Advertisement

ಅಭ್ಯಾಸ, ವಿದ್ಯೆಯಿಂದ ಸಹನಶಕ್ತಿ ಹೆಚ್ಚಿಸಿಕೊಳ್ಳಿ : ಎಸ್‌.ಎನ್‌. ಮಯ್ಯ

10:25 PM Jun 19, 2019 | Team Udayavani |

ಮಧೂರು: ಅಭ್ಯಾಸದಿಂದಲೂ ವಿದ್ಯಾಭ್ಯಾಸದಿಂದಲೂ ಸಹನಾ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಬೇಕು. ಇನ್ನೊಬ್ಬರ ಅಭಿಪ್ರಾಯ ಗಳನ್ನೂ ಆಲಿಸುವುದರಲ್ಲಿ ಆಸಕ್ತಿಯೂ ತಾಳ್ಮೆಯೂ ಇರಬೇಕು ಎಂಬುದಾಗಿ ಕೂಟಮಹಾಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆಯ ಅಧ್ಯಕ್ಷ ಎಸ್‌.ಎನ್‌. ಮಯ್ಯ ಬದಿಯಡ್ಕ ಅಭಿಪ್ರಾಯಪಟ್ಟರು.


Advertisement

ಅವರು ಅಂಗಸಂಸ್ಥೆಯ ಸಂಪರ್ಕ ಸಭೆಯಲ್ಲಿ ಎಸೆಸೆಲ್ಸಿ ಹಾಗೂ ಪ್ಲಸ್‌ ಟು ಪರೀಕ್ಷೆಯಲ್ಲಿ ಉತ್ತಮ ಗ್ರೇಡ್‌ಗಳೊಂದಿಗೆ ತೇರ್ಗಡೆಯಾದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದರು.

ಇಲ್ಲಿನ ಕೊಲ್ಯಕ್ಕೆ ಸಮೀಪದ ನರಸಿಂಹ ಮಯ್ಯ ಮಾಸ್ಟರ್‌ ಅವರ ತೋಟ ಮನೆಯಲ್ಲಿ ಜರಗಿದ ಪ್ರಸ್ತುತ ಕಾರ್ಯಕ್ರಮದಲ್ಲಿ ಹಿರಿಯ ಧಾರ್ಮಿಕ ಮುಂದಾಳುಗಳಾದ ವೇ| ಮೂ| ತುಂಗ ಶಂಕರನಾರಾಯಣ ಭಟ್‌ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಪ್ರಾಮಾಣಿಕತೆ ಹಾಗೂ ಧಾರ್ಮಿಕ ನಡತೆ ಇವೆರಡು ದೊಡ್ಡಗುಣಗಳಾಗಿದ್ದು, ಇವು ಮನುಷ್ಯನನ್ನು ಉದ್ಧಾರಮಾಡಿ ಅವನಿಗೆ ಶಾಶ್ವತ ಸುಖ-ಸಂತೋಷಗಳನ್ನು ನೀಡುವುದು ಎಂದು ಹೇಳಿದರು.

ಹಿರಿಯ ಮುಂದಾಳುಗಳಾದ ರಮೇಶ್‌ ಕಾರಂತ ಬೆದ್ರಡ್ಕ, ಪ್ಲಸ್‌ ಟು ನಿವೃತ್ತ ಅಧ್ಯಾಪಕ ನಾರಾಯಣ ರಾವ್‌ ಮುಂತಾದವರು ಶುಭವನ್ನು ಹಾರೈಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸೆಸೆಲ್ಸಿ ಹಾಗೂ ಪ್ಲಸ್‌ ಟು ತರಗತಿಗಳಲ್ಲಿ ಉತ್ತಮ ಗ್ರೇಡುಗಳೊಂದಿಗೆ ತೇರ್ಗಡೆಯಾದ ಸಿಂಧು ಪಿ.ಆರ್‌. ಕುಳ, ಪ್ರಜ್ವಲ್‌ ಹೇರಳ ಉಡುವ, ಶ್ರೀವಿದ್ಯಾ ಎಸ್‌. ನೀರಾಳ, ಅಭಯ ಕಾರಂತ ಬೆದ್ರಡ್ಕ, ಸಿಂಚನಾ ಹೊಳ್ಳ ಎಲ್ಲಂಗಳ, ನಯನಾ ಬಿ. ಬನ್ನೂರು ಹಾಗೂ ಚರಿತಾ ಬಿ. ಬನ್ನೂರು ಅವರಿಗೆ ದಿ| ವೆಂಕಟ್ರಮಣ ಮಯ್ಯ ಮತ್ತು ದಿ| ಕಾವೇರಿ ಅಮ್ಮ ಅವರ ಸ್ಮರಣಾರ್ಥ ಪ್ರತಿವರ್ಷ ನೀಡಲಾಗುವ ಸ್ಮರಣಿಕೆ ಮತ್ತು ಗುರು ಶ್ರೀ ಶಂಕರಾನಂದ ಪ್ರತಿಷ್ಠಾನ ಮುಗು ಹಾಗೂ ರಾಧಾಕೃಷ್ಣ ಮಯ್ಯ ಪಟ್ಲ ಅವರ ವತಿಯಿಂದ ನೀಡಲಾದ ಆರ್ಥಿಕ ಪುರಸ್ಕಾರಗಳನ್ನು ವಿತರಿಸಲಾಯಿತು. ಪುರಸ್ಕೃತರು ಈ ಸಮ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಿದರು.

ಸಮಾರಂಭದಲ್ಲಿ ಯುವ ಕವಯಿತ್ರಿ ಪರಿಣಿತಾ ರವಿ ಅವರನ್ನು ಶಾಲು ಹೊದೆಸಿ ಸಮ್ಮಾನಿಸಲಾಯಿತು. ಇತ್ತೀಚೆಗೆ ಅವರ ಕಥಾ ಸಂಕಲನವಾದ “ವಾತ್ಸಲ್ಯ ಸಿಂಧು’ ಹಾಗೂ “ಸುಪ್ತ ಸಿಂಚನ’ ಎಂಬ ಕವನ ಸಂಕಲನವು ಬಿಡುಗಡೆಯಾಗಿತ್ತು. ಇವರಿಗೆ ಉತ್ತಮ ಭವಿಷ್ಯವನ್ನು ಕೋರಿ ಅತಿಥಿಗಳು ಮಾತನಾಡಿದರು.

Advertisement

ಸಂಪರ್ಕ ಸಭೆಗಿಂತ ಮೊದಲು ವಿಷ್ಣು ಸಹಸ್ರನಾಮ ಪಠನ ಹಾಗೂ ಭಜನ ಸಂಕೀರ್ತನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಂಗಸಂಸ್ಥೆಯ ಮುಂದಿನ ಸಂಪರ್ಕ ಸಭೆಯನ್ನು ಜು.7 ರಂದು ಅಪರಾಹ್ನ ಬೇಳದ ಕುಮಾರಮಂಗಲದ ರಾಮಚಂದ್ರ ಅಡಿಗರ ಮನೆಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸುವಂತೆ ಕೋರಲಾಯಿತು.

ಅಂಗಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನರಸಿಂಹ ಮಯ್ಯ ಎಂ. ಮಧೂರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಚಂದ್ರಶೇಖರ ರಾವ್‌ ಏತಡ್ಕ ವಂದಿಸಿದರು. ಕೋಶಾಧಿಕಾರಿ ಕೃಷ್ಣ ಕಾರಂತ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next