್ನಷ್ಟು ಸಿಬ್ಬಂದಿ ಬಂಕ್‌ ಮಾಡುವ ಸಾಧ್ಯತೆಯಿದ್ದು, ಆಗ ಅದು ಕಾರ್ಯಾಚರಣೆ ಮೇಲೆ ಪರಿಣಾಮ ಬೀಳುವ ಸಾಧ್ಯತೆಯೂ ಇದೆ.

Advertisement

ನಗರಕ್ಕೆ ಹೊಂದಿಕೊಂಡಂತೆ ಕೆಲವರು ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ,  ಗುಂಡ್ಲುಪೇಟೆ, ತುಮಕೂರು ಮತ್ತಿತರ ಕಡೆ ನೆಲೆಸಿದ್ದಾರೆ. ನಿತ್ಯ ಬೆಂಗಳೂರಿಗೆ ಬಂದು, ಕರ್ತವ್ಯದ ಮೇಲೆ ಬಸ್‌ಗಳಲ್ಲಿ ಊರೆಲ್ಲ ತಿರುಗಾಡಿ, ವಾಪಸ್‌ ತಮ್ಮ ಊರುಗಳಿಗೆ ತೆರಳಬೇಕಾಗಿದೆ. ಆದರೆ, ಕೋವಿಡ್‌ 19 ಪ್ರಕರಣಗಳು ವ್ಯಾಪಕವಾಗಿ  ಹರಡುತ್ತಿರುವುದರಿಂದ ಈ ಸಿಬ್ಬಂದಿಯನ್ನು ಸ್ಥಳೀಯರು ಅನುಮಾನ ಮತ್ತು ಆತಂಕದಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲವೆಡೆ ಸ್ವತಃ ಸಿಬ್ಬಂದಿ ಭಯದಿಂದ ಮನೆಯಿಂದ ಹೊರಬೀಳಲು ಹಿಂದೇಟು ಹಾಕುತ್ತಿದ್ದಾರೆ.

ಊರುಗಳು ಸೀಲ್‌ಡೌನ್‌: ಮತ್ತೂಂದೆಡೆ ಕೋವಿಡ್‌ 19ಯೇತರ ಕಾಯಿಲೆಗಳಿಂದ ಬಳಲುತ್ತಿರುವವರು ರಜೆಗಳು ಖಾಲಿ ಆಗಿರುವುದರಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹೊರಬಿದ್ದರೆ, ನೂರಾರು ಜನರೊಂದಿಗೆ ಇಡೀ ಬೆಂಗಳೂರು ಸುತ್ತು  ಹಾಕಬೇಕು. ಅದು ಜೀವಕ್ಕೇ ಆಪತ್ತು ತಂದೀತು ಎಂಬ ಭೀತಿ. ಇನ್ನೊಂದೆಡೆ ಮನೆಯಲ್ಲೇ ಕುಳಿತರೆ ಜೀವನ ನಿರ್ವಹಣೆಗೆ ಆಪತ್ತು. ಇದರಿಂದ ದಿಕ್ಕುತೋಚದಂತಾಗಿದ್ದಾರೆ. ಈ ಮಧ್ಯೆ “ಸರ್‌, ಊರು ಸೀಲ್‌ಡೌನ್‌ ಆಗಿದೆ. ಬರಲು ಆಗುವುದಿಲ್ಲ…’, “ನನಗೆ ಹುಷಾರಿಲ್ಲ. ಜ್ವರದ ಲಕ್ಷಣಗಳಿವೆ…’, “ಮೈಕೈ ನೋವು ಹಾಗೂ ಶೀತ ಇರುವುದರಿಂದ ಬರಲು ಆಗುವುದಿಲ್ಲ ಸರ್‌…’ ಎಂಬ ನೆಪದಲ್ಲಿ ರಜೆ ಚೀಟಿಗಳು ಮೇಲಧಿಕಾರಿಗಳಿಗೆ ಬರು ತ್ತಿವೆ.

