Advertisement

ಮಳೆಕೊಯ್ಲು ಇದ್ದರೆ “ಬೇಸಗೆ ಮಳೆ’ನೀರೂ ಚರಂಡಿ-ರಸ್ತೆ ಪಾಲಾಗದು

10:14 PM Jun 13, 2019 | mahesh |

ಮಹಾನಗರ: ಮನೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸುವುದರಿಂದ ಮಳೆಗಾಲದಲ್ಲಿ ಮಾತ್ರವಲ್ಲ ಬೇಸಗೆ ಕಾಲದಲ್ಲಿಯೂ ಮುನ್ಸೂಚನೆಯಿಲ್ಲದೆ ಸುರಿಯುವ ಮಳೆ ನೀರನ್ನು ಚರಂಡಿಗೆ ಹರಿದು ವ್ಯರ್ಥವಾಗುವುದನ್ನು ತಪ್ಪಿಸಬಹುದು. ಇದರಿಂದ ಬೇಸಗೆಯಲ್ಲಿ ತಲೆದೋರುವ ನೀರಿನ ಬವಣೆಗೂ ಪರಿಹಾರ ಕಂಡುಕೊಳ್ಳಬಹುದು.

Advertisement

ಜನವರಿ ತಿಂಗಳಿನಿಂದ ಮೇ ಅಂತ್ಯದವರೆಗೆ ಆಗಾಗ ಬೇಸಗೆ ಮಳೆಯಾಗುವುದು ವಾಡಿಕೆ. ಅದರಲ್ಲಿಯೂ ಮಾರ್ಚ್‌ನಿಂದ ಮೇ ಅಂತ್ಯದವರೆಗೆ ಸಂಜೆ ವೇಳೆ ಸ್ಥಳೀಯವಾಗಿ ಮೋಡ ಸೃಷ್ಟಿಯಾಗಿ ಗುಡುಗು ಸಹಿತ ಉತ್ತಮ ಮಳೆ ಸುರಿಯುವ ಸಾಧ್ಯತೆ ಜಾಸ್ತಿ ಇರುತ್ತದೆ. ಹವಾಮಾನ ಇಲಾಖೆಯ ಲೆಕ್ಕಾಚಾರದ ಪ್ರಕಾರ, ಬೇಸಗೆ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 231.8 ಮಿ.ಮೀ.ನಷ್ಟು ವಾಡಿಕೆ ಮಳೆಯಾಗಬೇಕು. ಇನ್ನು ಬೇಸಗೆ ಕಾಲದಲ್ಲಿಯೂ ವಾಯುಭಾರ ಕುಸಿತ ಉಂಟಾಗಿ ಚಂಡಮಾರುತ ಸೃಷ್ಟಿಯಾದ ಪರಿಣಾಮ ಭಾರೀ ಮಳೆಯಾದ ನಿದರ್ಶನಗಳೂ ಇವೆ.

ಮಳೆಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡಿರುವ ನಗರವಾಸಿಗಳು ಈ ಬೇಸಗೆ ಮಳೆಯ ಮಹತ್ವ ಮತ್ತು ನಿರೀನ ಬವಣೆ ತಪ್ಪಿಸುವುದಕ್ಕೆ ಅಥವಾ ತಮ್ಮ ಬಾವಿ-ಬೋರ್‌ವೆಲ್‌ನಲ್ಲಿ ಅಂತರ್ಜಲ ವೃದ್ಧಿಸುವುದಕ್ಕೆ ಹೇಗೆ ಸಹಕಾರಿಯಾಗುತ್ತದೆ ಎನ್ನುವುದರ ಅನುಭವ ಪಡೆದುಕೊಂಡಿದ್ದಾರೆ. ಮಳೆಕೊಯ್ಲು ಮಾಡದವರಿಗೆ ಈ ಬೇಸಗೆ ಮಳೆಯ ಲಾಭ ಮತ್ತು ಮಹತ್ವದ ಬಗ್ಗೆ ತಿಳಿದಿರುವುದಿಲ್ಲ. ಮಳೆಕೊಯ್ಲು ಅಳವಡಿಸಿದರೆ ಮಳೆಗಾಲದ ಜತೆಗೆ ಬೇಸಗೆಯಲ್ಲಿಯೂ ಛಾವಣಿಗೆ ಬಿದ್ದು ವ್ಯರ್ಥವಾಗುತ್ತಿರುವ ಮಳೆನೀರಿನ ಸದ್ಬಳಕೆ ಮಾಡಿಕೊಳ್ಳಬಹುದು ಎನ್ನುವುದಕ್ಕೆ ಮಂಗಳೂರಿನಲ್ಲಿಯೂ ಸಾಕಷ್ಟು ನೈಜ ನಿರ್ದಶನಗಳಿವೆ. ಅಷ್ಟೇ ಅಲ್ಲ, ಈಗಾಗಲೇ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿರುವ ನಗರವಾಸಿಗಳ ಸ್ವ ಅನುಭವದ ಮಾತು ಅದೇ ಆಗಿದೆ. ನಗರದ ಎಲ್ಲ ಜನತೆಯು ತಮ್ಮ ಅನುಕೂಲಕ್ಕೆ ತಕ್ಕಂತೆ ಮಳೆಕೊಯ್ಲು ಅಳವಡಿಸಿಕೊಳ್ಳಬೇಕು ಎನ್ನುವುದು ಅವರ ಅಭಿಪ್ರಾಯ.

