Advertisement

ಹೊರರಾಜ್ಯದ ದೋಣಿಗಳಿಂದ ಅಕ್ರಮ ಮೀನುಗಾರಿಕೆ

11:41 PM Oct 12, 2019 | Sriram |

ಗಂಗೊಳ್ಳಿ: ಹೊರರಾಜ್ಯದ ಗಿಲ್‌ನೆಟ್‌ ದೋಣಿಗಳ ಮೀನುಗಾರರು ಗಂಗೊಳ್ಳಿ ಬಂದರು ಪ್ರದೇಶ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸಿ ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಬರುತ್ತಿವೆ ಎನ್ನಲಾಗಿದ್ದು, ಇತರ ರಾಜ್ಯಗಳ ಮೀನುಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ.

Advertisement

ಕೇರಳ ರಾಜ್ಯದ ಅನೇಕ ಗಿಲ್‌ನೆಟ್‌ ದೋಣಿಗಳು ನಿಯಮ ಮೀರಿ ಗಂಗೊಳ್ಳಿ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿವೆ. ಮೀನುಗಾರಿಕೆ ಮಾಡುತ್ತಲೆ ಅರಿವಿಲ್ಲದೆ ಗಡಿ ದಾಟಿದರೆ ಅಥವಾ ದುರಸ್ತಿ ಉದ್ದೇಶ ದಿಂದ ಇತ್ತ ಕಡೆ ಬರುವುದು ನಡೆಯುತ್ತಿರುತ್ತದೆ. ಆದರೆ ಇತ್ತೀಚೆಗೆ ಕೇರಳದ ಗಿಲ್‌ನೆಟ್‌ ದೋಣಿಗಳು ನಮ್ಮ ಬಂದರಿನಲ್ಲಿ ಮೀನು ಇಳಿಸು ತ್ತಿರುವುದು ಸಹ ನಡೆಯುತ್ತಿದ್ದು ಸಂಬಂಧಿತ ಇಲಾಖೆಗಳು ಪರಿಶೀಲನೆ ನಡೆಸುವಂತೆ ಮೀನುಗಾರರು ಒತ್ತಾಯಿಸಿದ್ದಾರೆ.

ಅನುಮತಿಯಿಲ್ಲದೆ ಪ್ರವೇಶವಿಲ್ಲ
ಹೊರರಾಜ್ಯದ ಮೀನುಗಾರಿಕಾ ದೋಣಿಗಳು ರಾಜ್ಯದ ಮೀನುಗಾರಿಕೆ ಬಂದರು ಪ್ರವೇಶಿಸಬೇಕಾದರೆ ಕೆಲವೊಂದು ನಿಬಂಧನೆಗೆ ಒಳಪಡಬೇಕಾಗಿದೆ. ರಾಜ್ಯದ ಕರಾವಳಿ ಪ್ರದೇಶದಲ್ಲಿ ಮೀನುಗಾರಿಕೆ ಮಾಡುವಂತಿಲ್ಲ. ಅನುಮತಿ ಪಡೆಯದೆ ಬಂದರಿನಲ್ಲಿ ಮೀನು ಇಳಿಸುವಂತಿಲ್ಲ. ಏನಾದರೂ ಅನಾಹುತ ಸಂಭವಿಸಿದಾಗ ಅಥವಾ ಇನ್ನು ಯಾವುದಾದರೂ ತುರ್ತು ಸಂದರ್ಭಗಳಲ್ಲಿ ಮಾತ್ರ ಪ್ರವೇಶಿಸಲು ಅವಕಾಶ ಇರುತ್ತದೆ. ಜಿಲ್ಲೆಯ ಮೀನುಗಾರಿಕೆ ಉಪನಿರ್ದೇಶಕರ ಹಾಗೂ ಕರಾವಳಿ ಕಾವಲು ಪಡೆಯ ಅನುಮತಿ ಪಡೆಯಬೇಕು. ಅನುಮತಿ ಪಡೆದು ಪ್ರವೇಶಿಸುವ ದೋಣಿಗಳು ಮೀನುಗಾರಿಕೆ ಚಟುವಟಿಕೆ ಮತ್ತು ಮೀನು ಮಾರಾಟ ಪ್ರಕ್ರಿಯೆಯಲ್ಲಿ ತೊಡಗುವಂತಿಲ್ಲ. ಆದರೆ ಗಂಗೊಳ್ಳಿ ವ್ಯಾಪ್ತಿಯಲ್ಲಿ ಕೇರಳ ವ್ಯಾಪ್ತಿಯ ಗಿಲ್‌ನೆಟ್‌ ದೋಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಾರಿಕೆಯಲ್ಲಿ ಪಾಲ್ಗೊಂಡಿರುವುದಲ್ಲದೆ ಮೀನು ಮಾರಾಟವನ್ನು ಸಹ ನಡೆಸುತ್ತಿವೆ ಎನ್ನುವುದು ಮೀನುಗಾರರ ಆರೋಪವಾಗಿದೆ.

