Advertisement

ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ

09:30 AM Mar 10, 2019 | Team Udayavani |

ಲಿಂಗಸುಗೂರು: ತಾಲೂಕಿನಲ್ಲಿ ಬರ ಆವರಿಸಿದ್ದರಿಂದ ಗ್ರಾಮೀಣ ಭಾಗದಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕು. ಈ ಬಗ್ಗೆ ನಿಮ್ಮ ವಿರುದ್ಧ ದೂರುಗಳು ಬಂದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಶಾಸಕ ಡಿ.ಎಸ್‌.ಹೂಲಗೇರಿ ಪಿಡಿಒಗಳಿಗೆ ಎಚ್ಚರಿಸಿದರು.

Advertisement

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಪಿಡಿಒಗಳ ಸಭೆ ನಡೆಸಿದ ಅವರು, ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿದಲ್ಲಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಪಿಡಿಒಗಳು ತಮ್ಮ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಟ್ಟು
ಹೋಗಬಾರದು. ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಗ್ರಾಮೀಣ ಜನತೆ ತಮ್ಮ ಬಳಿ ಬಂದರೆ ಆಯಾ ಗ್ರಾಪಂ ಪಿಡಿಒಗಳ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ. ಗ್ರಾಮಸ್ಥರಿಂದ ದೂರು ಬರದಂತೆ ನೋಡಿಕೊಳ್ಳಬೇಕು.

ಕುಡಿಯುವ ನೀರಿಗಾಗಿ ಅನುದಾನದ ಕೊರತೆಯಿಲ್ಲ, ಸಮಸ್ಯೆ ಪರಿಹರಿಸಲು ನಿರ್ಲಕ್ಷ್ಯ ಮಾಡಬಾರದು ಎಂದು ಸೂಚಿಸಿದರು. ಮಾವಿನಬಾವಿಯಲ್ಲಿ ನೀರಿನ ಸಮಸ್ಯೆಯಿದೆ. ಆದರೆ ಖಾಸಗಿಯವರು ನೀರು ನೀಡಲು ಒಪ್ಪುತ್ತಿಲ್ಲ ಎಂದು ಪಿಡಿಒ ಗಂಗಮ್ಮ ಸಭೆಗೆ ತಿಳಿಸಿದರು. ಖಾಸಗಿಯವರು
ಕೊಡಲು ಒಪ್ಪದಿದ್ದರೆ ಆ ಬೋರ್‌ ವೆಲ್‌ನ್ನು ಸರ್ಕಾರದ ವಶಕ್ಕೆ ಪಡೆದು ನೀರು ಪೂರೈಕೆಗೆ ಕ್ರಮ ವಹಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಿಮಗೆ ತಿಳಿಸಲಾಗಿದೆ. ಕೂಡಲೇ ಆ ಕೆಲಸ ಮಾಡಿ ಎಂದು ಶಾಸಕರು ತಾಕೀತು ಮಾಡಿದರು. ತಾಪಂ ಇಒ ಪ್ರಕಾಶ ಹಾಗೂ ವಿವಿಧ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next