Advertisement

ಹೆದ್ದಾರಿ ಗುತ್ತಿಗೆದಾರರ ವಿರುದ್ಧ ಎಸಿಗೆ ದೂರು

08:27 PM Dec 09, 2020 | mahesh |

ಕುಂದಾಪುರ: ದಶಕಗಳಿಂದ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್‌ ಹಾಗೂ ಹೆದ್ದಾರಿ ಕಾಮಗಾರಿಯಿಂದಾಗಿ ನಗರದ ಅಭಿವೃದ್ಧಿಗೆ ಹಾಗೂ ನಗರದ ನಿವಾಸಿಗಳಿಗೆ ತೊಂದರೆಯಾಗಿದೆ ಎಂದು ಸಹಾಯಕ ಕಮಿಷನರ್‌ ಅವರಿಗೆ ದೂರು ನೀಡಲಾಗಿದೆ. ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಾದ ಸರ್ವಿಸ್‌ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತ ಗಿಡಗಂಟಿಗಳನ್ನು ತೆಗೆಯದೇ ಪಾದಚಾರಿಗಳ ಸಂಚಾರಕ್ಕೆ ಸಂಚಕಾರ ಬಂದಿದೆ.

Advertisement

ಅಸಮಾಧಾನ
ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ಪಾದಚಾರಿ ಮಾರ್ಗವನ್ನು ನುಂಗಿದ ಗಿಡಗಂಟಿಗಳಿಂದಾದ ತೊಂದರೆಯನ್ನು ಪರಿಹರಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಕಣ್ಣುಮುಚ್ಚಿ ಕುಳಿತ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಗುತ್ತಿಗೆದಾರರಿಂದಾಗಿ ಜನತೆಗೆ ಸಮಸ್ಯೆಯಾಗುತ್ತಿದೆ ಎಂಬ ಆರೋಪ ಇದೆ. ಉಡುಪಿಯಿಂದ ಕುಂದಾಪುರ ಕಡೆಗೆ ಬರುವ ಗಾಂಧಿ ಮೈದಾನದ ಎದುರು ಹಾಗೂ ಕುಂದಾಪುರದಿಂದ ಉಡುಪಿ ಕಡೆಗೆ ಹೋಗುವಾಗಲೂ ಪಾದ ಚಾರಿ ಮಾರ್ಗದಲ್ಲಿ ಗಿಡಗಂಟಿಗಳು ಬೆಳೆದು ಬೃಹತ್‌ ಮರಗಳ ರೂಪದಲ್ಲಿ ತಲೆಯೆತ್ತಿ ನಿಂತಿದೆ. ಇಲ್ಲಿ ಜನರು ಓಡಾಡಲು ದಾರಿಯೇ ಇಲ್ಲದೆ ಮಾರ್ಗದ ಎಲ್ಲ ಕಡೆ ಗಿಡಗಂಟಿಗಳು ಆಕ್ರಮಿಸಿಕೊಂಡಿವೆ.

ಅಪಘಾತಕ್ಕೂ ಮುನ್ನ ಎಚ್ಚೆತ್ತುಕೊಳ್ಳಿ
ಪಾದಚಾರಿಗಳು ರಸ್ತೆಗಿಳಿದು, ಅತಿಯಾದ ವೇಗದಿಂದ ಬರುವ ವಾಹನಗಳಿಂದ ಅಪಘಾತ ವಾಗುವುದನ್ನು ತಪ್ಪಿಸಿಕೊಂಡು ನಡೆಯ ಬೇಕಾಗುತ್ತದೆ. ಜೀವಕ್ಕೆ ಅಪಾಯ ಆಗುವ ಮೊದಲೇ ಇಲಾಖೆ ಗಿಡಗಂಟಿಗಳನ್ನು ತೆರವುಗೊಳಿಸಿ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡ ಬೇಕೆಂದು ವಡೇರಹೋಬಳಿಯ ಮನೋಹರ್‌ ಪೂಜಾರಿ ಆಗ್ರಹಿಸಿದ್ದಾರೆ.

