Advertisement

ಯಕ್ಷಧ್ರುವ ಯುರೋಪ್‌ ಘಟಕ ಉದ್ಘಾಟನೆ; ಮಕ್ಕಳಿಂದ ಮಾಯಾಮೃಗ ಪ್ರದರ್ಶನ

02:57 PM Oct 19, 2024 | Team Udayavani |

ಮ್ಯೂನಿಕ್‌: “ಗಜಮುಖದವಗೆ, ಗಣಪಗೆ, ಸರ್ವ ತ್ರಿಜಗವಂದಿತೆಗೆ ಆರತಿ ಎತ್ತಿರೆ’ ಎಂದು ಸ್ವಾತಿ ಅಜಿತ್‌ ಪ್ರಭು ಅವರು ಸುಶ್ರಾವ್ಯವಾಗಿ ಹಾಡುತ್ತಾ ವೇದಿಕೆಯ ಮೇಲೆ ವಿಶೇಷವಾಗಿ ಚೌಕಿ ಗಣಪತಿ ಪೂಜೆ ನಡೆದದ್ದು ಮ್ಯೂನಿಕ್‌ನ ಐನೆವೆಲ್ಟ್ ಹೌಸ್‌ನಲ್ಲಿ . ಕರ್ನಾಟಕದ ಪ್ರಸಿದ್ಧ ಯಕ್ಷಧ್ರುವ ಪಟ್ಲ ಫೌಂಡೇಶನ್‌ ವಿದೇಶಗಳಲ್ಲೂ ಯಕ್ಷಗಾನದ ಗಂಧ ಪಸರಿಸಲು ಯುರೋಪ್‌ನಲ್ಲೂ ಘಟಕ ಸ್ಥಾಪಿಸಿ ಅಕ್ಟೋಬರ್‌ 3ರಂದು ಉದ್ಘಾಟನ ಸಮಾರಂಭ ನಡೆಸಲಾಯಿತು.

Advertisement

ಬಾಲಗೋಪಾಲರಾಗಿ ಆದಿಶೇಷ, ಸಂವಿದ್‌, ಮನಸ್‌ ಪುಟ್ಟ ಕೃಷ್ಣ , ರಂಗ, ಕೇಶವನಂತೆಯೇ ತಮ್ಮ ಹೆಜ್ಜೆಯ ಗೆಜ್ಜೆನಾದದಲ್ಲಿ ತಲ್ಲೀನಗೊಳಿಸಿದರು. ಪೂರ್ವರಂಗ ಪೀಠಿಕೆ ಸ್ತ್ರೀವೇಷ ಪ್ರಾತ್ಯಕ್ಷಿಕೆಯಲ್ಲಿ ಶ್ರೀದೇವಿಯವರು ತಮ್ಮ ಮೃದು ಹಾವಭಾವದಿಂದ ಮಾರ ಸುಂದರನ ಕರೆತಂದರು. ಹಿಮ್ಮೇಳದಲ್ಲಿ ಸ್ವಾತಿಯವರ ಗಾನ, ಅಜಿತ್‌ರವರ ಮೃದಂಗ ನೆರೆದವರ ಮನವನ್ನು ತಣಿಸಿತು. ಬಡಗುತಿಟ್ಟು ಯಕ್ಷಗಾನದ ಸಾಂಪ್ರದಾಯಿಕ ತೆರೆ ಒಡ್ಡೋಲಗ ಪ್ರಾತ್ಯಕ್ಷಿಕೆಯನ್ನು ಯಕ್ಷಗಾನ ಗುರು ಹಾಗೂ ಚಿಣ್ಣರು ಲಯಬದ್ಧವಾಗಿ ನಡೆಸಿಕೊಟ್ಟರು.

ಅಭಿಮನ್ಯು ಪ್ರಾತ್ಯಕ್ಷಿಕೆಯಲ್ಲಿ ಕುರುಕ್ಷೇತ್ರದ ರಣರಂಗಕ್ಕೆ ಚಕ್ರವ್ಯೂಹವನ್ನು ಭೇದಿಸಲು ಹೊರಟು ನಿಂತ ಅಭಿಮನ್ಯುವಿಗೆ ತಾಯಿ ಸುಭದ್ರೆ ಅಲ್ಲಿಗೆ ಹೋಗದಿರು ಎಂದು ಮನವೊಲಿಸುವ ಸಂವಾದ ಎಲ್ಲರ ಅಂತರಂಗವನ್ನು ಹೊಕ್ಕಿತು. ಪ್ರಯಾಣ ಕುಣಿತ ಪ್ರಾತ್ಯಕ್ಷಿಕೆ, ಜತೆಗೆ ಚಿಕ್ಕ ಮಕ್ಕಳ “ಮಾಯಾಮೃಗ’ ಪ್ರಖರವಾಗಿ ಮೂಡಿಬಂತು.

