Advertisement

ಅನುಷ್ಠಾನ ವಿಳಂಬದಿಂದ ವೆಚ್ಚದಲ್ಲಿ ಹೆಚ್ಚಳ

02:02 PM May 15, 2019 | Suhan S |

ಕಾರವಾರ: ಕುಡಿಯುವ ನೀರಿಗಾಗಿ ಗಂಗಾವಳಿ ನದಿಗೆ ಹೊನ್ನಳ್ಳಿ ಬಳಿ 9 ರಿಂದ 10 ಮೀಟರ್‌ ಎತ್ತರದ ಕಿರು ಕಿಂಡಿ ಅಣೆಕಟ್ಟು (ವೆಂಟೆಡ್‌ ಬ್ಯಾರೇಜ್‌) ಕಟ್ಟುವ ಯೋಜನೆ ದಶಕಗಳಿಂದ ನನೆಗುದಿಗೆ ಬಿದ್ದಿದೆ. 100 ಕೋಟಿ ರೂ. ವೆಚ್ಚದ ಯೋಜನೆ 158 ಕೋಟಿ ರೂ.ದಾಟಿದೆ.

Advertisement

ಗಂಗಾವಳಿ ಬಲದಂಡೆಗೆ ಬರುವ ಗುಂಡಬಾಳ, ಎಡದಂಡೆಗೆ ಬರುವ ಅಗಸೂರು ಮಧ್ಯೆ ವೆಂಟೆಡ್‌ ಡ್ಯಾಮ್‌ ನಿರ್ಮಿಸಬೇಕಿದ್ದು, ಇದಕ್ಕಾಗಿ 35 ಹೆಕ್ಟೇರ್‌ ಅರಣ್ಯ ಭೂಮಿ ವಶಪಡಿಸಿಕೊಳ್ಳಬೇಕಿದೆ. ಇದಕ್ಕೆ ಪರ್ಯಾಯವಾಗಿ ಅರಣ್ಯಭೂಮಿ ಬೆಳಸಲು 35 ಹೆಕ್ಟೇರ್‌ ನೀಡಬೇಕಿದೆ. ಇದಕ್ಕಾಗಿ ಜಿಲ್ಲಾಡಳಿತ ಹುಡುಕಾಟ ನಡೆಸಿದೆ. ಅಲ್ಲದೇ 19 ಹೆಕ್ಟೇರ್‌ ಅರಣ್ಯೇತರ ಭೂಮಿ ಬೇಕಿದ್ದು, ಅದನ್ನು ಜಿಲ್ಲಾಡಳಿತ ವಶಪಡಿಸಿಕೊಂಡು ನಗರ ನೀರು ಸರಬರಾಜು ಮಂಡಳಿಗೆ ನೀಡಬೇಕಿದೆ. ಗಂಗಾವಳಿ ಕಿರು ಅಣೆಕಟ್ಟಿಗೆ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಬಜೆಟ್‌ನಲ್ಲಿ ಹಣ ನೀಡಿದೆ. ಯೋಜನಾ ನೀಲನಕ್ಷೆ ನೀರು ಸಬರಾಜು ಮಂಡಳಿಯಿಂದ ರಾಜ್ಯದ ಅರಣ್ಯ ಇಲಾಖೆ ಉನ್ನತಾಧಿಕಾರಿಗಳ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಮುಂದಿದೆ. ಅರಣ್ಯ ಭೂಮಿಗೆ 35 ಹೆಕ್ಟೇರ್‌ ಪರ್ಯಾಯ ಜಾಗ ಸಿಕ್ಕರೆ, ಯೋಜನೆ ಜಾರಿಗೆ ಸಂಬಂಧಿತ ನೀಲನಕ್ಷೆ ಸಚಿವ ಸಂಪುಟದ ಮುಂದೆ ಬರಲಿದೆ.

ಕಿರು ಕಿಂಡಿ ಅಣೆಕಟ್ಟಿನ ನಿರ್ಮಾಣದಿಂದ ಮುಳುಗಡೆಯಾಗುವ ಭೂಮಿ 35 ಹೆಕ್ಟೇರ್‌ ಅರಣ್ಯ ಪ್ರದೇಶ. ಖಾಸಗಿಯವರ ಭೂಮಿ 19 ಹೆಕ್ಟೇರ್‌. ಈ ಸಮಸ್ಯೆಗೆ ಪರಿಹಾರ ಸಿಕ್ಕ ತಕ್ಷಣ ಯೋಜನೆಗೆ ಗ್ರೀನ್‌ ಸಿಗ್ನಲ್ ಸಿಗಲಿದೆ. ಐಎನ್‌ಎಸ್‌ ಕದಂಬ(ಸೀಬರ್ಡ್‌ ನೌಕಾನೆಲೆ) ವೆಂಟೆಡ್‌ ಡ್ಯಾಮ್‌ ನಿರ್ಮಾಣಕ್ಕೆ ತನ್ನ ಪಾಲಿನ 75 ಕೋಟಿ ರೂ.ನೀಡಲು ಸಹಮತ ವ್ಯಕ್ತಪಡಿಸಿದೆ. ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸಬೇಕಿದೆ.

