Advertisement

ಎ. 14ರೊಳಗೆ ಪರಿಸ್ಥಿತಿ ಸುಧಾರಿಸಿದರೆ ಲಾಕ್‌ಡೌನ್‌ ಸಡಿಲ

09:30 AM Apr 06, 2020 | Sriram |

ಬೆಂಗಳೂರು: ರಾಜ್ಯದಲ್ಲಿ ಎ. 14ರೊಳಗೆ ಕೋವಿಡ್‌-19 ಪರಿಸ್ಥಿತಿ ಸುಧಾರಿಸಿದರೆ ಹಂತ ಹಂತವಾಗಿ ಲಾಕ್‌ಡೌನ್‌ ಸಡಿಲಗೊಳಿಸುವ ಆಶಯ ನನ್ನದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

Advertisement

ಅಕ್ಕಿ, ಬೇಳೆ, ಎಣ್ಣೆ, ಸಕ್ಕರೆ ಸಹಿತ ಅಗತ್ಯ ಆಹಾರ ಧಾನ್ಯಗಳಿಗೆ ರಾಜ್ಯದಲ್ಲಿ ಯಾವುದೇ ಕೊರತೆಯಿಲ್ಲ. ತರಕಾರಿ, ಹಣ್ಣು ಪೂರೈಕೆಗೂ ಸಮಸ್ಯೆಯಾಗಿಲ್ಲ. ಹೀಗಾಗಿ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಪಡಿತರ ಕಾರ್ಡ್‌ ಇಲ್ಲದ ಬಡವರಿಗೂ ಆಹಾರ ಧಾನ್ಯ ವಿತರಣೆಗೆ ಸೂಚಿಸಲಾಗಿದೆ. ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರಿಗೆ ಊಟ ಮತ್ತು ವಸತಿ ವ್ಯವಸ್ಥೆ ಸಹ ಮಾಡಲಾಗಿದೆ. ಹೀಗಾಗಿ ರಾಜ್ಯ ಸರಕಾರ ಪರಿಸ್ಥಿತಿಯನ್ನು ಎಲ್ಲರ ಸಹಕಾರದಿಂದ ನಿಭಾಯಿಸುತ್ತಿದೆ. ಪೊಲೀಸ್‌, ಜಿಲ್ಲಾಡಳಿತ, ಪೌರಾಡಳಿತ, ಆರೋಗ್ಯ, ಕೃಷಿ, ತೋಟಗಾರಿಕೆ, ಸಹಕಾರ, ಆಹಾರ ಇಲಾಖೆಗಳು ಸಾಮಾಜಿಕ ಅಂತರ
ಕಾಯ್ದುಕೊಂಡು ಅಗತ್ಯ ಸೇವೆ ಒದಗಿಸುತ್ತಿವೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಶಾಸಕರು, ಸಚಿವರ ಜತೆ ಕೋವಿಡ್‌-19 ನಿಯಂತ್ರಣ ಸಂಬಂಧ ಸಭೆ ನಡೆಸಿದ ಅವರು, ಕೋವಿಡ್‌-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ರಾಜ್ಯದ 480 ಹಾಪ್‌ಕಾಮ್ಸ್‌ ಮಳಿಗೆ ಮತ್ತು ಸಂಚಾರಿ ಮಳಿಗೆಗಳ ಮೂಲಕ ತರಕಾರಿ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಯಡಿ ಈ ತಿಂಗಳ 10ನೇ ದಿನಾಂಕದೊಳಗೆ ರೈತರ ಖಾತೆಗಳಿಗೆ 2,000 ರೂ. ಜಮೆ ಆಗಲಿದೆ. ಕೊಳೆಗೇರಿ ಮತ್ತು ಬಡವರು, ಕೂಲಿ ಕಾರ್ಮಿಕರಿಗೆ ಪ್ರತಿದಿನ ಅರ್ಧ ಲೀಟರ್‌ ಹಾಲು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಎರಡು ತಿಂಗಳ ಮುಂಗಡ ಮೊತ್ತ ಎ. 10 ರೊಳಗೆ ಜಮೆ ಆಗಲಿದೆ. ಉಜ್ವಲ ಯೋಜನೆಯಡಿ 15 ಲಕ್ಷ ಫ‌ಲಾನುಭವಿಗಳ ಖಾತೆಗಳಿಗೆ ಗ್ಯಾಸ್‌ ಸಿಲಿಂಡರ್‌ ವೆಚ್ಚ ಜಮೆ ಮಾಡಲು ಪ್ರಾರಂಭಿಸಲಾಗಿದೆ ಎಂದು ಹೇಳಿದರು.

