Advertisement

ಜಿಲ್ಲೆಯ 23773 ರೈತ ಮಕ್ಕಳಿಗೆ ಪ್ರೋತ್ಸಾಹಧನ

12:26 PM Mar 22, 2022 | Team Udayavani |

ಬಾಗಲಕೋಟೆ: ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯ 23,773 ರೈತರ ಮಕ್ಕಳ ಬ್ಯಾಂಕ್‌ ಖಾತೆಗೆ ನೇರವಾಗಿ 5.86 ಕೋಟಿ ರೂ.ಗಳ ಹಣವನ್ನು ಜಮೆ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

Advertisement

ಬಾದಾಮಿಯ ಖಾಸಗಿ ಹೋಟೆಲ್‌ ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದೇಶದಲ್ಲಿಯೇ ಪ್ರಪ್ರಥಮವಾಗಿ ರೂಪಿಸಲಾಗಿರುವ ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯ 23,773 ರೈತ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 2,19,872 ಜನ ರೈತರು ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ನೋಂದಾಯಿಸಿದ್ದು, ಈವರೆಗೆ ಕೇಂದ್ರದಿಂದ ರೈತರ ಬ್ಯಾಂಕ್‌ ಖಾತೆಗಳಿಗೆ 300 ಕೋಟಿ ರೂ.ಗಿಂತ ಅಧಿಕ ಮೊತ್ತವನ್ನು ಜಮೆ ಮಾಡಲಾಗಿದೆ. ರೈತರು ಈ ಯೋಜನೆಯಡಿ ಮುಂದುವರಿಯಲು ಕೇಂದ್ರ ಸರ್ಕಾರದ ನಿರ್ದೇಶನದಂತೆ ಮಾ.31 ರೊಳಗಾಗಿ ಇ-ಕೆವೈಸಿ ಕಡ್ಡಾಯವಾಗಿ ಮಾಡಿಸಬೇಕು. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಬೆಳೆ ಪರಿಹಾರ ಮಂಜೂರಾದ ರೈತರು ತಮ್ಮ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಜೋಡಣೆ ಹಾಗೂ ಎನ್‌ಪಿಸಿಐ ಲಿಂಕ್‌ ಮಾಡಿಸಿದಲ್ಲಿ ಅಂತಹವರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗುತ್ತದೆ ಎಂದು ತಿಳಿಸಿದರು.

ಯಾವುದೇ ರೀತಿಯ ಕುಂದು ಕೊರತೆಗಳಿದ್ದಲ್ಲಿ ರೈತರು ತಮ್ಮ ತಾಲೂಕಿನ ಕೃಷಿ ಕಚೇರಿಗೆ ಭೇಟಿ ನೀಡಿ ಅಲ್ಲಿರುವ ವಿಮಾ ಸಂಸ್ಥೆಯವರೊಂದಿಗೆ ಸಮಾಲೋಚನೆ ಮಾಡಿಕೊಂಡು ಪರಿಹಾರ ಕಂಡುಕೊಳ್ಳಲು ತಿಳಿಸುತ್ತಾ ಈ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಲು ತಾಲೂಕು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಪ್ರತಿ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳನ್ನು ನಿಯೋಜಿಸಿದ್ದು, ನಿಯತಕಾಲಿಕವಾಗಿ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಬೆಳೆಯ ಬೆಳೆವಣಿಗೆ, ರೋಗ ಹಾಗೂ ಕೀಟದ ನಿರ್ವಹಣೆ ಬಗ್ಗೆ ರೈತರಿಗೆ ಮಾಹಿತಿ ನೀಡಲು ಸಭೆಯಲ್ಲಿದ್ದ ಅಧಿಕಾರಿಗಳಿಗೆ ತಿಳಿಸಿದರು.