“ಸುದಿನ’ದ ಕಾಳಜಿಯಾಗಿದೆ.
ಅಂತರ್ಜಲ ಕೊರತೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಫೆಬ್ರವರಿ-ಮಾರ್ಚ್‌ ತಿಂಗಳ ಅಂತ್ಯಕ್ಕೆ ಕೆಲವು ಕಡೆಗಳಲ್ಲಿ ಬಾವಿ ನೀರು ಬತ್ತಲಾರಂಭಿಸುತ್ತದೆ. ಬೇಸಗೆಯಲ್ಲಿ ಸುರಿಯುವ ಮಳೆಯ ನೀರನ್ನು ಪೋಲಾಗಲು ಬಿಡದೆ ನೇರವಾಗಿ ಬಾವಿಗೆ ಹರಿದು ಹೋಗುವಂತೆ ಮಾಡಿದರೆ ಅಂಥ ಬಾವಿಗಳ ನೀರಿನ ಮಟ್ಟದಲ್ಲಿಯೂ ಏರಿಕೆಯಾಗಬಹುದು. ಇದರಿಂದ ನೀರಿನ ಸಮಸ್ಯೆ ತಪ್ಪಿಸಬಹುದು.

ಬೇಸಗೆಯಲ್ಲಿ ಸುರಿಯುವ ಮಳೆ ನೀರನ್ನು ವ್ಯರ್ಥವಾಗಲು ಬಿಡದೆ ಬೋರ್‌ವೆಲ್‌ಗ‌ಳಿಗೆ ಬಿಟ್ಟರೆ ಬತ್ತುವ ಬೋರ್‌ವೆಲ್‌ಗ‌ಳಿಗೆ ಮರುಜೀವ ನೀಡಬಹುದು. ಅಲ್ಲದೆ, ಅಂತರ್ಜಲ ವೃದ್ಧಿಯಾಗುತ್ತದೆ. ಇದರಿಂದ ಬೇಸಗೆಯಲ್ಲಿ ಮನೆಗೆ ನೀರು ಬರುತ್ತಿಲ್ಲ ಎಂದು ಪಾಲಿಕೆಗೆ ಹಿಡಿಶಾಪ ಹಾಕುವ ಬದಲು ಯಥೇತ್ಛ ನೀರು ಪಡೆದುಕೊಳ್ಳುವುದಕ್ಕೆ ಈ ಮಳೆಕೊಯ್ಲು ವ್ಯವಸ್ಥೆ ನೆರವಿಗೆ ಬರುತ್ತದೆ. ಕೆಲವೊಂದು ನಿರ್ಜೀವ ಕೊಳವೆಬಾವಿಗಳಿಗೆ ಮಳೆ ನೀರು ಬಿಟ್ಟರೆ ಹತ್ತಿರದಲ್ಲಿರುವ ಬೋರ್‌ವೆಲ್‌ಗ‌ಳಲ್ಲಿಯೂ ನೀರಿನ ಮಟ್ಟ ಹೆಚ್ಚಾಗಲು ಸಹಕಾರಿಯಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.

