Advertisement

ಕಾಪಿಫೈಟ್‌ ಹಕ್ಕು ಹಾರುತಿದೆ ನೋಡಿದಿರಾ?

12:01 PM Mar 25, 2017 | |

ಚಿತ್ರಗೀತೆಗಳ ಹಕ್ಕುಗಳ ಹೋರಾಟದ ಇತಿಹಾಸಕೆ ಅಮೆರಿಕಾದಲ್ಲಿನ ಎಸ್‌.ಪಿ.ಬಿ 50 ಕಾರ್ಯಕ್ರಮದಲ್ಲಿ ತಮ್ಮ ಹಾಡುಗಳನ್ನು ಪೂರ್ವಾನುಮತಿ ಪಡೆಯದಿರುವುದರಿಂದ ಹಾಡುವಂತಿಲ್ಲ ಎಂದು ಇಳಯರಾಜಾ ಕಳುಹಿಸಿರುವ ಲೀಗಲ್‌ ನೋಟಿಸ್‌ ಹೊಸ ತಿರುವನ್ನು ನೀಡಿದೆ. ಚಿತ್ರಗೀತೆಗಳು ವಾಣಿಜ್ಯಿಕವಾಗಿ ಬಳಕೆಯಾದಾಗ ಅದರ ಮೂಲಕತೃìಗಳಿಗೆ ಪಾಲು ಸಲ್ಲಬೇಕು ಎನ್ನುವುದು ಹಲವು ದಶಕಗಳ ಹೋರಾಟ. ಇದನ್ನು 2012ರ ಕಾಪಿರೈಟ್‌ ಕಾಯಿದೆ ಕೂಡ ಒಪ್ಪಿಕೊಂಡಿದೆ. ಆದರೆ ಇಲ್ಲಿರುವ ಪ್ರಶ್ನೆ ಇಳಯರಾಜಾ ಹೀಗೆ ನೇರವಾಗಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಬಹುದೆ? ಎನ್ನುವುದು.  ಅವರ ಕಾಪಿರೈಟ್‌ ಸಲಹೆಗಾರ ಇ. ಪ್ರದೀಪ್‌ ಪ್ರಕಾರ “ಹೌದು. ಏಕೆಂದರೆ ಇಳಯರಾಜಾ 2015ರಲ್ಲಿಯೇ ಹೀಗೆ ತಮ್ಮ ಹಕ್ಕುಗಳನ್ನು ಕಾನೂನು ಬದ್ದವಾಗಿ ಪ್ರತಿಪಾದಿಸಿದ್ದಾರೆ. ಅವರ ಹಾಡುಗಳ ಮೂಲಕ ಗಾಯಕರು ಸಾಕಷ್ಟು ಹಣ ಸಂಪಾದಿಸುತ್ತಿರುವಾಗ ಪಾಲು ಕೇಳುವುದರಲ್ಲಿ ತಪ್ಪಿಲ್ಲ ‘ಎನ್ನುತ್ತಾರೆ ಅವರು. ಇದಕ್ಕೆ ಪ್ರತಿಯಾಗಿ ಈ ವಾದವನ್ನು ಫೇಸ್‌ ಬುಕ್‌ ಮೂಲಕ ಬೆಳಕಿಗೆ ತಂದ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಇದನ್ನು ಕಾನೂನಿನ ನೆಲೆಯಲ್ಲಿ ಬೆಳಸದೆ ವೈಯಕ್ತಿಕ ನೆಲೆಯಲ್ಲಿಯೇ ಮುಗಿಸಲು ಬಯಸಿದ್ದಾರೆ.

