Advertisement

ಸಾಂಕ್ರಾಮಿಕ ರೋಗ ಹೆಚ್ಚಳ ಭೀತಿ: ಆರು ತಿಂಗಳಲ್ಲಿ  20 ಡೆಂಗ್ಯೂ ಪ್ರಕರಣ

03:10 PM Jun 07, 2017 | Team Udayavani |

ಮಹಾನಗರ: ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಡೆಂಗ್ಯೂ, ಮಲೇರಿಯಾ, ಇಲಿಜ್ವರದಂತಹ ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚುತ್ತಿದೆ. ಅದಕ್ಕೆ ಪೂರಕವೆಂಬಂತೆ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಒಟ್ಟು 20 ಡೆಂಗ್ಯೂ, 13 ಇಲಿ ಜ್ವರ ಹಾಗೂ 788 ಮಲೇರಿಯಾ ಪ್ರಕರಣ ದಾಖಲಾಗಿದೆ.

Advertisement

ಮಳೆಗಾಲ ಶುರುವಾಯಿತೆಂದರೆ ಜಿಲ್ಲೆಯಲ್ಲಿಯೂ ಒಂದಲ್ಲ ಒಂದು ರೀತಿಯ ಸಾಂಕ್ರಾಮಿಕ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ, ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಎಷ್ಟೇ ಶ್ರಮಿಸಿದರೂ ರೋಗ ಬಾಧೆ ತಪ್ಪುತ್ತಿಲ್ಲ. ಆತಂಕದ ವಿಚಾರವೆಂದರೆ ಕಳೆದ ವರ್ಷ ಡೆಂಗ್ಯೂ ಜ್ವರದಿಂದಾಗಿ ಪುತ್ತೂರು ತಾಲೂಕಿನಲ್ಲಿ ಇಬ್ಬರು ಹಾಗೂ ಬೆಳ್ತಂಗಡಿಯಲ್ಲಿ ಓರ್ವ ವ್ಯಕ್ತಿ ಸೇರಿ ಒಟ್ಟು ಮೂವರು ಸಾವನ್ನಪ್ಪಿದ್ದರು. 

ಈಗ ಮತ್ತೆ ಮಳೆಗಾಲ ಪ್ರಾರಂಭವಾಗಿದ್ದು, ಅಲ್ಲಲ್ಲಿ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ಹರಡಿದ ಅನಂತರ ಚಿಕಿತ್ಸೆಗೆ ಹೋಗುವ ಬದಲು ಮೊದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು ಉತ್ತಮ. 

ಮಂಗಳೂರಿನಲ್ಲಿ  734 ಮಲೇರಿಯಾ ಪ್ರಕರಣ
2017ರ ಜನವರಿಯಿಂದ ಜೂನ್‌ವರೆಗೆ 8 ಡೆಂಗ್ಯೂ ಪ್ರಕರಣ ವರದಿಯಾಗುವ ಮೂಲಕ ಬಂಟ್ವಾಳ ಮುಂದಿದ್ದರೆ, ಮಂಗಳೂರಿನಲ್ಲಿ 7 ಇಲಿಜ್ವರ, 734 ಮಲೇರಿಯಾ ಪತ್ತೆಯಾಗುವ ಮೂಲಕ ರೋಗಭೀತಿಯನ್ನು ಸೃಷ್ಟಿಸಿದೆ.
ಮಂಗಳೂರು 6, ಬಂಟ್ವಾಳ 8, ಪುತ್ತೂರು 2, ಬೆಳ್ತಂಗಡಿ 3, ಸುಳ್ಯದಲ್ಲಿ 3 ಡೆಂಗ್ಯೂ ಈಗಾಗಲೇ ವರದಿಯಾಗಿದೆ. ಕಳೆದ ವರ್ಷ ಜನವರಿಯಿಂದ ಡಿಸೆಂಬರ್‌ವರೆಗೆ ಕ್ರಮವಾಗಿ 117, 105, 116, 77, 70 ಸಹಿತ ಒಟ್ಟು 485 ಡೆಂಗ್ಯೂ ಪ್ರಕರಣ ಕಂಡು ಬಂದಿದ್ದವು. 

ಇನ್ನು ಮಂಗಳೂರಿನಲ್ಲಿ 7, ಬಂಟ್ವಾಳ 3, ಬೆಳ್ತಂಗಡಿ, ಪುತ್ತೂರು, ಸುಳ್ಯದಲ್ಲಿ ತಲಾ 1 ಇಲಿಜ್ವರ ಪ್ರಕರಣ ಕಂಡು ಬಂದಿದೆ. 