Advertisement

ಬೆಳಕು ಬೀಳದಂತೆ ಶೇಖರಿಸಿಡಿ
ಬೇಸಗೆ ಸಮಯದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವುದು ಸಹಜ. ಈ ವೇಳೆ ಸುರಿಯುವ ಮಳೆಯ ಪ್ರತಿ ಹನಿ ನೀರನ್ನು ಪೋಲು ಮಾಡದೆ ಮನೆಯಲ್ಲಿರುವ ಸಂಪ್‌, ಡ್ರಮ್‌, ಟ್ಯಾಂಕ್‌ ಮುಖೇನ ಭದ್ರವಾಗಿ ಮುಚ್ಚಳ ಹಾಕಿ, ಬೆಳಕು ಬೀಳದಂತೆ ಶೇಖರಿಸಿದರೆ, ಎಷ್ಟೇ ದಿನಗ‌ಳಾದರೂ ನೀರು ಮಲಿನವಾಗುವುದಿಲ್ಲ. ಸಂಪ್‌ ಅಥವಾ ದೊಡ್ಡ ಟ್ಯಾಂಕ್‌ಗಳಿಗೆ ಪೈಪ್‌ಲೈನ್‌ ಸಂಪರ್ಕ ಮಾಡಿಕೊಂಡು ಬೇಸಗೆಯಲ್ಲಿ ನೀರಿನ ಅಭಾವ ಇರುವ ವೇಳೆ ಶುದ್ಧ ನೀರು ಪಡೆಯಬಹುದಾಗಿದೆ.

ಬೇಸಗೆಯಲ್ಲಿ ನೀರಿನ ಕೊರತೆ ಇದ್ದರೂ ಸ್ನಾನದ ಬಳಕೆಗೆ ಶವರ್‌ ಬಳಸಿದರೆ ಸುಮಾರು 100 ಲೀ. ನೀರು, ಬಕೆಟ್‌ ಬಳಸಿದರೆ ಸುಮಾರು 18 ಲೀಟರ್‌ ನೀರು ಬಳಕೆಯಾಗುತ್ತದೆ. ಅದೇ ರೀತಿ ಶೌಚಾಲಯದಲ್ಲಿ ಪ್ಲಶ್‌ ಮಾಡಿದಾಗ 20 ಲೀಟರ್‌ನಷ್ಟು ನೀರು ಪೋಲಾಗುತ್ತದೆ. ಈ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡಲು ಮಾರುಕಟ್ಟೆಯಲ್ಲಿ ತಂತ್ರಜ್ಞಾನವಿದೆ. ಹೀಗಿರುವಾಗ ಬೇಸಗೆ ಕಾಲದಲ್ಲಿ ಸುರಿಯುವ ಮಳೆ ನೀರನ್ನೂ ಸಂಗ್ರಹಿಸಿ, ಅದನ್ನು ಕುಡಿಯುವ ಉದ್ದೇಶಕ್ಕೆ ಉಪಯೋಗಿಸಿದರೆ, ಸಂಸ್ಕರಿಸಿದ ನೀರನ್ನು ಹೂದೋಟಕ್ಕೆ ಹಾಯಿಸಲು, ವಾಹನಗಳನ್ನು ತೊಳೆಯಲು ಉಪಯೋಗಿಸಬಹುದು.

