Advertisement

ಎಂ.ಎ.ಸಿ.ಟಿ‌ ಮತ್ತು ಹೊಸದುರ್ಗ ಫಾಸ್ಟ್‌ ಟ್ರ್ಯಾಕ್‌ ಸ್ಪೆಷಲ್‌ ನ್ಯಾಯಾಲಯ ಉದ್ಘಾಟನೆ

06:18 PM Nov 04, 2020 | mahesh |

ಕಾಸರಗೋಡು: ಕಾಸರಗೋಡು ಜಿಲ್ಲೆಗೆ ಮಂಜೂರು ಮಾಡಿರುವ ವಾಹನ ಅಪಘಾತ ನಷ್ಟ ಪರಿಹಾರ ಟ್ರಿಬ್ಯೂನಲ್‌ (ಎಂ.ಎ.ಸಿ.ಟಿ) ಮತ್ತು ಹೊಸದುರ್ಗ ಫಾಸ್ಟ್‌ ಟ್ರ್ಯಾಕ್‌ ಸ್ಪೆಷಲ್‌ ನ್ಯಾಯಾಲಯ ಸೋಮವಾರ ಉದ್ಘಾಟನೆಗೊಂಡಿತು.

Advertisement

ವೀಡಿಯೋ ಕಾನ್ಫರೆನ್ಸ್‌ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನ್ಯಾಯಾಲಯಗಳನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಮಹಿಳೆಯರ ಮತ್ತು ಮಕ್ಕಳ ಮೇಳೆ ನಡೆಯುತ್ತಿರುವ ದೌರ್ಜನ್ಯಗಳನ್ನು ಕಠಿಣ ರೂಪದಲ್ಲಿ ತಡೆಯಲು ರಾಜ್ಯ ಸರಕಾರ ಕಟಿಬದ್ಧವಾಗಿದೆ. ಇವರ ಮನಸ್ಸಿಗೆ, ದೇಹಕ್ಕೆ ನೋವು ತಂದುಕೊಡುವ ವಿಚಾರಗಳಿಗೆ ರಾಜ್ಯದಲ್ಲಿ ಅವಕಾಶಗಳಿಲ್ಲ. ಇದಕ್ಕೆ ಪೂರಕವಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು. ಸೂಕ್ತ ಅವಧಿಯಲ್ಲೇ ಫೋಕ್ಸೋ, ಅತ್ಯಾಚಾರ ಕೇಸುಗಳನ್ನು ತೀರ್ಪುಗೊಳಿಸಲು ಕೇಂದ್ರ ಕಾನೂನು ಸಚಿವಾಲಯ ಮಹಿಳಾ ಸಂರಕ್ಷಣೆ ಮಿಷನ್‌ ವ್ಯಾಪ್ತಿಯಲ್ಲಿ ಪಾಸ್ಟ್‌ ಟ್ರ್ಯಾಕ್‌ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಯೋಜನೆ ಆರಂಭಿಸಲಾಗಿದೆ. ಪ್ರತಿ ಫಾಸ್ಟ್‌ ಟ್ರಾಕ್‌ ವಿಶೇಷ ನ್ಯಾಯಾಲಯ ಪ್ರತಿವರ್ಷ 165 ಕೇಸುಗಳನ್ನು ತೀರ್ಪುಗೊಳಿಸಲು ಯೋಜನೆ ಸಿದ್ಧಗೊಂಡಿದೆ ಎಂದರು.

ಹೈಕೋರ್ಟ್‌ ನ್ಯಾಯಮೂರ್ತಿ ಎ.ಎಂ.ಷಫೀಕ್‌ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಮಾತನಾಡಿದ ಅವರು ವೇಗದಲ್ಲಿ ವಿಚಾರಣೆ ಮತ್ತು ನ್ಯಾಯ ಒದಗಿಸುವಿಕೆಯ ಮಹತ್ವ ಅಧಿಕಗೊಳ್ಳುತ್ತಿದೆ. ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ-ಫೋಕ್ಸೋ ಕೇಸುಗಳ ವಿಚಾರಣೆಗಳನ್ನು ತ್ವರಿತಗೊಳಿಸಲು ರಾಜ್ಯದಲ್ಲಿ ಸಜ್ಜುಗೊಳಿಸಿದ 5 ಫಾಸ್ಟ್‌ ಟ್ರ್ಯಾಕ್‌ ವಿಶೇಷ ನ್ಯಾಯಾಲಯಗಳು ಈ ನಿಟ್ಟಿನಲ್ಲಿ ಪೂರಕ ಎಂದರು.

