Advertisement

ಯಾತ್ರೆಗಳ ಸಂಭ್ರಮದಲ್ಲಿ “ಅಧಿಕಾರದ ಚಿತ್ತ’

10:07 AM Jan 08, 2018 | Team Udayavani |

ರಾಜ್ಯ ವಿಧಾನಸಭೆ ಚುನಾವಣೆಗೆ ನಾಲ್ಕು ತಿಂಗಳು ಬಾಕಿ ಇರುವಂತೆ ಇಡೀ ರಾಜ್ಯದ ಚಿತ್ತ ಚುನಾವಣೆಯತ್ತ ನೆಟ್ಟಿದೆ. ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಯಾತ್ರೆ, ಸಮಾವೇಶ, ಜಿಲ್ಲಾವಾರು, ವಿಧಾನಸಭೆ ಕ್ಷೇತ್ರವಾರು ಸಭೆ, ಸಂವಾದಗಳಲ್ಲಿ ಬ್ಯುಸಿಯಾಗಿವೆ.

Advertisement

ಎಲೆಕ್ಟ್ರಾನಿಕ್‌ ಮಾಧ್ಯಮಗಳಂತೂ ತಮ್ಮದೇ ಆದ ಮಾಹಿತಿ ಆಧಾರದ ಮೇಲೆ ಕ್ಷೇತ್ರವಾರು ಸಮೀಕ್ಷೆ ನಡೆಸಿ ರಾಜಕೀಯ ಪಕ್ಷಗಳಿಗೆ ಸಿಗಬಹುದಾದ ಶೇಕಡಾವಾರು ಮತ ಹಾಗೂ ಕ್ಷೇತ್ರಗಳ ಅಂಕಿ ಸಂಖ್ಯೆ ನೀಡಿ ಮೂರೂ ಪಕ್ಷಗಳ ಎದೆಬಡಿತ ಹೆಚ್ಚಿಸಿದೆ. ಯಾರು ಏನೇ ಹೇಳಿದರೂ ಆಯಾ ಪಕ್ಷಗಳ ಜನಪ್ರಿಯತೆ ಮತ್ತು ಸರ್ಕಾರದ ಸಾಧನೆಯ ಜತೆಗೆ ಅಹಿಂದ ಅಸ್ತ್ರ, ಒಕ್ಕಲಿಗ, ಲಿಂಗಾಯಿತ ಓಟ್‌ಬ್ಯಾಂಕ್‌ ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಪ್ರಮುಖ ಪಾತ್ರ ವಹಿಸುವುದು ಸತ್ಯ. ಈ ಬಾರಿಯ ಚುನಾವಣೆಯಲ್ಲಂತೂ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ, ಜಾತಿವಾರು ಜನಗಣತಿ, ಬಡ್ತಿ ಮೀಸಲಾತಿ, 

ಒಳ ಮೀಸಲಾತಿ, ಮಹದಾಯಿ ವಿವಾದ, ಕನ್ನಡ ಧ್ವಜ ಅಗತ್ಯತೆ ವಿಚಾರಗಳು ಪ್ರಭಾವ ಬೀರುವುದು ಮೇಲ್ನೋಟಕ್ಕೆ ಅಷ್ಟೇ ಸ್ಪಷ್ಟ. ಹೀಗಾಗಿ, ಆ ವಿಚಾರಗಳನ್ನು ಮೂರೂ ಪಕ್ಷಗಳು ತಮಗೆ ಬೇಕಾ ದಂತೆ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳುವಲ್ಲಿಯೂ ಹಿಂದೆ ಬಿದ್ದಿಲ್ಲ. ರಾಜ್ಯದ ಹಿತಾಸಕ್ತಿ ಮುಖ್ಯ ಎಂಬ ಘೋಷಣೆಯಡಿ ರಾಜಕೀಯ ಗುಣಾಕಾರ-ಭಾಗಾಕಾರ ಹಾಕಿಕೊಂಡೇ ಚುನಾವಣಾ ತಂತ್ರಗಳನ್ನು ಹೆಣೆಯುತ್ತಿವೆ.
ಒಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನವೆಂಬರ್‌ 2ರಂದು ಪ್ರಾರಂಭಿಸಿದ ಪರಿವರ್ತನಾ ಯಾತ್ರೆ ಜ.21ಕ್ಕೆ ಅಂತ್ಯಗೊಳ್ಳುತ್ತದೆ. ಮತ್ತೂಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ “ನವ ಕರ್ನಾಟಕ ನಿರ್ಮಾಣ ಸಂಕಲ್ಪ’ದೊಂದಿಗೆ ಆರಂಭಿಸಿರುವ  ಸಾಧನಾ ಸಂಭ್ರಮಯಾತ್ರೆಯ ಮೊದಲ ಹಂತ ಮುಗಿದು ಎರಡನೇ ಹಂತ ಪ್ರಾರಂಭಗೊಂಡಿದ್ದು  ಜ.13ಕ್ಕೆ ಅಂತ್ಯಗೊಳ್ಳಲಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರ್ಯಾಯ ಎಂದೇ ಬಿಂಬಿತವಾದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರ ಯಾತ್ರೆಯು ಲೋಕಸಭೆ ಕ್ಷೇತ್ರವಾರು ಸಂಚರಿಸುತ್ತಿದೆ.
ಇದರ ನಡುವೆ ಮಾಜಿ ಮುಖ್ಯಮಂತ್ರಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ “ಕರ್ನಾಟಕ ವಿಕಾಸವಾಹಿನಿ’ ಯಾತ್ರೆ ಮೊದಲ ಹಂತದಲ್ಲಿ ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಮುಗಿಸಿ, ಎರಡನೇ ಹಂತದಲ್ಲಿ ಜ.5 ರಿಂದ ಮುಂಬೈ ಕರ್ನಾಟಕ ಭಾಗದಲ್ಲಿ ಪ್ರಾರಂಭವಾಗಿದ್ದು ತಿಂಗಳ ಕಾಲ ನಿರಂತರ ಉತ್ತರ ಕರ್ನಾಟಕದಲ್ಲಿ ಸಂಚರಿಸಲಿದೆ.