ಮಳೆಯಿಂದ ಬಾವಿ ತುಂಬಿ ಹರಿದಿತ್ತು
ಮಳೆನೀರನ್ನು ಚರಂಡಿಗೆ ಹರಿಯಲು ಬಿಡದೆ ಬಾವಿ ಅಥವಾ ಬೋರ್‌ವೆಲ್‌ಗ‌ಳಿಗೆ ಬಿಟ್ಟರೆ ಬೇಸಗೆ ಕಾಲದಲ್ಲಿಯೂ ನೀರು ಪಡೆಯಬಹುದು. ಫಿಲ್ಟರಿಂಗ್‌ ವ್ಯವಸ್ಥೆ ಇಲ್ಲದ ಕಡೆ ಮಳೆ ನೀರನ್ನು ಕುಡಿಯುವ ಉದ್ದೇಶಕ್ಕೆ ಉಪಯೋಗಿಸುವುದಕ್ಕೆ ಅಸಾಧ್ಯವಾದರೂ, ಹೂದೋಟ, ವಾಹನ ತೊಳೆಯಲು ಉಪಯೋಗ ಮಾಡಿಕೊಳ್ಳಬಹುದು. ನನ್ನ ಮನೆಯ ಬಾವಿಯಲ್ಲಿ ಈಗಲೂ ನೀರು ಇದೆ. ಕಳೆದ ವರ್ಷ ಮೇ 29ಕ್ಕೆ ಸುರಿದಿದ್ದ ಭಾರೀ ಮಳೆಗೆ ನಮ್ಮ ಮನೆ ಬಾವಿ ತುಂಬಿ ನೀರು ಹೊರಕ್ಕೆ ಹರಿದಿತ್ತು. ಹೀಗಾಗಿ, ಮಳೆಕೊಯ್ಲು ವ್ಯವಸ್ಥೆಯಿದ್ದರೆ ಬೇಸಗೆಯಲ್ಲಿ ಅನಿರೀಕ್ಷಿತವಾಗಿ ಸುರಿಯುವ ನಾಲ್ಕೈದು ದೊಡ್ಡ ಪ್ರಮಾಣದ ಮಳೆಯು ಬಾವಿಯ ನೀರಿನ ಮಟ್ಟವನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ.
ನಾರಾಯಣ ನಾಯಕ್‌ ಪತ್ತುಮುಡಿ, ಮಳೆಕೊಯ್ಲು ಅಳವಡಿಸಿದವರು

 ನೀರಿನ ಬವಣೆ ನೀಗಿಸಲು ಸಹಕಾರಿ
ಬೇಸಗೆಯಲ್ಲಿ ಬರುವ ಮಳೆನೀರನ್ನು ಚರಂಡಿಗೆ ಹರಿಸುವ ಬದಲು ಮಳೆಕೊಯ್ಲು ಮುಖೇನ ಶೇಖರಿಸಿದರೆ ಬೇಸಗೆ ಕಾಲದ ನೀರಿನ ಬವಣೆಯನ್ನು ನೀಗಿಸಲು ಸಾಧ್ಯ. ಬೇಸಗೆ ವೇಳೆ ಸಾಮಾನ್ಯವಾಗಿ ಕೊಳವೆ ಬಾವಿಗಳು, ಬಾವಿಗಳು ಬತ್ತಿ ಹೋಗುವ ಸ್ಥಿತಿಗೆ ಬಂದಿರುತ್ತವೆ. ಆಗ, ಮಳೆಕೊಯ್ಲು ಮೂಲಕ ಆ ನೀರನ್ನು ಬಾವಿಗೆ ಸಂಪರ್ಕ ಕಲ್ಪಿಸಿದಾಗ ಬಾವಿಯಲ್ಲಿ ನೀರು ಇಂಗಿ ಬೇಸಗೆಯಲ್ಲೂ ನೀರು ಲಭಿಸುತ್ತದೆ.
 - ಕ್ಲೆಮೆಂಟ್‌ ಡಿ’ಸೋಜಾ, ಮಳೆನೀರು ಕೊಯ್ಲು ತಜ್ಞ

