Advertisement

ಪುತ್ತೂರು ಜಲಸಿರಿ ಅನುಷ್ಠಾನ; ಮನೆ, ಮನೆಗೆ ಗಂಗೆ ಹರಿಯಲು ಹತ್ತಾರು ಸವಾಲು

02:58 PM Apr 02, 2024 | Team Udayavani |

ಪುತ್ತೂರು: ನಗರಕ್ಕೆ ಶಾಶ್ವತ ‌ಕುಡಿಯುವ ನೀರಿನ ಪೂರೈಕೆಗೆ ಆರು ವರ್ಷಗಳ ಹಿಂದೆ ಜಾರಿಯಾದ ಜಲಸಿರಿ ಯೋಜನೆಯ ಅನುಷ್ಠಾನದ ಹಂತದ ಗಡುವು ಮಾ.31ಕ್ಕೆ ಮುಕ್ತಾಯ ಗೊಂಡಿದ್ದರೂ ಮನೆ-ಮನೆಗೆ ಗಂಗೆ ಹರಿಯಲು ಇರುವ ಹತ್ತಾರು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ!

Advertisement

ವಲಯವಾರು ವ್ಯಾಪ್ತಿಯಲ್ಲಿ ನೀರು ಪೂರೈಕೆಯ ಪ್ರಾಯೋಗಿಕ ಕಾರ್ಯ ನಡೆಸಲಾಗುತ್ತಿದೆ ಎಂದು ಜಲಸಿರಿ ಅಧಿಕಾರಿಗಳು ಹೇಳುತ್ತಿದ್ದು ಈ ವೇಳೆ ಯಲ್ಲಿ ಹಲವು ಸಮಸ್ಯೆಗಳು ಕಂಡು ಬರುತ್ತಿದರಿಂದ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಕೆಲ ಸಮಯ ತಗಲಬ ಹುದು ಎನ್ನಲಾಗುತ್ತಿದೆ.

113 ಕೋ.ರೂ.ವೆಚ್ಚ
ಎಡಿಬಿ ಯೋಜನೆಯಡಿ ಜಾರಿಗೆ ತರಲಾದ ಜಲಸಿರಿಯನ್ನು ಕುಡ್ಸೆಂಪ್‌ ಕಾರ್ಯಕ್ರಮದಡಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮ (ಕೆಯುಐಡಿಎಫ್‌ಸಿ) ಅನುಷ್ಠಾನ ಗೊಳಿಸುತ್ತಿದೆ. ಇದರ ಒಟ್ಟು ವೆಚ್ಚ 113 ಕೋ.ರೂ. ಪ್ರಸ್ತುತ ಕಳೆದ ಹದಿನಾರು ವರ್ಷದಿಂದ ಉಪ್ಪಿನಂಗಡಿಯ ನೆಕ್ಕಿಲಾಡಿಯಲ್ಲಿ ಕುಮಾರಧಾರಾ ನದಿ ಯಿಂದ ನೀರೆತ್ತಿ ಶುದ್ಧಕರಿಸಿ ನಗರಕ್ಕೆ ಪೂರೈಸಲಾಗುತ್ತಿದ್ದು ಇಲ್ಲಿನ ವ್ಯವಸ್ಥೆಯನ್ನು ಜಲಸಿರಿ ಮೂಲಕ ಮೇಲ್ದರ್ಜೆಗೇರಿಸಿ ನೀರು ಪೂರೈಸುವ ಯೋಜನೆ ರೂಪಿಸ ಲಾಗಿದೆ. ಯುರೋಪ್‌ ಮೂಲದ ಸುಯೇಝ್ ಇಂಡಿಯಾ ಲಿಮಿಟೆಡ್‌ ಸಂಸ್ಥೆ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ.

