Advertisement

ಮಂಗಳೂರಿನ ಎಂ-ಸ್ಯಾಂಡ್‌ಗೆ ಬೇಡಿಕೆ ಹೆಚ್ಚಳ

11:12 AM Feb 19, 2020 | mahesh |

ಮಂಗಳೂರು: ಕರಾವಳಿಯ ಮರಳಿನ ಕೊರತೆಯ ಬಿಸಿ ಲಕ್ಷದ್ವೀಪಕ್ಕೂ ತಟ್ಟಿದೆ. ಅಲ್ಲಿಗೆ ಮಂಗಳೂರಿನಿಂದ ಮರಳು ಪೂರೈಕೆ ಸಂಪೂರ್ಣವಾಗಿ ಸ್ಥಗಿತವಾಗಿದ್ದು, ಪರ್ಯಾಯವಾಗಿ ಎಂ-ಸ್ಯಾಂಡ್‌ ಸರಬರಾಜು ಮಾಡಲಾಗುತ್ತಿದೆ. ಇದಕ್ಕೂ ಬೇಡಿಕೆ ಹೆಚ್ಚುತ್ತಿದೆ.

Advertisement

ಬ್ರಿಟಿಷರ ಕಾಲದಿಂದಲೂ ಲಕ್ಷದ್ವೀಪಕ್ಕೆ ಆಹಾರ ಉತ್ಪನ್ನಗಳು, ನಿರ್ಮಾಣ ಸಾಮಗ್ರಿಗಳ ಸಹಿತ ಬಹುತೇಕ ಎಲ್ಲ ಅಗತ್ಯ ಸರಕುಗಳನ್ನು ಮಂಗಳೂರಿನ ಹಳೆ ಬಂದರಿನಿಂದಲೇ ಸಾಗಿಸಲಾಗುತ್ತಿದೆ. ಸರಬರಾಜಾಗುವ ಪ್ರಮುಖ ಸಾಮಗ್ರಿಗಳಲ್ಲಿ ಮರಳು ಕೂಡ ಒಂದು. ಕಳೆದ ನಾಲ್ಕು ವರ್ಷಗಳಿಂದ ಕರಾವಳಿಯಲ್ಲಿ ಉಂಟಾಗಿರುವ ಮರಳು ಕೊರತೆ ಲಕ್ಷದ್ವೀಪದ ನಿರ್ಮಾಣ ಕಾಮಗಾರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮರಳಿಗೆ ಹೆಚ್ಚಿನ ಬೇಡಿಕೆ ಇತ್ತಾದರೂ ಒದಗಿಸಲು ಸಾಧ್ಯವಾಗಿರಲಿಲ್ಲ. ಪ್ರಸ್ತುತ ಸಾಗಾಟ ಸಂಪೂರ್ಣ ನಿಂತಿದೆ.

ಲಕ್ಷದ್ವೀಪಕ್ಕೆ 2017-18ರಲ್ಲಿ 16,183 ಮೆ.ಟನ್‌, 2018-19ರಲ್ಲಿ 20,659 ಮೆ.ಟನ್‌ಗೆ ಬೇಡಿಕೆ ಬಂದಿದ್ದು, ಅಷ್ಟನ್ನು ಪೂರೈಸಲಾಗಿತ್ತು. 2019-20ರ ಜನವರಿಯ ವರೆಗೆ 11,189 ಮೆ. ಟನ್‌ ಎಂ-ಸ್ಯಾಂಡ್‌ ರಫ್ತು ಮಾಡಲಾಗಿದೆ.

ಶೇ.90 ಸರಕಾರಿ ಕಾಮಗಾರಿ
ಲಕ್ಷದ್ವೀಪದಲ್ಲಿ ನಡೆಯುವ ಕಾಮಗಾರಿಗಳ ಪೈಕಿ ಶೇ.90 ಸರಕಾರದಿಂದ ನಡೆಯುವಂತಹವು. ಬ್ರೇಕ್‌ವಾಟರ್‌ ನಿರ್ಮಾಣ, ವಿಮಾನ ನಿಲ್ದಾಣ, ಸೌರಶಕ್ತಿ ಘಟಕಗಳು, ಕೇಂದ್ರೀಯ ವಿದ್ಯಾಲಯ, ಹಾಸ್ಟೆಲ್‌ ಮೊದಲಾದ ಎಲ್ಲ ಕಾಮಗಾರಿಗಳಲ್ಲಿಯೂ ಮಂಗಳೂರು ಹಳೆ ಬಂದರಿನಿಂದ ಸಾಗಣೆಯಾದ ಸಾಮಗ್ರಿಗಳ ಪಾಲು ದೊಡ್ಡದು. ಕೆಲವು ಪರಿಕರಗಳು ಮಾತ್ರ ಕೇರಳದ ಬೇಪೂರ್‌ ಬಂದರಿನಿಂದ ರಫ್ತಾಗುತ್ತವೆ. ಸದ್ಯ ಲಕ್ಷದ್ವೀಪವು ಕಟ್ಟಡ ಸಾಮಗ್ರಿಗಳಾದ ಎಂ- ಸ್ಯಾಂಡ್‌, ಜಲ್ಲಿ, ಬೋಲ್ಡರ್‌ಗಳಿಗೆ ಮಂಗಳೂರು ಬಂದರನ್ನೇ ಅವಲಂಬಿಸಿದೆ.