ಮನೆ-ಮನೆಗೆ ತಲುಪುತ್ತಿದೆ ಸುದಿನ ಜಾಗೃತಿ
ಉದಯವಾಣಿಯು ಸುದಿನದಲ್ಲಿ ಒಂದು ವಾರದಿಂದ ಮಳೆಕೊಯ್ಲು ಬಗ್ಗೆ ಜನಜಾಗೃತಿ ಮೂಡಿಸುವುದಕ್ಕೆ ಹಮ್ಮಿಕೊಂಡಿರುವ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನಕ್ಕೆ ನಗರವಾಸಿಗಳು ನಿರೀಕ್ಷೆಗೂ ಮೀರಿದ ರೀತಿ ಸ್ಪಂದಿಸುತ್ತಿರುವುದು ಶ್ಲಾಘನೀಯ. ಮಳೆಕೊಯ್ಲು ಅಳವಡಿಸಿಕೊಂಡಿರುವ ಜನರ ಯಶೋಗಾಥೆಗಳನ್ನು ನೋಡಿದ ಅನಂತರ ಮತ್ತಷ್ಟು ಮಂದಿ ತಮ್ಮ ಮನೆಗಳಲ್ಲಿಯೂ ಮಳೆಕೊಯ್ಲು ಮಾಡುವುದಕ್ಕೆ ಮುಂದಾಗಿದ್ದಾರೆ. ಹಲವರು ಉದಯವಾಣಿಗೆ ಕರೆ ಮಾಡಿ, ತಮ್ಮ ಮನೆಗಳಲ್ಲಿ ಮಳೆಕೊಯ್ಲು ಮಾಡುವುದಕ್ಕೆ ಸೂಕ್ತ ಸಲಹೆ ಹಾಗೂ ಅದಕ್ಕೆ ಬೇಕಾಗಿರುವ ತಂತ್ರಜ್ಞ ವ್ಯವಸ್ಥೆ, ಖರ್ಚು-ವೆಚ್ಚದ ಬಗ್ಗೆ ಮಾಹಿತಿ ಕೋರುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಉದಯ ವಾಣಿಯು ಮುಂದಿನ ವಾರದಲ್ಲಿ ನಗರದ‌ಲ್ಲಿ ಸಾರ್ವಜನಿಕರಿಗೆ ಮಳೆಕೊಯ್ಲು ಬಗ್ಗೆ ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ “ಮಳೆಕೊಯ್ಲು ಕಾರ್ಯಾಗಾರ’ ಹಮ್ಮಿಕೊಂಡಿದೆ. ಈ ಕಾರ್ಯಾಗಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮಳೆಕೊಯ್ಲು ಪರಿಣತರು, ಮಳೆಕೊಯ್ಲಿನಿಂದ ನೀರಿನ ಸಮಸ್ಯೆ ನೀಗಿಸಿಕೊಂಡಿರುವ ನಗರವಾಸಿಗಳು, ಸರಕಾರದ ಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈಗ ಮಳೆಕೊಯ್ಲು ಅಳವಡಿ ಸಿಕೊಳ್ಳುವುದಕ್ಕೆ ಮುಂದಾಗಿರುವ ಎಲ್ಲ ನಗರವಾಸಿಗಳ ಸಂಶಯಗಳಿಗೆ ಸ್ಪಂದಿಸುವ ಪ್ರಯತ್ನವನ್ನು ಉದಯವಾಣಿ ಮಾಡಲಿದೆ.

ನೀವು ಮಳೆಕೊಯ್ಲು ಮಾಡಿದ್ದರೆ ನಮಗೆ ತಿಳಿಸಿ
ನಗರವಾಸಿಗಳಲ್ಲಿ ಅನೇಕರು ಈಗಾಗಲೇ ಇಂಥ ರಚನಾತ್ಮಕ ಪ್ರಯತ್ನವನ್ನು ಕೈಗೊಂಡಿರಬಹುದು. ತಮ್ಮ ಮನೆ-ಬಾವಿ, ಬೋರ್‌ವೆಲ್‌ ಅಥವಾ ಸೀಮಿತ ಜಾಗ ಹೊಂದಿರುವವರೂ ಕಡಿಮೆ ಖರ್ಚಿನಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿರಬಹುದು. ಆ ಮೂಲಕ, ಮಹಾನಗರ ಪಾಲಿಕೆಯ ನೀರನ್ನೇ ನಂಬಿ ಕುಳಿತುಕೊಳ್ಳುವ ಕಠಿನ ಪರಿಸ್ಥಿತಿಯಿಂದ ಹೊರಬಂದಿರಬಹುದು. ಹೀಗೆ ಶಾಶ್ವತ ಪರಿಹಾರ ಕಂಡುಕೊಂಡವರು ಉಳಿದವರಿಗೂ ಪ್ರೇರಣೆಯಾಗುವಂಥ ತಮ್ಮ ಯಶೋಗಾಥೆಗಳನ್ನು 9900567000 ನಂಬರ್‌ಗೆ ವಾಟ್ಸಪ್‌ ಮಾಡಬಹುದು. ಆಯ್ದವುಗಳನ್ನು ಪ್ರಕಟಿಸಲಾಗುವುದು.

