Advertisement

ಶಿಕ್ಷಣ ಕ್ಷೇತ್ರದಲ್ಲಿ ಅಗತ್ಯವಾಗಿರುವ ಸುಧಾರಣೆ

06:00 AM Sep 05, 2018 | |

ಗುರು ಮತ್ತು ಗೋವಿಂದ ಇಬ್ಬರೂ ನನ್ನ ಕಣ್ಣೆದುರು ಬಂದು ನಿಂತರೆ ನಾನು ಯಾರಿಗೆ ಮೊದಲು ಅಡ್ಡ ಬೀಳಲಿ? ನಾನು ಗುರುವಿಗೇ ಮೊದಲು ಅಡ್ಡ ಬೀಳುತ್ತೇನೆ. ಗೋವಿಂದನೆಡೆಗೆ ಹೋಗುವ ದಾರಿ ತೋರಿದ ಗುರುವಿಗೇ ನನ್ನ ಮೊದಲ ಪ್ರಣಾಮ ಎನ್ನುತ್ತಾರೆ ಸಂತ ಕಬೀರ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಗುರುವಿಗೆ ಆ ಅಗ್ರಸ್ಥಾನ ಉಳಿದಿದೆಯೇ? ಅಥವಾ ಗುರುಗಳೇ ಅಂಥ ಯೋಗ್ಯತೆ ಕಳೆದುಕೊಂಡಿದ್ದಾರೆಯೇ? ಗುರುಗಳನ್ನು ಗಣನೆಗೆ ತೆಗೆದುಕೊಳ್ಳುವುದು ಅಷ್ಟು ಮುಖ್ಯವಲ್ಲ ಎಂದು ಸಮಾಜಕ್ಕೆ ಅನಿಸಿಬಿಟ್ಟಿದೆಯೇ? 

Advertisement

ವಿದ್ಯಾರ್ಥಿಗಳು ಗುರುಗಳು ಆಡುವ ಮಾತೆಲ್ಲ ವೇದವಾಕ್ಯವೆಂದು ಗಣಿಸುತ್ತಿಲ್ಲ. ಪೋಷಕರು ಕೂಡಾ ಎಲ್ಲ ಶಿಕ್ಷಕರನ್ನೂ ಸಂಶಯದ ಕಣ್ಣಿಂದಲೇ ನೋಡುತ್ತಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಆತ್ಮೀಯತೆಯ ಬಾಂಧವ್ಯಕ್ಕಿಂತ ಹೆಚ್ಚಾಗಿ ಮಾಹಿತಿ ತುಂಬುವುದು ಹಾಗೂ ಯಾವುದಾದರೂ ಒಂದು ಪದವಿ ಗಳಿಸುವೆಡೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವುದು ಮಾತ್ರ ನಡೆಯುತ್ತಿದೆ.  

ಶಿಕ್ಷಣ ಸಂಸ್ಥೆಗಳ ಸಂಖ್ಯೆ ಅಗಾಧ ಮಟ್ಟಕ್ಕೆ ಬೆಳೆದಿದೆ. ಶಿಕ್ಷಕರ ಸಂಖ್ಯೆಯೂ ಅಷ್ಟೇ. ಎಲ್ಲಾ ಮನೋವೃತ್ತಿಯ ಜನರು ಇಲ್ಲಿ ಕಾಣಸಿಗುತ್ತಾರೆ. ಬೇರೆ ಉದ್ಯೋಗ ಸಿಗದೆ, ಈ ವೃತ್ತಿಗೆ ಅನಿವಾರ್ಯವಾಗಿ ಬಂದು, ಇದನ್ನು ಬರೇ ಒಂದು ವೃತ್ತಿಯಾಗಿ ಸ್ವೀಕರಿಸಿರುವ ಜನರೂ ಇದ್ದಾರೆ. ಆದರೆ ಶಿಕ್ಷಕ ವೃತ್ತಿಯನ್ನೇ ಜೀವನ ಧರ್ಮವಾಗಿ ಸ್ವೀಕರಿಸಿರುವ, ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಪ್ರೀತಿಸುವ, ಎಲ್ಲವನ್ನು ನಿಷ್ಕಲ್ಮಶ ಮನಸ್ಸಿನಿಂದ ಧಾರೆಯೆರೆಯುವ ಶಿಕ್ಷಕರೂ ಅಷ್ಟೇ ಸಂಖ್ಯೆಯಲ್ಲಿದ್ದಾರೆ. 

