Advertisement

ಬಿಜೆಪಿ ರಾಜ್ಯಗಳಲ್ಲಿ ಮಹಿಳೆ ಅಸುರಕ್ಷಿತ

02:55 PM Feb 25, 2018 | |

ತಿಕೋಟಾ (ವಿಜಯಪುರ): ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು ಕರ್ನಾಟಕದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದರು.

Advertisement

ವಿಜಯಪುರ ಜಿಲ್ಲೆಯ ನೂತನ ತಾಲೂಕು ಕೇಂದ್ರ ತಿಕೋಟಾದಲ್ಲಿ ಶನಿವಾರ ನಡೆದ ಜನಾಶೀರ್ವಾದ ಯಾತ್ರೆ ಹಾಗೂ ಸ್ತ್ರೀಶಕ್ತಿ ಸಮಾವೇಶದಲ್ಲಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ 1,030 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಜರುಗಿದ್ದವು. ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಲೇ ಈ ಪ್ರಮಾಣ ಅರ್ಧಕ್ಕೆ ಕುಸಿದಿವೆ. ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎಂದರು, ಸಾಮಾಜಿಕ ಬದಲಾವಣೆ ಹರಿಕಾರರಾದ ಬಸವೇಶ್ವರರ ಕುರಿತು ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ಚಕಾರ ಎತ್ತುತ್ತಿಲ್ಲ. ಬಸವಣ್ಣ ಮೂರ್ತಿ ಮುಂದೆ ನಿಂತು ಮಾತನಾಡುವ ಅವರಿಗೆ ಬಸವೇಶ್ವರರ ತತ್ವಾದರ್ಶಗಳ ಅನುಷ್ಠಾನದ ಕುರಿತು ಕಿಂಚಿತ್ತೂ ಕಾಳಜಿಯಿಲ್ಲ. ಆದರೆ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಹಲವು ಜನಪರ ಕಾರ್ಯಕ್ರಮ ರೂಪಿಸಿ, ಜಾರಿಗೆ ತಂದಿದೆ ಎಂದರು.

ಶರಣೆ ಅಕ್ಕಮಹಾದೇವಿ ಮಹಿಳಾ ಹಕ್ಕುಗಳ ರಕ್ಷಣೆ ಹಾಗೂ ಸ್ವಾವಲಂಬಿ ಜೀವನಕ್ಕೆ ಮುನ್ನುಡಿ ಬರೆದರೆ, ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ಚನ್ಮಮ್ಮ ದೇಶಕ್ಕೆ ಮಾದರಿಯಾದಧೀರ ಮಹಿಳೆ. ಇಂಥ ನೆಲದಲ್ಲಿ ಜನಿಸಿದ ಮಹಿಳಾ ಮಣಿಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಏಕೈಕ ಪಕ್ಷ ಕಾಂಗ್ರೆಸ್‌. ನಮ್ಮ ಸರ್ಕಾರದ ಅಧಿಕಾರದ ಅವಧಿಯಲ್ಲೇ ಸ್ಥಳೀಯ ಸಂಸ್ಥೆಗಳಲ್ಲಿ ಶೇ.33 ಸ್ಥಾನ ಮೀಸಲಿರಿಸಿ, ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿದ್ದೇವೆ. ಶಾಸನ ಸಭೆಗಳಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯಬೇಕು.

