Advertisement

ಹಣಕ್ಕಾಗಿ ಪೀಡಿಸುತ್ತಿದ್ದ ಮೊದಲ ಪತ್ನಿಯ ಪುತ್ರನನ್ನು ಕೊಂದ ತಂದೆ!

12:57 PM Jun 07, 2022 | Team Udayavani |

ಬೆಂಗಳೂರು: ಹಣ ಕೊಡದಿದ್ದರೆ ಕಿರಿಯ ಪತ್ನಿಯನ್ನು ಕೊಲೆಗೈಯುವುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಹಿರಿಯ ಪತ್ನಿಯ ಪುತ್ರನನ್ನು ತಂದೆಯೇ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಆರ್‌.ಟಿ.ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಚಾಮುಂಡಿನಗರ ನಿವಾಸಿ ಮೊಹಮದ್‌ ಸುಲೇಮಾನ್‌(18) ಕೊಲೆಯಾದವ. ಕೃತ್ಯ ಎಸಗಿದ ಆತನ ತಂದೆ ಮೊಹಮದ್‌ ಸಂಶೀರ್‌(42) ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಆರೋಪಿ ಮೊಹಮದ್‌ ಸಂಶೀರ್‌ ಬಾರ್‌ ಬೆಡ್ಡಿಂಗ್‌ ಕೆಲಸ ಮಾಡುತ್ತಿದ್ದು, ಇಬ್ಬರು ಪತ್ನಿಯರಿದ್ದಾರೆ.

ಮೊದಲ ಪತ್ನಿಯನ್ನು ತಮಿಳುನಾಡಿನ ಕೃಷ್ಣಗಿರಿಯಲ್ಲಿ ಇರಿಸಿದ್ದಾನೆ. ಬೆಂಗಳೂರಿನ ಮನೆಯಲ್ಲಿ ಕಿರಿಯ ಪತ್ನಿ ಹಾಗೂ ಹಿರಿಯ ಪತ್ನಿಯ ಪುತ್ರ ಸುಲೇಮಾನ್‌ ಹಾಗೂ ಆತನ ತಂದೆ ವಾಸವಾಗಿದ್ದರು. ಹೆಬ್ಬಾಳದಲ್ಲಿರುವ ಭುವನೇಶ್ವರಿನಗರದ ಗ್ಯಾರೇಜ್‌ ನಲ್ಲಿ ಕೆಲಸ ಮಾಡುತ್ತಿದ್ದ ಸುಲೇಮಾನ್‌, ಹಣಕ್ಕಾಗಿ ತಂದೆ ಯನ್ನು ಪೀಡಿಸುತ್ತಿದ್ದ. ಅಲ್ಲದೆ, ತಾನು ಕೇಳಿದಾಗ ಹಣ ಕೊಡದಿದ್ದರೆ. “ನಿನ್ನ ಎರಡನೇ ಹೆಂಡತಿಯನ್ನು ಕೊಲ್ಲುತ್ತೇನೆ’ ಬೆದರಿಕೆ ಹಾಕುತ್ತಿದ್ದ. ಅದರಿಂದ ಹೆದರಿದ್ದ ಸಂಶೀರ್‌, ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದ. ಭಾನುವಾರ ರಾತ್ರಿ ಮನೆಗೆ ಬಂದ ಸುಲೇಮಾನ್‌, ಹಣ ಕೊಡುವಂತೆ ತಂದೆಗೆ ದುಂಬಾಲು ಬಿದ್ದಿದ್ದಾನೆ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಅದರಿಂದ ಆಕ್ರೋಶಗೊಂಡ ಸುಲೇಮಾನ್‌, “ನಿನ್ನ ಎರಡನೇ ಪತ್ನಿಯನ್ನು ಕೊಲ್ಲುತ್ತೇನೆ’ ಎಂದು ಸವಾಲು ಹಾಕಿದ್ದ ಎಂಬುದು ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿ ಪರಾರಿ: ಮುಂಜಾನೆ 5 ಗಂಟೆ ಸುಮಾರಿಗೆ ಸುಲೇಮಾನ್‌ ಎಚ್ಚರಗೊಂಡು ಮೊಬೈಲ್‌ ನೋಡುತ್ತಿದ್ದ. ಆಗ ಆರೋಪಿ ತಂದೆ ಹಿಂದಿನಿಂದ ಕಬ್ಬಿಣದ ರಾಡ್‌ ನಿಂದ ಆತನ ತಲೆಗೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವ ದಿಂದ ಸುಲೇಮಾನ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದೇ ವೇಳೆ ರಾತ್ರಿ ಪಾಳಿಯ ಸೆಕ್ಯೂರಿಟಿ ಕೆಲಸ ಮುಗಿಸಿಕೊಂಡು ಬಂದ ಸಂಶೀರ್‌ನ ತಂದೆ(ತಾತ) ಕೋಣೆಗೆ ಹೋದಾಗ ಮೊಮ್ಮಗನ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಪುತ್ರ ಸಂಶೀರ್‌ ಬಳಿ ಹೋಗಿ, ಕೃತ್ಯದ ಬಗ್ಗೆ ಪ್ರಶ್ನಿಸಿದಾಗ, “ನಾನೇ ಕಬ್ಬಿಣದ ರಾಡ್‌ನಿಂದ ಕೊಂದಿದ್ದೇನೆ’ ಎಂದು ಹೇಳಿ ಪರಾರಿಯಾಗಿದ್ದ.

ಕೂಡಲೇ ಸಂಶೀರ್‌ ತಂದೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಆರ್‌.ಟಿ.ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next