ಎಲೆ ಮರೆಯ ಕಾಯಿಯಂತಿರುವ ಈ ಶಿಕ್ಷಕರು ಸರಕಾರಿ ಶಾಲೆಗಳಲ್ಲಿರಬಹುದು/ ಖಾಸಗಿ ಶಾಲೆಗಳಲ್ಲಿರಬಹುದು. ಸರಕಾರಿ ಶಾಲೆಗಳಲ್ಲಿರುವ ಶಿಕ್ಷಕರನ್ನು ಸರಕಾರವಾದರೂ ಗುರುತಿಸಿ ಗೌರವಿಸುತ್ತದೆ. ಆದರೆ ಖಾಸಗಿ ಶಾಲೆಗಳಲ್ಲಿರುವ ಶಿಕ್ಷಕರು ನಿಜಾರ್ಥದಲ್ಲಿ ಎಲೆ ಮರೆಯ ಕಾಯಿಗಳೇ. ಶಿಕ್ಷಕರಾಗುವುದೂ ಒಂದು ವೃತ್ತಿಯೇ ನಿಜ. ಆದರೆ ಈ ವೃತ್ತಿಗೆ ಹೆಚ್ಚಿನ ಬದ್ಧತೆ ಬೇಕಾಗುತ್ತದೆ. ಏಕೆಂದರೆ ಅವರು ವ್ಯವಹರಿಸುತ್ತಿರುವುದು ಮುಗ್ಧ ಮನಸ್ಸುಗಳೊಂದಿಗೆ. ಖಾಲಿ ಹಾಳೆಯಂತಿರುವ ಮಗುವಿನ ನಿರ್ಮಲ ಮನದ ಮೇಲೆ ಶಿಕ್ಷಕರು ಗಾಢ ಪ್ರಭಾವ ಬೀರಬಲ್ಲರು. ಮಕ್ಕಳ ಜೊತೆಯಲ್ಲಿ ಅವರ ಭಾವನೆಗಳಿಗೆ ಸಮಾನವಾಗಿ ಸ್ಪಂದಿಸಬೇಕಾಗುತ್ತದೆ. ಈ ರೀತಿಯ ಸ್ಪಂದನೆ ಬದುಕಿನ ಭಾಗವೇ ಆಗುವಾಗ ಖಾಸಗಿ ಬದುಕಿನ ನೋವುಗಳನ್ನೂ ಮರೆಯ­ಬೇಕಾಗುತ್ತದೆ. ಬದುಕಿನ ಜಂಜಾಟಗಳು ಕ್ಷಣ ಕಾಲ ಮರೆಯಾಗಿ ಮನಸ್ಸು ನೆಮ್ಮದಿಯಿಂದ ದೈನಿಕದಲ್ಲಿ ತೊಡಗಿಕೊಳ್ಳುತ್ತದೆ. ವಿದ್ಯಾರ್ಥಿಗಳ ಜೊತೆಗಿನ ಒಡನಾಟ ಒಂದು ರೀತಿಯಲ್ಲಿ ಹೊಸ ಮುದವನ್ನು ತುಂಬುವ ಪ್ರಕ್ರಿಯೆ. ಜೊತೆಗೆ ವಿದ್ಯಾರ್ಥಿಯ ಬದುಕಿಗೆ ಅಗತ್ಯವಾಗುವ ಸದ್ಗುಣಗಳನ್ನು, ಮಾನವೀಯ ಭಾವಗಳನ್ನು ತುಂಬುವ ಕಾಲ. ಹೀಗಾಗಿಯೇ ಸಮಾಜದಲ್ಲಿ ಶಿಕ್ಷಕರ ಹೊಣೆಗಾರಿಕೆ ಹೆಚ್ಚಿನದು.