Advertisement

ಕಳೆದ ವರ್ಷದಲ್ಲಿ ಮಂಗಳೂರು 70, ಬಂಟ್ವಾಳ 29, ಬೆಳ್ತಂಗಡಿ 16, ಪುತ್ತೂರು 18 ಹಾಗೂ ಸುಳ್ಯದಲ್ಲಿ 15 ಪ್ರಕರಣಗಳು ಕಂಡು ಬಂದಿದ್ದವು.

ಜನವರಿಯಿಂದ ಈವರೆಗೆ ಮಂಗಳೂರಿ ನಲ್ಲಿ 734, ಬಂಟ್ವಾಳ 12, ಬೆಳ್ತಂಗಡಿ 12, ಪುತ್ತೂರಿನಲ್ಲಿ 30 ಮಲೇರಿಯಾ ಪ್ರಕರಣಗಳು ಕಂಡು ಬಂದರೆ, ಸುಳ್ಯದಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. 

ಕಳೆದ ವರ್ಷ ಮಂಗಳೂರು 6,209, ಬಂಟ್ವಾಳ 99, ಬೆಳ್ತಂಗಡಿ 21, ಪುತ್ತೂರು 68, ಸುಳ್ಯ 12 ಸಹಿತ ಒಟ್ಟು 6,409 ಪ್ರಕರಣಗಳು ಕಂಡು ಬಂದಿದ್ದವು. ಎರಡೂ ವರ್ಷಗಳಲ್ಲಿ ಅತೀ ಹೆಚ್ಚು ಮಲೇರಿಯಾ ಪ್ರಕರಣ ದಾಖಲಾಗಿರುವುದು ಮಂಗಳೂರಿನಲ್ಲೇ!

ಎಚ್ಚರಿಕೆ ಅಗತ್ಯ: ಭಯ ಬೇಡ
ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿವಿಧ ಕಾರ್ಯಕ್ರಮ ಗಳನ್ನು ಹಾಕಿಕೊಳ್ಳುತ್ತಿದೆ. ಮನೆಯ ಬಾವಿಗಳಿಗೆ ಗಪ್ಪಿ ಮೀನುಗಳನ್ನು ಬಿಡುವುದು, ಸಾಂಕ್ರಾಮಿಕ ರೋಗ ನಾಶಕ ಔಷಧ ಸಿಂಪಡಣೆ ಮಾಡುವುದು ಈ ಬಾರಿಯೂ ನಡೆಯುತ್ತಿದೆ. ಆದಾಗ್ಯೂ ಆರೋಗ್ಯ ಇಲಾಖೆ, ಪಾಲಿಕೆಯೊಂದಿಗೆ ಸಾರ್ವಜನಿಕರ ಜವಾಬ್ದಾರಿಯೂ ಮುಖ್ಯವಾಗಿರುತ್ತದೆ.

ಮನೆ ಸುತ್ತಮುತ್ತ  ಸ್ವತ್ಛವಾಗಿಟ್ಟು ಕೊಳ್ಳುವುದರಿಂದ ಎಲ್ಲ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಸಾಧ್ಯ ವಿದೆ. ಮುಖ್ಯವಾಗಿ ತ್ಯಾಜ್ಯ, ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ವೇಸ್ಟ್‌ ಬಿಸಾಡುವ ಕಂಟೈನರ್‌ಗಳನ್ನು ಆಗಾಗ ಖಾಲಿ ಮಾಡುತ್ತಿರಬೇಕು. ಹಳ್ಳಿಗಳಲ್ಲಿ ಅಡಿಕೆ ಹಾಳೆಗಳಲ್ಲಿ ನೀರು ನಿಂತು ಹುಳದ ರೀತಿಯಲ್ಲಿ ಈ ಸೊಳ್ಳೆಗಳ ಉತ್ಪತ್ತಿಯಾಗುತ್ತದೆ. ಇದೇ ಡೆಂಘೀಗೆ ಕಾರಣವಾಗುತ್ತದೆ. ಹಾಗಾಗಿ ಅಡಿಕೆ ಹಾಳೆಗಳಲ್ಲಿ ನೀರು ನಿಲ್ಲದಂತೆ ಅಗತ್ಯ ಗಮನ ಹರಿಸಬೇಕು. ಹೂವಿನ ಕುಂಡಗಳಲ್ಲಿಯೂ ನೀರು ನಿಲ್ಲದಂತೆ ಜಾಗೃತೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಪ್ರತಿ ಮಳೆಗಾಲದ ಸಂದರ್ಭ ದಲ್ಲಿಯೂ ಮಲೇರಿಯಾ ಮುನ್ನೆ ಚ್ಚರಿಕೆ ಕ್ರಮಗಳನ್ನು ವಿವಿಧ ರೀತಿ ಯಲ್ಲಿ ಆರೋಗ್ಯ ಇಲಾಖೆ ಪ್ರಚಾರ ಅಭಿಯಾನಗಳ ಮೂಲಕ ಹಮ್ಮಿ ಕೊಳ್ಳುತ್ತಿದೆ. ಆದಾಗ್ಯೂ ಮಲೇರಿಯಾ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರಮುಖ ವಾಗಿ ನಿರ್ಮಾಣ ಹಂತದ ಕಟ್ಟಡಗಳಲ್ಲಿ ನೀರು ನಿಲ್ಲುತ್ತಿರುವುದು, ಶುಚಿತ್ವದ ಕೊರತೆಯಿಂದ ಹೆಚ್ಚು ಮಲೇರಿಯಾ ಕಾಣಿಸಿಕೊಳ್ಳುತ್ತಿದೆ. ಕಳೆದ ವರ್ಷ ಜುಲೈ ಮತ್ತು ಆಗಸ್ಟ್‌ ತಿಂಗಳಿನಲ್ಲಿ ಕಾಣಿಸಿ ಕೊಂಡ ಮಲೇರಿಯಾ ಪ್ರಕರಣದ ಪೈಕಿ ಹೊಟೇಲ್‌, ಲಾಡ್ಜ್, ನಿರ್ಮಾಣ ಹಂತದ ಕಟ್ಟಡಗಳಲ್ಲಿನ ಶುಚಿತ್ವದ ಕೊರತೆಯಿಂದ ಕಾಣಿಸಿಕೊಂಡದ್ದೇ ಹೆಚ್ಚಿದೆ.

