Advertisement

ಮೈಸೂರಲ್ಲಿ ಹೆಚ್ಚಿದ ಮಾನವ-ವನ್ಯಜೀವಿ ಸಂಘರ್ಷ; ಚಿರತೆ, ಹುಲಿ ಉಪಟಳಕ್ಕೆ ಜನ ಹೈರಾಣು

06:00 PM Dec 16, 2022 | Team Udayavani |

ಮೈಸೂರು: ಇತ್ತೀಚಿನ ದಿನಗಳಲ್ಲಿ ಮೈಸೂರು ಗ್ರಾಮಾಂತರ ಭಾಗ ಸೇರಿದಂತೆ ನಗರ ಪ್ರದೇ ಶಗಳಲ್ಲೂ ಮಾನವ – ವನ್ಯಜೀವಿ ಸಂಘರ್ಷ ಏರ್ಪಡುತ್ತಿರುವುದು ಆತಂಕಕ್ಕೀಡು ಮಾಡಿದೆ.

Advertisement

ಚಿರತೆಯೊಂದು ಕಳೆದ ಒಂದು ತಿಂಗಳ ಅಂತರದಲ್ಲಿ ಇಬ್ಬರನ್ನು ಬಲಿ ಪಡೆದ ಸುದ್ದಿ ಮಾಸುವ ಮುನ್ನವೇ ನಂಜನಗೂಡು ತಾಲೂಕು ವ್ಯಾಪ್ತಿಯಲ್ಲಿ ದನಗಾಹಿಯ ಮೇಲೆ ಹುಲಿ ದಾಳಿ ನಡೆಸಿದೆ. ಹಾಗೆಯೇ ಐದು ದಿನಗಳ ಹಿಂದೆ ಮೈಸೂರು ತಾಲೂಕಿನ ಜಯಪುರ, ಶಿಂಡೇನಹಳ್ಳಿ ವ್ಯಾಪ್ತಿಯಲ್ಲಿ ಎರಡು ಕಾಡಾನೆಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸಿ ಪಕ್ಕದ ಅರಬ್ಬಿತಿಟ್ಟು ಅರಣ್ಯ ಸೇರಿವೆ. ಹೀಗೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ವನ್ಯಜೀವಿಗಳ ಹಾವಳಿ ಹೆಚ್ಚುತ್ತಿರುವುದು ಕಾಂಡ ಚಿನ ಗ್ರಾಮಗಳ ರೈತರಾದಿಯಾಗಿ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

ಜನವಸತಿ ಪ್ರದೇಶದಲ್ಲಿ ಚಿರತೆ:ಸಾಮಾನ್ಯವಾಗಿ ಚಿರತೆಗಳು ಅರಣ್ಯಗಳಲ್ಲಷ್ಟೇ ಜೀವಿಸುತ್ತವೆ ಎಂದು ಹೇಳಿದರೂ, ಅವು ಅನಾದಿ ಕಾಲದಿಂದಲೂ ಜನವಸತಿ ಪ್ರದೇಶದಲ್ಲಿ ವಾಸಿಸುತ್ತಲೇ ಬಂದಿವೆ. ಸುಲಭವಾಗಿ ಸಿಗುವ ನಾಯಿ, ಮೇಕೆ, ಕುರಿ, ಕೋಳಿಯನ್ನು ಆಹಾರವನ್ನಾಗಿ ಮಾಡಿಕೊಂಡು ಬೆಟ್ಟ, ಗುಡ್ಡ, ಸಾಮಾಜಿಕ ಅರಣ್ಯ, ಹಳ್ಳ-ತೊರೆಗಳಲ್ಲಿ ಜೀವಿಸುತ್ತಿವೆ. ಯಥೇಚ್ಛವಾಗಿ ಆಹಾರ ಲಭ್ಯತೆಯಿಂದ ಚಿರತೆಯ ಸಂತಾನೋತ್ಪತ್ತಿ ಹೆಚ್ಚಿದೆ. ಪರಿಣಾಮ ನಗರ ಪ್ರದೇಶ ಗಳಲ್ಲಿ, ಕೃಷಿ ಜಮೀನುಗಳಲ್ಲಿ ಆಗಾಗ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸುತ್ತಿವೆ ಎಂದು ವನ್ಯ ಜೀವಿತಜ್ಞ ಕೃಪಾಕರ ಸೇನಾನಿ ತಿಳಿಸಿದ್ದಾರೆ. ಹೀಗೆ ಚಿರತೆಗಳು ಜನ -ಜಾನುವಾರುಗಳ ಮೇಲೆ ದಾಳಿ ನಡೆಸಿದ್ದು ಕಂಡು ಬಂದಲ್ಲಿ ಅರಣ್ಯ ಇಲಾಖೆ ಶೀಘ್ರವೇ ಅವುಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಬೇಕು. ಒಂದು ವೇಳೆ ಈ ಕಾರ್ಯ ವಿಳಂಬವಾದರೆ ಮನುಷ್ಯ ವನ್ಯ ಜೀವಿಯೊಂದಿಗೆ ಸಂಘರ್ಷಕ್ಕಿಳಿಯುವ ಅಪಾಯವಿದೆ. ಇದಕ್ಕೆ ಉದಾಹರಣೆಯಂತೆ
ಮೈಸೂರಿನ ಬೆಳವಾಡಿ ಬಳಿ 2021ರಲ್ಲಿ ವಿಷಪ್ರಾಶಣ ಮಾಡಿಸಿ ಮೂರು ಚಿರತೆಯನ್ನು ಕೊಲ್ಲಲಾಗಿತ್ತು.