ಈ ಎಲ್ಲಾ ಜವಾಬ್ದಾರಿಗಳನ್ನು ಆಪ್ತವಾಗಿ ನಿರ್ವಹಿಸುವ ಅಧ್ಯಾಪಕರು ಹಿಂದಿನ ಕಾಲದಲ್ಲಿ ಅನೇಕರಿದ್ದರು. ಇಂಥ ಅಧ್ಯಾಪಕರುಗಳಿಗೆ ವಿದ್ಯಾರ್ಥಿಗಳೇ ಆಸ್ತಿ. ಇಂದು ನಾವು “ಶಿಕ್ಷಕರ ದಿನಾಚರಣೆ ನಡೆಸಲು ಕಾರಣರಾದ ಡಾ| ಸರ್ವೆಪಲ್ಲಿ ರಾಧಾಕೃಷ್ಣನ್‌ ತನ್ನ ವೈಯಕ್ತಿಕ ಬದುಕಿನಲ್ಲಿ ಅಧ್ಯಾಪನವನ್ನು ಅಪಾರವಾಗಿ ಪ್ರೀತಿಸಿದವರು. ಕುವೆಂಪು, ಬೇಂದ್ರೆ, ಡಾ| ಜಿ.ಎಸ್‌.ಶಿವರುದ್ರಪ್ಪ, ಡಾ| ಶಿವರಾಮ ಕಾರಂತ, ಡಾ| ಎಚ್‌. ನರಸಿಂಹಯ್ಯ, ಡಾ| ಎ.ಎನ್‌.ಮೂರ್ತಿರಾವ್‌ ಹೀಗೆ ನಾವು ಪಟ್ಟಿ ಮಾಡುತ್ತಾ ಹೋದರೆ ಅನಘ್ರ್ಯ ರತ್ನಗಳ ಗಣಿಯೇ ನಮ್ಮೆದುರು ತೆರೆದುಕೊಳ್ಳುತ್ತದೆ. ಡಾ| ರಾಧಾಕೃಷ್ಣನ್‌ ಭಾರತದ ರಾಷ್ಟ್ರಪತಿಯಾಗಿ ನೇಮಕಗೊಂಡಾಗ, ಮೈಸೂರು ವಿಶ್ವ ವಿದ್ಯಾನಿಲಯದ ಅವರ ವಿದ್ಯಾರ್ಥಿಗಳು ಸಾರೋಟಿಗೆ ಕುದುರೆಯನ್ನು ಕಟ್ಟದೆ ತಾವೇ ಅದನ್ನು ಎಳೆದು ತಂದರಂತೆ. ಅವರ ಮೇಲಿನ ಅಭಿಮಾನ, ಶಿಷ್ಯ ವರ್ಗದಲ್ಲಿ ಅಷ್ಟು ದಟ್ಟವಾಗಿತ್ತು. 