ನಿಯಮಿತ ದ್ರವಾಂಶ ಆಹಾರ ಸೇವಿಸಿ
ಜ್ವರ ಬರುವುದು, ಕಣ್ಣಿನ ಹಿಂಭಾಗ ನೋವು, ತಲೆನೋವು, ಸಂಧಿನೋವು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಡೆಂಘೀ ಮಾರಣಾಂತಿಕ ಖಾಯಿಲೆ ಅಲ್ಲದಿದ್ದರೂ, ನಿರ್ಲಕ್ಷé ವಹಿಸಿದರೆ ಆರೋಗ್ಯಕ್ಕೆ ಅಪಾಯವಾಗುತ್ತದೆ. ಆರಂಭಿಕ ಹಂತದಲ್ಲಿಯೇ ಯಾವುದೇ ಜ್ವರವನ್ನೂ ನಿರ್ಲಕ್ಷಿಸದೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ನಗರದಲ್ಲಿ ಇರುವ ರಕ್ತ ಪರೀಕ್ಷಾ ಕೇಂದ್ರ ಗಳಿಗೆ ತೆರಳಿ ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕು. ದ್ರವಾಂಶ ಇರುವ ಆಹಾರ ಸೇವನೆ ಅತಿ ಅವಶ್ಯವಾಗಿದೆ. ಆಹಾರ ಸೇವನೆ ಬಳಿಕ ವಾಂತಿಯಾಗುತ್ತದೆ ಎಂದು ತಿನ್ನದೇ ಇದ್ದರೆ ಅಪಾಯ. ಗಂಜಿ ಊಟ, ದ್ರವಾಹಾರ ಸೇವನೆ ನಿರಂತರ ಮಾಡುತ್ತಿರ ಬೇಕು ಎಂದು ಆರೋಗ್ಯ ಇಲಾಖೆ ಸಿಬಂದಿ ಹೇಳುತ್ತಾರೆ.

ಸಾರ್ವಜನಿಕರು ಸಹಕರಿಸಬೇಕು
ಸಾಂಕ್ರಾಮಿಕ ರೋಗಗಳ ನಿವಾರಣೆ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಔಷಧಗಳ ಸಿಂಪಡಣೆ, ಗಪ್ಪು ಮೀನು ಬಿಡುವುದು, ಮುನ್ನೆಚ್ಚರಿಕೆ ಸಲುವಾಗಿ ಮನೆಮನೆಗೆ ಮಾಹಿತಿ ತಲುಪಿಸುವಂತಹ ಕಾರ್ಯಗಳೂ ನಡೆಯುತ್ತಿವೆ. ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮಾಲಕರು ಕಟ್ಟಡದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಅಲ್ಲದೇ ರೋಗ ನಿಯಂತ್ರಣದಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯ.

– ಡಾ | ರಾಜೇಶ್‌,
 ಜಿಲ್ಲಾ ಸರ್ವೇಕ್ಷಣಾಧಿಕಾರಿ

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next