Advertisement

2012ರ ಕಾಪಿರೈಟ್‌ ಕಾಯಿದೆಯಲ್ಲಿನ ತೊಡಕುಗಳು ಏನು?
ಚಿತ್ರಗೀತೆಗಳ ಹಕ್ಕುಗಳ ಕುರಿತ ಗೊಂದಲ ತಪ್ಪಿಸುವ ಸಲುವಾಗಿಯೇ 2012ರ ಕಾಪಿರೈಟ್‌ ಕಾಯಿದೆ ಬಂದಿತು. 1957ರ ಕಾಪಿರೈಟ್‌ ಕಾಯಿದೆ ಪುಸ್ತಕಕ್ಕೆ ಸಂಬಂಧಿಸಿದ್ದಾಗಿದ್ದು ಇಲ್ಲಿನ ಸೆಕ್ಷನ್‌ 51(ಜೆ) ಪ್ರಕಾರ ಬರಹಗಾರ ಮಾತ್ರ ಹಕ್ಕುದಾರನಾಗಿರುತ್ತಿದ್ದ. ಆದರೆ 2012ರ  ಕಾಯಿದೆ ಚಿತ್ರಗೀತೆಗಳಿಗೆ ಮೂವರು ಹಕ್ಕುದಾರರನ್ನು ಮಾಡಿತು. ಸೆಕ್ಷನ್‌ 38ಎ ಪ್ರಕಾರ ಗೀತ ರಚನೆಕಾರ, ಸಂಗೀತ ನಿರ್ದೇಶಕ ಮತ್ತು ನಿರ್ಮಾಪಕ ಅಥವಾ ಕೆಸೆಟ್‌ ತಯಾರಿಸಿದ ಕಂಪನಿ ಹೀಗೆ ಮೂವರಲ್ಲಿ ಸಮಾನವಾಗಿ ಗೌರವಧನ ಹಂಚಿ ಹೋಗ ಬೇಕಿತ್ತು. ಸಮಸ್ಯೆ ಬಂದಿದ್ದು ಈ ಗೌರವಧನವನ್ನು ಯಾರು ಸಂಗ್ರಹಿಸ ಬೇಕು ಎನ್ನುವ ವಿಷಯದಲ್ಲಿ. ಅದಕ್ಕೆ ಸೆಕ್ಷನ್‌ 33 ಸರ್ಕಾರದ ಅನುಮತಿಯನ್ನು ಪಡೆದ ಇಲ್ಲವೆ ಸರ್ಕಾರವೇ ರಚಿಸಿದ ಕಾಪಿರೈಟ್‌ ಸೊಸೈಟಿ ಎಂದು ಉತ್ತರಿಸಿದೆ. ಇದು ಐ.ಪಿ.ಆರ್‌.ಎಸ್‌. ಆಗಬಹುದೆ? ಎನ್ನುವ ಪ್ರಶ್ನೆ ಸಹಜವಾಗಿಯೇ ಬಂದಿದೆ. ಆದರೆ 2015ರ ಅಲಹಾಬಾದ್‌ ಹೈಕೋರ್ಟಿನ ತೀರ್ಪು ಇದನ್ನು ತಳ್ಳಿ ಹಾಕಿದೆ. ಐ.ಪಿ.ಆರ್‌.ಎಸ್‌ಗೆ ಮನ್ನಣೆ ಇರುವುದು 1957ರ ಕಾಪಿರೈಟ್‌ ಕಾಯಿದೆಯ ಪ್ರಕಾರ. ಹೊಸ ಕಾಯಿದೆಯನ್ವಯ ಸರ್ಕಾರ ಮನ್ನಣೆ ನೀಡಿಲ್ಲ. 

ಒಂದೋ ಮನ್ನಣೆ ನೀಡಬೇಕು ಇಲ್ಲವೆತಾನೇ ಹೊಸ ಕಾಪಿರೈಟ್‌ ಬೋರ್ಡ್‌ ನೇಮಿಸ ಬೇಕು ಎಂದು ನ್ಯಾಯಾಲಯ ಹೇಳಿದೆ. ಜಾವೇದ್‌ಆಕ್ತರ್‌ಇರುವವರೆಗೂ ಈ ಹಕ್ಕುಗಳ ಹೋರಾಟದ ಧ್ವನಿ ಸಂಸತ್ತಿನಲ್ಲಿ ಕೇಳುತ್ತಿತ್ತು. ಈಗ ಅಂತಹ ಸಂಭವವೇ ಕಾಣುತ್ತಿಲ್ಲ. ಕೇಂದ್ರ ಸರ್ಕಾರ ಕಾಪಿರೈಟ್‌ ಬೋರ್ಡ್‌ ಸ್ಥಾಪಿಸುವ ಲಕ್ಷಣಗಳೂ ಕಾಣುತ್ತಿಲ್ಲ.