ಒಟ್ಟಾರೆಯಾಗಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ರಾಜ್ಯದ ಮತದಾರರ ಮನವೊಲಿಸಲು ಸಾಕಷ್ಟು ಕಸರತ್ತುಗಳಲ್ಲಿ ತೊಡಗಿದೆ.  ಸಂಕ್ರಾಂತಿ ನಂತರ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಬಿಜೆಪಿಗೆ, ಬಿಜೆಪಿ ಹಾಗೂ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ, ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಜೆಡಿಎಸ್‌ಗೆ ಒಂದಷ್ಟು ಶಾಸಕರು, ಮುಖಂಡರ ವಲಸೆಗೆ  ಮಹೂರ್ತ ನಿಗದಿಯಾಗಿದೆ. ಇದು ಮೊದಲನೇ ಹಂತದ ವಲಸೆ. ಎರಡನೇ ಹಂತದ ಟಿಕೆಟ್‌ ಘೋಷಣೆಯಾದ ನಂತರ ಮೂರೂ ಪಕ್ಷಗಳಲ್ಲಿ “ಜಿಗಿತ’ ಆಗಲಿದೆ. ಇದು ಪಕ್ಷಗಳ ಗೆಲುವಿನ ಲೆಕ್ಕಾಚಾರದ ಮೇಲೆ ಬೀರುವ ಪರಿಣಾಮ ಸಣ್ಣಮಟ್ಟದ್ದೇನಲ್ಲ. ಇದೆಲ್ಲವನ್ನೂ ತಣಿಸಿ ಬಂಡಾಯದ ಬಿಸಿ ತಟ್ಟದಂತೆ ನೋಡಿಕೊಂಡು ಒಳಗೊಳಗೆ ಪ್ರಾರಂಭವಾಗುವ ಸಿಟ್ಟು ಶಮನ ಮಾಡಿ, ಒಳ ಏಟು ಬೀಳದಂತೆ ಜಾಗ್ರತೆ ವಹಿಸಿ ಚುನಾವಣೆ ನಡೆಸುವುದು ಒಂದು ದೊಡ್ಡ ಸವಾಲೇ ಸರಿ. ಇದೆಲ್ಲವನ್ನೂ ಮೂರೂ ಪಕ್ಷಗಳು ಹೇಗೆ ನಿಭಾಯಿಸಲಿವೆ ಎಂಬುದೂ ಕಾದು ನೋಡಬೇಕಾಗಿದೆ. ಈ ಮಧ್ಯೆ, ತಮಿಳುನಾಡಿನ ರಾಜಕಾರಣದಲ್ಲಿ ನಡೆದಿರುವ ಎರಡು ಮಹತ್ವ ಬೆಳವಣಿಗೆಗಳು ರಾಜ್ಯ ರಾಜಕೀಯದ ಮೇಲೆ  ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂಬುದೂ ಕುತೂಹಲ ವಿಷಯವಾಗಿದೆ.