ದೇವಕಾರು ಬಳಿ 100 ಹೆಕ್ಟೇರ್‌ ಭೂಮಿ: ಗಂಗಾವಳಿ ನದಿಗೆ ಕಿರುಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ದೇವಕಾರು ಗ್ರಾಮವನ್ನೇ ಜಿಲ್ಲಾಡಳಿತ ಅರಣ್ಯ ಇಲಾಖೆಗೆ ಪರ್ಯಾಯವಾಗಿ ನೀಡಬಹುದಾಗಿದೆ. ಕೆಪಿಸಿ ದೇವಕಾರು ಬಲಿ ಕಿರು ಜಲವಿದ್ಯುತ್‌ ಯೋಜನೆಗೆ ಯೋಜಿಸಿದ ಸ್ಥಳ ದೇವಕಾರು ಫಾಲ್ಸ್ ಬಳಿಯ ಸ್ಥಳ. ಆದರೆ ಕೆಪಿಸಿ ಕೊಡಸಳ್ಳಿ, ಕದ್ರಾ ಬಳಿ ಅಣೆಕಟ್ಟು ನಿರ್ಮಾಣವಾಗುವ ವೇಳೆ ದೇವಕಾರು ಗ್ರಾಮದ ಬಳಿಯ ಅತೀ ಎತ್ತರದಿಂದ ಬೀಳುವ ಫಾಲ್ಸ್ ಮೇಲೆ ಕಣ್ಣಿಟ್ಟಿತ್ತು. ಅಲ್ಲಿ 35 ಮೆಗಾ ವ್ಯಾಟ್ ಸಾಮರ್ಥ್ಯದ ಜಲವಿದ್ಯುತ್‌ ಯೋಜನೆ ನಿರ್ಮಿಸಲು ಕೆಪಿಸಿ ಯೋಜಿಸಿತ್ತು. ನಂತರ ದಿನಗಳಲ್ಲಿ ಆ ಯೋಜನೆ ಕೈಬಿಟ್ಟಿತು. ದೇವಕಾರಿಗೆ ಕೈಗಾ ಕಡೆಯಿಂದ ಇದ್ದ ಭೂ ಮಾರ್ಗವನ್ನು ಸುರಕ್ಷತೆಗಾಗಿ ಬಂದ್‌ ಮಾಡಲಾಗಿದ್ದು, ದೇವಕಾರು ಗ್ರಾಮಸ್ಥರಿಗೆ ಪರಿಹಾರ ನೀಡಿ, ಭೂಮಿ ವಶಕ್ಕೆ ಪಡೆಯಲಾಗಿದೆ. ಆದರೂ ಕೆಲ ಕುಟುಂಬಗಳು ಅಲ್ಲಿವೆ. ಅಲ್ಲಿನ ನೂರು ಹೆಕ್ಟೇರ್‌ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಬಹುದಾಗಿದೆ. ಶಿರವಾಡ ಬಳಿ ಹೆದ್ದಾರಿ ಹಾಗೂ ನಗರ ಬೆಳವಣಿಗೆ ಉದ್ದೇಶಕ್ಕಾಗಿ ಪರ್ಯಾಯವಾಗಿ ನೀಡಲಾಗಿದ್ದ ಅರಣ್ಯ ಭೂಮಿಯನ್ನು ಜಿಲ್ಲಾಡಳಿತ ಅರಣ್ಯ ಇಲಾಖೆಗೆ ನೀಡಿದೆ. ಆದರೆ ಹೆದ್ದಾರಿ ಅಗಲೀಕರಣ ಹೈದರಘಾಟ್ ಮೂಲಕ ಶಿರವಾಡ ಮಾರ್ಗ ಇದ್ದ ಯೋಜನೆ ಕೈ ಬಿಡಲಾಗಿದೆ. ಹಾಗಾಗಿ ಜಿಲ್ಲಾಡಳಿತ ಅಂಗೈಯಲ್ಲೇ ಇರುವ ಬೆಣ್ಣೆಯನ್ನು ಅರಣ್ಯ ಇಲಾಖೆಗೆ ನೀಡಿ, ಗಂಗಾವಳಿ ಕಿರು ಕಿಂಡಿ ಅಣೆಕಟ್ಟು ಯೋಜನೆಯನ್ನು ಸರ್ಕಾರಕ್ಕೆ ಹೇಳಿ ಜಾರಿ ಮಾಡಿಸಿಕೊಂಡರೆ ಅಂಕೋಲಾ, ಕಾರವಾರ ನಗರಗಳ ಜನರ ನೀರಿನ ಬವಣೆ ನೀಗಲಿದೆ.