ಈ ಗೊಂದಲದ ಹಿನ್ನೆಲೆಯಲ್ಲಿ ಬಾಲಿವುಡ್‌ನ‌ಲ್ಲಿ ಒಂದು ಸ್ವಯಂ ಪರಿಹಾರ ಸೂತ್ರ ನಿರ್ಮಾಣವಾಗುತ್ತಿದೆ. ಮ್ಯೂಸಿಕ್‌ ಕಂಪನಿಗಳೇ ಹಾಡನ್ನು ಬರೆಸುವ, ಚಿತ್ರೀಕರಿಸುವ, ಧ್ವನಿಮುದ್ರಿಸುವ, ಮಾರುಕಟ್ಟೆಗೆ ತರುವ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿವೆ. ನೀವೀಗ ತರಕಾರಿಕೊಂಡು ಕೊಂಡಂತೆಯೇ ಚಿತ್ರಗೀತೆಗಳನ್ನು ಕೊಳ್ಳಬಹುದಾಗಿದೆ. ಇದರ ಸೃಜನಶೀಲತೆಯ ಪ್ರಸ್ತಾಪ ಬೇರೆ. ಆದರೆ ಇದರಿಂದ ಮೂರೂ ಹಕ್ಕುಗಳು ಒಂದೇ ಕಡೆ ಇರುವುದು ಸಾಧ್ಯವಾಗಿದೆ. ಆದರೆ ದಕ್ಷಿಣ ಭಾರತದಲ್ಲಿ ಅಂತಹ ಬೆಳವಣಿಗೆಗಳು  ಆರಂಭವಾಗಿಲ್ಲ. ಈಗ ಇಳಯರಾಜಾ ಅವರು ಎತ್ತಿರುವ ಪ್ರಶ್ನೆಯನ್ನೇ ಗಮನಿಸೋಣ. 2012ರ ಕಾಯಿದೆಯನ್ವಯ ಅವರಿಗೆ ತಮ್ಮ ಹಾಡುಗಳ ಸಂಗೀತ ಸಂಯೋಜನೆಯ ಮೇಲೆ ಹಕ್ಕಿರುವುದು ಖಚಿತ.ಆದರೆ ಅದನ್ನು ಅವರು ಹೀಗೆ ನೇರವಾಗಿ ಪ್ರತಿಪಾದಿಸಬಹುದೆ?

ಕಾಪಿರೈಟ್‌ಕಾಯಿದೆಯ ಸೆಕ್ಷನ್‌17ರ ಪ್ರಕಾರ ಯಾವುದೇ ವ್ಯಕ್ತಿ ಸಂಘಟನೆಯ ಸದಸ್ಯರಾಗಿದ್ದರೆ ನೇರವಾಗಿ ಹಕ್ಕುಗಳನ್ನು ಪ್ರತಿಪಾದಿಸುವಂತಿಲ್ಲ ಎನ್ನುತ್ತದೆ. ಇಳಯರಾಜಾ ಐ.ಪಿ.ಆರ್‌.ಎಸ್‌ನ ಸದಸ್ಯರು. ನಾಳೆ ಐ.ಪಿ.ಆರ್‌.ಎಸ್‌. ಕೂಡ ಅವರ ಹಾಡುಗಳ ಹಕ್ಕನ್ನು  ಪ್ರತಿಪಾದಿಸಿದರೆ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಯಾರಿಗೆ ಗೌರವಧನ ನೀಡ ಬೇಕು. ಅಸ್ಪಷ್ಟತೆ ಇರುವುದು ಇಲ್ಲಿ.
ಮ್ಯೂಸಿಕ್‌ ಕಂಪನಿಗಳು ಐ.ಪಿ.ಆರ್‌.ಎಸ್‌ನ ಹಂಚಿಕೆ ಸೂತ್ರವನ್ನು ಒಪ್ಪಿಕೊಂಡ ಕಾಲದಲ್ಲಿ ಈ ಸಮಸ್ಯೆ ಇರಲಿಲ್ಲ. ಈಗ ಮ್ಯೂಸಿಕ್‌ ಕಂಪನಿಗಳು ಐ.ಪಿ.ಆರ್‌.ಎಸ್‌ನ ಹಂಚಿಕೆ ಸೂತ್ರವನ್ನು ಒಪ್ಪುತ್ತಿಲ್ಲ. ತಮಗೇ ಎಲ್ಲಾಗೌರವಧನ ಸಲ್ಲಬೇಕು. ಹಾಡು ಬರೆಸುವ ವೇಳೆಯಲ್ಲೇ ನಾವು ಸಂಗೀತ ನಿರ್ದೇಶಕರಿಗೆ ಮತ್ತು ಗೀತರಚನೆಕಾರರಿಗೆ ಹಣ ನೀಡಿರುತ್ತೇವೆ ಎಂದು ಪ್ರತಿಪಾದಿಸುತ್ತಿವೆ. ಇದರ ಪ್ರಾಯೋಗಿಕ ಸಮಸ್ಯೆಯನ್ನು ನೋಡೊಣ. ಈಗ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರು ಒಂದು ವಾಣಿಜ್ಯಿ ಕಾರ್ಯಕ್ರಮ ರೂಪಿಸಿದ್ದಾರೆ. ಮೂಲ  ಕೃತಿಕಾರರಿಗೆ ಗೌರವಧನ ನೀಡಲು ಒಪ್ಪಿದ್ದಾರೆ ಎಂದು ಭಾವಿಸೊಣ. ಕಾರ್ಯಕ್ರಮದಲ್ಲಿ ಕನಿಷ್ಟ ಮೂವತ್ತು ಹಾಡುಗಳಿವೆ. ಪ್ರತಿ ಹಾಡಿಗೂ ಮೂವರು ಹಕ್ಕುದಾರರು, ಕೆಲವು ಹೆಸರುಗಳು ಪುನರಾವರ್ತನೆಯಾಗುತ್ತವೆ ಎಂದು ಭಾವಿಸಿದರೂ, ಐವತ್ತು ಜನರ ಬಳಿಯಾದರೂ ಅನುಮತಿಯನ್ನು ಪಡೆದುಕೊಳ್ಳಬೇಕು. ಹೀಗಾದರೆ ಕಾರ್ಯಕ್ರಮ ಸಂಯೋಜಿಸುವುದಕ್ಕಿಂತಲೂ ಹಕ್ಕುಗಳ ಅನುಮತಿ ಪಡೆಯುವುದೇ ಕಷ್ಟವಾಗುವುದಿಲ್ಲವೆ ಎನ್ನುವುದು ಗಂಭೀರ ಪ್ರಶ್ನೆ.