“ನಾಯಗನ್‌’ ಖ್ಯಾತಿಯ ಕಮಲ್‌ಹಾಸನ್‌ ರಾಜಕೀಯ ಪ್ರವೇಶದ ಘೋಷಣೆ ಬೆನ್ನಲ್ಲೇ “ತಲೈವಾ’ ಖ್ಯಾತಿಯ ಸೂಪರ್‌ಸ್ಟಾರ್‌ ರಜನಿಕಾಂತ್‌ ರಾಜಕೀಯಕ್ಕೆ ಬರುವುದಾಗಿ ಘೋಷಣೆ ಮಾಡಿದ್ದಾರೆ. ಸದ್ಯಕ್ಕಂತೂ ತಮಿಳುನಾಡು ಮಾತ್ರವಲ್ಲದೆ ಪ್ರಮುಖವಾಗಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಸೇರಿ ದೇಶಾದ್ಯಂತ ರಾಜಕೀಯ ವಲಯಗಳಲ್ಲಿ ರಜನಿಕಾಂತ್‌ ನಡೆ ಕುತೂಹಲ ಮೂಡಿಸಿರುವುದಂತೂ ಹೌದು. ಯಾಕೆಂದರೆ ರಾಜಕೀಯ ಪ್ರವೇಶಕ್ಕೆ ಎರಡು ದಿನ ಮುನ್ನ ಅವರು ವರನಟ ಡಾ.ರಾಜ್‌ಕುಮಾರ್‌ ಅವರನ್ನು ಸ್ಮರಿಸಿಕೊಂಡು ಅವರ ಸಾಂಗತ್ಯ ಸಿಕ್ಕಿದ್ದು ಪೂರ್ವಜನ್ಮದ ಪುಣ್ಯ. ಅವರ ಪಾದ ಸ್ಪರ್ಶ ಪುಳಕಿತನಾಗಿದ್ದೆ ಎಂದು ನೆನಪು ಮೆಲುಕು ಹಾಕಿದರು. ಜತೆಗೆ ನಾನು ಅವರ ಪಕ್ಕಾ ಅಭಿಮಾನಿ ಎಂದು ಹೇಳಿದ್ದು  ಕರ್ನಾಟಕದ ಅಣ್ಣಾವ್ರ ಭಕ್ತರನ್ನು ಫಿದಾ ಮಾಡಿತ್ತು.

Advertisement

ರಜನಿಕಾಂತ್‌ ಸ್ಥಾಪಿಸುವ ರಾಜಕೀಯ ಪಕ್ಷ ಕರ್ನಾಟಕ ಅಥವಾ ನೆರೆಯ ಆಂಧ್ರಪ್ರದೇಶ, ತೆಲಂಗಾಣದಲ್ಲೂ ಸ್ಪರ್ಧೆ ಮಾಡುತ್ತದೆ ಅಂತಲ್ಲ. ಆದರೆ, ರಜನಿಕಾಂತ್‌  ಈ ಮೂರು ರಾಜ್ಯಗಳಲ್ಲೂ ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿರುವುದರಿಂದ ಚುನಾವಣೆ ಸಂದರ್ಭದಲ್ಲಿ ಅವರ ರಾಜಕೀಯ ತೀರ್ಮಾನ , ನಿರ್ಧಾರಗಳು ಬೇರೆ ಬೇರೆ ರೀತಿಯ ಪರಿಣಾಮ ಬೀರುವುದು ಸಹಜ. 

ಜತೆಗೆ ರಜನಿಕಾಂತ್‌ ತಾಯಿ ಬೇರು ಇರುವುದು ಕರ್ನಾಟಕದಲ್ಲೇ. ರಜನಿ ಪ್ರತ್ಯೇಕ ಪಕ್ಷ ಸ್ಥಾಪಿಸಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ತಾರೆ ಎಂಬ ಮಾತುಗಳು ಇವೆ. ಆಗ, ರಜನಿ ಬಿಜೆಪಿ ಪರ ಪ್ರಚಾರಕ್ಕೆ ಬಂದರೆ ಕರ್ನಾಟಕದಲ್ಲಿ ಸಹಜವಾಗಿ ಬಿಜೆಪಿಗೆ ಬಲ ಸಿಗಲಿದೆ. ಅದೇ ರೀತಿ ಕಮಲ್‌ಹಾಸನ್‌ ಪ್ರತ್ಯೇಕ ಪಕ್ಷ ಸ್ಥಾಪಿಸಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ತಾರೆ ಎಂದೂ ಹೇಳಲಾಗುತ್ತಿದ್ದು ಅವರ ಕಾಂಗ್ರೆಸ್‌ ಪರ ಕರ್ನಾಟಕದಲ್ಲಿ ಪ್ರಚಾರಕ್ಕೆ ಇಳಿದರೂ ಸ್ವಲ್ಪ ಮಟ್ಟಿನ ಲಾಭ ಖಂಡಿತ. ಏಕೆಂದರೆ ಕರ್ನಾಟಕದಲ್ಲಿ ರಜನಿಕಾಂತ್‌ ಹಾಗೂ ಕಮಲ್‌ಹಾಸನ್‌ ಅಭಿಮಾನಿಗಳು ಫಿಫ್ಟಿ-ಫಿಫ್ಟಿr ಎಂದೇ ಹೇಳಬಹುದು.