Advertisement

1.43ಲಕ್ಷ ಪಿಪಿಇ ಕಿಟ್‌ ಪೂರೈಕೆ
ಕೋವಿಡ್‌-19 ನಿಯಂತ್ರಣಕ್ಕಾಗಿ 9.80 ಲಕ್ಷ ಪಿಪಿಇ ಕಿಟ್‌ ನೀಡಲು ಕಾರ್ಯಾದೇಶ ನೀಡಲಾಗಿದೆ. 1.43 ಲಕ್ಷ ಕಿಟ್‌ ಸರಬರಾಜು ಆಗಿದೆ. ಎನ್‌-95 ಮಾಸ್ಕ್ 18.33 ಲಕ್ಷ ಖರೀದಿಗೆ ಕಾರ್ಯಾದೇಶ ನೀಡಲಾಗಿದೆ. 4.13 ಲಕ್ಷ ಸರಬರಾಜು ಆಗಿದೆ. ವೆಂಟಿಲೇಟರ್‌ 1,570 ಖರೀದಿಗೆ ಆದೇಶ ನೀಡಿದ್ದು, 17 ಸರಬರಾಜು ಆಗಿವೆ ಎಂದರು. ರಾಜ್ಯದಲ್ಲಿ ಯಾವುದೇ ಶಂಕಿತರು ವೆಂಟಿಲೇಟರ್‌ನಲ್ಲಿಲ್ಲ. ಇಬ್ಬರು ಮಾತ್ರ ಆಕ್ಸಿಜನ್‌ ತೆಗೆದುಕೊಳ್ಳುತ್ತಿದ್ದಾರೆ. ಅಂತಾರಾಷ್ಟ್ರೀಯ ಪ್ರವಾಸಿಗರ ಸ್ಕ್ರೀನಿಂಗ್‌ ಮತ್ತು ಟೆಸ್ಟಿಂಗ್‌ ಮಾಡಲಾಗಿದ್ದು 128 ಪ್ರಕರಣಗಳು ಪತ್ತೆಯಾಗಿದ್ದು, 4 ಮಂದಿ ಮೃತಪಟ್ಟಿದ್ದು 11 ಮಂದಿ ಗುಣಮುಖರಾಗಿದ್ದಾರೆ ಎಂದರು.

ರಚನಾತ್ಮಕ ಸಲಹೆ
ಸಭೆಯಲ್ಲಿ ಸಂಸದರು, ಶಾಸಕರು ರಚನಾತ್ಮಕ ಸಲಹೆಗಳನ್ನು ನೀಡಿದ್ದು, ಸರಕಾರದೊಂದಿಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ. ಅಗತ್ಯ ವಸ್ತಗಳ ಪೂರೈಕೆಯನ್ನು ಜಿಲ್ಲಾಡಳಿತಗಳ ಮೂಲಕ ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸಲಹೆ ನೀಡಿದ್ದಾರೆ. ಎಲ್ಲ ಸಲಹೆ ಸಕಾರಾತ್ಮಕವಾಗಿ ತೆಗೆದುಕೊಳ್ಳಲಾಗಿದೆ ಎಂದರು. ಲಾಕ್‌ಡೌನ್‌ ಇದ್ದರೂ ಜನ ಸಂಚಾರ ಇದ್ದು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಹಲವರು ಸಲಹೆ ನೀಡಿದ್ದು ಅದನ್ನು ಪಾಲಿಸಲಾಗುವುದು. ಕೋವಿಡ್‌ – 19 ನಿಯಂತ್ರಣಕ್ಕಾಗಿ ಪಕ್ಷಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸುವ ಅಗತ್ಯವಿದ್ದು ಎಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡಿದರು.

ದೀಪ ಬೆಳಗಿಸಲು ಮನವಿ
ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ತಮ್ಮ ತಮ್ಮ ಮನೆಗಳ ಆವರಣದಲ್ಲಿ ದೀಪ ಬೆಳಗಿಸಲು ಜನತೆಗೆ ಕರೆ ಕೊಟ್ಟಿದ್ದಾರೆ. ಕೋವಿಡ್‌ – 19 ಎಂಬ ಕಣ್ಣಿಗೆ ಕಾಣದ ಶತ್ರುವಿನ ವಿರುದ್ಧ ನಾವು ನಡೆಸುತ್ತಿರುವ ಯುದ್ಧದಲ್ಲಿ ಇದು ಬೆಳಕಿನ ರಣಕಹಳೆ. ದೇಶದ 130 ಕೋಟಿ ಪ್ರಜೆಗಳು ಈ ಹೋರಾಟದಲ್ಲಿ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರುವ ಸಮಯ. ತಮ್ಮ ತಮ್ಮ ಮನೆಗಳ ಹೊರಗೆ, ಬಾಲ್ಕನಿಗಳಲ್ಲಿ, ತಾರಸಿಯ ಮೇಲೆ ದೀಪವನ್ನು ಹಚ್ಚಿ ಒಗ್ಗಟ್ಟು ಸಾರೋಣ. ಸಾಮಾಜಿಕ ಅಂತರದ ಮೂಲಮಂತ್ರವನ್ನು ಮರೆಯುವುದು ಬೇಡ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next