ಮಳೆ ಕೊಯ್ಲು ಯಶೋಗಾಥೆ
ಇಂಗುಗುಂಡಿಯಿಂದ ಅಂತರ್ಜಲಕ್ಕೆ ಕೊಡುಗೆ

ಡೊಂಗರಕೇರಿಯ ನ್ಯೂ ಫೀಲ್ಡ್‌ ಸ್ಟ್ರೀಟ್‌ನಲ್ಲಿರುವ ರಾಘವೇಂದ್ರ ಪ್ರಭು ಅವರ ಮನೆಯ ಕಾಂಪೌಂಡ್‌ ಬಳಿ ಎರಡು ವರ್ಷಗಳ ಹಿಂದೆ ಇಂಗುಗುಂಡಿ ಮಾಡಿ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲಾಗುತ್ತಿದೆ.
ಎಂಟು ಅಡಿ ಉದ್ದ, 2.5 ಅಡಿ ಅಗಲ, ಮೂರು ಅಡಿ ಆಳವಿರುವ ಈ ಗುಂಡಿಯಲ್ಲಿ ಮಳೆಗಾಲದಲ್ಲಿ ಯಥೇತ್ಛ ನೀರು ಇಂಗುತ್ತದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಲು ಅವರದೊಂದು ಅಳಿಲು ಸೇವೆ. ಕಾಂಪೌಂಡ್‌ ತಗ್ಗು ಇರುವು ದರಿಂದ ಮಳೆ ನೀರು ಬ್ಲಾಕ್‌ ಆಗಿ ಮನೆಯಂಗಳಕ್ಕೆ ನೀರು ಬರುತ್ತಿತ್ತು. ಇಂಗುಗುಂಡಿ ಮಾಡಿದ ಅನಂತರ ಆ ಸಮಸ್ಯೆಯಿಲ್ಲ ಎನ್ನುತ್ತಾರೆ ಅವರು. ಇದಕ್ಕೆ ಕೇವಲ 4 ಸಾವಿರ ರೂ.ಗಳಷ್ಟು ಖರ್ಚಾಗಿದೆ.

ಮಳೆಕೊಯ್ಲು ನೀರೇ ಆಸರೆ
ನೀರುಮಾರ್ಗ ಪಂಚಾಯತ್‌ನ ಹಿಂಬದಿಯಲ್ಲಿ ವಾಸವಾಗಿರುವ ರೋನಿ ಗೊನ್ಸಾಲ್ವಿಸ್‌ ಅವರು 12 ವರ್ಷಗಳ ಹಿಂದೆಯೇ ಮಳೆಕೊಯ್ಲು ವ್ಯವಸ್ಥೆಯನ್ನು ತಮ್ಮ ಮನೆಯಲ್ಲಿ ಅಳವಡಿಸಿದ್ದು, ಬೇಸಗೆ ಕಾಲದಲ್ಲಿ ನೀರಿನ ಸಮಸ್ಯೆಯಿಂದ ಮುಕ್ತರಾಗಿದ್ದಾರೆ. 5 ಸೆಂಟ್ಸ್‌ ಜಾಗದಲ್ಲಿರುವ ತಮ್ಮ ಮನೆಯ ಟೆರೇಸ್‌ಗೆ ಪೈಪ್‌ ಹಾಕಿ ಆ ನೀರನ್ನು ಫಿಲ್ಟರ್‌ ಮಾಡಿ ಮನೆಯ ಬದಿಯಲ್ಲಿ ಇರಿಸಿರುವ 10,000 ಲೀಟರ್‌ ಟ್ಯಾಂಕ್‌ಗೆ ಬಿಡುತ್ತೇವೆ. ಮಳೆ ನೀರು ಟ್ಯಾಂಕರ್‌ನಲ್ಲಿ ಶೇಖರಣೆಯಾಗುತ್ತದೆ. ಅಗತ್ಯ ಬಿದ್ದಾಗ ಆ ನೀರನ್ನು ಬಳಸುತ್ತೇವೆ. ಪಂಚಾಯತ್‌ ನೀರು ಯಾವತ್ತಾದರೂ ಒಂದು ದಿನ ಬರುತ್ತದೆ. ಆ ಸಮಯದಲ್ಲಿ ಈ ನೀರೇ ನಮಗೆ ಆಸರೆಯಾಗುತ್ತದೆ. ಈ ವ್ಯವಸ್ಥೆಯಿಂದಾಗಿ ಸಂಗ್ರಹಿಸಿದ ನೀರನ್ನು ಟೆಸ್ಟ್‌ ಮಾಡಿಸಿದಾಗ ಕುಡಿಯಲು ಯೋಗ್ಯವಾಗಿದೆ ಎಂಬ ವರದಿ ಬಂತು. ಹಾಗಾಗಿ ದೈನಂದಿನ ಉಪಯೋಗಕ್ಕೆ ಅದನ್ನು ಬಳಸುತ್ತಿದ್ದೇವೆ. ಅಲ್ಲದೆ ನೀರಿನ ಮಹತ್ವದ ಬಗ್ಗೆ ನಮಗೆ ಅರಿವಿದೆ. ಅದಕ್ಕಾಗಿ ಮನೆ ಅಂಗಳಕ್ಕೆ ಬೀಳುವ ನೀರನ್ನು ಮನೆಯ ಕಾಂಪೌಂಡ್‌ಗೆ ತಾಗಿಕೊಂಡಿರುವ ಪಂಚಾಯತ್‌ನ ವ್ಯರ್ಥ ಬೋರ್‌ವೆಲ್‌ಗೆ ಬೀಡುತ್ತೇವೆ ಎನ್ನುತ್ತಾರೆ ಅವರು.