ವನ್ಯಜೀವಿಗಳ ದಾಳಿಗೆ 6 ಮಂದಿ ಬಲಿ: ಜಿಲ್ಲೆಯಲ್ಲಿ ಕಾಡಾನೆ, ಹುಲಿ ಹಾಗೂ ಚಿರತೆ ದಾಳಿಗೆ ಒಮದು ವರ್ಷದಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ದಂಚಿನ ನಂಜನಗೂಡು ತಾಲೂಕು ವ್ಯಾಪ್ತಿಯ ಹಾದನೂರು, ಒಡೆಯನಪುರ, ಬಂಕಳ್ಳಿ ಹಾಗೂ ಬಳ್ಳೂರು  ಹುಂಡಿ ಗ್ರಾಮದಲ್ಲಿ ಹುಲಿ ದಾಳಿ ನಡೆಸಿರುವ ನಾಲ್ಕು ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ ಇಬ್ಬರು ಮೃತಪಟ್ಟು ಮತ್ತಿಬ್ಬರು ಗಾಯಗೊಂಡಿದ್ದಾರೆ.

ಹಾಗೆಯೇ ತಿ.ನರಸೀಪುರ ತಾಲೂಕಿನ ಬನ್ನೂರು ಬಳಿ ಚಿರತೆ ದಾಳಿಗೆ ಅ.30 ಹಾಗೂ ಡಿ.1ರಂದು ಇಬ್ಬರು ಕಾಲೇಜು ವಿದ್ಯಾರ್ಥಿಗಳು ಬಲಿಯಾಗಿದ್ದು, ಚಿರತೆ ಸೆರೆಗೆ ಕಳೆದ 15 ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದೆ.

Advertisement

ಹಾಗೆಯೇ ಎಚ್‌.ಡಿ. ಕೋಟೆ ತಾಲೂಕು ಬಂಡೀಪುರ ರಾಷ್ಟ್ರೀಯ ಉದ್ಯಾನದಂಚಿನಲ್ಲಿ ಕಾಡಾನೆ ದಾಳಿಯಿಂದ ಕೇರಳ ಮೂಲದ ರೈತ ಮೃತಪಟ್ಟಿದ್ದರೆ, ಹುಣಸೂರು ತಾಲೂಕು ಕೊಳವಿಗೆ ಹಾಡಿ ಬಳಿ ಕಾಡಾನೆ ದಾಳಿಗೆ ಮತ್ತೊಬ್ಬ ರೈತ ಬಲಿಯಾಗಿದ್ದ.

