Advertisement

ಶಕ್ತಿನಗರದ ಕಲಾಂಗಣ್‌ನಲ್ಲಿ ಮಳೆ ಕೊಯ್ಲು ಅಳವಡಿಕೆ

01:52 AM Jun 25, 2019 | Sriram |

ಮನೆಮನೆಗೆ ಮಳೆಕೊಯ್ಲು ಉದಯವಾಣಿ ಸುದಿನ ಅಭಿಯಾನದಿಂದ ಪ್ರೇರಿತಗೊಂಡು ಈಗಾಗಲೇ ನಗರದ ಹಲವಾರು ಮಂದಿ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಇವರ ಈ ಸಾಧನೆಯ ಹಿಂದೆ ಇರುವ ಸಾಧ್ಯತೆಗಳ ಕುರಿತು ಬೆಳಕು ಚೆಲ್ಲುವ ಪ್ರಯತ್ನ.

Advertisement

ಮಹಾನಗರ: ಜನರಲ್ಲಿ ಜಲ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ‘ಉದಯವಾಣಿ’ಯು ಹಮ್ಮಿಕೊಂಡಿರುವ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ಈಗ ಮನೆ- ಮನೆಗಳನ್ನು ತಲುಪುವ ಜತೆಗೆ ಜನ ಸಮುದಾಯಕ್ಕೂ ವಿಸ್ತರಣೆಯಾಗುತ್ತಿದೆ. ಅದರಂತೆ, ಅಭಿಯಾನದಿಂದ ಉತ್ತೇಜನಗೊಂಡು ಈಗ ನಗರದ ಶಕ್ತಿನಗರದ ಕಲಾಂಗಣ್‌ ಸಂಸ್ಥೆಯ ಆವರಣದಲ್ಲಿ ಮಳೆ ಕೊಯ್ಲು ವ್ಯವಸ್ಥೆ ಅಳವಡಿಸಲಾಗಿದೆ.

ಕೊಂಕಣಿಯ ಮುಂಚೂಣಿಯ ಸಾಂಸ್ಕೃತಿಕ ಸಂಸ್ಥೆ ಮಾಂಡ್‌ಸೊಭಾಣ್‌ನಡಿ ಕಾರ್ಯ ನಿರ್ವಹಿಸುತ್ತಿರುವ ಕಲಾಂಗಣ್‌ ಸುಮಾರು ಒಂದು ಎಕ್ರೆ ವಿಸ್ತೀರ್ಣ ಜಾಗವನ್ನು ಹೊಂದಿದ್ದು, ಈ ಪೈಕಿ 40 ಸೆಂಟ್ಸ್‌ನಲ್ಲಿ ಬಯಲು ರಂಗ ಮಂದಿರ, ಮಿನಿ ಸಭಾಂಗಣ ಮತ್ತು ಇತರ ಕಟ್ಟಡಗಳಿವೆ. ಇವೆಲ್ಲವುಗಳ ಒಟ್ಟು ವಿಸ್ತೀರ್ಣ ಸುಮಾರು 6,000 ಚದರಡಿ. ಇಲ್ಲಿನ ಛಾವಣಿ ಮೇಲೆ ಬೀಳುವ ಮಳೆ ನೀರು ಬಯಲು ರಂಗ ಮಂದಿರದ ಆವರಣದಲ್ಲಿರುವ ಹಳೆಯ ಕೊಳವೆ ಬಾವಿಗೆ ಹರಿದು ಹೋಗುವಂತೆ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ಕೊಳವೆ ಬಾವಿ 4 ವರ್ಷಗಳಿಂದ ಬೇಸಗೆಯಲ್ಲಿ ಬತ್ತಿ ಹೋಗಿ ನಿರುಪಯುಕ್ತವಾಗಿತ್ತು. ಈಗ ಮಳೆಕೊಯ್ಲು ವ್ಯವಸ್ಥೆಯ ಮೂಲಕ ಇದಕ್ಕೆ ಜಲ ಮರು ಪೂರಣ ಮಾಡಲಾಗಿದೆ.