Advertisement

ಕನ್ನಡದಲ್ಲಂತೂ ಸಂಗೀತ ಸಂಸ್ಥೆಗಳು ಮಾತ್ರವೇ ಹಕ್ಕುಗಳನ್ನು ಕೇಳುತ್ತಿವೆ. ರಾಯಲ್ಟಿ ನೀಡುವ ಟಿವಿ ಚಾನಲ್‌ಗ‌ಳೂ ಕೂಡ ಸಂಗೀತ ಸಂಸ್ಥೆಗಳಿಗೆ ಮಾತ್ರವೇ ನೀಡುತ್ತಿವೆ.ಇಲ್ಲಿನ ಬಹುತೇಕ ಸಂಗೀತ ನಿರ್ದೆಶಕ, ಗೀತರಚನಾಕಾರರಿಗೆ ತಮಗೂ ಹಕ್ಕುಗಳಿವೆ ಎನ್ನುವುದೇ ಗೊತ್ತಿಲ್ಲ. ಅವರು ನೋಂದಣಿಯನ್ನೇ ಮಾಡಿಸಿಲ್ಲವಾದ್ದರಿಂದ ಹಕ್ಕನ್ನು ಕೇಳುವುದು  ಸಾಧ್ಯವೂಇಲ್ಲ. ಈ ಪ್ರಕ್ರಿಯೆ ಆರ್‌.ಎನ್‌.ಜಯಗೋಪಾಲ್‌ಅವರ ಕಾಲಕ್ಕೇ ಮುಗಿದು ಹೋಯಿತು. ಅವರ ನಂತರ ಯಾರೂ ಈ ಕುರಿತು ಚಿಂತಿಸಿಲ್ಲ. ಇದರ ಲಾಭವನ್ನು ಪಡೆದಿರುವ ಮ್ಯೂಸಿಕ್‌ ಕಂಪನಿಗಳು ಹಾಡುಧ್ವನಿ ಮುದ್ರಣಗೊಳ್ಳುವಾಗಲೇ ಸಂಗೀತ ನಿರ್ದೇಶಕರು ಮತ್ತು ಗೀತರಚನೆಕಾರರಿಂದ “ಎಲ್ಲಾ ಹಕ್ಕುಗಳನ್ನೂ ಮ್ಯೂಸಿಕ್‌ ಕಂಪನಿಗೆ ಕೊಡುತ್ತೇನೆ’ ಎಂದು ಒಪ್ಪಂದ ಮಾಡಿಸಿಕೊಳ್ಳುತ್ತಿವೆ. ಅನೇಕರು ಹಾಗೆ ಬರೆದುಕೊಡುತ್ತಿದ್ದಾರೆ ಕೂಡ.