ಇದಕ್ಕಾಗಿ ಮಹಿಳಾ ರಾಜಕೀಯ ಮೀಸಲು ಮಸೂದೆ ಇಂದಿನ ಅಗತ್ಯವಾಗಿದೆ. ಪ್ರಧಾನಿ ಮೋದಿ ಅವರಿಂದ ಇದು ಸಾಧ್ಯವಿಲ್ಲ, ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಮಹಿಳಾ ರಾಜಕೀಯ ಮೀಸಲು ಮಸೂದೆ ಜಾರಿಗೆ ತರುವುದಾಗಿ ಭರವಸೆ ನೀಡಿದರು. ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್‌ ನೀಡಬೇಕು. ಹೊಸ ಸಂಪುಟದಲ್ಲೂ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ರಾಹುಲ್‌ ಇದೇ ವೇಳೆ ಸಿಎಂ ಸಿದ್ದರಾಮಯ್ಯ, ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ, ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ ಅವರಿಗೆ ಸೂಚಿಸಿದರು, ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ದೇಶದಲ್ಲಿ ಸಣ್ಣ ಉದ್ಯೋಗಿಗಳು, ಬಡವರು, ಮಹಿಳೆಯರ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಿತ್ತು. ಕರ್ನಾಟಕದಲ್ಲೂ ನಮ್ಮ ಪಕ್ಷದ ಸರ್ಕಾರ ಸ್ತ್ರೀಶಕ್ತಿ ಸಂಘಗಳ ಮೂಲಕ ಸಾಲ ನೀಡುವ ಹಾಗೂ 25 ಸಾವಿರ ರೂ. ಸಹಾಯ ಧನ ನೀಡಿ ಕರ್ನಾಟಕದಲ್ಲಿ ಬಡ ಕುಟುಂಬಗಳ ಆರ್ಥಿಕ ಶಕ್ತಿ ವೃದ್ಧಿಸಿದೆ. ಹಲವು ಕುಟುಂಬಗಳಲ್ಲಿ ಮಹಿಳೆಯರಿಂದಲೇ ಕುಟುಂಬ ನಿರ್ವಹಣೆ ಸಾಧ್ಯವಾಗಿದೆ. ಇದು ಕಾಂಗ್ರೆಸ್‌ ಪಕ್ಷ ಹಾಗೂ ಅದರ ಸರ್ಕಾರಗಳಿಗೆ ಮಹಿಳೆಯರ ಕುರಿತು ಇರುವ ಅಭ್ಯುದಯದ ಬದ್ಧತೆಯ ಪ್ರತೀಕ ಎಂದರು.

ರಾಹುಲ್‌ ಗಾಂಧಿ ಅವರು ಮಾಡಿದ ಹಿಂದಿ ಭಾಷಣವನ್ನು ಸಚಿವ ಡಾ| ಎಂ.ಬಿ. ಪಾಟೀಲ ಕನ್ನಡಕ್ಕೆ ತರ್ಜುಮೆ ಮಾಡಿದರು. ಸಿಎಂ ಸಿದ್ದರಾಮಯ್ಯ, ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾಜುನ ಖರ್ಗೆ, ಮಾಜಿ ರಾಜ್ಯಪಾಲೆ ಮಾರ್ಗರೆಟ್‌ ಆಳ್ವಾ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ, ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸುಶ್ಮಿತಾ ದೇವ್‌,
ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಟಾಳಕರ, ಕೇಂದ್ರದ ಮಾಜಿ ಸಚಿವರಾದ ರೆಹಮಾನ್‌ ಖಾನ್‌, ಸಿ.ಎಂ. ಇಬ್ರಾಹಿಂ ಇನ್ನಿತರರಿದ್ದರು. 