ರಾಜ್ಯದಲ್ಲಿ ಸದ್ರಿ 8176 ಫೋಕ್ಸೋ ಕೇಸುಗಳು, 6194 ಅತ್ಯಾಚಾರ ಕೇಸುಗಳು ನ್ಯಾಯಾಲಯದ ಪರಿಶೀಲನೆಯಲ್ಲಿವೆ. ಪ್ರತ್ಯೇಕ ನ್ಯಾಯಾಲಯ ಮೂಲಕ ವೇಗದ ವಿಚಾರಣೆ ಮತ್ತು ತೀರ್ಪು ಒದಗಿಸುವ ಗುರಿ ನಿರ್ವಹಿಸಲಾಗುತ್ತಿದೆ. ಮಾರ್ಚ್‌ ತಿಂಗಳಲ್ಲೇ 5 ನ್ಯಾಯಾಲಯಗಳ ಚಟುವಟಿಕೆಗಳನ್ನು ಆರಂಭಿಸಬೇಕಿದ್ದರೂ ಕೋವಿಡ್‌ ಕಟ್ಟುನಿಟ್ಟುಗಳ ಹಿನ್ನೆಲೆಯಲ್ಲಿ ಉದ್ಘಾಟನೆ ವಿಳಂಬವಾಗಿತ್ತು ಎಂದವರು ನುಡಿದರು.

ಕಾನೂನು ಸಚಿವ ಎ.ಕೆ.ಬಾಲನ್‌, ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟೀಚರ್‌, ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಎ.ಎಂ. ಬದರ್‌, ಅಮಿತ್‌ ರಾವಲ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಸ್ವತಂತ್ರ ಎಂ.ಎ.ಸಿ.ಟಿ ಇಲ್ಲದೇ ಇದ್ದ ರಾಜ್ಯದ ಏಕೈಕ ಜಿಲ್ಲೆ ಕಾಸರಗೋಡು ಆಗಿತ್ತು. 2009ರಿಂದ ನ್ಯಾಯಾಲಯ ಸ್ಥಾಪಿಸುವ ಸಂಬಂಧ ಆದ್ಯತೆ ಪಟ್ಟಿಯಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲೇ ಇದ್ದರೂ ಹಲವು ಕಾರಣಗಳಿಂದ ಇದು ವಿಳಂಬವಾಗಿತ್ತು. ಕಸರಗೋಡು ಬಾರ್‌ ಅಸೊಸಿಯೆಶನ್‌ ಹೈಕೋರ್ಟ್‌ನಲ್ಲಿ ಫೈಲ್‌ ನಡೆಸಿದ್ದ ರಿಟ್‌ ಅರ್ಜಿಯ ತೀರ್ಪು ಪ್ರಕಾರ ಜಿಲ್ಲೆಯಲ್ಲಿ ಎಂ.ಎ.ಸಿ.ಟಿ. ಸ್ಥಾಪಿಸಲಾಗಿದೆ. ಅಡೀಷನಲ್‌ ಜಿಲ್ಲಾ ನ್ಯಾಯಮೂರ್ತಿ(ಪ್ರಥಮ) ಆರ್‌.ಎಲ್‌.ಬೈಜು ಅವರಿಗೆ ನ್ಯಾಯಮೂರ್ತಿಯ ತಾತ್ಕಾಲಿಕ ಹೊಣೆ ನೀಡಲಾಗಿದೆ. ಜಿಲ್ಲಾ ನ್ಯಾಯಮೂರ್ತಿಗಳ ಪ್ರಮೋಷನ್‌ ನಡೆಯುವ ವೇಳೆಗೆ ಶಾಶ್ವತ ನ್ಯಾಯಮೂರ್ತಿಗಳ ನೇಮಕಾತಿ ನಡೆಯಲಿದೆ. ಎಂ.ಎ.ಸಿ.ಟಿ.ಯಲ್ಲಿ ಮೊದಲ ದಿನ 5 ಕೇಸುಗಳನ್ನು ಪರಿಶೀಲಿಸಲಾಗಿದೆ.