ಪ್ರಾತ್ಯಕ್ಷಿಕೆಯೇ ಪ್ರೇರಣೆ
ಮಂಗಳೂರು ತಾ| ಮಹಿಳಾ ಮಂಡಲದ ಅಧ್ಯಕ್ಷೆ ಚಂಚಲಾ ತೇಜೋಮಯ ಅವರು ಜಿ.ಪಂ. ಎಂಜಿನಿಯರ್‌ಗಳು ನಡೆಸಿಕೊಟ್ಟ ಪ್ರಾತ್ಯಕ್ಷಿಕೆಯಿಂದ ಪ್ರೇರಿತರಾಗಿ ತಮ್ಮ ಮನೆಯಲ್ಲಿ ಮಳೆಕೊಯ್ಲು ಪದ್ಧತಿ ಅಳವಡಿಸಿ ಕೊಂಡಿದ್ದಾರೆ. ಅಲ್ಲದೆ ಇತರ 12 ಕಡೆಗಳಲ್ಲಿಯೂ ಇದನ್ನು ಯಶಸ್ವಿಯಾಗಿಸಿದ ಹೆಗ್ಗಳಿಕೆ ಇವರದು. 2016ರ ಜೂನ್‌ ತಿಂಗಳಲ್ಲಿ ಜಿ.ಪಂ. ಎಂಜಿನಿ ಯರ್‌ಗಳಾದ ಲೋಕೇಶ್‌ ಮತ್ತು ಸುಧಾಕರ್‌ ಅವರು ಮಳೆಕೊಯ್ಲು ಪ್ರಾತ್ಯಕ್ಷಿಕೆ ನೀಡಿದ್ದರು. ಇದರಿಂದ ಅವರು ಬಲ್ಮಠದ ತಮ್ಮ ಮನೆಯಲ್ಲಿ ಮೊದಲ ಪ್ರಯೋಗ ನಡೆಸಿದರು. ಕೆಳಭಾಗದಲ್ಲಿ ಸಮಪ್ರಮಾಣದಲ್ಲಿ ಜಲ್ಲಿ, ಮರಳು, ಇದ್ದಿಲು ಹಾಕಿ ಮೇಲ್ಭಾಗದಲ್ಲಿ ಡ್ರಮ್‌ ಇಟ್ಟು ಛಾವಣಿ ನೀರನ್ನು ಫಿಲ್ಟರ್‌ ವ್ಯವಸ್ಥೆ ಮಾಡಿ ಬಾವಿಗೆ ಪೈಪ್‌ ಮುಖಾಂತರ ಬಿಡಲಾಗಿದೆ. ಮೂರು ವರ್ಷಗಳಿಂದ ಬಾವಿ ನೀರು ಬತ್ತಿಲ್ಲ. ಸುತ್ತಮುತ್ತಲಿನಲ್ಲಿ ಬೋರ್‌ವೆಲ್‌ ತೆಗೆದರೂ ಅಂತರ್ಜಲ ಮಟ್ಟದಲ್ಲಿ ಕುಸಿತವಾಗಿಲ್ಲ ಎನ್ನುತ್ತಾರೆ ಅವರು.

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next