Advertisement

ಪಡಿತರ ಅಕ್ಕಿ ಕಳ್ಳಸಾಗಾಟ ದಂಧೆ : ದ.ಕ., ಉಡುಪಿಯಲ್ಲಿ 3ಸಾವಿರ ಕ್ವಿಂಟಾಲ್‌ ಅಕ್ಕಿ ವಶ

03:07 PM Sep 20, 2022 | Team Udayavani |

ಉಡುಪಿ : ಉಡುಪಿ ಜಿಲ್ಲೆಗೆ ಪ್ರತೀ ತಿಂಗಳು ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ವಿತರಿಸಲು ಸರಾಸರಿ 40 ಸಾವಿರ ಕ್ವಿಂಟಾಲ್‌ ಅಕ್ಕಿ ಬೇಕು. ಸ್ಥಳೀಯ ಕುಚ್ಚಲು ಅಕ್ಕಿಗೂ ಬೇಡಿಕೆಯಿದೆ. ಈ ಮಧ್ಯೆ ಆಂಧ್ರ ಸಹಿತ ಬೇರೆ ರಾಜ್ಯಗಳ ಕುಚ್ಚಲು ಅಕ್ಕಿ ನೀಡುತ್ತಿರುವುದರಿಂದ ಅನೇಕರು ಅದನ್ನು ಉಪಯೋಗಿಸದೆ ಬೇರೆಯವರೆಗೆ ಮಾರಾಟ ಮಾಡುತ್ತಿದ್ದಾರೆ. ಈ ರೀತಿ ಮಾರುವಾಗ ಅಥವಾ ಅಕ್ರಮವಾಗಿ ಸಾಗಿಸುವಾಗ 2 ಸಾವಿರಕ್ಕೂ ಅಧಿಕ ಕ್ವಿಂಟಾಲ್‌ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಉಡುಪಿ ಜಿಲ್ಲೆಯಲ್ಲಿ 2020ರಿಂದ ಇಲ್ಲಿಯವರೆಗೆ 32 ಕಡೆ ದಾಳಿ ನಡೆಸಿ, 61 ಮಂದಿಯನ್ನು ಬಂಧಿಸಿ, 2,695 ಕ್ವಿಂಟಾಲ್‌ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ದ.ಕ. ಜಿಲ್ಲೆಯಲ್ಲಿ 2021ರ ಆಗಸ್ಟ್‌ನಿಂದ ಈ ವರೆಗೆ ಒಟ್ಟು 5 ಕಡೆ ನಡೆಸಿದ ದಾಳಿಗಳಲ್ಲಿ 6 ಮಂದಿಯನ್ನು ಬಂಧಿಸಿ 294 ಕ್ವಿಂಟಾಲ್‌ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.

ಕಾರ್ಕಳದಲ್ಲಿ 31,060 ಕಾರ್ಡ್‌, ಕುಂದಾಪುರದಲ್ಲಿ 46,931, ಉಡುಪಿಯಲ್ಲಿ 29,028, ಕಾಪುವಿನಲ್ಲಿ 18,708, ಬ್ರಹ್ಮಾವರದಲ್ಲಿ 31,417, ಬೈಂದೂರಿನಲ್ಲಿ 26,523 ಹಾಗೂ ಹೆಬ್ರಿಯಲ್ಲಿ 9,434 ಸಹಿತ ಜಿಲ್ಲೆಯಲ್ಲಿ ಒಟ್ಟು 1,93,101 ಪಡಿತರ ಚೀಟಿಗಳಿವೆ. 8,12,269 ಸದಸ್ಯರಿದ್ದಾರೆ. ಇದರಲ್ಲಿ 7.64 ಲಕ್ಷಕ್ಕೂ ಅಧಿಕ ಸದಸ್ಯರು ಕೆವೈಸಿ ಮಾಡಿಸಿಕೊಂಡಿದ್ದಾರೆ.