ಬತ್ತಿದ ನದಿ:ಗಂಗಾವಳಿ ನದಿ ನೀರಿನ ಮಟ್ಟ ದಿನೇದಿನೇ ಕುಸಿಯುತ್ತಿದೆ. ಇನ್ನು ಎಂಟು ದಿನಕ್ಕೆ ಬೇಕಾಗುವಷ್ಟು ಮಾತ್ರ ನೀರು ಇದೆ. ನದಿಯಲ್ಲೇ ಗುಂಡಿಗಳನ್ನು ತೋಡಿ ಅದನ್ನು ನೀರು ಸಂಗ್ರಹಗಾರಕ್ಕೆ ನೀರು ಸರಬರಾಜು ಮಂಡಳಿ ಸಾಗಿಸುತ್ತಿದೆ. ನಂತರ ನೀರನ್ನು ಪೈಪ್‌ಲೈನ್‌ ಮೂಲಕ ನಗರ ಪಟ್ಟಣಗಳಿಗೆ ಸಾಗಿಸಲಾಗುತ್ತಿದೆ.

Advertisement

ಕಾರವಾರ, ಸೀಬರ್ಡ್‌ ನೌಕಾನೆಲೆ ಸಿಬ್ಬಂದಿ ವಸತಿ ಪ್ರದೇಶ, ಆದಿತ್ಯ ಬಿರ್ಲಾ ವಸತಿ ಪ್ರದೇಶ, ಅಂಕೋಲಾ, ಗೋಕರ್ಣಕ್ಕೆ ಗಂಗಾವಳಿ ನದಿ ನೀರೇ ಆಸರೆ. ಆದರೆ ಗಂಗಾವಳಿಗೆ ಜಲಸಂಗ್ರಹಗಾರ ವಿರುವ ಅಗಸೂರು ಸಮೀಪದ ಹೊನ್ನಳ್ಳಿಯ ಜಲ ಸಂಗ್ರಹಗಾರದಲ್ಲಿ ನೀರು ಸಂಗ್ರಹಿಸಲು ಹರಸಾಹಸ ಪಡಲಾಗುತ್ತಿದೆ. ನದಿಗೆ ಅಕ್ರಮವಾಗಿ ಹಾಕಿಕೊಂಡಿರುವ ಪಂಪ್‌ಸೆಟ್‌ಗಳನ್ನು ಕಡಿತ ಮಾಡಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೂ ನದಿಯ ನೀರು ಕಾರವಾರ, ಐಎನ್‌ಎಸ್‌ ಕದಂಬ ನೌಕಾನೆಲೆಗೆ ಸಾಕಾಗುತ್ತಿಲ್ಲ. ನೌಕಾನೆಲೆ ಜನವಸತಿಗೆ 30 ಲಕ್ಷ ಲೀಟರ್‌ ದಿನವೊಂದಕ್ಕೆ ಬೇಕಾಗಿದೆ. ಕಾರವಾರಕ್ಕೆ 10 ಲಕ್ಷ ಲೀಟರ್‌, ಅಂಕೋಲಾಕ್ಕೆ 10 ಲಕ್ಷ ಲೀಟರ್‌, ಬಿಣಗಾದಲ್ಲಿನ ಆದಿತ್ಯ ಬಿರ್ಲಾ ಕಂಪನಿಯ ಸಿಬ್ಬಂದಿ ವಸತಿಗೆ 10 ಲಕ್ಷ ಲೀಟರ್‌ ನೀರು ಪ್ರತಿದಿನ ಬೇಕಾಗಿದೆ. ಇದನ್ನು ಬೇಸಿಗೆಯಲ್ಲಿ ಸಹ ಆತಂಕವಿಲ್ಲದೇ ನೀರು ಸರಬರಾಜು ಮಾಡಬೇಕಾದರೆ ಗಂಗಾವಳಿ ನದಿಗೆ ಕಿರು ಅಣೆಕಟ್ಟನ್ನು ಹೊನ್ನಳ್ಳಿ ಬಳಿ ನಿರ್ಮಿಸುವುದೊಂದೇ ದಾರಿ. ಆದರೆ ಕಿರು ಅಥವಾ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಅನೇಕ ಅಡ್ಡಿ ಆತಂಕಗಳು ಇವೆ. ಬೇಸಿಗೆಯಲ್ಲಿ ಉಂಟಾಗುವ ನೀರಿನ ಕೊರತೆ ನೀಗಿಸಲು ಗಂಗಾವಳಿಯನ್ನು ಕಾಪಾಡಲು ಜಿಲ್ಲಾಡಳಿತ, ಜನತೆ ನೀರಿನ ಮಹತ್ವ ಸಾರುವ ಆಂದೋಲನವನ್ನೇ ರೂಪಿಸಬೇಕಿದೆ.

•ನಾಗರಾಜ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next