ರಾಜ್ಯದಲ್ಲಿ ಮಂಜೂರು ಮಾಡಿರುವ 28 ಫಾಸ್ಟ್‌ ಟ್ರ್ಯಾಕ್‌ ವಿಶೇಷ ನ್ಯಾಯಾಲಯದಲ್ಲಿ ಒಂದನ್ನು ಹೊಸದುರ್ಗದಲ್ಲಿ ಆರಂಭಿಸಿರುವ ವಿಶೇಷ ನ್ಯಾಯಾಲಯವಾಗಿದೆ. ಫೋಕ್ಸೋ ಕೇಸುಗಳ ಸಹಿತ ಸೆಷನ್ಸ್‌ ಪ್ರಕರಣಗಳನ್ನು ಈ ನ್ಯಾಯಾಲಯ ಪರಿಶೀಲನೆ ನಡೆಸಲಿದೆ. ಜಾರಿಯಲ್ಲಿ ಕಾಸರಗೊಡಿನಲ್ಲಿರುವ ವಿಶೇಷ ನ್ಯಾಯಾಲಯದ ಹೊರತಾಗಿ ಹೊಸದುರ್ಗ ವಿಶೇಷ ನ್ಯಾಯಾಲಯ ಚಟುವಟಿಕೆ ನಡೆಸಲಿದೆ. ಅಡೀಷನಲ್‌ ಜಿಲ್ಲಾ ನ್ಯಾಯಮೂರ್ತಿ (ದ್ವಿತೀಯ) ರಾಜನ್‌ ತಟ್ಟಿಲ್‌ ಅವರಿಗೆ ಹೊಸದುರ್ಗ ವಿಶೇಷ ನ್ಯಾಯಾಲಯದ ಹೊಣೆ ನೀಡಲಾಗಿದೆ.

ಕಾಸರಗೊಡು ನ್ಯಾಯಾಲಯ ಸಮುಚ್ಚಯದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಸೆಷನ್ಸ್‌ ನ್ಯಾಯಮೂರ್ತಿ ಎಸ್‌.ಎಚ್‌. ಪಂಚಾಪಕೇಶನ್‌, ಅಡಿಶನಲ್‌ ಜಿಲ್ಲಾ ನ್ಯಾಯಮೂರ್ತಿಗಳಾದ ಟಿ.ಕೆ.ನಿರ್ಮಲಾ, ರಾಜನ್‌ ತಟ್ಟಿಲ್‌, ಆರ್‌.ಎಲ್‌. ಬೈಜು, ಡಿ.ಎಲ್‌.ಎ.ಎಸ್‌.ಎ. ಕಾರ್ಯದರ್ಶಿ ಶುಹೈಬ್‌, ಕಾಸರಗೋಡು ಬಾರ್‌ ಅಸೊಸಿಯೇಶನ್‌ ಅಧ್ಯಕ್ಷ ಅಧ್ಯಕ್ಷ ಎ.ಸಿ. ಅಶೋಕ್‌ ಕುಮಾರ್‌, ಅಸೋಸಿಯೆಶನ್‌ ಕಾರ್ಯದರ್ಶಿ ಕೆ. ಕರುಣಾಕರನ್‌ ನಂಬ್ಯಾರ್‌, ಹೊಸದುರ್ಗ ಬಾರ್‌ ಅಸೊಸಿಯೇಶನ್‌ ಅಧ್ಯಕ್ಷ ಕೆ.ಸಿ. ಶಶೀಂದ್ರನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next