ಉದಯವಾಣಿ ಅಭಿಯಾನ ಪ್ರೇರಣೆ
‘ಈ ವರ್ಷ ನಗರದಲ್ಲಿ ನೀರಿನ ಅಭಾವ ಮಿತಿ ಮೀರಿತ್ತು. ನೇತ್ರಾವತಿ ನದಿ ಕೂಡ ಒಣಗಿತ್ತು. ನೀರಿನ ರೇಷನಿಂಗ್‌ ವ್ಯವಸ್ಥೆ ಆರಂಭಿಸಲಾಗಿತ್ತು. ನೀರಿಂಗಿಸಿ, ನೀರುಳಿಸಿ ಎಂಬ ಘೋಷಣೆಗಳು ಮನೆ ಮನಗಳಲ್ಲಿ ಕೇಳಲಾರಂಭಿಸಿದ್ದವು. ಉದಯವಾಣಿ ಪತ್ರಿಕೆಯು ಜಿಲ್ಲಾ ಪಂಚಾಯತ್‌ ಸಹಯೋಗದಲ್ಲಿ ಮಳೆ ಕೊಯ್ಲಿನ ಬಗ್ಗೆ ಮಾಹಿತಿ, ಜಾಗೃತಿ ಮತ್ತು ಕಾರ್ಯಾಗಾರವನ್ನು ನಡೆಸಿ ಈಗಾಗಲೇ ಜನರಿಗೆ ಅದರ ಪ್ರಾಮುಖ್ಯ, ಮಹತ್ವವನ್ನು ತಿಳಿ ಹೇಳುತ್ತಿದೆ. ಇದರಿಂದ ಪ್ರೇರಿತವಾಗಿ ಕೊಂಕಣಿಯ ಪ್ರಮುಖ ಸಂಘಟನೆಯಾದ ಮಾಂಡ್‌ ಸೊಭಾಣ್‌ ಕೂಡ ಈ ಅಭಿಯಾನದಲ್ಲಿ ಕೈಜೋಡಿಸಿದೆ ಎಂದು ಮಾಂಡ್‌ ಸೊಭಾಣ್‌ ಸಂಘಟನೆ ಸದಸ್ಯ ವಿತೋರಿ ಕಾರ್ಕಳ್‌ ತಿಳಿಸಿದ್ದಾರೆ.

Advertisement

ಕಲಾಂಗಣ್‌ನಲ್ಲಿ ನಿರಂತರವಾಗಿ ನಡೆಯುವ ಕಾರ್ಯಕ್ರಮಗಳು ಹಾಗೂ ಬೇಸಗೆಯಲ್ಲಿ ರಜಾ ಶಿಬಿರಗಳು ನಡೆಯುತ್ತಿದ್ದು, ನೀರಿನ ಆವಶ್ಯಕತೆ ಬಹಳ ಷ್ಟಿದೆ. ನಮ್ಮ ಕೊಳವೆ ಬಾವಿಯಲ್ಲಿ ಪ್ರಾರಂಭದ ಕೆಲವು ವರ್ಷ ನೀರಿತ್ತು.

ಆದರೆ ನಾಲ್ಕು ವರ್ಷಗಳಿಂದ ಬತ್ತಿದೆ. ಮಕ್ಕಳ ಬೇಸಗೆ ಶಿಬಿರಗಳೂ ನಡೆಯುತ್ತಿದ್ದು, ನೀರಿನ ಸಮಸ್ಯೆ ಕಾಡುತ್ತಿತ್ತು. ಈ ವರ್ಷವಂತೂ ಪರಿಸ್ಥಿತಿ ಬಿಗಡಾಯಿಸಿದ್ದು, ಟ್ಯಾಂಕರ್‌ ಮೂಲಕ ನೀರನ್ನು ತರಿಸಲಾಗಿತ್ತು. ಇದನ್ನೆಲ್ಲ ಮನಗಂಡು ನೀರಿನ ಸಮಸ್ಯೆಗೆ ಪರಿಹಾರವಾಗಿ ಈಗ ಮಳೆಕೊಯ್ಲು ಅಳವಡಿಸಿ ಕೊಳ್ಳಲಾಗಿದೆ ಎನ್ನುತ್ತಾರೆ ಅವರು.