Advertisement

ಮಹಿಳಾ ಮೀಸಲು ವಿರೋಧಿ ಸಿ ಬಿಜೆಪಿ ಕೇಸ್‌ ಹಾಕಿತ್ತು ವಿಜಯಪುರ: ರಾಜ್ಯದಲ್ಲಿ ಮಹಿಳೆಯರು, ದಲಿತ, ಅಲ್ಪಸಂಖ್ಯಾತರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಲು ಮಂದಾಗಿದ್ದಾಗ ಬಿಜೆಪಿ ತನ್ನ ಸಂಸದರ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ತಕರಾರು ಸಲ್ಲಿಸಿತ್ತು. ಹೀಗಾಗಿ ಮಹಿಳಾ ಮೀಸಲು ವಿಷಯದಲ್ಲಿ ಬಿಜೆಪಿ ವಿರೋಧಿ ನೀತಿಯನ್ನೇ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದರು. ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ಜರುಗಿದ ಸ್ತ್ರೀಶಕ್ತಿ ಸಮಾವೇಶದಲ್ಲಿ ಮಾತನಾಡಿದ ಅವರು, ನಿವೃತ್ತ ನ್ಯಾಯಾಧೀಶರಾದ ರಾಮಾ ಜೋಯೀಸ್‌ ಅವರು ಬಿಜೆಪಿ ಸಂಸದರಾಗಿದ್ದರು. ಅವರ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಮಹಿಳಾ ಮೀಸಲು ವಿರೋಧಿಸಿ ತಕರಾರು ಸಲ್ಲಿಸಲಾಗಿತ್ತು. ಬಿಜೆಪಿ ನಾಯಕರು ತನ್ನ ಪಕ್ಷದ ಸಂಸದನ ಕ್ರಮವನ್ನೇಕೆ ಪ್ರಶ್ನಿಸಲಿಲ್ಲ, ಕೋರ್ಟ್‌ನಲ್ಲಿ ಹಾಕಿದ್ದ ಮೊಕದ್ದಮೆ ಹಿಂಪಡೆಯಲು ಸೂಚಿಸಲಿಲ್ಲ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಮಹಿಳೆಯರು, ದಲಿತರ ಉದ್ಧಾರ ಸಾಧ್ಯ ಎಂದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇರುವ ನಮ್ಮ ಪಕ್ಷ ಹಾಗೂ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ, ಜಾರಿಗೆ ತಂದಿದೆ. ಮಹಿಳೆಯರಿಗೆ ಉನ್ನತ ಶಿಕ್ಷಣದ ಪಡೆವರೆಗೆ ಉಚಿತ ಶಿಕ್ಷಣ, ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ಶುಲ್ಕ ವಿನಾಯಿತಿ ನೀಡಿದೆ. ಹೀಗೆ ಮಹಿಳಾ ಸಬಲೀಕರಣಕ್ಕೆ ಹಲವು ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದೇವೆ. ಆದರೆ ಅಧಿಕಾರದಲ್ಲಿದ್ದಾಗ ಏನನ್ನೂ ಮಾಡದ ಬಿಜೆಪಿ ನಾಯಕರು ಈಗ ಏನೇನೋ ನಾಟಕ ಮಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಮೋದಿ ಪರ ಘೋಷಣೆ ರಾಹುಲ್‌ ವಿಚಲಿತ
 ವಿಜಯಪುರ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ನಗರದಲ್ಲಿ ರೋಡ್‌ ಶೋ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಭಾಷಣ ಆರಂಭಿಸಿದ್ದರು. ಈ ವೇಳೆ ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಮಾತನಾಡಲು ಮುಂದಾದರು. ಈ ಹಂತದಲ್ಲಿ ನೆರೆದಿದ್ದ ಜನರಲ್ಲಿ ನೂರಾರು ಯುವಕರು ಮೋದಿ ಮೋದಿ ಎಂದು ಘೋಷಣೆ ಕೂಗಿದಾಗ ರಾಹುಲ್‌ ಕೊಂಚ ವಿಚಲಿತರಾದರು. ಈ ಹಂತದಲ್ಲಿ ಸಣ್ಣ ವೇದಿಕೆ ಆಗಿದ್ದರಿಂದ ಪಕ್ಕದಲ್ಲೇ ನಿಂತಿದ್ದ ಸಿಎಂ ಸಿದ್ದರಾಮಯ್ಯ ಅವರು ಸುಮ್ಮನಿರಿ ಎಂದು ಪದೇ ಪದೇ ಮನವಿ ಮಾಡಿಕೊಂಡರೂ ಮೋದಿ ಪರ ಘೋಷಣೆಗಳು ಕೇಳಿಬರುತ್ತಲೇ ಇದ್ದವು. ಇದರಿಂದ ಗಲಿಬಿಲಿಗೊಂಡ ರಾಹುಲ್‌ ಅವರು ತ್ವರಿತವಾಗಿ ಮಾತು ಮುಗಿಸಿ ತಮ್ಮ ವಾಸ್ತವ್ಯಕ್ಕೆ ಸಿದ್ಧಪಡಿಸಿದ್ದ ಸರ್ಕಾರಿ ಪ್ರವಾಸಿ ಮಂದಿರದತ್ತ ತೆರಳಿದರು. ಈ ಮಧ್ಯೆ ರಾಹುಲ್‌ ಅವರ ಜಿಲ್ಲಾ ಪ್ರವಾಸವನ್ನು ವ್ಯಂಗ್ಯವಾಗಿ ಸ್ವಾಗತಿಸಿ, ವ್ಯಂಗ್ಯವಾಗಿ ಜರಿದು ಸಾಮಾಜಿಕ ಜಾಲ ತಾಣದಲ್ಲಿ ಪ್ರಸಾರ ಮಾಡಿದ ಆರೋಪದಲ್ಲಿ ಪೊಲೀಸರು ಬಿಜೆಪಿಯ ಶರತ್‌ ಬಿರಾದಾರ, ಬಾಬು ಜಗದಾಳೆ ಸೇರಿದಂತೆ ಆರು ಜನರನ್ನು ಶುಕ್ರವಾರ ರಾತ್ರಿಯೇ ವಶಕ್ಕೆ ಪಡೆದಿದ್ದರು. ತಮ್ಮ ಪಕ್ಷದವರ ಬಂಧನ ತಿಳಿಯುತ್ತಲೇ ಶನಿವಾರ ಮಧ್ಯಾಹ್ನ ಗಾಂಧಿ ಚೌಕ್‌ ಪೊಲೀಸ್‌ ಠಾಣೆಗೆ ತೆರಳಿದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು. ಆಗ ಪೊಲೀಸರು ವಶಕ್ಕೆ ಪಡೆದಿದ್ದ ಬಿಜೆಪಿ ಕಾರ್ಯಕರ್ತರನ್ನು ಬಿಡುಗಡೆ ಮಾಡಿದರು. ಅವರನ್ನು ಹೂಮಾಲೆ ಹಾಕಿ ಬಿಜೆಪಿ ನಾಯಕರು ಅಭಿನಂದಿಸಿ, ಕರೆ ತಂದರು