ದೂರು
ಪುರಸಭೆ ಸದಸ್ಯ ಸಂತೋಷ್‌ ಕುಮಾರ್‌ ಶೆಟ್ಟಿ ಅವರು ಹೆದ್ದಾರಿ ಅವ್ಯವಸ್ಥೆ ಕುರಿತು ಸಹಾಯಕ ಕಮಿಷನರ್‌ ಅವರಿಗೆ ದೂರು ನೀಡಿದ್ದಾರೆ. ಇದರ ಆಧಾರದಲ್ಲಿ ಕಮಿಷನರ್‌ ಅವರು ಗುತ್ತಿಗೆದಾರರಿಗೆ ಪತ್ರವನ್ನೂ ಬರೆದಿದ್ದಾರೆ. ಹೆದ್ದಾರಿ ವಿಸ್ತರಣೆಯು ಅಸಮರ್ಪಕವಾಗಿ ನಡೆಯುತ್ತಿರುವ ಕಾರಣ ಪುರಸಭೆ ವ್ಯಾಪ್ತಿಯ ಸಂಗಂ ಪರಿಸರದಲ್ಲಿ ಚರಂಡಿ ಸರಿಯಾಗಿಲ್ಲ. ಮಳೆಗಾಲದಲ್ಲಿ ಸಾರ್ವಜನಿಕರು ಹಾಗೂ ಅಕ್ಕಪಕ್ಕದ ಮನೆಯವರಿಗೆ ತೊಂದರೆ ಯಾಗುತ್ತಿದೆ. ಸಂಗಂ ಜಂಕ್ಷನ್‌ನಲ್ಲಿ 4 ರಸ್ತೆಗಳು ಸೇರುವಲ್ಲಿ ಬೀದಿದೀಪಗಳೇ ಇಲ್ಲ. ರಾತ್ರಿ ಈ ರಸ್ತೆ ಮೂಲಕ ಚಿಕ್ಕನ್‌ಸಾಲ್‌ ರಸ್ತೆ ಹಾಗೂ ಆನಗಳ್ಳಿ ರಸ್ತೆಗೆ ತಿರುಗುವ ವಾಹನಗಳು ಇತರ ವಾಹನಗಳಿಗೆ ಢಿಕ್ಕಿಯಾಗುವ ಸಾಧ್ಯತೆಯಿದೆ. ಜನ ಅಥವಾ ಪ್ರಾಣಿಗಳು ನಿಂತಿದ್ದರೂ ಹೆದ್ದಾರಿಯಲ್ಲಿ ಕಾಣದ ಸ್ಥಿತಿ ಇದೆ. ಹೆದ್ದಾರಿ ಬದಿ ಬೆಳೆದ ಹುಲ್ಲಿನಲ್ಲಿ ಕಳ್ಳರು ಮರೆಯಾಗಿ ಕುಳಿತು ದಾರಿಹೋಕರ ಮೇಲೆ ದಾಳಿ ಮಾಡಿ ಚಿನ್ನಾಭರಣ ದೋಚುವ ಅಪಾಯವೂ ಇದೆ ಎಂದು ಅವರು ದೂರಿದ್ದಾರೆ. ಈ ದೂರಿನ ಆಧಾರದಲ್ಲಿ ಗುತ್ತಿಗೆದಾರ ಕಂಪನಿಯ ಪ್ರಾಜೆಕ್ಟ್ ಮೆನೇಜರ್‌ಗೆ ಎಸಿ ಪತ್ರ ಬರೆದು ತತ್‌ಕ್ಷಣ ಕಾಮಗಾರಿ ನಡೆಸುವಂತೆ ಆದೇಶ ನೀಡಿದ್ದಾರೆ.

Advertisement

ತೊಂದರೆ
ಫ್ಲೈಓವರ್‌ನ ಎರಡೂ ಬದಿ ಪಾದಚಾರಿ ಮಾರ್ಗವೇ ಇಲ್ಲದಂತಾಗಿದ್ದು ಸ್ಥಳೀಯ ವ್ಯಾಪಾರಿಗಳಿಗೂ ತೊಂದರೆಯಾಗಿದೆ. ಎರಡೂ ಬದಿ ಸಾಕಷ್ಟು ಅಂಗಡಿಗಳಿವೆ. ಸರಕಾರಿ ಕಚೇರಿಗಳಿವೆ. ಇಲ್ಲಿಗೆ ವಾಹನದಲ್ಲಿ ಬಂದರೆ ನಿಲ್ಲಿಸುವಂತಿಲ್ಲ. ಅಥವಾ ಸುತ್ತು ಹೊಡೆದು ದೂರದಿಂದ ಬರಬೇಕು, ಎಲ್ಲೋ ವಾಹನ ನಿಲ್ಲಿಸಿ ಬರಬೇಕು. ಪುರಸಭೆಗೆ ತೆರಿಗೆ ಕಟ್ಟುವ ವ್ಯಾಪಾರಿಗಳಿಗೆ ವ್ಯಾಪಾರ ಅಭಿವೃದ್ಧಿಗೆ ಮೂಲಸೌಕರ್ಯ ಕೊಡಬೇಕಾದ ಪುರಸಭೆ ಮೌನವಾಗಿದೆ. ಹೆದ್ದಾರಿ ಪ್ರಾಧಿಕಾರದ ಮೂಲಕ ಇದಕ್ಕೊಂದು ಪರಿಹಾರ ರೂಪಿಸುವ ಕಾರ್ಯ ನಡೆಸಬೇಕಿದೆ ಎನ್ನುತ್ತಾರೆ ವಿನೋದ್‌ ಕುಮಾರ್‌ ಶಾಂತಿನಿಕೇತನ ಅವರು.

