ಹುಬ್ಬಳ್ಳಿ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಅಹಂಕಾರ ಹೆಚ್ಚಾಗಿದ್ದರಿಂದಾಗಿಯೇ ಅವರು ವಿಧಾನಸಭೆ ಸಭಾಧ್ಯಕ್ಷರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು ಸಭಾಧ್ಯಕ್ಷರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಅವರು ಮೊದಲು ಸಭಾಧ್ಯಕ್ಷ ಹುದ್ದೆಗೆ ಗೌರವ ನೀಡುವುದನ್ನು ಕಲಿತುಕೊಳ್ಳಲಿ.
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಅದು ಸಿದ್ದರಾಮಯ್ಯ ಸಂಸ್ಕೃತಿ ತೋರಿಸುತ್ತದೆ. ಇಂಥ ಸೊಕ್ಕು ಬಹಳ ದಿನ ನಡೆಯುವುದಿಲ್ಲ ಎಂಬುದನ್ನು ಅರಿತುಕೊಳ್ಳಲಿ. ತಾನೊಬ್ಬ ದೊಡ್ಡ ಜ್ಞಾನಿ ಎಂಬಂತೆ ಮಾತನಾಡುವುದನ್ನು ಇನ್ನಾದರೂ ಸಿದ್ದರಾಮಯ್ಯ ಬಿಡಲಿ. ಅವರು ಇದೇ ರೀತಿ ಎಲ್ಲರ ಬಗ್ಗೆ ಏಕವಚನದಲ್ಲಿ ಮಾತನಾಡುವುದನ್ನು ಮುಂದುವರಿಸಿದರೆ ನಾವು ಕೂಡ ಅವರನ್ನು ಏಕವಚನದಲ್ಲಿ ಕರೆಯಬೇಕಾಗುತ್ತದೆ ಎಂದರು.
ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಹರಿಯಾಣದಲ್ಲಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಆಸಕ್ತ ಪಕ್ಷಗಳ ನೆರವು ಪಡೆದು ಸರಕಾರ ರಚನೆ ಮಾಡಲಾಗುವುದು. ಕಾಂಗ್ರೆಸ್ ದೇಶಾದ್ಯಂತ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಪತನ ಮುಂದುವರಿದಿದೆ. ಶೀಘ್ರದಲ್ಲಿಯೇ ಕಾಂಗ್ರೆಸ್ ಪಕ್ಷ ನಿರ್ನಾಮವಾಗಲಿದೆ ಎಂದರು.