Advertisement

ಅನ್ನ ಭಾಗ್ಯ ಯೋಜನೆ ಅಕ್ಕಿಗೆ ಕಾಳಧನಿಕರಿಂದ ಕನ್ನ

04:39 PM Oct 14, 2020 | Suhan S |

ಬೀದರ: ಬಡ ಜನರ ಹಸಿವು ನೀಗಿಸುವುದಕ್ಕಾಗಿ ಜಾರಿಗೆ ತಂದ ಅನ್ನ ಭಾಗ್ಯ ಯೋಜನೆಯಡಿ ಅಕ್ಕಿಗೆ ಗಡಿ ಜಿಲ್ಲೆಯಲ್ಲಿ ಕನ್ನ ಹಾಕುವುದು ಎಗ್ಗಿಲ್ಲದೇಸಾಗಿದ್ದು, ಈ ದಂಧೆಯನ್ನು ಮಧ್ಯವರ್ತಿಗಳು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರು ಪೋಷಿಸುತ್ತಿದ್ದಾರೆ. ಇದರಿಂದಾಗಿ ಬಡವರ ತುತ್ತಿನ ಚೀಲ ತುಂಬಬೇಕಿದ್ದ ಪಡಿತರ ಅಕ್ಕಿ ಕಾಳಸಂತೆಯಲ್ಲಿ ದುಬಾರಿ ಹಣಕ್ಕೆ ಬಿಕರಿಯಾಗುತ್ತಿದೆ.

Advertisement

ಆಹಾರ ಮತ್ತು ನಾಗರಿಕ ಸರಬರಾಜುಇಲಾಖೆ ಅಂಕಿ-ಅಂಶಗಳೇ ಈ ಅಕ್ರಮ ದಂಧೆಗೆ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ ಕೇವಲ ಎರಡೂವರೆವರ್ಷಗಳಲ್ಲಿ 55 ಪಡಿತರ ಅಕ್ಕಿ ಸಾಗಾಟ-ಮಾರಾಟತಡೆದು ಎಫ್‌ಐಆರ್‌ ದಾಖಲಿಸಿದ್ದು, ಬರೋಬ್ಬರಿ2.16 ಕೋಟಿ ರೂ.ಗಳ 7 ಸಾವಿರಕ್ಕೂ ಅಧಿಕ ಕ್ವಿಂಟಲ್‌ ಅಕ್ಕಿ ಜಪ್ತಿ ಮಾಡಿಕೊಂಡಿದೆ. ಇನ್ನೂ ಇಲಾಖೆ ಕಣ್ತಪ್ಪಿಸಿ ಕೋಟ್ಯಂತರ ಮೌಲ್ಯದ ಅಕ್ಕಿಸಾಗಾಟ ನಡೆದಿದೆ. ಬೀದರ ಎರಡು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಹಿನ್ನೆಲೆ ಅಕ್ರಮಚಟುವಟಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ಅಧಿಕಾರಿಗಳು ಒಂದೆರಡು ದಾಳಿ ನಡೆಸಿ ಕೈ ತೊಳೆದುಕೊಳ್ಳುತ್ತಿದ್ದಾರೆ.

ಹೋಟೆಲ್‌ಗ‌ಳಿಗೂ ರವಾನೆ: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದ ಜನಸ್ನೇಹಿಅನ್ನ ಭಾಗ್ಯ ಯೋಜನೆ ಬಡವರ ಹಸಿವು ನೀಗಿಸುವುದಕ್ಕಿಂತ ಹೆಚ್ಚಾಗಿ ಕೆಲವು ಕಾಳಧನಿಕರಿಗೆ “ಭಾಗ್ಯ’ ತಂದಂತಾಗಿದೆ. ಯೋಜನೆಯಡಿಸರ್ಕಾರ ಉಚಿತವಾಗಿ ವಿತರಿಸುವ 10 ಕೆಜಿ ಅಕ್ಕಿ ಮಿಲ್‌ಗ‌ಳ ಪಾಲಾಗುತ್ತಿವೆ. ನಂತರ ಇದೇ ಅಕ್ಕಿ ಪಾಲಿಶ್‌ ರೂಪ ಪಡೆದುಕೊಂಡು ಹೊಸ ಬ್ರ್ಯಾಂಡ್‌ ನೊಂದಿಗೆ ಮಾರುಕಟ್ಟೆಗೆ ಬರುತ್ತಿದ್ದು, ಅಲ್ಲಿಂದ ಗ್ರಾಹಕರು ಖರೀದಿಸುತ್ತಿದ್ದಾರೆ. ಇನ್ನೊಂದೆಡೆಇದೇ ಅಕ್ಕಿ ಮಂಡಕ್ಕಿ ಭಟ್ಟಿ ಮತ್ತು ಹೋಟೆಲ್‌ ಗಳಿಗೂ ರವಾನೆಯಾಗುತ್ತಿವೆ.

ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಅಕ್ಕಿ ಪಡೆಯುವ ಫಲಾನುಭವಿಗಳು ದಿನಸಿ ಅಂಗಡಿ ಮತ್ತು ಮಧ್ಯವರ್ತಿಗಳಿಗೆ ಕೆಜಿಗೆ 10ರಿಂದ 12 ರೂ.ವರೆಗೆ ಮಾರಾಟ ಮಾಡುತ್ತಿದ್ದಾರೆ.ದಂಧೆಕೋರರು ಇದೇ ಅಕ್ಕಿಯನ್ನು ಕೆಲವೊಮ್ಮೆ ಸ್ಥಳೀಯ ಮಿಲ್‌ಗ‌ಳಿಗೆ ಇಲ್ಲವೇ ಅನ್ಯ ರಾಜ್ಯಗಳಿಗೆ ಕಳುಹಿಸಿ 20 ರಿಂದ 25ರೂ. ವರೆಗೆ ಮಾರುತ್ತಾರೆ. ಮಿಲ್‌ಗ‌ಳಲ್ಲಿ ಪಾಲಿಶ್‌ ಆಗುವ ಈ ಅಕ್ಕಿ 35ರಿಂದ 40 ರೂ. ವರೆಗೂ ಜನರ ಬಳಿಗೆ ಬರುತ್ತಿದೆ.

ಪಡಿತರ ಆಹಾರ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಮತ್ತು ಖರೀದಿಸುವುದು ಕಾನೂನು ಬಾಹಿರವಾಗಿದ್ದರೂ ಈ ಚಟುವಟಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಅಧಿಕಾರಿಗಳ ಸಹಕಾರ ಇಲ್ಲದೇ ಈ ದಂಧೆ ನಡೆಯಲು ಸಾಧ್ಯವೇ ಇಲ್ಲ. ಮೇಲ್ನೋಟಕ್ಕೆ ದಾಳಿ ನಡೆಸಿ ಜಾಣ ಮೌನರಂತೆ ವರ್ತಿಸುತ್ತಿದ್ದಾರೆಂಬ ಆರೋಪಗಳಿದ್ದು, ಸರ್ಕಾರ ಕಠಿಣ ಕಾಯ್ದೆ ಮೂಲಕ ಈ ದಂಧೆ ನಿಯಂತ್ರಣಕ್ಕೆ ತರಬೇಕಿದೆ.

Advertisement

2 ವರ್ಷದಲ್ಲಿ ವಶಪಡಿಸಿಕೊಂಡಿದ್ದೆಷ್ಟು? :  ಬೀದರ ಜಿಲ್ಲೆಯಲ್ಲಿ 2018ರ ಮಾರ್ಚ್‌ನಿಂದ 2019ರ ಮಾರ್ಚ್‌ವರೆಗೆ ವಾಹನ ಮತ್ತು ಮನೆಗಳ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜಿ ಇಲಾಖೆ ದಾಳಿ ನಡೆಸಿ ಪಡಿತರ ಅಕ್ಕಿ ಸಾಗಾಟದ 13 ಎಫ್‌ಐಆರ್‌ ದಾಖಲಿಸಿ 69.23 ಲಕ್ಷ ರೂ. ಮೌಲ್ಯದ 2423 ಕ್ವಿಂಟಲ್‌ ಅಕ್ಕಿ ಜಪ್ತಿ ಮಾಡಿಕೊಂಡಿದೆ. 2019ರ ಏಪ್ರಿಲ್‌ನಿಂದ 2020ರ ಮಾರ್ಚ್‌ವರೆಗೆ 31 ಗುನ್ನೆ ದಾಖಲಿಸಿ 1.23 ಕೋಟಿ ರೂ. ಮೌಲ್ಯದ 3774 ಕ್ವಿಂಟಲ್‌ ಮತ್ತು 40-50 ಕೆಜಿ ತೂಕದ 430 ಚೀಲ ಅಕ್ಕಿ ಹಾಗೂಏಪ್ರಿಲ್‌ನಿಂದ ಆಗಸ್ಟ್‌ವರೆಗೆ 23.20 ಲಕ್ಷ ರೂ. ಮೌಲ್ಯದ 1368 ಕ್ವಿಂಟಲ್‌ ಅಕ್ಕಿ ವಶಕ್ಕೆ ಪಡೆಯಲಾಗಿದೆ. 11 ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಬೀದರ ಗಡಿ ಜಿಲ್ಲೆಯಾಗಿರುವ ಕಾರಣ ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣಗಳು ಪತ್ತೆಯಾಗುತ್ತಿವೆ. ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮತ್ತು ಖರೀದಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತಿದೆ. ಇದಕ್ಕಾಗಿ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಎರಡು ತಂಡ ಮಾಡಲಾಗಿದೆ. ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. – ಬಾಬು ರೆಡ್ಡಿ, ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬೀದರ

 

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next