ಅತ್ತ ನಿರಾಕರಿಸುವಂತೆಯೂ  ಇಲ್ಲ; ಇತ್ತ ರಜೆ ನೀಡುವಂತೆಯೂ ಇಲ್ಲದ ಸ್ಥಿತಿ ಇದೆ. ನಿಯಮದ ಪ್ರಕಾರ ಚಾಲನಾ ಸಿಬ್ಬಂದಿ ಕಡ್ಡಾಯವಾಗಿ ಕೇಂದ್ರಭಾಗದಲ್ಲೇ ಇರಬೇಕು. ಇದಕ್ಕೆ ಪೂರಕವಾಗಿ ಮನೆ ಬಾಡಿಗೆ ಭತ್ಯೆ ನೀಡಲಾಗುತ್ತಿದೆ. ಹಾಗಾಗಿ, ಚಾಲನಾ ಸಿಬ್ಬಂದಿ  ಕಾರಣಗಳನ್ನೂ ನೀಡುವಂತಿ ಲ್ಲ. ಆದರೂ ಮಾನವೀಯತೆ ದೃಷ್ಟಿಯಿಂದ ಪರಿಗಣಿ ಸಲಾಗುತ್ತಿದೆ. ಇನ್ನು 50 ವರ್ಷ ಮೇಲ್ಪಟ್ಟವರಿಗೆ ಅವರ ಖಾತೆಯಲ್ಲಿದ್ದ ರಜೆಗಳನ್ನು ಎಂದಿನಂತೆ ನೀಡಲಾಗುತ್ತಿದೆ. ಈ ವರ್ಗದ ಸಿಬ್ಬಂದಿ ಸಂಖ್ಯೆ  600- 700 ಮಾತ್ರ ಎಂದು ಸಂಚಾರ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

3-4 ಸಾವಿರ ಸಿಬ್ಬಂದಿ ಗೈರು!: “ಕಳೆದ ಒಂದು ವಾರದಲ್ಲಿ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಯಲ್ಲಿ ಅದರಲ್ಲೂ ರಾತ್ರಿಪಾಳಿಯಲ್ಲಿ ಗಣನೀಯ ಪ್ರಮಾಣ  ದಲ್ಲಿ ಗೈರುಹಾಜರಾತಿ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಅನುಸೂಚಿಗಳ  ಸಂಖ್ಯೆಯೂ ಕಡಿತಗೊಂಡಿದೆ. ಆದರೆ, ಇದಕ್ಕೆ ಪೂರಕವಾಗಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗಿದ್ದರಿಂದ ಸಮಸ್ಯೆ ಆಗಿಲ್ಲ ದಿರಬಹು ದು. ಆದಾಯದಲ್ಲಂತೂ ಖೋತಾ ಆಗಿದ್ದು, ಇದೇ ಸ್ಥಿತಿ ಮುಂದುವರಿದರೆ ಡೀಸೆಲ್‌ ಖರ್ಚು  ಕೂಡ ಬರದಂತಾಗಲಿದೆ’ ಎಂದು ಬಿಎಂಟಿಸಿ ಅಧಿಕಾರಿಯೊಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

Advertisement

“ಬಿಎಂಟಿಸಿ ಬಸ್‌ಗಳಲ್ಲಿ ಈ ಮೊದಲು ನಿತ್ಯ ಸರಾಸರಿ ಹತ್ತು ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ಇದರಿಂದ 1.20 ಕೋಟಿ  ರೂ. ಆದಾಯ ಬರುತ್ತಿತ್ತು. ಆದರೆ, ಎರಡು-ಮೂರು ದಿನಗಳಿಂದ ಪ್ರಯಾಣಿಕರ ಸಂಖ್ಯೆ ಸುಮಾರು ಏಳು ಲಕ್ಷಕ್ಕೆ ಕುಸಿದಿದ್ದು, ಒಂದು ಕೋಟಿಗಿಂತ ಕಡಿಮೆ ಆದಾಯ ಹರಿದುಬರುತ್ತಿದೆ. ರಾತ್ರಿಪಾಳಿಯಲ್ಲಿ ಹೆಚ್ಚು ಬಿಸಿ ತಟ್ಟಿದೆ. ಅಂದಾಜು  3-4 ಸಾವಿರ ಚಾಲನಾ ಸಿಬ್ಬಂದಿ ಗೈರುಹಾಜರಾಗಿದ್ದಾರೆ’ ಎಂದು ಸಂಸ್ಥೆ ಅಧಿಕಾರಿಗಳು ವಿವರಿಸಿದರು.

