Advertisement

ರಾಜ್ಯಕ್ಕೆ ವಿದೇಶದಿಂದ ಮರಳು ಆಮದು

12:18 PM May 26, 2017 | |

ಬೆಂಗಳೂರು: ಗುಣಮಟ್ಟದ ಗೃಹ ಬಳಕೆ ಹಾಗೂ ಕೈಗಾರಿಕಾ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಸಂಸ್ಥೆಯು (ಎಂ.ಎಸ್‌.ಐ.ಎಲ್‌) ಇನ್ನೂ ಮುಂದೆ ವಿದೇಶದಿಂದ ಮರಳು ಆಮದು ಮಾಡಿಕೊಂಡು ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡಲಿದೆ. 

Advertisement

ಬುಧವಾರ ನಡೆದ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ನ‌ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಈ ವಿಷಯ ತಿಳಿಸಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ಸಿ. ಪ್ರಕಾಶ್‌, ಬರ್ಮಾ, ಬಂಗ್ಲಾದೇಶ, ಫಿಲಿಪೈನ್‌, ಕಾಂಬೋಡಿಯಾ ಹಾಗೂ ಮಲೇಷಿಯಾದಿಂದ ಮರಳು ಆಮದು ಮಾಡಿಕೊಳ್ಳಲು ಜಾಗತಿಕ ಇ-ಟೆಂಡರ್‌ ಕರೆಯಲಾಗಿದೆ. ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ಇನ್ನೊಂದು ತಿಂಗಳಲ್ಲಿ ಎಂಎಸ್‌ಐಎಲ್‌ನಿಂದ ಗ್ರಾಹಕರಿಗೆ ವಿದೇಶಿ ಮರಳು ಸಿಗಲಿದೆ ಎಂದರು. 

ರಾಜ್ಯದಲ್ಲಿ ಪ್ರತಿ ವರ್ಷ 5 ಕೋಟಿ ಟನ್‌ ಮರಳಿನ ಬೇಡಿಕೆ ಇದೆ. ಇದರಲ್ಲಿ 50 ಲಕ್ಷ ಟನ್‌ ಮರಳು ಪೂರೈಕೆಗೆ ಜಿಲ್ಲಾಧಿಕಾರಿಗಳು ಅನುಮತಿ ನೀಡಲು ಸಾಧ್ಯವಾಗುತ್ತಿದೆ. 30 ದಶಲಕ್ಷ ಟನ್‌ ಎಂ-ಸ್ಯಾಂಡ್‌ ಬಳಸಿಕೊಳ್ಳಲಾಗುತ್ತಿದೆ. ಮರಳು ಬೇಡಿಕೆ ಮತ್ತು ಪೂರೈಕೆಯಲ್ಲಿ ಸಾಕಷ್ಟು ಅಂತರವಿದ್ದು, ಇದನ್ನು ಸರಿಪಡಿಸಿ ಗ್ರಾಹಕರಿಗೆ ಮರಳು ನೀಡಬೇಕಾಗಿದೆ. ಆದಕ್ಕಾಗಿ ಎಂಎಸ್‌ಐಎಲ್‌ ಮರಳು ಆಮದು ಮತ್ತು ಮಾರಾಟಕ್ಕೆ ಮುಂದಾಗಿದೆ.

ಪ್ರಸಕ್ತ ವರ್ಷ “ಎಂಎಸ್‌ಐಎಲ್‌ ಮರಳು’ ಬ್ರಾಂಡ್‌ ಅಡಿಯಲ್ಲಿ ಒಂದು ಲಕ್ಷ ಮೆಟ್ರಿಕ್‌ ಟನ್‌ ಮರಳು ಮುಕ್ತ ಮಾರುಕಟ್ಟೆಗೆ ಸರಬರಾಜು ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಜಿ.ಸಿ. ಪ್ರಕಾಶ್‌ ತಿಳಿಸಿದರು.  ಇದೇ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಪ್ರಯುಕ್ತ ಎಂಎಸ್‌ಐಎಲ್‌ನ ಶುದ್ಧ ಕುಡಿಯುವ ನೀರಿನ ಬಾಟಲ್‌, 175 ಜನೌಷಧಿ ಮಳಿಗೆ, ಸಾವಯವ ಸೌಂದರ್ಯ ಸಾಬೂನು ಹಾಗೂ ಲೇಖಕ್‌ ಟೂಲ್‌ ಕಿಟ್‌ ಉತ್ಪನ್ನಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಸುವರ್ಣ ಮಹೋತ್ಸವ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರೆ, ನೂತನ ಉತ್ಪನ್ನಗಳನ್ನು ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಲೋಕಾರ್ಪಣೆಗೊಳಿಸಿದರು. ಈ ವೇಳೆ ಮಾತನಾಡಿದ ಎಂ.ಎಸ್‌.ಐ.ಎಲ್‌ ಅಧ್ಯಕ್ಷ ಹಾಗೂ ಶಾಸಕ ಹಂಪನಗೌಡ ಬಾದರ್ಲಿ, ಸಂಸ್ಥೆಯು 2016-17ನೇ ಹಣಕಾಸು ವರ್ಷದಲ್ಲಿ 1,111 ಕೋಟಿ ರೂ. ವಹಿವಾಟು ನಡೆಸಿದ್ದು, ಅದರಲ್ಲಿ 35 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.

