Advertisement

ರಾಜಧಾನಿಯಲ್ಲಿ ಹೆಚ್ಚಿದ ಡೆಂಘೀ ಆತಂಕ

12:49 AM Jul 04, 2019 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಮುಂಗಾರಿನ ಜತೆಗೆ ಡೆಂಘೀ ಜ್ವರ ಹೆಚ್ಚಾಗುತ್ತಿದ್ದು ರಾಜ್ಯದ ಇತರೆ 29 ಜಿಲ್ಲೆಗಳಿಗೆ ಹೋಲಿಸಿದರೆ ರಾಜಧಾನಿ ಬೆಂಗಳೂರಿನಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿಂದೀಚೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 1,299 ಮಂದಿಯಲ್ಲಿ ಡೆಂಘೀ ದೃಢಪಟ್ಟಿದ್ದು, ರಾಜ್ಯದ ಒಟ್ಟಾರೆ ಪ್ರಕರಣಗಳಿಗೆ ಹೋಲಿಸಿದರೆ ಏರಿಕೆ ಪ್ರಮಾಣ ಮೂರುಪಟ್ಟು ಹೆಚ್ಚುತ್ತಿದೆ.

Advertisement

ವರ್ಷಾರಂಭದಿಂದ ಈವರೆಗೂ ರಾಜ್ಯದಲ್ಲಿ 29 ಜಿಲ್ಲೆಗಳಲ್ಲಿ 1,228 ಮಂದಿಯಲ್ಲಿ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 1,830 ಮಂದಿಯಲ್ಲಿ ಡೆಂಘೀ ಸೊಂಕು ದೃಢಪಟ್ಟಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಪ್ರಕರಣಗಳು ವ್ಯಾಪಕವಾಗಿ ಹೆಚ್ಚಾಗುತ್ತಿದ್ದು, ಅಗತ್ಯ ಮುನ್ನೆಚ್ಚರಿಗೆ ಆರೋಗ್ಯ ಇಲಾಖೆಯು ಬಿಬಿಎಂಪಿ ಆರೋಗ್ಯ ವಿಭಾಗಕ್ಕೆ ಸೂಚಿಸುತ್ತಲೇ ಬಂದಿತ್ತು.

ಆದರೆ, ಬಿಬಿಎಂಪಿ ಸಿಬ್ಬಂದಿ ಕೊರತೆಯಿಂದ ನಿರ್ಲಕ್ಷ್ಯವಹಿಸಿರುವುದೇ ನಗರದಲ್ಲಿ ಸೋಂಕು ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 300 ಮಂದಿಯಲ್ಲಿ ವರ್ಷಾಂತ್ಯಕ್ಕೆ 1,266 ಮಂದಿಯಲ್ಲಿ ಕಾಣಿಸಿಕೊಂಡಿತ್ತು.

ಬೆರಳೆಣಿಕೆ ಪ್ರಕರಣ: ಬಿಬಿಎಂಪಿಯ ಒಟ್ಟು 198 ವಾರ್ಡ್‌ಗಳಲ್ಲಿ 63 ವಾರ್ಡ್‌ಗಳು ನಗರ ಜಿಲ್ಲಾ ಆರೋಗ್ಯ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಈ 63 ವಾರ್ಡ್‌ಗಳಲ್ಲಿ ವರ್ಷಾರಂಭದಿಂದ ಈವರೆಗೂ ಡೆಂಘೀ ನಿಯಂತ್ರಣದಲ್ಲಿದ್ದು, ಪ್ರಕರಣಗಳ ಸಂಖ್ಯೆಯು ಒಂಬತ್ತು ಇದೆ. ಅಲ್ಲದೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಡೆಂಘೀ ಪ್ರಕರಣಗಳು ದೃಢಪಟ್ಟಿಲ್ಲ.

ಆದರೆ, ಬಿಬಿಎಂಪಿ ಆರೋಗ್ಯ ಇಲಾಖೆ ವ್ಯಾಪ್ತಿಗೆ ಬರುವ 135 ವಾರ್ಡ್‌ಗಳಲ್ಲಿ ವರ್ಷಾರಂಭದಿಂದ 1830 ಪ್ರಕರಣಗಳು ದೃಢಪಟ್ಟಿವೆ. ಜಿಲ್ಲಾ ಆರೋಗ್ಯ ಇಲಾಖೆಯು ತನ್ನ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಮನೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.