ಮ್ಯೂನಿಕ್‌ನಲ್ಲಿ ಮೊದಲ ಬಾರಿಗೆ ಮಕ್ಕಳಿಂದ ಮಾಯಾಮೃಗ;
ಕಳೆದ ಒಂದು ವರ್ಷದಿಂದ ಯಕ್ಷಗಾನ ಗುರು ಅಜಿತ್‌ ಪ್ರಭುರವರು ಜರ್ಮನಿಯಲ್ಲಿನ ಮ್ಯೂನಿಕ್‌, ಫ್ರಾಂಕ್‌ಫ‌ರ್ಟ್‌, ನ್ಯೂರೆನºರ್ಗ್‌ ಮತ್ತು ಬೆಲ್ಜಿಯಂನ ಬ್ರುಸೆಲ್ಸ್‌ ನಗರಗಳಲ್ಲಿನ ಹಲವಾರು ಮಕ್ಕಳಿಗೆ ಯಕ್ಷಗಾನವನ್ನು ಕಲಿಸುತ್ತಿದ್ದು , ಈ ವಿದ್ಯಾರ್ಥಿಗಳಿಂದ ಕೋಟ ಶಿವರಾಮ ಕಾರಂತರು ಪರಿಚಯಿಸಿದ ಯಕ್ಷಗಾನ ಬ್ಯಾಲೆ ರೂಪದಲ್ಲಿ ಪ್ರದರ್ಶನಗೊಂಡ “ಮಾಯಾಮೃಗ ಯಕ್ಷಗಾನ ರೂಪಕ ಮಕ್ಕಳಿಗೆ ಉತ್ತಮ ವೇದಿಕೆಯೊಂದಿಗೆ ಅವರಲ್ಲಿ ಆತ್ಮವಿಶ್ವಾಸ, ಕ್ರಿಯಾಶೀಲತೆ ನಮ್ಮ ಸಾಂಪ್ರದಾಯಿಕ ಕಲೆಯ ಬಗೆಗೆ ಪ್ರೀತಿ ಇಮ್ಮಡಿಗೊಳಿಸಿದೆ.

Advertisement

ಅಜಿತ್‌ರವರು ಗುರುವಾಗಿ ಮಾಡಿದ ತಮ್ಮ ಜ್ಞಾನ, ಅನುಭವ, ಪರಿಶ್ರಮ, ಗಲಿಕೆ ಹಾಗೂ ಸಮಯದ ಹೂಡಿಕೆ ಸಾರ್ಥಕತೆ ಪಡೆದಿದೆ. ರಾಮನಾಗಿ – ಸಂವಿದ್‌, ಲಕ್ಷಣನಾಗಿ – ಆದಿಶೇಷ, ಸೀತೆಯಾಗಿ – ಸ್ನಿಗ್ಮಾ, ಜಟಾಯುವಾಗಿ – ಅರ್ನವ್‌, ಸನ್ಯಾಸಿ ರಾವಣನಾಗಿ – ಅಥರ್ವ್‌, ರಾವಣನಾಗಿ – ಅರವಿಂದ್‌, ಶೂರ್ಪನಖೀಯಾಗಿ – ಶ್ರೀಧರ್‌, ಮಾರೀಚನಾಗಿ – ಕಾರ್ತಿಕ್‌, ಮಿಂಚಿ ಮರೆಯಾಗುವ ಮಾಯಾಮೃಗವಾಗಿ – ಖುಷಿ ಯಕ್ಷಗಾನದ ಸಾಂಪ್ರದಾಯಿಕ ವೇಷಭೂಷಣ ತೊಟ್ಟು, ಭಾವಕ್ಕೆ ತಕ್ಕ ಅಭಿವ್ಯಕ್ತಿ , ಗಾನಕ್ಕೆ ತಕ್ಕ ನಾಟ್ಯದೊಂದಿಗೆ ನೋಡುಗರ ಹೃನ್ಮನಗಳಿಗೆ ರಸಧಾರೆ ಹರಿಸಿದ್ದಾರೆ. ಹೊನ್ನ ಜಿಂಕೆಯ ಮೋಹಕ್ಕೆ ಒಳಗಾಗಿ ಬೇಕೆಂದು ಹಠ ಹಿಡಿದ ಸೀತೆ ರಾಮನನ್ನು ಅದನ್ನು ಹಿಡಿದು ತರುವಂತೆ ಕಳುಹಿಸಿ, ಲಕ್ಷ್ಮಣನ ರಕ್ಷಾರೇಖೆಯನ್ನೂ ದಾಟಿ, ರಾವಣನ ಕಪಟತನಕ್ಕೆ ಬಲಿಯಾಗಿ ಅಪಹರಣವಾಗುವ ಕಥಾಹಂದರವುಳ್ಳ ಮಾಯಾಮೃಗ ಬ್ಯಾಲೆ ಗುರುವಿನ ಮಾರ್ಗದರ್ಶನ ಮತ್ತು ಮಕ್ಕಳ ಅಭ್ಯಾಸದ ಸಮ್ಮಿಳಿತವಾಗಿ ಅದ್ಭುತವಾಗಿ ಮೂಡಿಬಂತು.