ಏಕ ಕೇಂದ್ರಗಳಲ್ಲಿ ಹಕ್ಕುಗಳ ನಿಯಂತ್ರಣವಾಗ ಬೇಕು. ಕನ್ನಡದ ಮಟ್ಟಿಗೆ ಸರ್ಕಾರವೇ ಸ್ಥಾಪಸಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಚಿತ್ರಗೀತೆಗಳ ನೋಂದಣಿ ಕೆಲಸವನ್ನು ಅಧಿಕೃತವಾಗಿ ನಡೆಸಿ, ಹಕ್ಕುಗಳ ನಿರ್ವಹಣೆಯ ಹೊಣೆಗಾರಿಕೆಯನ್ನು ನಿರ್ವಹಿಸಬೇಕು. ಹೀಗಾಗದಿದ್ದರೆ ಪ್ರತಿಯೊಬ್ಬರೂ ವೈಯಕ್ತಿಕವಾಗಿ ಹಕ್ಕುಗಳನ್ನು ಪ್ರತಿಪಾದಿಸುತ್ತಾರೆ. ಚಿತ್ರಗೀತೆ ಎನ್ನುವುದು ಮಧುರತೆಯನ್ನು ಕಳೆದುಕೊಂಡು ಹೋರಾಟದ ಅಸ್ತ್ರವಾಗುತ್ತದೆ.

ಇಳಯರಾಜಾ ಅವರು ಎತ್ತಿರುವ  ಪ್ರಶ್ನೆಗೆ ಕಾಪಿರೈಟ್‌ಗೆ ಸಂಬಂಧಿಸಿದ ಹಲವು ಮೂಲಭೂತ ಅಂಶಗಳ ಕುರಿತು ಬೆಳಕನ್ನು ಚೆಲ್ಲಿದೆ. ಇದಕ್ಕೆ ಪರಿಹಾರವೆಂದರೆ ಜಗಳವಾಡುತ್ತಿರುವ ಐ.ಪಿ.ಆರ್‌.ಎಸ್‌. ಮತ್ತು ಐ.ಎಂ.ಐಗಳನ್ನು ಪಕ್ಕಕ್ಕೆ ಇಟ್ಟು ಕೇಂದ್ರ ಸರ್ಕಾರವೇ ಕಾಪಿರೈಟ್‌ ಬೋರ್ಡ್‌ ಸ್ಥಾಪಿಸಬೇಕು. ಏಕ ಕೇಂದ್ರಗಳಲ್ಲಿ ಹಕ್ಕುಗಳ ನಿಯಂತ್ರಣವಾಗ ಬೇಕು. 

ಕನ್ನಡದಲ್ಲಂತೂ ಸಂಗೀತ ಸಂಸ್ಥೆಗಳು ಮಾತ್ರವೇ ಹಕ್ಕುಗಳನ್ನು ಕೇಳುತ್ತಿವೆ. ರಾಯಲ್ಟಿ ನೀಡುವ ಟಿವಿ ಚಾನಲ್‌ಗ‌ಳೂ ಕೂಡ ಸಂಗೀತ ಸಂಸ್ಥೆಗಳಿಗೆ ಮಾತ್ರವೇ ನೀಡುತ್ತಿವೆ.ಇಲ್ಲಿನ ಬಹುತೇಕ ಸಂಗೀತ ನಿರ್ದೆಶಕ, ಗೀತರಚನಾಕಾರರಿಗೆ ತಮಗೂ ಹಕ್ಕುಗಳಿವೆ ಎನ್ನುವುದು ಗೊತ್ತಿಲ್ಲ. ಅವರು ನೋಂದಣಿಯನ್ನೇ ಮಾಡಿಸಿಲ್ಲವಾದ್ದರಿಂದ ಹಕ್ಕನ್ನು ಕೇಳುವುದು  ಸಾಧ್ಯವೂಇಲ್ಲ. ಈ ಪ್ರಕ್ರಿಯೆ ಆರ್‌.ಎನ್‌.ಜಯಗೋಪಾಲ್‌ಅವರ ಕಾಲಕ್ಕೇ ಮುಗಿದು ಹೋಯಿತು. ಅವರ ನಂತರ ಯಾರೂ ಈ ಕುರಿತು ಚಿಂತಿಸಿಲ್ಲ.