Advertisement

ಎರಡು ವರ್ಷಗಳ ಹಿಂದೆ ಇದೇ ಪರಿಸ್ಥಿತಿ: 2017ರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಪ್ರಮಾಣ ಮಳೆಗಾಲದಲ್ಲಿ ತೀವ್ರವಾಗಿ ಹೆಚ್ಚಳ ಕಂಡಿತ್ತು. ಮೇ ಅಂತ್ಯಕ್ಕೆ ಬೆರಳೆಣಿಕೆಯಷ್ಟಿದ್ದು, ಪ್ರಕರಣಗಳ ಸಂಖ್ಯೆ ಜೂನ್‌ ಒಂದೇ ತಿಂಗಳಲ್ಲಿ ಸಾವಿರ ಗಡಿ ದಾಟಿತ್ತು. ಆ ವರ್ಷಾಂತ್ಯಕ್ಕೆ ಸೋಂಕಿತರ ಸಂಖ್ಯೆ ಏಳು ಸಾವಿರ ದಾಟಿತ್ತು. ಒಟ್ಟಾರೆ ರಾಜ್ಯದಲ್ಲಿ 17 ಸಾವಿರ ಡೆಂಘೀ ಪ್ರಕರಣ ದೃಢಪಟ್ಟಿದ್ದವು.

ಆದರೆ, ಕಳೆದ ವರ್ಷ ಆರೋಗ್ಯ ಇಲಾಖೆ ಮುಂಜಾಗೃತಿ ಹಿಂದೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದವು. ಆದರೆ, ಈ ಬಾರಿ ತಿಂಗಳ ಅಂತರಲ್ಲಿ ರಾಜ್ಯದಲ್ಲಿ ದುಪ್ಪಟ್ಟು, ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂರು ಪಟ್ಟು ಹೆಚ್ಚಾಗಿರುವುದು ಸಾಕಷ್ಟು ಜನರಲ್ಲಿ ಆತಂಕ ಮೂಡಿಸುತ್ತಿದೆ.

ಬಿಳಿರಕ್ತ ಕಣಗಳಿಗೆ ಅಭಾವ: ಈಡಿಸ್‌ ಈಜಿಪ್ಟೆ ಸೊಳ್ಳೆ ಕಚ್ಚುವ ಮೂಲಕ ಹರಡುವ ಈ ಡೆಂಘೀ ಜ್ವರ ಮನುಷ್ಯನ ದೇಹ ಪ್ರವೇಶಿಸಿದ ತಕ್ಷಣ ಬಿಳಿರಕ್ತ ಕಣಗಳನ್ನು ನಾಶ ಮಾಡುತ್ತದೆ. ಪ್ರತಿ ಆರೋಗ್ಯವಂತ ಮನುಷ್ಯನಲ್ಲಿ ಬಳಿ ರಕ್ತಕಣಗಳ ಸಂಖ್ಯೆ ಕನಿಷ್ಠ 1.5 ಲಕ್ಷದಿಂದ 3.5 ಲಕ್ಷದಷ್ಟು ಇರಬೇಕು. 1.5 ಲಕ್ಷಕ್ಕಿಂತ ಕಡಿಮೆಯಾದರೆ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯಲ್ಲಿ ಸಾಕಷ್ಟು ಸಮಸ್ಯೆ ಉಂಟಾಗುತ್ತದೆ.

ಡೆಂಘೀ ತೀವ್ರವಾಗಿರುವವರಲ್ಲಿ ಬಿಳಿರಕ್ತ ಕಣಗಳ ಸಂಖ್ಯೆಯು ದಿನಕ್ಕೆ 10 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕುಸಿಯುತ್ತಾ ಬರುತ್ತದೆ. ನಿಧಾನವಾಗಿ ಬಿಳಿ ರಕ್ತಕಣಗಳ ಸಂಖ್ಯೆ 20 ಸಾವಿರಕ್ಕಿಂತ ಕಡಿಮೆಯಾದರೆ ಡೆಂಘೀ ಪೀಡಿತರ ಜೀವ ಅಪಾಯಕ್ಕೆ ಸಿಲುಕುತ್ತದೆ. ಹಾಗಾಗಿ, ರೋಗಿಯ ದೇಹದಲ್ಲಿ ಬಳಿ ರಕ್ತ ಕಣಗಳ ಸಂಖ್ಯೆ ಹೆಚ್ಚಿಸಲು ರಕ್ತದ ಮಾದರಿಯಲ್ಲಿಯೇ ಬಳಿ ರಕ್ತ ಕಣಗಳನ್ನು ರೋಗಿಯ ದೇಹಕ್ಕೆ ಸೇರಿಸಲಾಗುತ್ತದೆ.