ಪ್ರತೀ ಅಂತ್ಯೋದಯ ಕಾರ್ಡ್‌ಗೆ 35 ಕೆ.ಜಿ., ಬಿಪಿಎಲ್‌ ಕಾರ್ಡ್‌ನ ಪ್ರತೀ ಸದಸ್ಯರಿಗೆ 5 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ಕೇಂದ್ರ ಸರಕಾರದಿಂದ ಅಂತ್ಯೋದಯ ಹಾಗೂ ಬಿಪಿಎಲ್‌ ಕಾರ್ಡ್‌ನ ಪ್ರತೀ ಸದಸ್ಯರಿಗೆ 5 ಕೆ.ಜಿ. ನೀಡಲಾಗುತ್ತದೆ. ಅಕ್ಕಿ, ಸೀಮೆಎಣ್ಣೆ ಹಾಗೂ ಇತರ ಆಹಾರ ಸಾಮಗ್ರಿ (ಲಭ್ಯತೆ ಆಧಾರದಲ್ಲಿ) ನೀಡಲಾಗುತ್ತದೆ. ಜಿಲ್ಲೆಯಲ್ಲಿ ಬಹುತೇಕರು ಈ ಅಕ್ಕಿಯನ್ನು ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಬಳಸುತ್ತಿಲ್ಲ. ಬೆಳಗ್ಗಿನ ತಿಂಡಿಗೆ ಬಳಸುತ್ತಿದ್ದಾರೆ. ಉಳಿದ ಅಕ್ಕಿಯನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಕಬ್ಬಡಿ ಕ್ರೀಡಾಪಟುಗಳಿಗೆ ಶೌಚಾಲಯದಲ್ಲಿ ಊಟದ ವ್ಯವಸ್ಥೆ : ವಿಡಿಯೋ ವೈರಲ್

Advertisement

6 ತಿಂಗಳು ಕಾರ್ಡ್‌ ಅಮಾನತು: ಪಡಿತರ ವ್ಯವಸ್ಥೆಯಡಿ ಪಡೆದ ಅಕ್ಕಿಯನ್ನು ಕಾಳಸಂತೆ ಅಥವಾ ಇನ್ನಾವುದೇ ವಿಧಾನದಲ್ಲಿ ಬೇರೆಯವರೆಗೆ ಮಾರಾಟ ಮಾಡಿದಲ್ಲಿ ಅಥವಾ ದುರುಪಯೋಗ ಪಡಿಸಿಕೊಂಡಿದ್ದು ಕಂಡುಬಂದರೆ ಅಂತಹ ಕುಟುಂಬದ ಪಡಿತರ ಚೀಟಿಯನ್ನು 6 ತಿಂಗಳು ಅಮಾನತು ಮಾಡಲು ಕಾನೂನಿನಲ್ಲಿ ಅವಕಾಶವಿದೆ.

ಅಕ್ರಮ ಎಸಗಿದವರ ವಿರುದ್ಧ ಪೊಲೀಸ್‌ ಪ್ರಕರಣ ದಾಖಲಾಗುವ ಜತೆಗೆ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲೂ ಪ್ರಕರಣ ದಾಖಲಾಗುತ್ತದೆ. ವಶಪಡಿಸಿಕೊಂಡ ಅಕ್ಕಿಯನ್ನು ಸಾರ್ವಜನಿಕರವಾಗಿ ಹರಾಜು ಹಾಕುವ ಅಥವಾ ಪಡಿತರ ವ್ಯವಸ್ಥೆಯಲ್ಲಿ ಎಪಿಎಲ್‌ ಕಾರ್ಡ್‌ದಾರರಿಗೆ ಸರಕಾರದ ನಿರ್ದಿಷ್ಟ ಬೆಲೆಯಲ್ಲಿ ವಿತರಿಸುವ ಪ್ರಕ್ರಿಯೆಯಾಗುತ್ತದೆ. ಇದರಿಂದ ಬಂದ ಹಣವನ್ನು ನೇರವಾಗಿ ಸರಕಾರದ ಖಾತೆಗೆ ಜಮೆ ಮಾಡ ಲಾಗುತ್ತದೆ.

– ಮೊಹಮ್ಮದ್‌ ಇಸಾಕ್‌, ಉಪ ನಿರ್ದೇಶಕ, ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರ ಇಲಾಖೆ ಉಡುಪಿ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next