Advertisement

ಕಂಗಳೇ ಕರಗಿ ನೀರಾದಾಗ ಬಾಳುವುದುಂಟೇನೋ… 

03:07 PM Sep 19, 2017 | |

ನಿನ್ನನ್ನು ಹುಚ್ಚಿಯಂತೆ ಹಚ್ಚಿಕೊಳ್ಳುವ ಮೊದಲು ನಾನು ಕೂಡ ಎಲ್ಲರಂತೆಯೇ ಇದ್ದೆ. ಹನಿ ಹನಿ ಮಳೆಗೆ ಮುಖವೊಡ್ಡಿ ಖುಷಿ ಪಡುತ್ತಿದ್ದೆ. ಎಲ್ಲರೊಂದಿಗೆ ಬೆರೆಯುತ್ತ, ತಮಾಷೆ ಮಾಡುತ್ತ ನಗುನಗುತ್ತಿದ್ದೆ. ನನ್ನ ಸಂತೋಷ ಎಂದೂ ಬರಗಾಲವನ್ನೇ ಕಂಡಿರಲಿಲ್ಲ. ಆದರೆ ಈಗ..

Advertisement

ಸೂರ್ಯನ ಸಮಕ್ಷಮದಲ್ಲಿ ಸಾಗರದಾಚೆ ನಿಂತು ಕಡಲಿಗೆ ಮುತ್ತಿಕ್ಕುತ್ತಿರುವ ಅಲೆಗಳನ್ನು ಹಾಗೇ ನೋಡುತ್ತಲಿದ್ದೆ. ಅದೇಕೊ ಗಂಟಲುಬ್ಬಿ ಬಂತು. ಹೃದಯ ಭಾರವಾಯಿತು. ಕಣ್ಣಂಚು ತೇವವಾಯಿತು. ಎಲ್ಲಿ ಹೋದರೂ ಬಿಡದ ನೆನಪುಗಳಿಂದ ಆಯತಪ್ಪಿ ಮರಳು ದಿಬ್ಬದ ಮೇಲೆ ಕುಸಿದು ಬಿಟ್ಟೆ. ನಿನ್ನ ನೆನಪುಗಳ ಸಂತೆಯಿಂದ ಹೇಗೆ ಆಚೆ ಬರಲಿ ನಾನು? ಎಲ್ಲೆಲ್ಲೂ ನೀನೇ.. ನಿನ್ನ ನೆನಪುಗಳೇ..

ಇಲ್ಲಿ ನಾನು ಗೀಚುತ್ತಿರುವುದು ಬರೀ ಶಬ್ದಗಳನ್ನಲ್ಲ. ನನ್ನ ಕಣ್ಣೀರ ಸಾಲುಗಳನ್ನ. ಇಲ್ಲಿರುವುದು ಬರೀ ಅಕ್ಷರಗಳಲ್ಲ ನನ್ನ ಹೃದಯದ ಮಿಡಿತಗಳು. ಇಲ್ಲಿ ವಾಕ್ಯ ಪೂರ್ತಿಯಾಗುತ್ತಿರುವುದು ಪೂರ್ಣವಿರಾಮದಿಂದಲ್ಲ, ನನ್ನ ನಿಟ್ಟುಸಿರಿನಿಂದ.

     ಗೆಳೆಯಾ, ಮೊದಲೆಲ್ಲಾ ನಿನ್ನನ್ನು ನೆನಪಿಸಿಕೊಂಡರೆ ಸಾಕು, ಮನೆ ತುಂಬ ಪ್ರೇಮನಾದವೇ ಕೇಳಿಸುತ್ತಿತ್ತು. ಮನಸ್ಸು ತುಂಬಿ ಬರುತ್ತಿತ್ತು. ಆದರೆ ಈಗ ಎಲ್ಲೆಲ್ಲೂ ಮರಣ ಮೃದಂಗದ ಸದ್ದು ಕೇಳಿಸುತ್ತಿದೆ. ಹೃದಯಕ್ಕೆ ಬೆಂಕಿ ಬಿದ್ದಂತಾಗುತ್ತದೆ. ನಿನ್ನ ಮಾತೆಂಬ ಅಮೃತ ಸಿಂಚನ ಮಾತ್ರ ಇದನ್ನು ಆಲಿಸಬಲ್ಲದು.

      ಈ ಮೂರು ವರ್ಷಗಳ ಏಕಾಂಗಿತನ, ಅಸಹನೆಗಳನ್ನೆಲ್ಲ ಶಬ್ದ ಶಬ್ದಗಳಲ್ಲಿ ತುಂಬಿಸಿ ಸಾವಿರಾರು ಪತ್ರಗಳೊಂದಿಗೆ ನಿನಗಾಗಿ ಕಾದಿರುವೆ. ಓದುವ ತಾಳ್ಮೆ ಇಲ್ಲದಿದ್ದರೂ ಪರವಾಗಿಲ್ಲ. ಕೊನೇಪಕ್ಷ ಅವುಗಳನ್ನೆಲ್ಲ ನಿನ್ನ ಕೈಯಿಂದಲಾದರೂ ನೇವರಿಸು. ನೀನು ಸ್ಪರ್ಶಿಸಿದ್ದು ಅಕ್ಷರಗಳನ್ನಲ್ಲ, ಈ ಹಾಳು ಜೀವವನ್ನ ಎಂದುಕೊಂಡು ಹಾಡುತ್ತಿರುವ ಸೃಷ್ಟಿಯೊಂದಿಗೆ  ಮತ್ತೆ ಬದುಕುವ ಪ್ರಯತ್ನ ಮಾಡುತ್ತೇನೆ.

