Advertisement

ರೈತರಿಗೆ ಸೋಲಾರ್‌ ಪಂಪ್ ಸೆಟ್ ಯೋಜನೆ ಜಾರಿಗೆ: ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ

05:54 PM Mar 12, 2022 | Team Udayavani |

ಕಲಬುರಗಿ:  ಅನ್ನದಾತ ರೈತನಿಗೆ ದಿನದ 24 ಗಂಟೆ ಕಾಲ ವಿದ್ಯುತ್ ಪೂರೈಸಲು ರಾಜ್ಯ ಸರ್ಕಾರವು ಸೋಲಾರ್ ಪಂಪ್ ಸೆಟ್ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.

Advertisement

ಶನಿವಾರ ಶನಿವಾರ ಸೇಡಂ ತಾಲೂಕಿನ ಖಂಡೆರಾಯನಪಲ್ಲಿಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ನಾಡೆಪಲ್ಲಿ ಭತ್ತ ಖರೀದಿ ಕೇಂದ್ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

3.5 ಲಕ್ಷ ಮೊತ್ತದ ಸೋಲಾರ್‌ ಪಂಪ್ ಸೆಟ್ ಯೋಜನೆಗೆ 1.5 ಲಕ್ಷ ರೂ. ನಬಾರ್ಡ್ ನಿಂದ ಸಬ್ಸಿಡಿ ನೀಡುವುದಲ್ಲದೆ ಜೊತೆಗೆ ಶೇ.3ರ ಬಡ್ಡಿ ದರದಲ್ಲಿ 2 ಲಕ್ಷ‌ ರೂ. ಸಾಲ‌ ಸಹ ನೀಡುವ ಯೋಜನೆ ಇದಾಗಿದೆ. ಯೋಜನೆ ಜಾರಿಯಾದಲ್ಲಿ ವಿದ್ಯುತ್ ಸಮಸ್ಯೆ ಎಂದು ತಲೆ‌ ಮೇಲೆ ಕೈ ಕಟ್ಟಿಕೊಂಡು ಕೂಡುವ ಅವಶ್ಯತೆ‌ ಬೀಳಲ್ಲ. ವರ್ಷದ 12 ತಿಂಗಳು ರೈತರು ಕೃಷಿ ಬೆಳೆಗಳನ್ನು ಬೆಳೆಯಬಹುದು ಎಂದು ವಿವರಿಸಿದರು.

ಮಾರುಕಟ್ಟೆಯಲ್ಲಿ 1200-1300 ರೂ. ಗಳಿಗೆ ಭತ್ತ ಮಾರುವ ದುಸ್ಥಿತಿ ಕರ್ನಾಟಕ ಕೊನೆ ಹಳ್ಳಿ ಇಲ್ಲಿನ ರೈತರದ್ದಾಗಿತು. ಹೀಗಾಗಿ ಇಲ್ಲಿ ಭತ್ತ ಖರೀದಿ ಕೇಂದ್ರದ ಬೇಡಿಕೆಗೆ ಸರ್ಕಾರ ಮಂಜೂರಾತಿ ನೀಡಿ ಇಂದು ಖರೀದಿಯನ್ನು ಆರಂಭಿಸಿದೆ. ಪ್ರಸಕ್ತ ಸಾಲಿನ ಬೆಂಬಲ‌ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ 8 ಭತ್ತ‌ ಖರೀದಿ ಕೇಂದ್ರ ತೆರೆಯಲಾಗಿದೆ. ಸೇಡಂ ತಾಲೂಕಿನಲ್ಲಿ 4, ಚಿತ್ತಾಪೂರ ಮತ್ತು ಜೇವರ್ಗಿ ತಾಲೂಕಿನ ತಲಾ 2 ಕೇಂದ್ರಗಳಿ

ವೆ. ಪ್ರತಿ ರೈತರಿಂದ ಕ್ವಿಂಟಾಲ್ ಗೆ 1940 ರೂ. ಗಳಂತೆ ಗರಿಷ್ಠ 40 ಕ್ವಿಂಟಾಲ್ ಭತ್ತವನ್ನು ಖರೀದಿಸಲಾಗುತ್ತಿದೆ ಎಂದರು.

Advertisement

ಸಾರ್ವಜನಿಕರ ಅನಗತ್ಯ ಕಚೇರಿ ಅಲೆದಾಟ ತಪ್ಪಿಸಲು ಇಂದು ಜನರ‌ ಬಾಗಿಲೆಗೆ ಬಸವರಾಜ ಬೊಮ್ಮಾಯಿ ಸರ್ಕಾರ ಬಂದಿದೆ. ಕಂದಾಯ ಇಲಾಖೆಯ ಸೇವೆಗಳನ್ನು ಉಚಿತವಾಗಿ ಒದಗಿಸುವ  “ಕಂದಾಯ ದಾಖಲೆ ಮನೆ ಬಾಗಿಲಿಗೆ” ಯೋಜನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳೆ ನಿಮ್ಮ‌ ಮನೆಗೆ ಬಂದು ನಿಮ್ಮ ಹಕ್ಕಿನ ಪಹಣಿ ದಾಖಲೆಗಳನ್ನು‌ ನೀಡಿದ್ದಾರೆ ಎಂದರು.