ಹೀಗಾಗಿ, ಕಾಂಗ್ರೆಸ್‌ ಮತ್ತು ಬಿಜೆಪಿ ವಿಚಾರದಲ್ಲಿ ರಜನಿಕಾಂತ್‌ ಹಾಗೂ ಕಮಲ್‌ಹಾಸನ್‌ ಅವರ ನಿಲುವು  ಏನು ಎಂಬುದು ರಾಜಕೀಯವಾಗಿ ಕುತೂಹಲ ಸಂಗತಿಯೇ. ಅವರಿಬ್ಬರು ಕರ್ನಾಟಕ ರಾಜಕಾರಣದ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದ್ದಾರೆ ಎಂಬುದೂ ಕಾದು ನೋಡಬೇಕಾದ ಸಂಗತಿಯೇ. ಕರ್ನಾಟಕದಲ್ಲಿಯೂ ಮೊದಲ ಬಾರಿಗೆ ನಟ ಉಪೇಂದ್ರ  “ಪ್ರಜಾಕೀಯ’ ಹೆಸರಿನಲ್ಲಿ ಕರ್ನಾಟಕ ಪ್ರಜ್ಞಾವಂತರ ಪಕ್ಷ ಸ್ಥಾಪಿಸಿ ಪ್ರಯೋಗಕ್ಕೆ ಸಜ್ಜಾಗುತ್ತಿದ್ದಾರೆ. ತಮಿಳುನಾಡಿನಲ್ಲಿ ಸಿನಿಮಾ ನಟರಿಗೆ ಸಿಗುವುದಕ್ಕೆ ಹೋಲಿಸಿದರೆ, ಅದರಲ್ಲೂ ಸ್ವಂತ ಪಕ್ಷ ಸ್ಥಾಪಿಸಿರುವ ಉಪೇಂದ್ರ ಅವರಿಗೆ ಯಾವ ರೀತಿಯ ಬೆಂಬಲ ಸಿಗುತ್ತೆ ಎಂಬುದು 2018ರ ಚುನಾವಣೆಯಲ್ಲಿ ಗೊತ್ತಾಗಲಿದೆ.

ಸಂಕ್ರಾಂತಿ ನಂತರ ಪಕ್ಷಾಂತರ ಪರ್ವ
ಗುಜರಾತ್‌ ಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ ಎಂಬ ನಿರೀಕ್ಷೆ ಇತ್ತಾದರೂ ಅಲ್ಲಿನ ಫ‌ಲಿತಾಂಶ ಬಿಜೆಪಿ ಸೋತು ಗೆದ್ದಿದೆ, ಕಾಂಗ್ರೆಸ್‌ ಗೆದ್ದು ಸೋತಿದೆ ಎಂಬಂತೆ ಬಂದಿದ್ದರಿಂದ ಕಾಂಗ್ರೆಸ್‌ ಅಥವಾ ಬಿಜೆಪಿ ಪಕ್ಷಗಳಲ್ಲಿ ಅಷ್ಟು ದೊಡ್ಡ ಘಟನೆಗಳೇನೂ ನಡೆಯಲಿಲ್ಲ. ಎರಡೂ ಪಕ್ಷಗಳು ತಂತಮ್ಮ ಸಾಧನೆಗೆ ತೃಪ್ತಿ ಪಟ್ಟುಕೊಂಡು  ಪಕ್ಷ ಸಂಘಟನೆಗೆ ಗಮನ ನೀಡಿವೆ. ಎರಡೂ ಪಕ್ಷಗಳ ಮಧ್ಯೆ “ಡಾರ್ಕ್‌ ಹಾರ್ಸ್‌’ ರೀತಿ ಹೊರ ಹೊಮ್ಮಬಹುದು ಎಂಬ ನಿರೀಕ್ಷೆಯಲ್ಲಿ ಜೆಡಿಎಸ್‌ ಇದೆ. ಆದರೆ, ಪಕ್ಷಾಂತರ ಪರ್ವ ಸಂಕ್ರಾಂತಿ ನಂತರ ಆರಂಭವಾಗುವಂತೂ ನಿಜ.

ಎಸ್‌.ಲಕ್ಷ್ಮಿನಾರಾಯಣ 

Advertisement

Udayavani is now on Telegram. Click here to join our channel and stay updated with the latest news.

Next