Advertisement

ಮಳಿಗೆ ಬಾಡಿಗೆ ಹೆಚ್ಚಳದಿಂದ ನಗರಸಭೆಗೆ ಆದಾಯ ವೃದ್ಧಿ

06:29 PM Dec 08, 2022 | Team Udayavani |

ಚಳ್ಳಕೆರೆ: ನಗರದ ಹೃದಯ ಭಾಗದಲ್ಲಿರುವ ಮಳಿಗೆಗಳಿಗೆ ಬಾಡಿಗೆ ಹೆಚ್ಚಳ, ಕೆಲವು ಭಾಗಗಳ ವಸತಿ, ನಿವೇಶನಕ್ಕೆ ಕಂದಾಯ ನಿಗದಿಗೊಳಿಸುವ ಮೂಲಕ ನಗರಸಭೆಯ ಆದಾಯ ಹೆಚ್ಚಳ ಮಾಡಿಕೊಳ್ಳಬೇಕು ಎಂದು ನಗರಸಭೆ ಕಾರ್ಯಾಲಯದಲ್ಲಿ ಬುಧವಾರ ನಡೆದ 2023-24ನೇ ಸಾಲಿನ ಆಯ-ವ್ಯಯ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಸಲಹೆ ನೀಡಿದರು. ನಗರಸಭೆ ಸದಸ್ಯ ಸಿ. ಶ್ರೀನಿವಾಸ್‌, ವಿಶ್ವಕರ್ಮ ಪರಿಷತ್‌ ರಾಜ್ಯಾಧ್ಯಕ್ಷ ಆರ್‌. ಪ್ರಸನ್ನಕುಮಾರ್‌, ಸಮಾಜಸೇವಕ ಎಚ್‌.ಎಸ್‌. ಸೈಯದ್‌ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಜಿ+2 ನಿವೇಶನದ ಬದಲಾಗಿ ನಿವೇಶನ ರಹಿತ ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕು. ಜಿ+2 ಮನೆಗಳನ್ನು ಪಡೆಯಲು ಫಲಾನುಭವಿಗಳಿಗೆ ಆಸಕ್ತಿಯೇ ಇಲ್ಲ.

Advertisement

ಆದ್ದರಿಂದ 1750 ನಿವೇಶನಗಳನ್ನು ಬಡವರಿಗೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಸಿ. ಚಂದ್ರಪ್ಪ, ನಗರಸಭೆ ವ್ಯಾಪ್ತಿಯ ನಿವೇಶನ ರಹಿತರ ಪಟ್ಟಿ ಸಿದ್ಧಪಡಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಪಟ್ಟಿ ಸಿದ್ಧವಾದ ನಂತರ ಶಾಸಕರು, ಜಿಲ್ಲಾ ಧಿಕಾರಿ, ತಹಶೀಲ್ದಾರ್‌ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಜನತಾ ಕಾಲೋನಿ ನಿವಾಸಿ ರಾಜಣ್ಣ ಮಾತನಾಡಿ, ಜನತಾ ಕಾಲೋನಿಯಲ್ಲಿರುವ ಅಂಬೇಡ್ಕರ್‌ ಭವನ ದುರಸ್ತಿಗೊಳಿಸಿ ಜನರ ಉಪಯೋಗಕ್ಕೆ ಅನುಕೂಲ ಕಲ್ಪಿಸಬೇಕು ಎಂದರು. ನಾಮನಿರ್ದೇಶನ ಸದಸ್ಯರಾದ ಇಂದ್ರೇಶ್‌, ಹೊಸಮನೆ ಮನೋಜ್‌ ಮಾತನಾಡಿ, ನಗರ ವ್ಯಾಪ್ತಿಯ ಪಾರ್ಕ್‌, ಚರಂಡಿ, ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಎಂದು ಮನವಿ ಮಾಡಿದರು. ನಿವೃತ್ತ ಶಿಕ್ಷಕಿ ಟಿ. ರತ್ನಮ್ಮ, ವೀರೇಶ್‌, ಕೃಷ್ಣಮೂರ್ತಿ ಮಾತನಾಡಿ, ತ್ಯಾಗರಾಜನಗರದ ಕೆಲವು ಕಡೆಗಳಲ್ಲಿ ವಿದ್ಯುತ್‌ ಸಮಸ್ಯೆಯಿಂದ ಕಳ್ಳತನ ಹೆಚ್ಚಾಗಿವೆ. ಆದ್ದರಿಂದ ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಮಾಡಬೇಕು. ಬೆಂಗಳೂರು ರಸ್ತೆಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ತಿರುವಿನ ವೇಳೆ ಹಲವಾರು ಅಪಘಾತಗಳು ನಡೆಯುತ್ತಿವೆ. ಅಲ್ಲಿ ಹಂಪ್ಸ್‌ ಅ‌ವಡಿಸುವಂತೆ ಮನವಿ ಮಾಡಿದರು. ಎಚ್‌.ಎಸ್‌. ಸೈಯದ್‌ ಮಾತನಾಡಿ, ನಗರದಲ್ಲಿ ಅಳವಡಿಸುವ ಫ್ಲೆಕ್ಸ್‌ಗಳಿಗೆ ಪರವಾನಗಿ ಪಡೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ತಿಳಿಸಿದರು.

ಪೌರಾಯುಕ್ತ ಸಿ. ಚಂದ್ರಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ, ಶಾಸಕರು, ಸಚಿವರ ವಿಶೇಷ ಅನುದಾನದಲ್ಲಿ ನಗರದ ಅಭಿವೃದ್ಧಿ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು. 62 ಕೋಟಿ ರೂ. ವೆಚ್ಚದಲ್ಲಿ ನಗರದ ಚರಂಡಿ, ಕುಡಿಯುವ ನೀರು, ರಸ್ತೆ ಸೇರಿದಂತೆ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಲಾಗಿದೆ. ನಗರದ ಪ್ರತಿಯೊಂದು ಅಂಗಡಿ ಮಾಲೀಕರು, ಮನೆಯವರು ಸೂಕ್ತ ಸಮಯದಲ್ಲಿ ತೆರಿಗೆ ಪಾವತಿಸುವ ಮೂಲಕ ನಗರದ ಅಭಿವೃದ್ಧಿ ಸಹಕಾರ ನೀಡಬೇಕೆಂದು
ಕೋರಿದರು. ಎಂದರು. ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ, ಉಪಾಧ್ಯಕ್ಷೆ ಆರ್‌. ಮಂಜುಳಾ ಪ್ರಸನ್ನಕುಮಾರ್‌, ಸದಸ್ಯರಾದ ಕೆ. ವೀರಭದ್ರಯ್ಯ, ವೈ. ಪ್ರಕಾಶ್‌, ಸುಮಾ ಭರಮಣ್ಣ, ಸಿ. ಶ್ರೀನಿವಾಸ್‌, ಜೈತುಂಬಿ ಮುಂತಾದವರು ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next