Advertisement

ನೀರಿನ ಸಮಸ್ಯೆ ಇದ್ದರೆ 24 ಗಂಟೆಯೊಳಗಾಗಿ ಬಗೆಹರಿಸಿ

07:28 AM Feb 23, 2019 | Team Udayavani |

ತುಮಕೂರು: ಜಿಲ್ಲೆಯಲ್ಲಿ ಬರಗಾಲ ತೀವ್ರವಿದ್ದು, ನೀರಿಗೆ ಹಾಹಾಕಾರ ಸೃಷ್ಟಿಯಾಗಬಹುದು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ 24 ಗಂಟೆಯೊಳಗಾಗಿ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್‌ ಅಧಿಕಾರಿಗಳಿಗೆ ಸೂಚಿಸಿದರು. 

Advertisement

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಿಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಖುದ್ದು ಭೇಟಿ ನೀಡಿ ಅಗತ್ಯ ಕ್ರಮಕೈಗೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ತಲೆದೂರಿದಾಗ ಯಾರ ಸಲಹೆ-ಸೂಚನೆಗಳಿಗೂ ಕಾಯದೆ ಸಮಸ್ಯೆ ಬಗೆಹರಿಸಿದ ನಂತರವೇ ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಂಡ ಬಗ್ಗೆ ಮೇಲಧಿಕಾರಿಗಳಿಗೆ ವರದಿ ನೀಡಬಹುದು ಎಂದು ಹೇಳಿದರು.

ಅನುದಾನ ಬಳಸಿ: ಕುಡಿಯುವ ನೀರಿನ ತುರ್ತು ಕಾಮಗಾರಿಗಳಿಗಾಗಿ 14ನೇ ಹಣಕಾಸು ಯೋಜನೆಯ ಅನುದಾನ ಬಳಸಿಕೊಳ್ಳಲು ಎಲ್ಲಾ ಪಂಚಾಯತಿಗಳಲ್ಲಿ ಅವಕಾಶವಿದ್ದು, ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕೆಂದು ತಿಳಿಸಿದರು.

ಸ್ಥಳಕ್ಕೆ ಭೇಟಿ: ಸಮಾಜ ಕಲ್ಯಾಣ ಇಲಾಖೆಯಿಂದ ಮಲ್ಲಸಂದ್ರ, ಬಳ್ಳಾಪುರ ಗ್ರಾಮಗಳಲ್ಲಿ ವಿದ್ಯಾರ್ಥಿ ನಿಲಯಗಳ ಕಟ್ಟಡ ಕಾಮಗಾರಿಗೆ ನಿವೇಶನದ ತಕರಾರಿದ್ದು, ತಹಶೀಲ್ದಾರ್‌ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಜಿಪಂ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಸಭೆಗೆ ತಿಳಿಸಿದರು.

ಬಾಳೆ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಮಾಡಿ: ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣ ಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಬಾಳೆ ಬೆಳೆಯುತ್ತಿದ್ದರೂ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹೊರ ರಾಜ್ಯದವರು ಬಾಳೆ ಮಾರಾಟ ಮಾಡಿ ಹೆಚ್ಚಿನ ಆದಾಯ ಗಳಿಸಿಕೊಂಡು ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಟೊಮೆಟೋ ಮಾರಾಟಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿರುವಂತೆ, ಬಾಳೆಗೂ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಮಾಡಬೇಕೆಂದು ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಸಭೆಯಲ್ಲಿ ಗಮನವಿರಲಿ: ಇದೇ ವೇಳೆ ಅಧ್ಯಕ್ಷೆ ಲತಾ ರವಿಕುಮಾರ್‌ ಮಾಹಿತಿ ನೀಡಲು ತಡವರಿಸಿದ ಎಪಿಎಂಸಿ ವ್ಯವಸ್ಥಾಪಕರಿಗೆ ಸಭೆಗೆ ನಿದ್ದೆ ಮಾಡಲು ಬಂದಿದ್ದೀರಾ? ಸಭೆಯಲ್ಲಿ ಚರ್ಚೆ ನಡೆಯುವಾಗ ಚರ್ಚೆಯ ಮೇಲೆ ಗಮನವಿರಬೇಕು ಎಂದು ಕೋಪದಿಂದಲೇ ಸೂಚನೆ ನೀಡಿದರು. 