ಧರ್ಮ ಪ್ರಾಂತ್ಯದ ‘ಜಲ ಬಂಧನ್‌’,
ಉದಯವಾಣಿ ಅಭಿಯಾನ ಪ್ರೇರಣೆ
ಮಂಗಳೂರು ಧರ್ಮಪ್ರಾಂತವು ಜಲ ಸಂರಕ್ಷಣೆಗಾಗಿ ಹಮ್ಮಿಕೊಂಡಿರುವ ‘ಜಲಬಂಧನ್‌’ ಯೋಜನೆ ಮತ್ತು ಉದಯವಾಣಿಯ ‘ಮನೆಮನೆಗೆ ಮಳೆಕೊಯ್ಲು’ ಅಭಿಯಾನಕ್ಕೆ ಪೂರಕವಾಗಿ ಮಾಂಡ್‌ ಸೊಭಾಣ್‌ ಸಂಸ್ಥೆಯು ಈ ತಿಂಗಳ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡು, ಶೀಘ್ರವಾಗಿ, ಕಲಾಂಗಣ್‌ನ ಬಯಲು ರಂಗಮಂದಿರದ ಆವರಣದಲ್ಲಿರುವ ಹಳೆಯ ಕೊಳವೆ ಬಾವಿಗೆ ಮಳೆ ನೀರನ್ನು ಮರು ಪೂರಣಗೊಳಿಸುವ ವ್ಯವಸ್ಥೆ ಮಾಡಿದೆ. ಬಯಲು ರಂಗ ಮಂದಿರ, ಇತರೆಡೆ ಬೀಳುವ ಎಲ್ಲ ಮಳೆ ನೀರು ಈ ಕೊಳವೆ ಬಾವಿಗೆ ಹೋಗುವಂತೆ ನೋಡಿಕೊಳ್ಳಲಾಗಿದೆ. ಈ ಪ್ರಯೋಗದಿಂದ ಮುಂದಿನ ವರ್ಷ ಕೊಳವೆ ಬಾವಿಯಲ್ಲಿ ನೀರು ಸಿಗಬಹುದು ಎಂಬ ನಿರೀಕ್ಷೆಯಿದೆ ಎಂದು ಮಾಂಡ್‌ ಸೊಭಾಣ್‌ ಅಧ್ಯಕ್ಷ ಹಾಗೂ ಮಂಗಳೂರು ಧರ್ಮ ಪ್ರಾಂತದ ‘ಜಲ ಬಂಧನ್‌’ ಕಾರ್ಯಕ್ರಮದ ಸಂಯೋಜಕ ಲುವಿ ಜೆ. ಪಿಂಟೋ ಅವರು ‘ಸುದಿನ’ಕ್ಕೆ ತಿಳಿಸಿದ್ದಾರೆ.

ಧರ್ಮ ಪ್ರಾಂತದ ‘ಜಲ ಬಂಧನ್‌’ ಯೋಜನೆಯನ್ನು ‘ಜಲ ಯೋಧರ ಸಂಘ’ದ ಮಾರ್ಗರ್ಶನದಲ್ಲಿ ಜಿಲ್ಲೆಯ ಚರ್ಚ್‌ ವ್ಯಾಪ್ತಿಯಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಉದಯವಾಣಿಯ ‘ಮನೆ ಮನೆಗೆ ಮಳೆ ಕೊಯ್ಲು’ ಅಭಿಯಾನ ಆರಂಭವಾದ ಸಂದರ್ಭ ಬಿಷಪ್‌ ಡಾ| ಪೀಟರ್‌ ಪೌಲ್ ಸಲ್ಡಾನ್ಹಾ ಅವರು ಕೂಡ ಇದಕ್ಕೆ ಸಾಥ್‌ ಕೊಟ್ಟು, ಎಲ್ಲ ಚರ್ಚ್‌ಗಳಲ್ಲಿಯೂ ಮಳೆಕೊಯ್ಲು ಅಳವಡಿಸಿಕೊಳ್ಳುವಂತೆ ಕ್ರಿಶ್ಚಿಯನ್‌ ಸಮುದಾಯಕ್ಕೆ ಸಂದೇಶ ರವಾನಿಸಿದ್ದರು.