ಚಿತ್ರಗೀತೆಗಳು ವಾಣಿಜ್ಯಿಕವಾಗಿ ಬಳಕೆಯಾದಾಗ ಅದರ ಮೂಲಕತೃìಗಳಿಗೆ ಪಾಲು ಸಲ್ಲಬೇಕು ಎನ್ನುವುದು ಹಲವು ದಶಕಗಳ ಹೋರಾಟ. ಇದನ್ನು 2012ರ ಕಾಪಿರೈಟ್‌ ಕಾಯಿದೆ ಕೂಡ ಒಪ್ಪಿಕೊಂಡಿದೆ. ಆದರೆ ಇಲ್ಲಿರುವ ಪ್ರಶ್ನೆ ಇಳಯರಾಜಾ ಹೀಗೆ ನೇರವಾಗಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಬಹುದೆ? ಎನ್ನುವುದು.  

ಹಕ್ಕುಗಳ ಹೋರಾಟದ ಫ್ಲ್ಯಾಷ್‌ ಬ್ಯಾಕ್‌
1958ರವರೆಗೆ ಭಾರತದಲ್ಲಿ ಚಿತ್ರಗೀತೆಗಳಿಗೆ ಹಕ್ಕು ಬೇಕು ಎಂಬ ಮಾತೇ ಇರಲಿಲ್ಲ. ಎಲ್ಲವೂ ವಿಶ್ವಾಸದಲ್ಲೇ ನಡೆಯುತ್ತಿತ್ತು. ಆಗ ಇಂಡಿಯನ್‌ ಪರ್‌ ಫಾರ್ಮಿಂಗ್‌ರೈಟ್ಸ್‌ ಸೊಸೈಟಿ(ಐ.ಪಿ.ಆರ್‌.ಎಸ್‌)ಆರಂಭವಾಯಿತು. ಅದನ್ನು ನ್ಯಾಟಿಸನ್‌ ಎಂಬ ಖಾಸಗಿ ಕಂಪನಿ ನಿಯಂತ್ರಿಸುತ್ತಿತ್ತು. ಅದು ವಾದ್ಯಗಾರರು ಮತ್ತು ಗಾಯಕರನ್ನು ನಿಯಂತ್ರಿಸುತ್ತಿತ್ತು ಅಷ್ಟೇ, 1966ರಲ್ಲಿ ದಕ್ಷಿಣ ಭಾರತದ ಚಿತ್ರ ಸಂಯೋಜಕರು ಈ ಸಂಘಟನೆ ಸೇರಿದ ನಂತರ ಗೀತರಚನೆಕಾರರು ಮತ್ತು ಸಂಗೀತ ನಿರ್ದೇಶಕರಿಗೆ ಹಕ್ಕುಗಳು ಬೇಕು ಎನ್ನುವ ಹೋರಾಟ ಆರಂಭವಾಯಿತು. 1972ರಲ್ಲಿ ಸಂಗೀತ ಕಂಪನಿಗಳು, ಸಂಗೀತ ನಿರ್ದೇಶಕರು, ಗೀತರಚನೆಕಾರರ ಪಾಲಿಗೆ ಐ ಪಿ.ಆರ್‌.ಎಸ್‌ ಬಂದಿತು. ಇದನ್ನು ಬಿ.ಆರ್‌.ಛೋಪ್ರ ನೇತೃತ್ವದಲ್ಲಿ ನಿರ್ಮಾಪಕರು ವಿರೋಧಿಸಿ ಸುಪ್ರೀಂಕೋರ್ಟ್‌ಗೆ ಹೋದರು. ಅಲ್ಲಿ ನಿರ್ಮಾಪಕರ ಪರವಾಗಿಯೇ ತೀರ್ಪು ಬಂದಿತು.ಆದರೆ ಈ ಹೋರಾಟ ಮುಂದುವರೆದು 1980ರಲ್ಲಿ ಸುಪ್ರೀಂಕೋರ್ಟ್‌ ಐ.ಪಿ.ಆರ್‌.ಎಸ್‌ನ ಅಸ್ತಿತ್ವವನ್ನು ಒಪ್ಪಿಕೊಂಡಿತು. 1996ರ ಮಾರ್ಚ್‌ 27ರಂದು ಕೇಂದ್ರ ಸರ್ಕಾರವೂ 1957ರ ಕೃತಿ ಹಕ್ಕು ಸ್ವಾಮ್ಯಕಾಯಿದೆ ಸೆಕ್ಷನ್‌ 33(3)ಯಂತೆ ಮನ್ನಣೆ ನೀಡಿತು. 