ಯಾರು ಹೊಣೆ?
ಅನ್ಯರಾಜ್ಯದ ದೋಣಿಗಳು ನಮ್ಮ ಬಂದರು ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವುದು ಬೆಳಕಿಗೆ ಬಂದಿದೆ. ಅನುಮತಿ ಪಡೆಯದೆ ನಮ್ಮಲ್ಲಿ ಮೀನುಗಾರಿಕೆ ನಡೆಸುತ್ತಿರುವುದು ಕಾನೂನು ಬಾಹಿರ. ಏಜೆಂಟರ ಮೂಲಕ ಕೆಲವು ದೋಣಿಗಳು ಮೀನು ಇಳಿಸುವಿಕೆ ಸಹ ಮಾಡುತ್ತಿವೆ. ನಮ್ಮ ಭಾಗದಲ್ಲಿ ಅನ್ಯರಾಜ್ಯದ ಮೀನುಗಾರಿಕೆ ದೋಣಿಗಳು ಎಷ್ಟಿವೆ. ಅವುಗಳು ನಿಯಮ ಪಾಲಿಸುತ್ತಿವೆಯೇ ಎಂಬುದರ ಬಗ್ಗೆ ಸಂಬಂಧಿಸಿದ ಇಲಾಖೆ ಗಮನಹರಿಸಬೇಕು. ಮೀನುಗಾರಿಕೆ ಹೆಸರಿನಲ್ಲಿ ಇನ್ನೇನಾದರೂ ಘಟನೆ ಸಂಭವಿಸಿದರೆ ಅದಕ್ಕೆ ಹೊಣೆಯಾಗುವವರು ಯಾರು ಎಂಬುದು ಆಲೋಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಯವರು ತುರ್ತು ತಪಾಸಣೆ ನಡೆಸಬೇಕಾಗಿದೆ ಎಂದು ಸ್ಥಳೀಯ ಮೀನುಗಾರರು ಸಂಬಂಧಪಟ್ಟ ಇಲಾಖಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ಗಮನವಹಿಸಲಿ
ಕೇರಳ ರಾಜ್ಯದ ಅನೇಕ ಗಿಲ್‌ನೆಟ್‌ ದೋಣಿಗಳು ನಿಯಮ ಮೀರಿ ಗಂಗೊಳ್ಳಿ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿದ್ದು, ದೋಣಿ ದುರಸ್ತಿ ಮತ್ತಿತರ ಉದ್ದೇಶದಿಂದ ಗಂಗೊಳ್ಳಿ ಮೀನುಗಾರಿಕಾ ಬಂದರು ಕಡೆ ಬರುವುದು ನಡೆಯುತ್ತಿರುತ್ತದೆ. ಆದರೆ ಇತ್ತೀಚೆಗೆ ಕೇರಳದ ಗಿಲ್‌ನೆಟ್‌ ದೋಣಿಗಳು ನಮ್ಮ ಬಂದರಿನಲ್ಲಿ ಮೀನು ಇಳಿಸುತ್ತಿರುವುದು ಸಹ ನಡೆಯುತ್ತಿದ್ದು ಸಂಬಂಧಿತ ಇಲಾಖೆಗಳು ಪರಿಶೀಲನೆ ನಡೆಸಬೇಕು.
ಎಚ್‌.ಮಂಜು ಬಿಲ್ಲವ, ಅಧ್ಯಕ್ಷರು ಗಂಗೊಳ್ಳಿ ವಲಯ ನಾಡಾದೋಣಿ ಮೀನುಗಾರರ ಸಂಘ