8.5 ಎಂಎಲ್‌ಡಿ ಸಂಸ್ಕರಣ ಘಟಕ
ನೆಕ್ಕಿಲಾಡಿಯಲ್ಲಿ ಈಗಿರುವ 6.8 ಎಂಎಲ್‌ಡಿ ಸಂಸ್ಕರಣ ಘಟಕ ದುರಸ್ತಿ ಮಾಡಿ ಹೊಸದಾಗಿ ಸ್ಥಾಪನೆ ಮಾಡುವ ಜತೆಗೆ ಹೊಸದಾಗಿ 8.5 ಎಂಎಲ್‌ಡಿ ಸಂಸ್ಕರಣ ಘಟಕ ನಿರ್ಮಿಸಲಾಗಿದೆ. ನೆಕ್ಕಿಲಾಡಿಯಿಂದ ಪುತ್ತೂರು- ಉಪ್ಪಿನಂಗಡಿ ರಸ್ತೆ ಬದಿಗಳಲ್ಲಿ ಅಳವಡಿಸಿದ ಪೈಪ್‌ಲೈನ್‌ ಮೂಲಕ ಪುತ್ತೂರು ನಗರಕ್ಕೆ 2 ಸ್ಥಾವರಗಳಿಂದ ಒಟ್ಟು 15 ಎಂಎಲ್‌ಡಿ ನೀರು ಹರಿಯುತ್ತಿದೆ. ನೀರಿನ
ಸಂಗ್ರಹಣೆಗಾಗಿ ನಗರದ ಸೀಟಿ ಗುಡ್ಡೆಯಲ್ಲಿ 24 ಲಕ್ಷ ಲೀಟರ್‌ ಸಾಮರ್ಥಯದ ಓವರ್‌ ಹೆಡ್‌ ಟ್ಯಾಂಕ್‌, ಸಿ.ಟಿ.ಒ. ಗುಡ್ಡೆ, ಕೆಮ್ಮಾಯಿ, ಪಡೀಲ್‌, ಬಲಾ°ಡ್‌ ಸೇರಿದಂತೆ ನಗರಸಭಾ ವ್ಯಾಪ್ತಿಯಲ್ಲಿ ಒಟ್ಟು 11 ಮೆಗಾ ಓವರ್‌ ಹೆಡ್‌ ಟ್ಯಾಂಕ್‌ಗಳು
ನಿರ್ಮಾಣಗೊಂಡಿದ್ದು ನೀರು ಪೂರೈಕೆಯ ವ್ಯವಸ್ಥೆ ಪೂರ್ಣಗೊಂಡಿದೆ ಎನ್ನುತ್ತಾರೆ ಜಲಸಿರಿಯ ಅಧಿಕಾರಿಗಳು.

ಸಮಸ್ಯೆಗಳ ಸರಮಾಲೆ 
ಕಾಮಗಾರಿ ಆರಂಭಗೊಂಡು ಅನಂತರ ಕೋವಿಡ್‌ ಕಾರಣದಿಂದ 2 ವರ್ಷ ಸ್ಥಗಿತಗೊಂಡಿತ್ತು. ಪೈಪ್‌ ಅಳವಡಿಕೆ ಸಂದರ್ಭದಲ್ಲಿ ರಸ್ತೆ ಅಗೆತದಿಂದ ಸಂಚಾರ ಕಡಿತ ಸೇರಿದಂತೆ ನಗರಸಭೆಯ ಸಾಮಾನ್ಯ ಸಭೆಗಳಲ್ಲಿ ಕಾಮಗಾರಿ ವಿರುದ್ಧ ಆರೋಪಗಳ ಸುರಿಮಳೆಯೇ ಕೇಳಿ ಬಂದಿತ್ತು. ಅದು ಈಗಲೂ ಮುಂದುವರಿದಿದೆ.

Advertisement

ಎಂಟು ವರ್ಷ ನಿರ್ವಹಣೆ ಕಾಲ
ಜಲಸಿರಿ ಅಧಿಕಾರಿಗಳು ಹೇಳುವ ಪ್ರಕಾರ, ಕಾಮಗಾರಿ ಅನುಷ್ಠಾನದ ಕೊನೆ ಹಂತದಲ್ಲಿ ಇದ್ದೇವೆ. ಹಸ್ತಾಂತರದ ಬಗ್ಗೆ ನಾವಿನ್ನು ಡಿಕ್ಲೇರ್‌  ಮಾಡಿಲ್ಲ. ಮಾ. 31ಕ್ಕೆ ಕೆಯುಐಡಿಎಫ್‌ಸಿ ಅವರ ಟ್ರಾನ್ಸ್‌ಮಿಶನ್‌ ಅವಧಿ ಮುಗಿಯುತ್ತದೆ. ನಾವು ಡಿಕ್ಲೇರ್‌ ಮಾಡಿದ ಅನಂತರದ ಮುಂದಿನ 8 ವರ್ಷಗಳ ಕಾಲ ನಿರ್ವಹಣೆಯ ಹೊಣೆಯನ್ನು ಕೆಯುಐಡಿಎಫ್‌ಸಿ ಹೊತ್ತುಕೊಂಡಿದೆ. ನಿರ್ವಹಣೆಗೆ 41 ಕೋಟಿ ಮೀಸಲಿರಿಸಲಾಗಿದೆ. ಜ. 1ರಿಂದ ನಗರಸಭೆಯು ನೀರಿನ ಪೂರೈಕೆಯ ಕಾರ್ಯ ಸ್ಥಗಿತಗೊಳಿಸಿದ್ದು ಕೆಯುಐಡಿಎಫ್‌
ಸಿಯೇ ಪ್ರಾಯೋಗಿಕವಾಗಿ ನೀರು ಹರಿಸುತ್ತಿದೆ. ನಗರಸಭೆಯಲ್ಲಿ ಪ್ರತ್ಯೇ  ಜಲಸಿರಿ ಕಚೇರಿ, ಕಸ್ಟಮರ್‌ ಕೇರ್‌ ಸೆಂಟರ್‌ ತೆರೆಯಲಾಗಿದೆ. ಬಿಲ್‌ ಸಂಗ್ರಹ ಕೂಡ ನಿಗಮವೇ ಮಾಡುತ್ತಿದೆ. ಇದಕ್ಕಾಗಿ ನಗರಸಭೆಯೊಂದಿಗೆ ಜಂಟಿ ಎಸ್ಕೋ ಖಾತೆ ತೆರೆಯಲಾಗಿದೆ.

