Advertisement

“ವಿವಿಧತೆಯಲ್ಲಿ ಏಕತೆ ಭಾರತದ ವೈಶಿಷ್ಟ್ಯ’

01:19 AM Mar 12, 2020 | Sriram |

ಬೆಳ್ತಂಗಡಿ: ಧರ್ಮ ಮತ್ತು ಸಂಸ್ಕೃತಿಯಲ್ಲಿ ವಿವಿಧತೆಯಲ್ಲಿ ಏಕತೆ ಸಾಧಿಸಿರುವುದು ಭಾರತದ ವೈಶಿಷ್ಟ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

Advertisement

ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಅಧೀನದ ತಂಜಾವೂರಿನ ದಕ್ಷಿಣ ವಲಯ ಸಂಸ್ಕೃತಿ ಕೇಂದ್ರದ ಆಶ್ರಯದಲ್ಲಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆಯುತ್ತಿರುವ ಭಾರತೀಯ ಲೋಕ ಉತ್ಸವ, ಧರ್ಮಸ್ಥಳ – 2020 ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ದೀಪ ಬೆಳಗಿಸಿ, ಡೋಲು ಬಾರಿಸಿ ಭಾರತ್‌ ಮಾತಾ ಕಿ ಜೈ ಎಂಬ ಘೋಷಣೆಯೊಂದಿಗೆ ಮಾತು ಪ್ರಾರಂಭಿಸಿದ ಹೆಗ್ಗಡೆಯವರು, ಭೌಗೋಳಿಕವಾಗಿ, ಧಾರ್ಮಿಕ ನಂಬಿಕೆ,
ನಡವಳಿಕೆ, ಆಚಾರ -ವಿಚಾರ, ಬಳಸುವ ಭಾಷೆಯಲ್ಲಿ ನಾವು ವಿಭಿನ್ನವಾಗಿದ್ದರೂ ಧರ್ಮ ಮತ್ತು ಸಂಸ್ಕೃತಿಯ ನೆಲೆಯಲ್ಲಿ ಭಾವನಾತ್ಮಕವಾಗಿ ಒಂದೇ ಆಗಿದ್ದೇವೆ ಎಂದರು.

ತಂಜಾವೂರಿನ ದಕ್ಷಿಣ ವಲಯ ಸಂಸ್ಕೃತಿ ಕೇಂದ್ರದ ನಿರ್ದೇಶಕ ಪ್ರೊ| ಬಾಲಸುಬ್ರಹ್ಮಣ್ಯಂ ಮಾತನಾಡಿ, ಯುವಜನತೆ ದೇಶದ ಅಮೂಲ್ಯ ಮಾನವ ಸಂಪತ್ತಾಗಿದ್ದು ನಮ್ಮ ಸನಾತನ ಧರ್ಮ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಹೊಣೆಗಾರಿಕೆ ಅವರಿಗಿದೆ. ಗ್ರಾಮೀಣ ಜನರು ಹಾಗೂ ಯುವಜನತೆ ಕಾರ್ಯಕ್ರಮದ ಸದುಪಯೋಗ ಪಡೆದು ಏಕ್‌ ಭಾರತ್‌, ಶ್ರೇಷ್ಠ ಭಾರತ್‌ ಎಂದು ಸಾಧಿಸಿ ತೋರಿಸಬೇಕು ಎಂದು ಸಲಹೆ ನೀಡಿದರು.

ಉಜಿರೆಯ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ| ಎಸ್‌. ಸತೀಶ್ಚಂದ್ರ ಸ್ವಾಗತಿಸಿದರು. ಪ್ರೊ| ಸುನಿಲ್‌ ಪಂಡಿತ್‌ ನಿರ್ವಹಿಸಿದರು.

Advertisement

9 ರಾಜ್ಯಗಳ ಜಾನಪದ ಸಂಗಮ
ದೇಶದ ವಿವಿಧ ಒಂಬತ್ತು ಕಲಾವಿದರಿಂದ ಆಕರ್ಷಣೀಯ ಜಾನಪದ ವೈವಿಧ್ಯ ಮೇಳೈಸಿತು. ಅಸ್ಸಾಮಿನ ಜಾನಪದ ಬಿಹೂ ನೃತ್ಯ ಪ್ರದರ್ಶನ ಕಣ್ಮನ ಸೆಳೆಯಿತು. ಕಾಶ್ಮೀರ, ಕೇರಳ, ಮಿಜೋರಾಂ ಮತ್ತು ಕರ್ನಾಟಕದ ಜಾನಪದ ನೃತ್ಯಗಳ ಪ್ರದರ್ಶನ ನಡೆಯಿತು.

ಉಜಿರೆಯ ವನರಂಗ ಬಯಲು ಮಂದಿರದಲ್ಲಿ ಮಾ. 12ರಂದೂ ಸಂಜೆ 6.30ರಿಂದ 8.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಮುಕ್ತ ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next