Advertisement

ಸಂಸ್ಥೆಯ ಚಿಟ್‌ ಫ‌ಂಡ್‌ ಮೂಲಕ 300 ಕೋಟಿ ರೂ. ವಹಿವಾಟು ನಡೆಸಲಾಗಿದ್ದು, ಮುಂದಿನ ವರ್ಷ 500 ಕೋಟಿ ರೂ. ವಹಿವಾಟಿನ ಗುರಿ ಇಟ್ಟುಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಿ.ವಿ. ಪ್ರಸಾದ್‌, ಎಂಎಸ್‌ಐಎಲ್‌ನ ಹಿರಿಯ ಅಧಿಕಾರಿಗಳು ಇದ್ದರು. 

“ಎಂಎಸ್‌ಐಎಲ್‌ ಸಂಸ್ಥೆ 50 ವರ್ಷಗಳಿಂದ ಸತತ ಲಾಭದಲ್ಲಿದೆ. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ಹಾಗೂ ಸ್ಪರ್ಧಾತ್ಮಕ ಮಾರುಕಟ್ಟೆ ಯುಗದಲ್ಲಿ ಅಸ್ತಿತ್ವ ಕಾಪಾಡಿಕೊಂಡು, ಖಾಸಗಿ ಸಂಸ್ಥೆಗಳ ಪೈಪೋಟಿ ಮೆಟ್ಟಿ ನಿಂತು ಲಾಭ ಗಳಿಸಿದ್ದು ಪ್ರಶಂಸನೀಯ. 
-ಮುಖ್ಯಮಂತ್ರಿ ಸಿದ್ದರಾಮಯ್ಯ. 

” ಸುಪ್ರೀಂಕೋರ್ಟ್‌ ತೀರ್ಪಿನಿಂದ ಎಂಎಸ್‌ಐಎಲ್‌ ಮಧ್ಯ ಮಾರಾಟ ಮಳಿಗೆಗಳ ವಿಚಾರದಲ್ಲಿ ಒಂದಿಷ್ಟು ಸಮಸ್ಯೆ ಉಂಟಾಗಿದೆ. ನ್ಯಾಯಾಲಯದ ತೀರ್ಮಾನವನ್ನು ಎಲ್ಲರೂ ಗೌರವಿಸಬೇಕಾಗುತ್ತದೆ. ಈ ವಿಚಾರದಲ್ಲಿ ಕಾನೂನಿನ ಇತಿಮಿತಿಯೊಳಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರ ಆಲೋಚಿಸಲಿದೆ’
-ಆರ್‌.ವಿ. ದೇಶಪಾಂಡೆ, ಕೈಗಾರಿಕಾ ಸಚಿವ. 

ನಾಡಗೀತೆ ಬದಲಿಗೆ ನಿತ್ಯೋತ್ಸವ
ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆಯ ಬದಲು ನಿತ್ಯೋತ್ಸವ ಗೀತೆ ಹಾಡಿದ್ದರಿಂದ ಗೊಂದಲ ಉಂಟಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯವರನು ಅಸಮಧಾನಗೊಂಡ ಪ್ರಸಂಗ ನಡೆಯಿತು. ಕಾರ್ಯಕ್ರಮದ ನಿರೂಪಕಿ ನಾಡಗೀತೆ ಹಾಡಲು ಗಾಯನ ತಂಡಕ್ಕೆ ಆಹ್ವಾನಿಸಿದರು. ನಾಡಗೀತೆಗೆ ಗೌರವ ನೀಡಲು ಮುಖ್ಯಮಂತ್ರಿ ಸೇರಿದಂತೆ ವೇದಿಕೆ ಮತ್ತು ಸಭಾಂಗಣದಲ್ಲಿದ್ದ ಎಲ್ಲರೂ ಎದ್ದು ನಿಂತರು.

ಆಗ ಗಾಯನ ತಂಡ ನಾಡಗೀತೆ ಬದಲು ಕವಿ ನಿಸಾರ್‌ ಅವರ ನಿತ್ಯೋತ್ಸವ ಕವಿತೆ ಹಾಡಲಾರಂಭಿಸಿತು. ಈ ವೇಳೆ ಕೈ ಸನ್ನೆ ಮೂಲಕ ಮುಖ್ಯಮಂತ್ರಿಯವರು ಗಾಯನ ತಂಡ ಮತ್ತು ಸಂಘಕರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ಗಾಯನ ತಂಡ ಕವಿತೆ ಹಾಡಿ ಮುಗಿಸಿದ ಬಳಿಕ, “ನೀವು ಹಾಡಿದ್ದು ನಾಡಗೀತೆ ಅಲ್ಲ, ಈಗ ನಾಡಗೀತೆ ಹಾಡಿ’ ಎಂದು ಮುಖ್ಯಮಂತ್ರಿ ಹೇಳಿದರು. ವಿಚಲಿತಗೊಂಡ ಗಾಯನ ತಂಡ ನಾಡಗೀತೆ ಹಾಡಿತು.

Advertisement

Udayavani is now on Telegram. Click here to join our channel and stay updated with the latest news.

Next