ಆದರೆ ಸಮಸ್ಯೆ ಇಲ್ಲಿಗೇ ಮುಗಿಯಲಿಲ್ಲ. ಜಾಗತೀಕರಣ ಬಂದ ನಂತರ ಚಿತ್ರಗೀತೆಗಳ ವಾಣಿಜ್ಯಿಕ ಬಳಕೆ ಹೆಚ್ಚಾಯಿತು. ಎಫ್.ಎಂ ಕೇಂದ್ರಗಳು ಹೆಚ್ಚಾದವು, ರಿಯಾಲಿಟಿ ಶೋಗಳು ಬಂದವು.ಮ್ಯೂಸಿಕ್‌ ನೈಟ್‌ಗಳು ಹೆಚ್ಚಾದವು, ಪಬ್‌ಗಳಲ್ಲಿಯೂ ಚಿತ್ರಗೀತೆ ಕೇಳಿ ಬಂದಿತು. ಮೊಬೈಲ್‌ ರಿಂಗ್‌ಟೋನ್‌ಗಳಿಗೆ ಚಿತ್ರಗೀತೆಗಳು ಬಂದವು. ಇದರಿಂದ ಐ.ಪಿ.ಆರ್‌.ಎಸ್‌ನಲ್ಲಿ ಹಣದ ಹರಿವು ಹೆಚ್ಚಾಯಿತು. ಸಾವಿರದ ಲೆಕ್ಕದಲ್ಲಿದ್ದ ಹಣ 2004ರಲ್ಲಿ 25 ಕೋಟಿಗಳನ್ನು ದಾಟಿತು. ಯಾವಾಗ ದೊಡ್ಡ ಪ್ರಮಾಣದ ಹಣ ಬಂದಿತೋ ಹಂಚಿಕೆ ಕಗ್ಗಂಟಾಯಿತು. ಸಂಗೀತ ಕಂಪನಿಗಳ ಒಡೆತನ ಹೊಂದಿರುವ ಇಂಡಿಯನ್‌ ಮ್ಯೂಸಿಕ್‌ ಇಂಡಸ್ಟ್ರೀ (ಐ.ಎಂಐ) ತನಗೇ ಹಕ್ಕು ಬೇಕು ಎಂದು ಪ್ರತಿಪಾದಿಸಿತು.2005ರ ಸೆಪ್ಟೆಂಬರ್‌ 8ರಂದು ಭಾರತದ ಅತಿ ಹಳೆಯ ಚಿತ್ರಗೀತೆಗಳ ಹಕ್ಕುಗಳನ್ನು ಹೊಂದಿರುವ ಹೆಗ್ಗಳಿಕೆಯ ಕಂಪನಿ ಸಾರೆಗಾಮ ಬರಾಸತ್‌ ಕೋರ್ಟಿನಲ್ಲಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿತು. ಮುಂದಿನ ಮೂರು ವರ್ಷಗಳಲ್ಲಿ ಇಂತಹ ಹದಿನಾರು ಅರ್ಜಿಗಳು ಸಲ್ಲಿಕೆಯಾದವು.ಇದರಿಂದ ಚಿತ್ರಗೀತೆಗಳು ಸರಕೋ, ಸೃಜನಶೀಲ ಕೃತಿಗಳ್ಳೋ ಎನ್ನುವ ಆಕ್ಷೇಪ ಕೂಡ ಕೇಳಿ ಬಂದಿತು.