ರೈತರ ಬೇಡಿಕೆ ಅನುಸಾರ ಹೆಚ್ಚಿನ ಕಾರ್ಯಕ್ರಮದ ಅವಶ್ಯಕತೆ ಇದ್ದಲ್ಲಿ ಕೇಂದ್ರ ಕಚೇರಿಗೆ ಮನವಿ ಸಲ್ಲಿಸಲು ತಿಳಿಸುತ್ತಾ, ಸಮಗ್ರ ಪೋಷಕಾಂಶ ನಿರ್ವಹಣೆ, ಸಮಗ್ರ ಪೀಡೆ ನಿರ್ವಹಣೆ, ಯಾಂತ್ರಿಕರಣ ಹಾಗೂ ಸೂಕ್ಷ್ಮ ನೀರಾವರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತು ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖಾಂತರ ರೈತರಿಗೆ ನವೀನ ತಾಂತ್ರಿಕತೆ ಹಾಗೂ ಸುಧಾರಿತ ಬೇಸಾಯ ಕ್ರಮಗಳ ಮತ್ತು ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ತರಬೇತಿ ಆಯೋಜಿಸಲು ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ 2,71,989 ಹೆಕ್ಟೇರ್‌, ಹಿಂಗಾರು ಹಂಗಾಮಿನಲ್ಲಿ 2,47,448 ಹೆಕ್ಟೇರ್‌ ಹಾಗೂ ಬೇಸಿಗೆ ಹಂಗಾಮಿನಲ್ಲಿ 32,113 ಹೆಕ್ಟೇರ್‌ ಕ್ಷೇತ್ರದಲ್ಲಿ ವಿವಿಧ ಕೃಷಿ ಬೆಳೆಗಳು ಬಿತ್ತನೆಯಾಗಿರುವುದಾಗಿ ತಿಳಿಸಿದರು.

ಜಿಲ್ಲೆಯ ಬೇಡಿಕೆ ಅನುಸಾರ ಈವರೆಗೆ ಯಾವುದೇ ಕೊರತೆಯಾಗದಂತೆ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ವ್ಯವಸ್ಥೆ ಮಾಡಿದ್ದು, ಮುಂಗಾರು ಹಂಗಾಮಿನಲ್ಲಿ 1,12,845 ಮೆಟ್ರಿಕ್‌ ಟನ್‌ನಷ್ಟು ಹಾಗೂ ಹಿಂಗಾರು-ಬೇಸಿಗೆ ಹಂಗಾಮಿನಲ್ಲಿ 58,927 ಮೆಟ್ರಿಕ್‌ ಟನ್‌ನಷ್ಟು ವಿವಿಧ ರಸಗೊಬ್ಬರಗಳನ್ನು ಜಿಲ್ಲೆಗೆ ಸರಬರಾಜಾಗಿರುವುದಾಗಿ ಯಾವುದೇ ಕೊರತೆ ಇಲ್ಲ. ನಕಲಿ ಹಾಗೂ ಕಳಪೆ ಕೃಷಿ ಪರಿಕರಗಳನ್ನು ಮಾರಾಟ ಮಾಡುತ್ತಿದ್ದಲ್ಲಿ ಅಂತಹವನ್ನು ಪತ್ತೆ ಹಚ್ಚಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಈವರೆಗೆ ಜಿಲ್ಲೆಯಲ್ಲಿ 17 ಪ್ರಕರಣಗಳಲ್ಲಿ ಸಂಶಯಾಸ್ಪದ, ಕಳಪೆ ಮತ್ತು ಕಾನೂನಿನ ಉಲ್ಲಂಘನೆ ಮಾಡಿರುವ ಬಗ್ಗೆ ಪರಿಕರ ಜಪ್ತು ಮಾಡಿ ನಿಯಮಾನುಸಾರ ಕ್ರಮ ಜರುಗಿಸಲಾಗುತ್ತಿದೆ. ಒಂದು ವೇಳೆ ಅಧಿಕೃತ ಕೃಷಿ ಪರಿಕರ ವಿತರಕರು ಕಳಪೆ, ಕಾನೂನು ಬಾಹಿರ ಚಟುವಟಿಕೆ ಕಂಡು ಬಂದಲ್ಲಿ ಅಂತವರ ಪರವಾನಗಿ ಅಮಾನತು ಮಾಡಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು. ಕೃಷಿ ಉಪ ನಿರ್ದೇಶಕ ಎಸ್‌.ಬಿ. ಕೊಂಗವಾಡ, ಆರ್‌.ಜಿ. ನಾಗಣ್ಣವರ, ಜಾಗೃತಿ ದಳದ ಸಹಾಯಕ ನಿರ್ದೇಶಕ ಎಸ್‌.ಬಿ. ಹಳ್ಳೊಳ್ಳಿ, ಕೃಷಿ ಸಹಾಯಕ ನಿರ್ದೇಶಕ ಟಿ.ಪಿ. ಲಂಬಾಣಿ, ಅಶೋಕ ತಿರಕನ್ನವರ, ಸಿದ್ದಪ್ಪ ಪಟ್ಟಿಹಾಳ, ಸತೀಶ ಮಾವಿನಕೊಪ್ಪ, ಬಿ.ವಿ. ದಾಸರ, ಆರ್‌.ಬಿ. ಬಿದರಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next