Advertisement

     ನಿನ್ನನ್ನು ಹುಚ್ಚಿಯಂತೆ ಹಚ್ಚಿಕೊಳ್ಳುವ ಮೊದಲು ನಾನು ಕೂಡ ಎಲ್ಲರಂತೆಯೇ ಇದ್ದೆ. ಹನಿ ಹನಿ ಮಳೆಗೆ ಮುಖವೊಡ್ಡಿ ಖುಷಿ ಪಡುತ್ತಿದ್ದೆ. ಎಲ್ಲರೊಂದಿಗೆ ಬೆರೆಯುತ್ತ, ತಮಾಷೆ ಮಾಡುತ್ತ ನಗುನಗುತ್ತಿದ್ದೆ. ನನ್ನ ಸಂತೋಷ ಎಂದೂ ಬರಗಾಲವನ್ನೇ ಕಂಡಿರಲಿಲ್ಲ. ಆದರೆ ಈಗ ಮೌನವೇ ನನ್ನ ಭಾಷೆ. ಎಲ್ಲರೂ ನಗುವಾಗ ಒಂಟಿಯಾಗಿ ಅಳುತ್ತೇನೆ. ಎಲ್ಲರೂ ಅಳುವಾಗ ಹುಚ್ಚಿಯಂತೆ ನಗುತ್ತೇನೆ. ನಾನು ಇದನ್ನೆಲ್ಲ ಯಾರ ಬಳಿ ಹೇಳಲಿ? ಹತ್ತಿರವಿರುವ ನೀನೇ ಹೃದಯದ ಬಾಗಿಲು ಮುಚ್ಚಿಕೊಂಡಿರುವಾಗ ಯಾರ ಕಿವಿಯಲ್ಲಿ ಹೇಳಿ ಏನು ಪ್ರಯೋಜನ?

     ನನ್ನ ಪಾಡಿಗೆ ನಾನಿದ್ದೆ. ಅಪರಿಚಿತನಾಗಿ ಬಂದು, ಮೌನವೆಂಬ ಭಯದ ಕತ್ತಲೆಯೊಳಗೆ ಬಿದ್ದಿದ್ದ ನನಗೆ ಧೈರ್ಯವೆಂಬ ಬೆಳಕು ಚೆಲ್ಲಿ, ಭಾಷೆಯೆಂಬ ಬಾಗಿಲು ತೆರೆದು, ಬದುಕೆಂಬ ಜಗತ್ತಿಗೆ ನನ್ನನ್ನು ಕರೆತಂದೆ. ಇಂದು ಮತ್ತೆ ಕತ್ತಲು ಮೈತುಂಬಿಕೊಂಡಿದೆ. ಆದರೆ ನನಗೆ ಯಾವುದೇ ಭಯವಿಲ್ಲ. ಇದಕ್ಕೆಲ್ಲ ಕಾರಣ ನೀನೇ ಎಂದು ರಾಜಾರೋಷವಾಗಿ ಹೇಳಬಲ್ಲೆ.

     ಇಷ್ಟೆಲ್ಲ ಆದರೂ ನಾನು ನಿನ್ನೊಂದಿಗೆ ಬದುಕುವ ಆಸೆಯಲ್ಲಿದ್ದೇನೆ ಎಂದುಕೊಂಡೆಯೇನೋ ಅವಿವೇಕಿ? ಮನಸ್ಸು ನೀಡಿದವಳ ಕನಸು ಕೊಂದವನು ನೀನು. ನನ್ನ ಭಾವನೆಯ ಕಣ್ಣೀರನ್ನು ಕಾಲಲ್ಲಿ ಹೊಸಕಿ ಹಾಕಿದವನು ನೀನು. ಅರ್ಥವಿಲ್ಲದ ನಿನ್ನ ಅನುಮಾನ ನನ್ನ ವ್ಯಕ್ತಿತ್ವವನ್ನೇ ಅನುಮಾನಿಸಿತು. ಅವಮಾನಿಸಿತು. ನನ್ನ ಬದುಕಿಗೊಂದು ಕಪ್ಪು ಚುಕ್ಕಿ ಇಟ್ಟು ಬೆನ್ನು ಹಾಕಿ ಹೊರಟುಹೋದವನು ನೀನು.

     ನನ್ನ ನಿಸ್ವಾರ್ಥ ಪ್ರೀತಿಯ ಮೇಲೆ ಆಣೆ ಕಣೋ. ನಿನ್ನ ಅನುಮಾನದಲ್ಲಿ ಸಾಸಿವೆಯಷ್ಟೂ ಸತ್ಯವಿಲ್ಲ. ಸತ್ಯ ಅಸತ್ಯಗಳನ್ನು ತಿಳಿಯದ ಪಾಪಿಗಳ ಎದುರು ಗೋಗರೆದರೆ ಪ್ರಯೋಜನವಿಲ್ಲ. ಆದರೂ ಕಡೆಯದಾಗಿ ಹೇಳ್ತಿದೀನಿ ತಿಳ್ಕೊà. ನಾನು ಜಸ್ಟ್‌ ನಿನಗಾಗಿ ಬದುಕಿದ್ದವಳು. ಅದನ್ನು ಅರ್ಥ ಮಾಡಿಕೊಳ್ಳದೇ ಹೋದೆಯಲ್ಲ…ಪೂರ್‌ ಫೆಲೋ..

ಇಂತಿ, ನಿನ್ನ ಮೌನದ ನಂತರ ಮಳೆಯಾದವಳು…
ಕಾವ್ಯಾ ಭಟ್ಟ ಜಕ್ಕೊಳ್ಳಿ, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next