ಪವರ್‌ ಸಮಸ್ಯೆ
ಹೊಸ ಎಚ್‌ಡಿಪಿಇ ಪೈಪ್‌ಗ್ಳನ್ನು ಹಳೆಯ ಪೈಪ್‌ಗೆ ಜೋಡಿಸುವ ಸಂದರ್ಭದಲ್ಲಿ ಸಮಸ್ಯೆ ಉಂಟಾಗುತ್ತಿದ್ದು ಹೀಗಾಗಿ ಕೆಲವೆಡೆ ಮನೆಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ದೊಡ್ಡ ಪೈಪ್‌ನಲ್ಲಿ ಬಂದ ನೀರು ಹಳೆಯ ಸಣ್ಣ ಪೈಪ್‌ ಹರಿಯುವಾಗ ಬ್ಲಾಕ್‌ ಆಗುತ್ತಿದೆ. ವಾರಕ್ಕೊಮ್ಮೆ ಪವರ್‌ ಲೋಡ್‌ ಶೆಡ್ಡಿಂಗ್‌ ಇದ್ದು ಪೈಪ್‌ನಲ್ಲಿ ನೀರು ಖಾಲಿಯಾಗಿ ಗಾಳಿ ತುಂಬಿ ಸಮಸ್ಯೆ ಉಂಟಾಗುತ್ತಿದೆ ಎನ್ನುತ್ತಾರೆ ಜಲಸಿರಿ ಅಧಿಕಾರಿಗಳು. ನಗರದಲ್ಲಿ 24/7 ನೀರು ಪೂರೈಕೆಯ ಜಲಸಿರಿ ಯೋಜನೆ ಸಮರ್ಪಕವಾಗಿ ಅನುಷ್ಠಾನ ಆಗಿಲ್ಲ. ಬಿರು ಬೇಸಗೆಯಲ್ಲಿಯೇ ನೀರಿನ ಸಮಸ್ಯೆ ಉಂಟಾಗಿದೆ. ಹೊಸ ಪೈಪುಗಳಿಗೆ ಸಂಪರ್ಕ ಕೊಡುವ ನಿಟ್ಟಿನಲ್ಲಿ ರಸ್ತೆಯನ್ನು ಅಗೆದು ಹಳೆ ಪೈಪುಗಳಿಗೆ ಹಾನಿ ಉಂಟಾಗಿ ನೀರು ಪೂರೈಕೆ ಕಡಿತಗೊಂಡಿದೆ. ಈ ಬಗ್ಗೆ ದೂರು ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ.
-ನೂರುದ್ದೀನ್‌ ಸಾಲ್ಮರ, ನ್ಯಾಯವಾದಿ

ಜಲಸಿರಿ ಯೋಜನೆ ಪ್ರಾಯೋಗಿಕ ಹಂತದಲ್ಲಿದೆ. ಸಣ್ಣ-ಪುಟ್ಟ ಸಮಸ್ಯೆ ಇರುವುದು ನಿಜ. ಅದನ್ನು ಹಂತ ಹಂತವಾಗಿ ನಿವಾರಿಸಿಕೊಳ್ಳಲಾಗುವುದು. ಈಗಾಗಲೇ 10 ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದ್ದು800 ಅಧಿಕ ಮನೆ, ವಾಣಿಜ್ಯ ಕಟ್ಟಡಗಳಿಗೆ ಬಾಕಿ ಇದೆ. ಇಲ್ಲಿಗೂ ಸಂಪರ್ಕ ಕಲ್ಪಿಸುವ ಕಾರ್ಯ ನಡೆಯುತ್ತಿದೆ.
ಕುಮಾರಸ್ವಾಮಿ,
ಕಾರ್ಯನಿರ್ವಾಹಕ ಎಂಜಿನಿಯರ್‌ ಕೆಯುಐಡಿಎಫ್‌ಸಿ

*ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next