ತಪ್ಪು ನಡೆಯದಂತೆ ಕಾರ್ಯ ನಿರ್ವಹಿಸಿ: ಜಿಪಂ ಸಿಇಒ ಶುಭಾ ಕಲ್ಯಾಣ್‌ ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿ ಜಿಲ್ಲಾ ವಲಯ ಯೋಜನೆಯಡಿಯಲ್ಲಿ ಹನಿ ನೀರಾವರಿ, ತರಬೇತಿ, ಜೇನುಕೃಷಿ, ರೈತರಿಗೆ ಸಹಾಯ, ಕಟ್ಟಡ ನಿರ್ಮಾಣ ಸೇರಿದಂತೆ ಶೇ.80ರಷ್ಟು ಮಾತ್ರ ಸಾಧನೆ ಮಾಡಿದ್ದು, ಮಾರ್ಚ್‌ ತಿಂಗಳೊಳಗಾಗಿ ಉಳಿದ ಶೇ.20ನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. 

ಜಿಲ್ಲೆಯಲ್ಲಿ ಫ‌ಸಲ್‌ ಬಿಮಾ ಯೋಜನೆಯಡಿ 35 ಸಾವಿರ ರೈತರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದು, 26,000 ರೈತರಿಗೆ ಬೆಳೆವಿಮೆಯ ಹಣ ಜಮಾ ಮಾಡಲಾಗಿದೆ. ಉಳಿದ ರೈತರ ವಿವರಗಳು ಆನ್‌ಲೈನ್‌ನಲ್ಲಿ ನೋಂದಾಯಿಸುವಾಗ ಯಾವುದೇ ತಪ್ಪು ನಡೆಯದಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಈ ಸೌಲಭ್ಯಗಳು ಎಲ್ಲಾ ರೈತರಿಗೂ ದೊರೆಯಬೇಕು. ನರೇಗಾ ಯೋಜನೆಯಡಿ ರೈತರಿಗೆ ಲಾಭ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಟೀಕೆಗಳು ಬರದಂತೆ ಜಿಲ್ಲೆಯ ರೈತರಿಗೆ ಸೌಲಭ್ಯಗಳು ದೊರಕಿಸಿಕೊಟ್ಟು ಮಾರ್ಚ್‌ ತಿಂಗಳೊಳಗಾಗಿ ಶೇ.100 ರಷ್ಟು ಸಾಧನೆ ಮಾಡಬೇಕು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

ಕಾಮಗಾರಿ ಪ್ರಾರಂಭಿಸಿ: ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಶೇ.72 ರಷ್ಟು ಕಟ್ಟಡ ಕಾಮಗಾರಿಗಳು ನಡೆದಿದ್ದು, ತುಮಕೂರು-9, ಗುಬ್ಬಿಯಲ್ಲಿ 13 ಅಂಗನವಾಡಿ ಕೇಂದ್ರಗಳ ಕಟ್ಟಡಗಳ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ. ಕಟ್ಟಡ ನಿರ್ಮಿಸಲು ಸ್ಥಳದ ಬಗ್ಗೆ ಗೊಂದಲವಿದ್ದರೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಪಿಡಿಒಗಳನ್ನು ಸಂಪರ್ಕಿಸಿ ಸರಿಪಡಿಸಿಕೊಂಡು 15 ದಿನಗಳೊಳಗಾಗಿ ಕಾಮಗಾರಿಗಳು ಪ್ರಾರಂಭವಾಗಬೇಕು ಎಂದು ಸೂಚಿಸಿದರು.