ಕೇರಳದಲ್ಲಿ ದರ ಹೆಚ್ಚು
ಕೇರಳದಲ್ಲಿಯೂ ಎಂ-ಸ್ಯಾಂಡ್‌ ಲಭ್ಯವಿದೆ. ಆದರೆ ಅಲ್ಲಿ ದರ ಹೆಚ್ಚು. ಹಾಗಾಗಿ ಮಂಗಳೂರಿ ನಿಂದಲೇ ಪೂರೈಸಲಾಗುತ್ತಿದೆ ಎನ್ನುತ್ತಾರೆ ವಿವಿಧ ಸಾಮಗ್ರಿಗಳನ್ನು ಪೂರೈಕೆ ಮಾಡುವ ಉಸ್ಮಾನ್‌.

Advertisement

ರವಾನೆ ಹೇಗೆ?
ಯಾಂತ್ರೀಕೃತ ಹಾಯಿದೋಣಿಗಳ (ಮೆಕ್ಯಾನೈಸ್ಡ್ ಸೈಲಿಂಗ್‌ ವೆಸೆಲ್ಸ್‌) ಮೂಲಕ ಸಾಮಗ್ರಿಗಳನ್ನು ಕಳುಹಿಸಲಾಗುತ್ತದೆ. ಅಂಡಮಾನ್‌ನ ಒಟ್ಟು 13 ದ್ವೀಪ ಸಮೂಹ ಪೈಕಿ 10ರಲ್ಲಿ ಜನವಸತಿ ಇದೆ. ಮಂಗಳೂರಿಗೆ ಹತ್ತಿರವಿರುವ ಆ್ಯಂಥ್ರೊಡ್‌ ಮತ್ತು ಕಿಲ್ತಾನ್‌ ದ್ವೀಪಗಳನ್ನು ತಲುಪಲು 24 ತಾಸು ಸಾಕು. ಇತರ ದ್ವೀಪಗಳಿಗೆ 36, 48 ತಾಸುಗಳು ಬೇಕು. ಲಕ್ಷದ್ವೀಪದಲ್ಲಿ ಮೀನು ಮತ್ತು ತೆಂಗಿನಕಾಯಿ ಮಾತ್ರವೇ ಸಿಗುತ್ತದೆ. ಮಂಗಳೂರಿನಿಂದ ಪ್ರತಿದಿನ 4-6 ದೋಣಿಗಳು ಅಗತ್ಯ ಸಾಮಗ್ರಿಗಳನ್ನು ಹೊತ್ತು ಸಾಗುತ್ತವೆ.

ಅನಾದಿ ಕಾಲದಿಂದಲೂ ಇರುವ ಮಂಗಳೂರು ಹಳೆ ಬಂದರು ಲಕ್ಷದ್ವೀಪದ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತ ಬಂದಿದೆ. ಕಳೆದ ವರ್ಷ ಓಖೀ ಚಂಡಮಾರುತದಿಂದ ಅಲ್ಲಿನ ಪ್ರಮುಖ ಬ್ರೇಕ್‌ ವಾಟರ್‌ ಪೂರ್ಣ ಹಾನಿಗೀಡಾಗಿತ್ತು. ಅದರ ಪುನರ್‌ನಿರ್ಮಾಣಕ್ಕೂ ಇಲ್ಲಿನ ಕಲ್ಲುಗಳೇ ಬಳಕೆಯಾಗಿವೆ. ಪ್ರಸ್ತುತ ಎಂ-ಸ್ಯಾಂಡ್‌ನ್ನು ಅಧಿಕ ಪ್ರಮಾಣದಲ್ಲಿ ರವಾನಿಸಲಾಗುತ್ತಿದೆ. ಬಂದರು ಅಭಿವೃದ್ಧಿಯಾದರೆ ಹೆಚ್ಚಿನ ಪ್ರಮಾಣದ ವಹಿವಾಟು ಸಾಧ್ಯವಾಗಲಿದೆ.
-ಗೌಸ್‌ ಆಲಿ, ಅಧಿಕಾರಿ, ಮಂಗಳೂರು ಹಳೆ ಬಂದರು

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next