Advertisement

ಗುರುಗಳು ಎದುರಿಸುವ ಸವಾಲುಗಳು
ಶಿಕ್ಷಕರು ಪ್ರತಿ ವಿದ್ಯಾರ್ಥಿಯನ್ನೂ ಅರ್ಥ ಮಾಡಿಕೊಳ್ಳಲು ಮತ್ತು ಆ ವಿದ್ಯಾರ್ಥಿಗೆ ಸಾಧ್ಯವಾಗುವ ಕಲಿಕಾ ವಿಧಾನಕ್ಕೆ ಸಿದ್ಧಗೊಳಿಸಲು ತರಗತಿಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಮುಖ್ಯ. ಒಂದು ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಎಷ್ಟಿರಬೇಕು? ಇದು ಮಿಲಿಯನ್‌ ಡಾಲರ್‌ ಪ್ರಶ್ನೆ. ತರಗತಿಯಲ್ಲಿ ಇಪ್ಪತ್ತೈದರಿಂದ ಮೂವತ್ತು ವಿದ್ಯಾರ್ಥಿಗಳಿದ್ದರೆ ಉತ್ತಮ. ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾದಷ್ಟೂ ವೈಯಕ್ತಿಕ ವಿವರಗಳ ಬಗ್ಗೆ ಗಮನ ಕಡಿಮೆಯಾಗಿ, ಪಠ್ಯ ವಿಷಯಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ವಿದ್ಯಾರ್ಥಿಗಳು ಸುತ್ತಮುತ್ತಲಿನ ವಾತಾವರಣದಿಂದಲೂ ಬಹಳಷ್ಟನ್ನು ಕಲಿಯುತ್ತಾರೆ. ಈಗ ವಿದ್ಯಾರ್ಥಿಗಳಿಗೆ ಇಂಥ ಸವಾಲುಗಳು ಹೆಚ್ಚಾಗಿವೆ. ಸಿನಿಮಾ, ಟಿವಿ ಶೋಗಳು, ಧಾರಾವಾಹಿಗಳು, ಅಂತರ್ಜಾಲ, ವಿವಿಧ ಬಗೆಯ ಮೈಂಡ್‌ಗೆàಮ್‌ಗಳು ವಿದ್ಯಾರ್ಥಿಗಳನ್ನು ಪಠ್ಯ ವಿಷಯಕ್ಕಿಂತಲೂ ಹೆಚ್ಚು ಬಲವಾಗಿ ಸೆಳೆಯುತ್ತವೆ. ಶಿಕ್ಷಕರು ಈ ಎÇÉಾ ಆಧುನಿಕ ವಿಷಯಗಳನ್ನು ತಮ್ಮ ಪಠ್ಯ ವಿಷಯಗಳೊಂದಿಗೆ ಸೇರಿಸಿಕೊಂಡು ಎಚ್ಚರಿಕೆಯ ಮಾತುಗಳನ್ನು ಆಗಾಗ ಆಡುತ್ತಿರಬೇಕು. ಪಠ್ಯ ವಿಷಯಗಳನ್ನು ಪರಿಣಾಮಕಾರಿಯಾಗಿ ಬೋಧಿಸುವಷ್ಟೆ ಕಾಳಜಿ ಈ ಅಂಶಗಳ ಕಡೆಗೂ ಇರಬೇಕು. 

ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿವೆ. ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗಿ ಭಾಗಿತ್ವವನ್ನು ಸುಮಾರು ಮೂರು ದಶಕಗಳಿಂದಲೂ ಸರಕಾರ ಉತ್ತೇಜಿಸುತ್ತಾ ಬಂದಿದೆ. ಸರಕಾರಿ ಶಾಲಾ ಕಟ್ಟಡಗಳು ನಿರ್ವಹಣೆ ಇಲ್ಲದೆ ಭಯ ಹುಟ್ಟಿಸುತ್ತವೆ. ಶಿಕ್ಷಕರ ಕೊರತೆಗಳಿಂದ ಬಳಲುತ್ತಿವೆ. ಅನೇಕ ಸರಕಾರಿ ಶಾಲೆಗಳು ಏಕೋಪಾಧ್ಯಾಯ ಶಾಲೆಗಳು. ವಿದ್ಯಾರ್ಥಿಗಳ ಕೊರತೆಯೆಂದು ಹಠಾತ್ತಾಗಿ ಶಾಲೆಯನ್ನು ಸಮೀಪದಲ್ಲಿರುವ ಇನ್ನೊಂದು ಸರಕಾರಿ ಶಾಲೆಯೊಂದಿಗೆ ವಿಲೀನಗೊಳಿಸುತ್ತಾರೆ. ಇಲ್ಲಿನ ಶಿಕ್ಷಕರು ಬಿಸಿ ಊಟ ಇತ್ಯಾದಿ ಕಾರ್ಯಕ್ರಮಗಳ ಲೆಕ್ಕ ಬರೆಯುತ್ತಾ ಸಮಯ ಉಳಿದರೆ ಪಾಠ ಯಾರು ಮಾಡುತ್ತಾರೆ? ಹೀಗೆ ಸರಕಾರಿ ಶಾಲೆಗಳ ನೋವು ಒಂದೆಡೆಯಾದರೆ, ಆಕರ್ಷಕ ಕಟ್ಟಡಗಳು, ಸ್ಕೂಲ್‌ಬಸ್‌ಗಳು, ಆಕರ್ಷಕ ಯೂನಿಫಾರ್ಮ್ಗಳು, ಭವ್ಯ ಭವಿತವ್ಯದ ಕಲ್ಪನೆ ಮೂಡಿಸಿ ಆತ್ಮಸ್ಥೈರ್ಯ ಹೆಚ್ಚಿಸುವ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಇನ್ನೊಂದೆಡೆ ಜನರನ್ನು ಸೆಳೆಯುತ್ತವೆ. ತಮಗಿರುವ ಒಬ್ಬರೋ, ಇಬ್ಬರೋ ಕುಡಿಗಳನ್ನು ಹೊಟ್ಟೆಬಟ್ಟೆ ಕಟ್ಟಿ, ಸಾಲದ ಸುಳಿಯಲ್ಲಿ ಬಿದ್ದು ಒ¨ªಾಡಿಯಾದರೂ ಇಂಥ ಅತ್ಯಾಕರ್ಷಕ ಶಾಲೆಗಳಿಗೆ ಸೇರಿಸಲು ಪೋಷಕರು ಹೋರಾಡುತ್ತಾರೆ. ಸರಕಾರವೂ ಈಗ ಉಳಿಯುವ ಅಲ್ಪಸ್ವಲ್ಪ ಮಕ್ಕಳನ್ನೂ ಆರ್‌ಟಿಇ ನಿಯಮದಡಿ ಆಂಗ್ಲ ಶಾಲೆಗಳಿಗೆ ಸೇರಿಸುವ ಸೌಕರ್ಯ ಒದಗಿಸಿವೆ. ಭಾರತೀಯ ಭಾಷೆಗಳು ಶಾಲೆಗಳಲ್ಲಿ ನಗಣ್ಯವೆನಿಸುವಂತೆ ಮರಣ ಶಾಸನ ಬರೆದಾಗಿದೆ. ರಾಜ್ಯದಲ್ಲಿ ಕಳೆದ ಏಳು ವರ್ಷಗಳಲ್ಲಿ 1782 ಸರಕಾರಿ ಶಾಲೆಗಳು ಮುಚ್ಚಿದ್ದು 3186 ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದ ಪರಿಣಾಮ 10 ಲಕ್ಷ ವಿದ್ಯಾರ್ಥಿಗಳು ಸರಕಾರಿ ಶಾಲೆಗಳನ್ನು ತೊರೆದು ಖಾಸಗಿ ಶಾಲೆಗಳಿಗೆ ಸೇರಿ¨ªಾರೆ.   ಈಗ ಅಳಿದುಳಿದಿರುವ ಕೆಲವು ಸರಕಾರಿ ಶಾಲೆಗಳೂ ಮುಚ್ಚಿದರೆ, ಅಲ್ಲಿರುವ ಉಳಿದ ಶಿಕ್ಷಕರು ನಿವೃತ್ತಿಯಾದರೆ ಈ ಕಾರ್ಯಕ್ರಮ ಪೂರ್ತಿಗೊಳ್ಳುತ್ತದೆ. ಶಿಕ್ಷಣವೆಂಬುದು ಎಲ್ಲ ಮಕ್ಕಳ ಹಕ್ಕು ಎಂದು ನಾವು ಹೇಳುತ್ತಲೇ ಇರುತ್ತೇವೆ. ಕಾರ್ಯರೂಪದಲ್ಲಿ ಇಂದು ಶಿಕ್ಷಣ ದುಬಾರಿಯಾಗುತ್ತ ಸಾಗಿದೆ.  