ಮುಖ್ಯ ಅತಿಥಿ, ಭಾರತೀಯ ರಾಯಭಾರ ಕಚೇರಿಯ ಸಾಂಸ್ಕೃತಿಕ ಅಧಿಕಾರಿ ರಾಜೀವ್‌ ಚಿತ್ಕರ್‌ರವರು ದೀಪ ಬೆಳಗಿಸಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಯುರೋಪ್‌ ಘಟಕದ ಉದ್ಘಾಟನೆ ಮಾಡಿದರು. ಯಕ್ಷಗಾನ ನಮ್ಮ ಭಾರತದ ಅದ್ಭುತ ಕಲೆ ಎಂಬುದು ನಮಗೆ ಹೆಮ್ಮೆ ಇಂತಹ ಪ್ರಾಚೀನ ಕಲೆಯನ್ನು ಪಾರಂಪರಿಕವಾಗಿ ಪ್ರಪಂಚಕ್ಕೆ ಪರಿಚಯಿಸುವಲ್ಲಿ ಈ ಯಕ್ಷಧ್ರುವ ಸಂಸ್ಥೆಯು ಯಶಸ್ವಿಯಾಗಲೆಂದು ಅಶಿಸಿದರು.

ಮುಖ್ಯ ಅಭ್ಯಾಗತರಾಗಿದ್ದ ಮ್ಯೂನಿಕ್‌ ನಗರದ ಎಲ್‌ಎಮ್‌ಯೂ ವಿಶ್ವವಿದ್ಯಾನಿಲಯ ಇಂಡಲಾಜಿ ವಿಭಾಗದ ಪ್ರಸಿದ್ಧ ನಿವೃತ್ತ ಪ್ರಾಧ್ಯಾಪಕ ಡಾ| ರೋಬೀಬ್‌ ಝೈಡೇನೊಸ್‌ರವರು ಮೂಲತಃ ಜರ್ಮನ್‌ ಭಾಷಿಗರಾಗಿದ್ದರೂ, ಅಚ್ಚ ಕನ್ನಡದಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಅವರು ಶಿವಮೊಗ್ಗದ ಒಂದು ಸಣ್ಣ ಹಳ್ಳಿಯಲ್ಲಿ ಬಯಲಿನಲ್ಲಿ ಕೂತು ಯಕ್ಷಗಾನ ನೋಡಿ ಪರಮಾಶ್ಚರ್ಯವಾಗಿತ್ತು ಎಂದು ತಮ್ಮ ನೆನಪುಗಳನ್ನು ಹಂಚಿಕೊಂಡರು.

ಭಾರತದಿಂದ ಬಂದು ನೆಲೆಸಿದ್ದೀರಿ. ಒಳ್ಳೆಯದನ್ನು, ಸುಂದರವಾದದ್ದನ್ನು ಮಾತೃಭೂಮಿಯಿಂದ ಇಲ್ಲಿ ತರಬೇಕು. ಇಂತಹ ಕೆಲಸಗಳು ಬಹು ಮುಖ್ಯ. ಯಕ್ಷಗಾನವನ್ನು ಇಲ್ಲೂ ಸಹ ಪರಿಚಯ ಮಾಡುವ ಪ್ರಯತ್ನ ಖುಷಿಯಾಗಿದೆ. ಇಂತಹ ಒಳ್ಳೆಯ ಕೆಲಸಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದರು.