ವಿಶೇಷ ಪಡೆ ರಚನೆ ಅಗತ್ಯ: ಜಿಲ್ಲೆಯ ಯಾವುದೇ ಭಾಗದಲ್ಲಿ ವನ್ಯ ಜೀವಿ ಕಾಣಿಸಿಕೊಂಡಲ್ಲಿ ಅಥವಾ ಜನ-ಜಾನುವಾರು ಮೇಲೆ ದಾಳಿ ನಡೆಸಿದಲ್ಲಿ ಕೂಡಲೇ ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಹ ಬ ದಿಗೆ ತಂದು ವನ್ಯಜೀವಿಯನ್ನು ಕಾಡಿಗಟ್ಟುವ ಅಥವಾ ಸೆರೆ ಹಿಡಿಯುವ ಕೆಲಸವನ್ನು ಮಾಡಲು ಅರಣ್ಯ ಇಲಾಖೆಯಿಂದ ವಿಶೇಷ ಪಡೆ ರಚನೆ ಮಾಡುವ ಅಗತ್ಯವಿದೆ. ಈಗಾಗಲೇ ಹುಲಿ ಮತ್ತು ಆನೆ ದಾಳಿ ತಡೆಯಲು ರಕ್ಷಣಾ ಪಡೆ ಇದ್ದರೂ ಅಷ್ಟು ಪರಿಣಾಮಕಾರಿಯಾಗಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಒಟ್ಟಾರೆ ಕಾಡಿಗೆ ಹೊಂದಿಕೊಂಡಂತಿರುವ ತಾಲೂಕುಗಳಲ್ಲಿ ಹುಲಿ, ಆನೆಗಳ ಉಪಟಳ ನಿರಂತ ರವಾಗಿದ್ದರೆ, ನಗರ ಮತ್ತು ಜನವಸತಿ ಪ್ರದೇಶಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಜನ ಸಾಮಾನ್ಯರು ವನ್ಯಜೀವಿಗಳ ಬಗ್ಗೆ ಮತ್ತಷ್ಟು ಜಾಗೃತರಾಗಬೇಕು ಎಂಬುದು ತಜ್ಞೆ ಸಲಹೆ ಯಾ ಗಿದೆ.

ಕಳೆದ ಎರಡು ವರ್ಷಗಳಲ್ಲಿ 32ಕ್ಕೂ ಹೆಚ್ಚು ಚಿರತೆಗಳನ್ನು ಸೆರೆ ಹಿಡಿದು ಕಾಡಿಗೆ ಬಿಡಲಾಗಿದೆ. ಅವುಗಳ ಸಂತಾನೋತ್ಪತ್ತಿ ಹೆಚ್ಚಿರುವುದರಿಂದ ಎಲ್ಲಾ ಕಡೆ ಕಂಡು ಬರುತ್ತಿದೆ. ತಿ.ನರಸೀಪುರ ತಾಲೂಕಿನಲ್ಲಿ ಇಬ್ಬರನ್ನು ಬಲಿ ಪಡೆದ ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮುಂದು ವರಿದಿದೆ.
● ಮಾಲತಿ ಪ್ರಿಯಾ, ಮೈಸೂರು ವೃತ್ತ ಸಿಎಫ್

ಕಾಡಿನಲ್ಲಿ ಲಂಟಾನ ವ್ಯಾಪಕವಾಗಿರುವುದರಿಂದ ಕಾಡಾನೆಗಳು ಆಹಾರ ಅರಸಿ ನಾಡಿಗೆ ಬರು ತ್ತಿವೆ. ದುರ್ಬಲ ಹುಲಿಗಳು ಸರಹದ್ದು ಸಿಗದೆ ಕಾಡಂಚಿಗೆ ಬಂದು ನೆಲೆ ಕಂಡುಕೊಂಡು ಸುಲಭ ವಾಗಿ ಸಿಗುವ ಜಾನುವಾರುಗಳನ್ನೇ ಆಹಾರವಾಗಿ ಮಾಡಿಕೊಳ್ಳುತ್ತಿವೆ. ಈ ವೇಳೆ ಮನುಷ್ಯನ ಮೇಲೆ ದಾಳಿಯಾಗುವುದು ಅಪರೂಪ. ಇಂಥ ಘಟನೆಗಳು ಆಗದಂತೆ ಅರಣ್ಯ ಇಲಾಖೆ ಎಷ್ಟು ಮುಂಜಾಗ್ರತೆ ವಹಿಸಬೇಕೊ, ಅಷ್ಟೇ ಎಚ್ಚರಿಕೆಯನ್ನು ಮನುಷ್ಯನು ಅನುಸರಿಸ ಬೇಕು.
● ಕೃಪಾಕರ ಸೇನಾನಿ, ವನ್ಯ ಜೀವಿ ತಜ್ಞರು.

*ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next