ಮಧುರ ಬಾಂಧವ್ಯದಲ್ಲಿ ಬಿರುಕು
ಹಾಗೆ ನೋಡಿದರೆ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಇಳಯ ರಾಜಾ ಭಾರತೀಯ ಚಿತ್ರರಂಗ ಕಂಡ ಅತ್ಯುತ್ತಮ ಜೋಡಿಗಳಲ್ಲಿ ಒಂದು. ಈ ಇಬ್ಬರ ನಡುವೆ ನಾಲ್ಕು ಭಾಷೆಗಳ 128 ಚಿತ್ರಗಳಿಂದ 1,423 ಚಿತ್ರಗೀತೆಗಳು ಬಂದಿವೆ. ಅವುಗಳಲ್ಲಿ ಬಹುತೇಕ ಸೂಪರ್‌ ಹಿಟ್‌ ಎನ್ನಿಸಿಕೊಂಡವುಗಳೇ. ಈ ಜೋಡಿಗೆ ರುದ್ರವೀಣಾ, ಸ್ವಾತಿಮುತ್ಯಂ, ಸಾಗರ ಸಂಗಮಂ ಹೀಗೆ ಮೂರು ರಾಷ್ಟ್ರಪ್ರಶಸ್ತಿಗಳೂ ಬಂದಿವೆ. ಇಬ್ಬರೂ ಚಿತ್ರರಂಗಕ್ಕೆ ಬರುವ ಮೊದಲೇ ‘ಸ್ವರ ಸಂಗಮ’ ತಂಡದಲ್ಲಿ ಜೊತೆಯಾಗಿ ಇದ್ದವರು. ಇಳಯ ರಾಜಾ ಸಂಗೀತ ನೀಡಿದ ಮೊದಲ ಚಿತ್ರ ‘ಅನ್ನಾಕಲಿ’ಯಲ್ಲಿಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರೇ ಪ್ರಧಾನ ಗಾಯಕ.  ಎಸ್‌.ಪಿ.ಬಿ ಸಂಗೀತ ನೀಡಿದ ಮೊದಲ ಚಿತ್ರ ‘ಕನ್ಯಾಕುಮಾರಿ’ಯಲ್ಲಿ ಇಳಯ ರಾಜಾ ಹಾಡಿದ್ದಾರೆ. ಇಬ್ಬರ ಸ್ನೇಹದ ಕುರಿತು ಹಲವಾರು ಕಥೆಗಳೂ ಇವೆ. ಹಾಗಾದರೆ ಬಿರುಕು ಮೂಡಿದ್ದು ಎಲ್ಲಿ? ಕನ್ನಡದ “ಪಲ್ಲವಿ ಅನುಪಲ್ಲವಿ’ಯಿಂದ ಆರಂಭಿಸಿದ ಮಣಿರತ್ನಂ ಅವರ ಮೊದಲ ಹನ್ನೊಂದು ಚಿತ್ರಗಳಿಗೆ ಇಳಯರಾಜಾ ಅವರೇ ಸಂಗೀತ ನಿರ್ದೇಶಕರು. ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಪ್ರಧಾನ ಗಾಯಕರು. ಮೌನರಾಗಂ, ನಾಯಗನ್‌, ಅಂಜಲಿ, ದಳಪತಿಯಂತಹ ಸೂಪರ್‌ ಹಿಟ್‌ ಚಿತ್ರಗಳು ಈ ಮಾಲಿಕೆಯಲ್ಲಿ ಬಂದವು. ಆದರೆ ರೋಜಾ ಚಿತ್ರಕ್ಕೆ ಎ.ಆರ್‌.ರೆಹಮಾನ್‌ ಬಂದರು. ಅಲ್ಲಿಂದ ಮುಂದೆ ರೆಹಮಾನ್‌ಯುಗ ಆರಂಭವಾಯಿತು. ಇದಕ್ಕೆ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಕಾರಣರು ಎನ್ನುವ ಕೋಪ ಇಳಯ ರಾಜಾ ಅವರಿಗಿದೆ ಎಂಬುದು ಕೆಲವರ ವಾದ.  ಅದು ಈ ರೂಪದಲ್ಲಿ ನ್ಪೋಟಗೊಂಡಿದೆಯೆ? ಗೊತ್ತಿಲ್ಲ. ಇಂತಹ ಸಾಧ್ಯತೆಯಂತೂ ಇದೆ.

ಎನ್‌. ಎಸ್‌. ಶ್ರೀಧರಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next