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಯುರೋಪ್‌ ಘಟಕದ ಅಧ್ಯಕ್ಷರಾದ ನರೇಂದ್ರ ಶೆಣೈರವರು ಮಾತನಾಡಿ, ತಮ್ಮ ಹಲವು ವರ್ಷಗಳ ಮಹದಾಶಯ ಇಂದು ಕಾರ್ಯಗತವಾಗಿದೆ. ಮುಂದಿನ ದಿನಗಳಲ್ಲಿ ಯಕ್ಷಗಾನ ಗುರು ಅಜಿತ್‌ ಪ್ರಭು ತಲ್ಲೂರ್‌ರವರ ಸಾರಥ್ಯದಲ್ಲಿ ಯುರೋಪ್‌ನಾದ್ಯಂತ ಯಕ್ಷಗಾನ ಪ್ರದರ್ಶನ ಹಾಗೂ ಮುಖ್ಯವಾಗಿ ನಮ್ಮ ಮುಂದಿನ ಪೀಳಿಗೆಗೆ ಈ ಕಲೆಯನ್ನು ಧಾರೆ ಎರೆಯುವ ಕೆಲಸ ಮಾಡಲಿದ್ದೇವೆ ಎಂದರು.

ಸನಾತನ ಅಕಾಡೆಮಿಯ ಸಂಸ್ಥಾಪಕರಾದ ಡಾ| ಅನೂಷ ನಾಗರಾಜ್‌ ಶಾಸ್ತ್ರೀ, ಸಿರಿಗನ್ನಡಕೂಟ ಮ್ಯೂನಿಕ್‌ ಅಧ್ಯಕ್ಷರಾದ ಶ್ರೀಧರ್‌ ಲಕ್ಷ್ಮಾಪುರ್‌ ಹಾಗೂ ಆರ್‌.ಎಂ.ಕೆ.ಎಸ್‌.ನಿಂದ ವೇದಮೂರ್ತಿ ಮತ್ತು ಲೋಕನಾಥ್‌ರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಚುಕ್ಕಾಣಿ ಹಿಡಿದ ಶರ್ಮರವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ರೇಷ್ಮಾ ಮೋರ್ಟು, ಶಾಲಿನಿ ಅಖಿಲ ಮತ್ತು ಹಲವರು ಸ್ವಯಂಸೇವಕರಾಗಿ ಕಾರ್ಯಕ್ರಮ ಯಶಸ್ವಿಯಾಗಿ ಮುನ್ನಡೆಯಲು ಕೈ ಜೋಡಿಸಿದರು. ಎಲ್ಲರಿಗೂ ವಂದನೆಗಳನ್ನು ತಿಳಿಸಿದ ಅಜಿತ್‌ರವರು ತಮ್ಮ ವಿದ್ಯಾರ್ಥಿಗಳ ಬಗೆಗೆ ಹೆಮ್ಮೆ ವ್ಯಕ್ತಪಡಿಸಿ, ಯಕ್ಷಗಾನ ಕಲೆಯನ್ನು ಅದರ ಮೂಲರೂಪದಲ್ಲೇ ಉಳಿಸಿ ಬೆಳೆಸಿಕೊಂಡು ಹೋಗುವ ಅಭಿಷ್ಟೆಯನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮ ಸಫ‌ಲತೆಗಾಗಿ ಸದಾ ಬೆಂಬಲವಾಗಿ ನಿಂತ ಸಿರಿಗನ್ನಡ ಕೂಟ ಮ್ಯೂನಿಕ್‌ ತಂಡದವರಿಗೆ ಧನ್ಯವಾದಗಳನ್ನು ತಿಳಿಸಿದರು.

*ವರದಿ: ಶೋಭಾ ಚೌಹಾØಣ್‌, ಪ್ರಾಂಕ್‌ಫ‌ರ್ಟ್‌

Advertisement

Udayavani is now on Telegram. Click here to join our channel and stay updated with the latest news.

Next