ಆದರೆ, ನಗರದಲ್ಲಿ ರಕ್ತದಾನಿಗಳ ಸಂಖ್ಯೆ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕಡಿಮೆ ಇದೆ. ನಗರದ ಎಲ್ಲಾ ರಕ್ತನಿಧಿ ಕೇಂದ್ರಗಳಲ್ಲಿ ಈ ಸಮಯದಲ್ಲಿ ನಿರಂತರವಾಗಿ ರಕ್ತದಾನ ಅವಶ್ಯಕವಾಗಿದೆ. ರಾಜಧಾನಿಯಲ್ಲಿ ಕಳೆದ ಒಂದು ತಿಂಗಳಿಂದ ಡೆಂಘೀ ಹೆಚ್ಚಳವಾಗಿ ಬಿಳಿ ರಕ್ತ ಕಣಗಳಿಗೆ ಬೇಡಿಕೆ ಹೆಚ್ಚಿದೆ. ಬಿಳಿ ರಕ್ತ ಕಣಗಳಿಗಾಗಿ ರಕ್ತನಿಧಿ ಕೇಂದ್ರಗಳ ಮುಂದೆ ಜನರು ನಿತ್ಯವೂ ಸರದಿ ನಿಲ್ಲುತ್ತಿದ್ದಾರೆ. ನಗರದಲ್ಲಿ ಇದೇ ರೀತಿ ಡೆಂಘೀ ಸೋಂಕಿನ ಪ್ರಮಾಣ ನಿರಂತರವಾಗಿ ಹೆಚ್ಚಾದರೆ ಬಿಳಿರಕ್ತ ಕಣಗಳ ಅಭಾವ ಉಂಟಾಗಲಿದೆ.

ಮಗಳಿಗೆ ಡೆಂಘೀ ಬಂದಿದ್ದು, ಬಿಳಿ ರಕ್ತ ಕಣ ಕಡಿಮೆ ಇದೆ ಎಂದು ವೈದ್ಯರು ಚೀಟಿ ಬರೆದುಕೊಟ್ಟರು. ಪರಿಚಯಸ್ಥ ರಕ್ತದಾನಿಗಳು ಇಲ್ಲದ ಕಾರಣ ರಕ್ತನಿಧಿ ಕೇಂದ್ರಗಳಿಗೆ ಅಲೆದಾಟ ನಡೆಸಿದ್ದೇನೆ. ಎಲ್ಲಿ ಹೋದಾರು ಸ್ಟಾಕ್‌ ಇಲ್ಲ ಎನ್ನುತ್ತಾರೆ. ಕೊನೆಗೆ ವಿಜಯಪುರದಿಂದ ರಕ್ತ ಕೊಟ್ಟು, ಬಿಳಿ ರಕ್ತ ಕಣ ತಂದುಕೊಟ್ಟೆ.
-ಮಾಲತೇಶ್‌ ವಾಲೀಕಾರ, ರೋಗಿ ತಂದೆ

ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿ ಡೆಂಘೀ ಹತೋಟಿಗೆ ಸೂಚನೆ ನೀಡಿದ್ದೇವೆ. ರಕ್ತ ನಿಧಿ ಕೇಂದ್ರಗಳ ಬಳಿ, ಆಸ್ಪತ್ರೆಗಳಲ್ಲಿ ರಕ್ತದಾನಿಗಳ ಪಟ್ಟಿ ಇದ್ದು, ಮನವಿ ಮಾಡಿ ರಕ್ತದಾನ ಮಾಡಿಸಬೇಕಿದೆ. ಆರೋಗ್ಯ ಇಲಾಖೆ ಸಹಾಯವಾಣಿ 104 ಕರೆ ಮಾಡಿದರೆ ರಕ್ತನಿಧಿ ಕೇಂದ್ರಗಳಲ್ಲಿ ಬಿಳಿ ರಕ್ತ ಕಣಗಳ ಲಭ್ಯತೆ ತಿಳಿಸುತ್ತಾರೆ.
-ಶಿವರಾಜ್‌ ಸಜ್ಜನ್‌ ಶೆಟ್ಟಿ, ಸಾಂಕ್ರಾಮಿಕ ರೋಗ ವಿಭಾಗ, ಆರೋಗ್ಯ ಇಲಾಖೆ.

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next