ಕಲಬುರಗಿ ಕಲ್ಯಾಣಕ್ಕೆ ಡಿ.ಸಿ. ದಕ್ಷ ಅಧಿಕಾರಿ;

ಕಲಬುರಗಿಯ ಕಲ್ಯಾಣಕ್ಕೆ ದಕ್ಷ ಅಧಿಕಾರಿ ಡಿ.ಸಿ. ಯಶವಂತ ವಿ. ಗುರುಕರ್ ಅಧಿಕಾರ‌ ವಹಿಸಿದ ಎರಡೇ‌ ದಿನದಲ್ಲಿ 2 ವರ್ಷದಿಂದ ಅನುಕಂಪದ‌ ನೌಕರಿಗೆ ಅಲೆಡಾಡುತ್ತಿದ್ದ ಮಹಿಳೆಗೆ ನೌಕರಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಹಲವಾರು ವರ್ಷಗಳಿಂದ‌ ಧೂಳು ಹಿಡಿದಿದ್ದ ಭೂವಾಜ್ಯ ಕಡತಗಳಿಗೆ ಒಂದೇ ತಿಂಗಳಿನಲ್ಲಿ ಮುಕ್ತಿ ನೀಡಿದ್ದಾರೆ. ಭ್ರಷ್ಠರಿಗೆ ಸಿಂಹ ಸ್ವಪ್ನವಾಗಿರುವ ಇವರು ಕಚೇರಿಯಲ್ಲಿ ಕಡಿಮೆ ಜನರ ಬಳಿಯೆ ಹೆಚ್ಚು ಇರುತ್ತಾರೆ ಎಂದು ಜಿಲ್ಲಾಧಿಕಾರಿಗಳ ಸೇವಾ‌ ಮನೋಭಾವವನ್ನು ಕೊಂಡಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಡಾ.ಉಮೇಶ‌ ಜಾಧವ ಅವರು ಮಾತನಾಡಿ, ತಿಂಗಳ ಹಿಂದೆ ಖಾಸಗಿ ಕಾರ್ಯಕ್ರಮದಲ್ಲಜ ಭಾಗಿಯಾಗಲು ಇಲ್ಲಿ‌ಗೆ ಬಂದಾಗ ಸ್ಥಳೀಯ‌ ಮುಖಂಡರು ಭತ್ತ ಖರೀದಿ ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದರು. ಕೇಂದ್ರ ತೆರೆಯುವ ಕುರಿತು ಅಂದು ನಾನು ಮತ್ತು ಶಾಸಕ ರಾಜಕುಮಾರ ತೇಲ್ಕೂರ ಅವರು ಭರವಸೆ ನೀಡಿದ್ದೇವೆ. ಅದರಂತೆ ಇಂದು ಖರೀದಿ ಕೇಂದ್ರ ಆರಂಭಿಸಲಾಗಿದೆ. ನುಡಿದಂತೆ ನಡೆಯುವ ಸರ್ಕಾರ ನಮ್ಮದಾಗಿದೆ. ಸರ್ಕಾರದ ಆಶಯದಂತೆ ಇಲ್ಲಿನ‌ ಡಿ.ಸಿ. ಯಶವಂತ‌ ವಿ. ಗುರುಕರ್ ಅವರು ಹಗಲು-ರಾತ್ರಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಮಾತನಾಡಿ ಭತ್ತ ಖರೀದಿ ಕೇಂದ್ರದಲ್ಲಿ ಇದುವರೆಗೂ 95 ಜನ ನೊಂದಾಯಿಸಿಕೊಂಡಿದ್ದಾರೆ. 3000 ನೋಂದಣಿ ಗುರಿ ಹೊಂದಲಾಗಿದೆ. ಗರಿಷ್ಟ 40 ಕ್ವಿಂಟಾಲ್ ಭತ್ತ ಮಾರಾಟ ಮಾಡಬಹುದು. ನಾನು ರೈತಾಪಿ ಕುಟುಂಬದಿಂದ‌ ಬಂದಿದ್ದು, ನಿಮ್ಮ ಏನೇ ಸಮಸ್ಯೆಗಳಿದ್ದರೆ‌ ನನ್ನ ಗಮನಕ್ಕೆ‌ ತನ್ನಿ.‌ ಬಗೆಹರಿಸುವ‌ ಪ್ರಯತ್ನ ಮಾಡುವೆ ಎಂದರು.

ಕಾರ್ಯಕ್ರಮದಲ್ಲಿ ಪ್ರಭಾರಿ ಸಹಾಯಕ ಆಯುಕ್ತೆ ಸುರೇಖಾ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಗುಣಕಿ, ತಹಶೀಲ್ದಾರ‌ ಬಸವರಾಜ ಬೆಣ್ಣೆಶಿರೂರ, ಕೃಷಿ ಇಲಾಖೆಯ ಉಪನಿರ್ದೇಶಕ ಸಮದ್ ಪಟೇಲ್, ಸಹಾಯಕ‌ ನಿರ್ದೇಶಕ ಹಂಪಣ್ಣ ಚವ್ಹಾಣ, ಸಹಕಾರ ಇಲಾಖೆಯ ಸಹಾಯಕ‌ ನಿಬಂಧಕ ರವಿಂದ್ರ, ಸೇಡಂ‌ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಮಾರುತಿ ನಾಯಕ್, ಮುಖಂಡರಾದ ಪರ್ವತರೆಡ್ಡಿ ಪಾಟೀಲ, ನಾಗರೆಡ್ಡಿ ದೇಶಮುಖ‌, ಸಿದ್ದಯ್ಯ ಸ್ವಾಮಿ ನಾಡೆಪಲ್ಲಿ, ನಾಗೇಂದ್ರಪ್ಪ ಸಾಹುಕಾರ, ಓಂಪ್ರಕಾಶ ಪಾಟೀಲ ಸೇರಿದಂತೆ ಇನ್ನಿತರ ಅಧಿಕಾರಿಗಳು, ಸಾರ್ವಜನಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next