Advertisement

ಗೋಮಾಂಸ ಮಾಫಿಯಾ ಹತ್ತಿಕ್ಕದಿದ್ದರೆ ಜಿಲ್ಲಾದ್ಯಂತ ಪ್ರತಿಭಟನೆ: ವಿಹಿಂಪ,ಹಿಂಜಾವೇ ಎಚ್ಚರಿಕೆ  

09:30 PM Jul 25, 2024 | Team Udayavani |

ಮಂಗಳೂರು: ಜಿಲ್ಲೆಯಾದ್ಯಂತ ಕಾನೂನು ಮೀರಿ ಗೋವುಗಳ ಅಕ್ರಮ ಸಾಗಾಟ, ಗೋಹತ್ಯೆ ನಡೆಯುತ್ತಿದ್ದು, ಅದನ್ನು ಮಟ್ಟಹಾಕಲು ಒಂದು ತಿಂಗಳ ಕಾಲಾವಕಾಶ ನೀಡುತ್ತೇವೆ, ಒಂದು ವೇಳೆ ಸಾಧ್ಯವಾಗದಿದ್ದರೆ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಿಶ್ವ ಹಿಂದೂ ಪರಿಷತ್‌ ಹಾಗೂ ಹಿಂದೂ ಜಾಗರಣ ವೇದಿಕೆ ಮುಖಂಡರು ತಿಳಿಸಿದ್ದಾರೆ.

Advertisement

ಈ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ ಸುರತ್ಕಲ್‌ ಪ್ರಖಂಡ ಅಧ್ಯಕ್ಷ ಭಾಸ್ಕರ್‌ ರಾವ್‌ ಬಾಳ ಅವರು, ಗೋಹತ್ಯೆ ನಡೆಸುವ ದೊಡ್ಡ ಗೋಮಾಂಸ ಮಾಫಿಯಾ ಕಾರ್ಯಾಚರಿಸುತ್ತಿದ್ದು, ಅದನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಕೆಲದಿನಗಳ ಹಿಂದೆ ಸುರತ್ಕಲ್‌ ಕೃಷ್ಣಾಪುರ 8ನೇ ಬ್ಲಾಕ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕಸಾಯಿ ಖಾನೆ ಕುರಿತು ಬಜರಂಗದಳ ಕಾರ್ಯಕರ್ತರು ಕೊಟ್ಟ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದಾಗ ನೂರಾರು ಕೆಜಿ ಗೋಮಾಂಸ, 19 ಗೋವುಗಳನ್ನು ವಶಪಡಿಸಲಾಗಿತ್ತು. ಆದರೆ ಅಪರಾಧಿಗಳನ್ನು ಬಂಧಿಸುವ ಮತ್ತು ಮುಂದಿನ ಕ್ರಮ ಜರಗಿಸದ ಕಾರಣ ಕಸಾಯಿಖಾನೆಯವರಿಗೆ ಯಾವುದೇ ಹೆದರಿಕೆಯೂ ಇಲ್ಲ. ಅದಕ್ಕಾಗಿ ಗುರುವಾರ ಸುರತ್ಕಲ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರೂ ಪೊಲೀಸರು ಶೀಘ್ರ ಕಸಾಯಿಖಾನೆಗಳನ್ನು ಮುಚ್ಚಿಸುವ ಭರವಸೆ ನೀಡಿರುವ ಕಾರಣ ಅದನ್ನು ಕೈ ಬಿಡಲಾಗಿದೆ ಎಂದರು.

ವಶಪಡಿಸಿರುವ ಗೋವುಗಳನ್ನು ಎಲ್ಲಿಂದ ಕದ್ದು ತಂದಿರುವುದು ಎನ್ನುವುದನ್ನು ಪತ್ತೆ ಮಾಡಬೇಕು, ಗೋಮಾಂಸ ಯಾರಿಗೆ ಮಾರಾಟಕ್ಕೆ ಕೊಂಡೊಯ್ಯಲಾಗುತ್ತಿತ್ತು ಎನ್ನುವುದನ್ನು ಗುರುತಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು, ಗೋವುಗಳನ್ನು ತಂದ ವಾಹನ ವಶಪಡಿಸಬೇಕು, ಕಸಾಯಿ ಖಾನೆಗಳ ಕಟ್ಟಡಗಳನ್ನು ಮುಟ್ಟುಗೋಲು ಹಾಕಬೇಕು ಎಂದು ಒತ್ತಾಯಿಸಿದರು.

ಹಲವೆಡೆ ಅಕ್ರಮ ಕಸಾಯಿಖಾನೆ
ಜಿಲ್ಲೆಯ ಸುರತ್ಕಲ್‌, ಜೋಕಟ್ಟೆ, ತಣ್ಣೀರುಬಾವಿ ಸಹಿತ ಹಲವು ಕಡೆ ಅಕ್ರಮ ಕಸಾಯಿಖಾನೆಗಳಿದ್ದು ಅವುಗಳ ಚಲನವಲನ ಮೇಲೆ ನಿಗಾ ಇರಿಸಿ ಅಲ್ಲಿಗೆ ಗೋವುಗಳನ್ನು ತರುವ ಹಾಗೂ ಮಾಂಸ ಕೊಂಡು ಹೋಗುವ ಜಾಲವನ್ನು ಭೇದಿಸಬೇಕು ಎಂದು ಒತ್ತಾಯಿಸಿದರು.

Advertisement

ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಹಲವಾರು ಕಡೆ ಮಾಂಸದ ಅಂಗಡಿಯ ಪರವಾನಿಗೆ ಪಡೆದುಕೊಂಡು ದನದ ಮಾಂಸ ಮಾರಾಟ ಮಾಡಲಾಗುತ್ತಿದೆ, ಇದರ ಮೇಲೆ ನಿಗಾ ಇರಿಸಬೇಕು, ಅಲ್ಲದೆ ಕೆಲವು ಹೊಟೇಲ್‌ಗ‌ಳಲ್ಲೂ ಬೀಫ್‌ ಪದಾರ್ಥ ಸಿಗುತ್ತಿದ್ದು ಇದು ಗೋಮಾಂಸದಿಂದಲೇ ಮಾಡಲಾಗುತ್ತಿರುವ ಮಾಹಿತಿ ಇದೆ ಎಂದೂ ತಿಳಿಸಿದರು.

ವಿಹಿಂಪ ಸುರತ್ಕಲ್‌ ಪ್ರಖಂಡ ಕಾರ್ಯದರ್ಶಿ ಜಯರಾಮ ಆಚಾರ್ಯ, ಬಜರಂಗದಳ ಜಿಲ್ಲಾ ಸಹಸಂಯೋಜಕ್‌ ಪ್ರೀತಮ್‌ ಕಾಟಿಪಳ್ಳ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಬಾಲಕೃಷ್ಣ ಮುಂಚೂರು, ಜಿಲ್ಲಾ ಸಮಿತಿ ಸದಸ್ಯ ಪುಷ್ಪರಾಜ್‌ ಕುಳಾಯಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next