ನಿಧಾನ ಕಾಮಗಾರಿ
ಕೊರೊನಾ ಲಾಕ್‌ಡೌನ್‌ ಸಂದರ್ಭ ಸ್ಥಗಿತವಾಗಿದ್ದ ಕಾಮಗಾರಿ ನವಂಬರ್‌ ಬಳಿಕ ಆರಂಭವಾಗಿದೆಯಾದರೂ ನಿಧಾನಗತಿಯಲ್ಲಿ ನಡೆಯುತ್ತಿದೆ. ಕೆಎಸ್‌ಆರ್‌ಟಿಸಿ ಬಳಿಯಿಂದ ಕ್ಯಾಟಲ್‌ ಪಾಸ್‌ ಅಂಡರ್‌ಪಾಸ್‌ವರೆಗೆ ಮಣ್ಣು ಹಾಕಿ ಎತ್ತರಿಸಲಾಗಿದೆ. ಅದರ ಅನಂತರ ಶಾಸಿŒ ಸರ್ಕಲ್‌ನ ಫ್ಲೈಓವರ್‌ಗೆ ಸಂಪರ್ಕ ಕಲ್ಪಿಸುವ ಕೆಲಸ ಬಾಕಿಯಾಗಿದೆ. ಗಾಂಧಿಮೈದಾನದಿಂದ ಶಾಸ್ತ್ರಿ ಸರ್ಕಲ್‌ನ ಫ್ಲೈಓವರ್‌ಗೆ ಸಂಪರ್ಕ ರಸ್ತೆಯಾಗಿ ಡಾಮರು ಹಾಕಲಾಗಿದೆ. ಉಳಿದಂತೆ ಇತರೆಡೆ ಡಾಮರು ಹಾಕಿಲ್ಲ. ಬಸ್ರೂರು ಮೂರು ಕೈ ರಸ್ತೆಗೂ ಗಾಂಧಿ ಮೈದಾನ ಕಡೆಯಿಂದ ಸಂಪರ್ಕ ರಸ್ತೆಯಾಗಿದ್ದು ಇನ್ನೊಂದು ಕಡೆಯಿಂದ ಬಾಕಿ ಇದೆ. ಅಂತೆಯೇ ವಿನಾಯಕ ಬಳಿಯ ಪಾದಚಾರಿ ಅಂಡರ್‌ಪಾಸ್‌ನಲ್ಲಿ ವಿನಾಯಕ ಕಡೆಯಿಂದ ಸಂಪರ್ಕ ರಸ್ತೆಯಾಗಿದ್ದು ಅಲ್ಲಿಂದ ಬಸ್ರೂರು ಮೂರುಕೈಯ ಅಂಡರ್‌ಪಾಸ್‌ಗೆ ಸಂಪರ್ಕ ಕಲ್ಪಿಸುವ ಕೆಲಸ ಆಗಬೇಕಷ್ಟೆ.

ಕ್ರಮ ಆಗಿಲ್ಲ
ಎಸಿಯವರಿಗೆ ದೂರು ನೀಡಿದ್ದು ಅಲ್ಲಿಂದ ಗುತ್ತಿಗೆದಾರ ಸಂಸ್ಥೆಗೆ ಪತ್ರ ಬರೆಯಲಾಗಿದೆ. ಇನ್ನೂ ಕ್ರಮ ವಹಿಸಿಲ್ಲ. ಪುರಸಭೆ ಕೂಡ ಮುತುವರ್ಜಿ ವಹಿಸುವ ಅಗತ್ಯವಿದೆ.
– ಸಂತೋಷ್‌ ಕುಮಾರ್‌ ಶೆಟ್ಟಿ ಪುರಸಭೆ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next