ರಾಹುಲ್‌ ರಿಂದ ಜಾರಕಿಹೊಳಿ ಸಹೋದರರಿಗೆ ಐಕ್ಯತೆ ಪಾಠ
ವಿಜಯಪುರ: ನೀವಿಬ್ಬರೂ ಸಹೋದರರು, ನಿಮ್ಮೊಳಗಿನ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳಿ. ಎಲ್ಲರೂ ಒಟ್ಟಾಗಿ ಪಕ್ಷ ಸಂಘಟಿಸಿ, ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿ ಕಾರಕ್ಕೆ ತರುವುದಕ್ಕಷ್ಟೇ ಆದ್ಯತೆ ನೀಡಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಬೆಳಗಾವಿ ಜಾರಕಿಹೊಳಿ ಸಹೋದರರಿಗೆ ಐಕ್ಯತೆ ಪಾಠ ಮಾಡಿದ್ದಾರೆ. ಶನಿವಾರ ವಿಜಯಪುರ ನಗರದ ಪ್ರವಾಸಿ ಮಂದಿರದಲ್ಲಿ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್‌ ಶಾಸಕರು, ಪಕ್ಷದ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿದಾಗ ಸತೀಶ ಜಾರಕಿಹೊಳಿ ಅವರು ತಮ್ಮ ಸಹೋದ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ದೂರು ಹೇಳಿದರು ಎನ್ನಲಾಗಿದೆ. 

ಈ ಹಂತದಲ್ಲಿ ಪ್ರತಿಕ್ರಿಯಿಸಿದ ರಾಹುಲ್‌ ಗಾಂಧಿ  ಅವರು, ಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕ ಸಂಖ್ಯೆಯ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಬೇಕಿದೆ. ಹೀಗಾಗಿ ನಿಮ್ಮೊಳಗಿನ ಆಂತರಿಕ ಭಿನ್ನಮತ ಪಕ್ಷದ ಮೇಲೆ ನಕಾರಾತ್ಮಕ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ನಿಮ್ಮಲ್ಲಿನ ಸಮಸ್ಯೆಗೆ ನೀವೆ ಪರಸ್ಪರ ಕುಳಿತು ಬಗೆಹರಿಸಿಕೊಳ್ಳಲು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next