Advertisement

ಕುಡಿತದ ಚಟ ಬಿಡಿಸಲು ಯತ್ನಿಸಿದಕ್ಕೆ ಪಾಲಕರಿಗೆ ಚೂರಿ ಹಾಕಿ, ಎ ಸಿನಿಮಾದ ಪೋಸ್‌ ಕೊಟ್ಟ ಆರೋಪಿ

03:11 PM Sep 10, 2022 | Team Udayavani |

ಬೆಂಗಳೂರು: ಕುಡಿತದ ಚಟ ಬಿಡಿಸಲು ರಿ-ಹ್ಯಾಬಿಲಿಟೇಷನ್‌ಗೆ ತನ್ನನ್ನು ಕಳುಹಿಸುತ್ತಾರೆ ಎಂದು ಆತಂಕಗೊಂಡ ಯುವಕ ಚೂರಿಯಿಂದ ಪಾಲಕರು ಹಾಗೂ ಸೋದರಮಾವನಿಗೆ ಇರಿದು, ಸ್ಥಳೀಯ 12 ವಾಹನಗಳ ಗಾಜು ಒಡೆದು ಆತಂಕ ಸೃಷ್ಟಿಸಿದ್ದ. ಇದೀಗ ಕೊನೆಗೂ ಆತನನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಸುಬೇದಪಾಳ್ಯದ ತೇಜಸ್‌ (24) ಬಂಧಿತ. ತೇಜಸ್‌ ನಿತ್ಯ ಮದ್ಯಪಾನ ಮಾಡಿ ಮನೆಗೆ ಬಂದು ಪಾಲಕರ ಜತೆ ಜಗಳ ಮಾಡುತ್ತಿದ್ದ. ಇದರಿಂದ ನೊಂದಿದ್ದ ಆತನ ಪಾಲಕರು ಹೇಗಾದರೂ ಮಾಡಿ ಮಗನಿಗೆ ಕುಡಿತದ ಚಟ ಬಿಡಿಸಬೇಕು ಎಂದು ರಿ ಹ್ಯಾಬಿಲಿಟೆಷನ್‌ ಸೆಂಟರ್‌ಗೆ ದಾಖಲಿಸಲು ನಿರ್ಧರಿಸಿದ್ದರು. ಗುರುವಾರ ರಾತ್ರಿ ರಿ-ಹ್ಯಾಬಿಲಿಟೇಶನ್‌ ಸೆಂಟರ್‌ನವರು ಇವರ ಮನೆಗೆ ಬಂದಾಗ ಈ ವಿಷಯ ತೇಜಸ್‌ ಗಮನಕ್ಕೆ ಬಂದಿತ್ತು.

ಆಕ್ರೋಶಗೊಂಡ ತೇಜಸ್‌, ಮನೆಯಲ್ಲಿದ್ದ ಚೂರಿಯಿಂದ ತಂದೆ, ತಾಯಿ ಹಾಗೂ ರಿ-ಹ್ಯಾಲಿಟೇಶನ್‌ ಸಿಬ್ಬಂದಿಯನ್ನು ಕರೆತಂದು ಸೋದರ ಮಾವನಿಗೆ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ. ಇಷ್ಟಕ್ಕೆ ಸುಮ್ಮನಾಗದ ತೇಜಸ್‌, ಮನೆಸಮೀಪ ರಸ್ತೆ ಬದಿ ನಿಲುಗಡೆ ಮಾಡಿದ್ದ 12 ಕಾರುಗಳ ಗಾಜನ್ನು ಒಡೆದು ದುಷ್ಕೃತ್ಯ ಮೆರೆದಿದ್ದಾನೆ.

ಎ ಸಿನಿಮಾದಲ್ಲಿ ಉಪೇಂದ್ರ ರೀತಿ ಆರೋಪಿ ಪೋಸ್‌ : ಇದೇ ಸಂದರ್ಭದಲ್ಲಿ ಯಶವಂತಪುರದ ದೇವರಾಯಪಾಳ್ಯದಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ಬರುತ್ತಿತ್ತು. ಗಣೇಶ ಮೂರ್ತಿ ಬಳಿ ತೆರಳಿ ಉಪೇಂದ್ರ ಅಭಿನಯದ ‘ಎ’ ಸಿನಿಮಾದ ದೃಶ್ಯದಂತೆ ಪೋಸ್‌ ಕೊಟ್ಟಿದ್ದ. ಗಣೇಶ ಮೂರ್ತಿ ಮೆರವಣಿಗೆಬಂದೋಬಸ್ತ್ ನಲ್ಲಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದು ಯಶವಂತಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿ ತೇಜಸ್‌ನನ್ನು ವಿಚಾರಣೆ ನಡೆಸಿದಾಗ ಅಸಲಿ ಸಂಗತಿ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next