ಬಿಷಪ್‌ ಅವರು ನೀಡಿದ್ದ ಈ ಸಂದೇಶವು ಈಗ ಹಲವು ಕಡೆಗಳಲ್ಲಿ ಅನುಷ್ಠಾನದ ಹಂತ ತಲುಪಿರುವುದು ಶ್ಲಾಘನೀಯ. ಅದರಂತೆ, ಉದಯವಾಣಿಯ ಅಭಿಯಾನದ ಬಳಿಕ ಈಗ ಒಟ್ಟು ಐದು ಕಡೆ (ಬಳ್ಕುಂಜೆಯಲ್ಲಿ -3, ಮೂಲ್ಕಿ- 1, ಕಲಾಂಗಣ್‌-1) ಮಳೆ ಕೊಯ್ಲು ವ್ಯವಸ್ಥೆ ಅಳವಡಿಸಲಾಗಿದೆ. ಇನ್ನೂ ನಾಲ್ಕು ಕಡೆ ಅಳವಡಿಕೆ ಕಾರ್ಯ ನಡೆಯುತ್ತಿದೆ ಎಂದು ಜಲ ಯೋಧರ ಸಂಘದ ಮುಖ್ಯಸ್ಥ ಪಿಯುಸ್‌ ಫ್ರಾನ್ಸಿಸ್‌ ಡಿ’ಸೋಜಾ ಅವರು ‘ಸುದಿನ’ಕ್ಕೆ ಮಾಹಿತಿ ನೀಡಿದ್ದಾರೆ.

ಚರ್ಚ್‌ನಲ್ಲಿ ಮಳೆಕೊಯ್ಲು ಜಾಗೃತಿ

ಜಲ ಯೋಧರ ಸಂಘ’ವು ಮಳೆ ಕೊಯ್ಲು ವ್ಯವಸ್ಥೆ ಬಗ್ಗೆ ಜಾಗೃತಿ ಅಭಿಯಾನವನ್ನು ನಡೆಸುತ್ತ್ತಿದೆ. ರವಿವಾರ (ಜೂ. 23) ದೇರೆಬೈಲ್ ಚರ್ಚ್‌ನಲ್ಲಿ ಮಳೆ ಕೊಯ್ಲು ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಚರ್ಚ್‌, ಶಾಲೆ ಮತ್ತು ಸಂಘ – ಸಂಸ್ಥೆಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುವುದು.
– ಪಿಯುಸ್‌ ಫ್ರಾನ್ಸಿಸ್‌ ಡಿ’ಸೋಜಾ,

ಮುಖ್ಯಸ್ಥರು, ಜಲ ಯೋಧರ ಸಂಘ

ಎಲ್ಲೆಡೆ ಮಳೆಕೊಯ್ಲು ಪಸರಿಸಲಿ

‘ಧರ್ಮ ಪ್ರಾಂತದ ‘ಜಲ ಬಂಧನ್‌’ ಯೋಜನೆಯನ್ನು ‘ಜಲ ಯೋಧರ ಸಂಘ’ ದ ಸಹಾಯದಿಂದ ಚರ್ಚ್‌ಗಳಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಈಗ ಕಲಾಂಗಣ್‌ನಲ್ಲಿ ‘ಜಲ ಯೋಧರ ಸಂಘ’ ದ ಸದಸ್ಯರ ಮಾರ್ಗದರ್ಶನದಲ್ಲಿ ಮಳೆ ಕೊಯ್ಲು ವ್ಯವಸ್ಥೆಯನ್ನು ಕಾರ್ಯಗತ ಮಾಡಲಾಗಿದೆ. ಇಲ್ಲಿ ಬೋರ್‌ವೆಲ್ ಮರುಪೂರಣಕ್ಕೆ ಒಟ್ಟು 44,000 ರೂ. ಖರ್ಚಾಗಿದೆ. ‘ಜಲ ಬಂಧನ್‌’ ಯೋಜನೆಯಡಿ ಮಳೆ ಕೊಯ್ಲು ಅಭಿಯಾನವನ್ನು ನಿರಂತರವಾಗಿ ಮುನ್ನಡೆಸಿಕೊಂಡು ಹೋಗಲಾಗುವುದು. ಎಲ್ಲೆಡೆ ನೀರಿಂಗಲಿ, ಜಲಕ್ಷಾಮ ನೀಗಲಿ ಎನ್ನುವುದು ನಮ್ಮ ಆಶಯ.
– ಲುವಿ ಜೆ. ಪಿಂಟೊ,

ಮಾಂಡ್‌ ಸೊಭಾಣ್‌ ಅಧ್ಯಕ್ಷ

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ. ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೊ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. ವಾಟ್ಸಪ್‌ ನಂಬರ್‌: 9900567000
Advertisement

Udayavani is now on Telegram. Click here to join our channel and stay updated with the latest news.

Next