ಡಾಕ್ಟರ್‌ ರಾಧಾಕೃಷ್ಣನ್‌ ಅವರ ಜನ್ಮ ದಿನದಂದು, ಅವರ ಆಶಯದಂತೆ ನಾವು ಶಿಕ್ಷಕರ ದಿನಾಚರಣೆ ಆಚರಿಸುತ್ತೇವೆ. ಇಂಥ ಅಭೂತಪೂರ್ವ ಪರಂಪರೆಯ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮ ಹಂತಕ್ಕೆ ಏರಿಸುವಲ್ಲಿ ಶಿಕ್ಷಕರು, ಆಡಳಿತ ಜೊತೆಯಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ. ಸರಕಾರದ ಅಧೀನದಲ್ಲಿ ಬರುವ ಶಾಲೆಗಳು ತಮ್ಮ ಆಕರ್ಷಣೆಯನ್ನು ಕಳೆದುಕೊಳ್ಳುವಾಗ ಇಂದಿನ ಅಗತ್ಯತೆಗೆ ತಕ್ಕಂತೆ ಸರಕಾರಗಳು ಶಾಲೆಗಳಲ್ಲಿ ಆರಂಭದ ಹಂತದಿಂದಲೂ ಇಂಗ್ಲಿಷನ್ನು ಬೋಧಿಸುವ ಯೋಚನೆ ಮಾಡುತ್ತಿವೆ. ಇಂಗ್ಲಿಷ್‌ ಬೋಧನೆ ಸರಿಯೇ. ಆದರೆ, ಮಾತೃಭಾಷೆಗೆ ಹೆಚ್ಚಿನ ಸ್ಥಾನ ನೀಡಲು, ಹೆಚ್ಚು ಚಟುವಟಿಕೆಗಳನ್ನು ಯೋಜಿಸಬೇಕು. ಆಗ ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿ, ಪರಂಪರೆಯ ಬಗ್ಗೆ ತಿಳಿದುಕೊಳ್ಳುತ್ತಾರೆ. ಇಂಗ್ಲಿಷ್‌ ಪಠ್ಯಗಳಲ್ಲೂ, ದೇಶೀಯ ಲೇಖಕರ ಬರಹಗಳನ್ನು ಹೆಚ್ಚೆಚ್ಚು ನೀಡಬೇಕು. 

ರಾಜಧಾನಿ ದಿಲ್ಲಿಯಿಂದ ಒಂದು ಬೆಳಕು ಮೂಡಿಸುವ ಸುದ್ದಿ ಬಂದಿದೆ. ಮುಖ್ಯಮಂತ್ರಿ ಕೇಜ್ರಿವಾಲ್‌ 2015ರಲ್ಲಿ ಶಿಕ್ಷಣದ ಬಜೆಟ್‌ ಅನ್ನು 5,000 ಕೋಟಿಗಳಿಂದ 10,000 ಕೋಟಿಗೇರಿಸಿದರು. ದುಪ್ಪಟ್ಟಾದ ಬಜೆಟ್‌ನಲ್ಲಿ ಸರಕಾರ ಸ್ವತ್ಛತೆ, ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡಿತು. ಸಾವಿರಾರು ಹೊಸ ತರಗತಿಗಳನ್ನು ದಾಖಲೆ ಸಮಯದಲ್ಲಿ ನಿರ್ಮಾಣ ಮಾಡಲಾಯಿತು. ಹಾರ್ವರ್ಡ್‌, ಕೇಂಬ್ರಿಡ್ಜ್ ಮತ್ತು ಐಐಎಂಗಳಿಗೆ ಶಿಕ್ಷಕರನ್ನು ತರಬೇತಿಗೆ ಕಳಿಸಲಾಯಿತು. ಹೀಗೆ ಬದಲಾವಣೆಯ ಮಹಾಪೂರದಲ್ಲಿ ಮಿಂದೆದ್ದ ಸರಕಾರಿ ಶಾಲಾ ಬೋರ್ಡ್‌ ಪರೀಕ್ಷೆಗಳ ಫ‌ಲಿತಾಂಶವು ಖಾಸಗಿ ಶಾಲೆಗಳಿಗಿಂತ ಹೆಚ್ಚಾಗಿವೆ. ಇದು ದೆಹಲಿ ಸರಕಾರ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದ ರೀತಿ. ಇದು ನಮ್ಮ ರಾಜ್ಯಕ್ಕೂ ಮಾದರಿಯಾಗಲಿ. ಕರ್ನಾಟಕದ ಎಲ್ಲ ಮಕ್ಕಳೂ ಸಮಾನವಾಗಿ ಜ್ಞಾನ ಗಳಿಸುವಲ್ಲಿ ಸಫ‌ಲವಾಗಲಿ . ಸ್ವಸ್ಥ ಸಮಾಜ ಕಟ್ಟುವಲ್ಲಿ ಆಡಳಿತದ ಕೊಡುಗೆ ಅತೀ ಅಗತ್ಯ.

ಎಸ್‌. ಸಂಗೀತಾ ಜಾನ್ಸನ್‌‌

Advertisement

Udayavani is now on Telegram. Click here to join our channel and stay updated with the latest news.

Next