Advertisement

ಶೀಘ್ರ ಕಾರ್ಯಾಚರಣೆ
ಅನ್ಯರಾಜ್ಯದ ಗಿಲ್‌ನೆಟ್‌ ದೋಣಿಗಳು ಕಾರ್ಯಾಚರಿಸುತ್ತಿವೆ ಎಂಬ ಬಗ್ಗೆ ಮಾಹಿತಿ ಬಂದಿದೆ. ಅನುಮತಿಯಿಲ್ಲದೆ ಅಕ್ರಮ ಪ್ರವೇಶಿಸಿದ ದೋಣಿಗಳಿಗೆ ಕರ್ನಾಟಕ ಕರಾವಳಿ ಮೀನುಗಾರಿಕೆ ಅಧಿನಿಯಮ ಪ್ರಕಾರ ದಂಡ ವಿಧಿಸಲು ಅವಕಾಶವಿದೆ. ಈಗಾಗಲೇ ಅನ್ಯರಾಜ್ಯದ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದ್ದು, ಶೀಘ್ರ ಕಾರ್ಯಾಚರಣೆ ನಡೆಸಲಾಗುವುದು. ಅನ್ಯರಾಜ್ಯದ ದೋಣಿಗಳಿಂದ ಅಶಾಂತಿ ಉಂಟಾದರೆ ಕರಾವಳಿ ಕಾವಲು ಭದ್ರತಾ ಪಡೆಯ ನೆರವು ಪಡೆದು ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.
ದಿವಾಕರ ಖಾರ್ವಿ,
ಮೀನುಗಾರಿಕೆ ಇಲಾಖೆ ತಪಾಸಣಾಧಿಕಾರಿ

ಅಧಿಕೃತ ಮಾಹಿತಿಯಿಲ್ಲ
ಈ ಬಗ್ಗೆ ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಬಂದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ತುರ್ತು ಸಂದರ್ಭ ಹೊರತುಪಡಿಸಿ ಅನುಮತಿ ಪಡೆಯದೆ ಅನ್ಯರಾಜ್ಯದ ದೋಣಿಗಳು ಪ್ರವೇಶಿಸುವಂತಿಲ್ಲ. ಅನ್ಯರಾಜ್ಯದ ದೋಣಿಗಳು ಗಂಗೊಳ್ಳಿ ವ್ಯಾಪ್ತಿಯಲ್ಲಿ ಮೀನುಗಾರಿಕೆ ಚಟುವಟಿಕೆ ನಡೆಸುತ್ತಿದ್ದರೆ ಸ್ಥಳೀಯ ಮೀನುಗಾರರು ಮಾಹಿತಿ ನೀಡಬೇಕು.
– ಸಂದೀಪ ಜಿ.ಎಸ್‌., ಇನ್‌ಸ್ಪೆಕ್ಟರ್‌,
ಕರಾವಳಿ ಕಾವಲು ಪಡೆ, ಗಂಗೊಳ್ಳಿ ಠಾಣೆ

Advertisement

Udayavani is now on Telegram. Click here to join our channel and stay updated with the latest news.

Next