ವಿಶೇಷ ತರಬೇತಿ ನಡೆಸಿ: ತುಮಕೂರು ಜಿಲ್ಲೆ ಶೈಕ್ಷಣಿಕ ಕ್ಷೇತ್ರವಾಗಿದ್ದು, ಶಿಕ್ಷಣದಲ್ಲಿ ಮೊದಲ ಸ್ಥಾನ ಬರುವುದು ನಮ್ಮೆಲ್ಲರ ಗುರಿಯಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಸಮೀಪಿಸುತ್ತಿದ್ದು, ಮಕ್ಕಳಿಗೆ ಹೆಚ್ಚಿನ ತರಬೇತಿ ನೀಡಿ ಪರೀಕ್ಷೆಗಳಿಗೆ ಸಿದ್ಧಗೊಳಿಸಬೇಕು. ಫ‌ಲಿತಾಂಶದಲ್ಲಿ ತುಮಕೂರು ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ತರುವತ್ತ ಶಿಕ್ಷಕರು ಗಮನಹರಿಸಬೇಕು. ಕಡಿಮೆ ಅಂಕ ಗಳಿಸಿರುವ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಾಲಾ ತರಗತಿ ಸಮಯದ ನಂತರ ಎರಡು ಗಂಟೆಗಳ ಕಾಲ ಹಾಗೂ ಭಾನುವಾರಗಳಂದು ವಿಶೇಷ ತರಗತಿ ನಡೆಸಬೇಕು ಎಂದು ಸಲಹೆ ನೀಡಿದರು. 

ಜಿಪಂ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಡಾ.ನವ್ಯಬಾಬು, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಅಕ್ಕಮಹಾದೇವಿ, ಉಪಕಾರ್ಯದರ್ಶಿ ಪ್ರೇಮ್‌ಕುಮಾರ್‌ ಹಾಗೂ ಕೃಷ್ಣಪ್ಪ, ಮುಖ್ಯ ಯೋಜನಾಧಿಕಾರಿ ಬಾಲರಾಜು, ಯೋಜನಾ ನಿರ್ದೇಶಕ ಮಾಂಕಾಳಪ್ಪ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ವಿಮೆ ಕೂಡಲೇ ನೀಡಿ: ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಮಾಹಿತಿ ನೀಡಿ, ಜಿಲ್ಲೆಯಲ್ಲಿ 9,569 ರೈತರು ವಿಮಾ ಕಂಪನಿಗೆ ಅರ್ಜಿ ಸಲ್ಲಿಸಿದ್ದು, ಬೆಳೆ ನಷ್ಟ ಹೊಂದಿದ ಸುಮಾರು 7,569 ರೈತರಿಗೆ ಬೆಳೆ ವಿಮೆ ಹಣ ಪಾವತಿಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದಾಗ, ಅಧ್ಯಕ್ಷೆ ಲತಾ ಈವರೆಗೂ ವಿಮಾ ಹಣ ಪಾವತಿಯಾಗದ ರೈತರಿಗೆ ಕೂಡಲೇ ಪಾವತಿ ಮಾಡಬೇಕೆಂದು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ವ್ಯವಸ್ಥಾಪಕ ಜ್ಯೋತಿ ಗಣೇಶ್‌ ಅವರಿಗೆ ಸೂಚಿಸಿದರು.

ವಿಮಾ ಹಣವನ್ನು ಪಾವತಿ ಮಾಡುವುದರಿಂದ ಬರಗಾಲದಿಂದ ತೊಂದರೆ ಅನುಭವಿಸುತ್ತಿರುವ ರೈತರಿಗೆ ಪ್ರಯೋಜನವಾಗಲಿದೆ. ಭಾರತ ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯ ವೃದ್ಧಿಸಿಕೊಳ್ಳಲು ಅನುವಾಗುವಂತೆ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ 2 ಹೆಕ್ಟೇರಿಗಿಂತ ಕಡಿಮೆ ಜಮೀನನ್ನು ಹೊಂದಿರುವ ರೈತರಿಗೆ ಒಂದು ವರ್ಷಕ್ಕೆ 6000 ರೂ.ಗಳನ್ನು 3 ಸಮಾನ ಕಂತುಗಳಲ್ಲಿ ನೀಡುವ ಯೋಜನೆ ಬಗ್ಗೆ ಹೆಚ್ಚು ಮಾಹಿತಿ ನೀಡಿ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next