ರೂಂ ಮಾಡಿಕೊಂಡಿರಿ…!: ನಿತ್ಯ ನೀವು (ಚಾಲನಾ ಸಿಬ್ಬಂದಿ) ನೂರಾರು ಜನರೊಂದಿಗೆ ಬೆಂಗಳೂರು ಸುತ್ತಾಡಿ ಊರಿಗೆ ಬರುತ್ತೀರಾ. ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಸ್ವಲ್ಪ ದಿನ ಅಲ್ಲಿಯೇ ರೂಂ ಮಾಡಿಕೊಂಡು  ಇದ್ದುಬಿಡಿ… – ಹೀಗಂತ ಊರಿನವರು ಸೂಚಿಸುತ್ತಿದ್ದಾರೆ ಎಂದು ಗುಂಡ್ಲುಪೇಟೆಯ ಮಹೇಶ್‌ ಅಲವತ್ತುಕೊಂಡರು.

“ರಾತ್ರಿ ಪಾಳಿ ಕೆಲಸ ಮಾಡುವುದರಿಂದ ಬೆಳಗ್ಗೆ ಡ್ಯೂಟಿಗೆ ಹೋದವನು, ಮರುದಿನ ಮಧ್ಯಾಹ್ನ ವಾಪಸ್ಸಾಗುತ್ತೇನೆ. ಆಗ  ಊರಿನವರು ಅನುಮಾನದಿಂದ ನೋಡುತ್ತಾರೆ. ಕೆಲವರು ಬೆಂಗಳೂರಿನಲ್ಲೇ ಸ್ವಲ್ಪ ದಿನದ ಮಟ್ಟಿಗೆ ರೂಂ ಮಾಡಿಕೊಂಡು ಇರಬಹುದಲ್ಲಾ? ಎಂದು ಉಚಿತ ಸಲಹೆಯನ್ನೂ ನೀಡಿದ್ದಾರೆ. ಆದರೆ, ಈಗಿನ ಸ್ಥಿತಿಯಲ್ಲಿ ಹೆಂಡತಿ, ಮಕ್ಕಳನ್ನು  ಬಿಟ್ಟು ಬೆಂಗಳೂರಿನಲ್ಲಿ ಇರುವುದು ಹೇಗೆ ಎಂದು ಅವರು ಕೇಳಿದರು.

ಸ್ಥಳೀಯರಲ್ಲಿ ಮನೆ ಮಾಡಿದ ಆತಂಕ: ಬಿಎಂಟಿಸಿ ಮಾತ್ರವಲ್ಲ; ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಸಾವಿರಾರು ಸರ್ಕಾರಿ ನೌಕರರು ನಗರಕ್ಕೆ ಹೊಂದಿಕೊಂಡ ಊರುಗಳಿಂದ ನಿತ್ಯ ಬೆಂಗಳೂರಿಗೆ ಬಂದುಹೋಗುತ್ತಾರೆ.  ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸ್ಥಳೀಯರಿಗೆ ಆತಂಕ ಮನೆ ಮಾಡಿದೆ. ಆದರೆ, ನೌಕರರು ನೇರವಾಗಿ ಕಚೇರಿಗಳಿಗೆ ಹೋಗಿಬರುತ್ತಾರೆ. ಹಾಗಾಗಿ, ಅವರ ಬಗ್ಗೆ ಅಷ್ಟೇನೂ ತಕರಾರುಗಳು  ಕೇಳಿಬರುತ್ತಿಲ್ಲ ಎಂದು ದೊಡ್ಡಬಳ್ಳಾಪುರ, ರಾಮನಗರ ಸೇರಿದಂತೆ ನಾನಾ ಕಡೆಗಳಿಂದ ಆಗಮಿಸುವ ಸರ್ಕಾರಿ ನೌಕರರು “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next