ಜೈಪುರ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಗಿಸಿದರೆ ಗೌತಮ್ ಅದಾನಿ ಅವರಂತಹ ಕೈಗಾರಿಕೋದ್ಯಮಿಗಳಿಂದ ಭಾರತವನ್ನು ಉಳಿಸಬಹುದು ಎಂದು ಹೇಳಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಕ್ಷದ ರಾಜಸ್ಥಾನ ಉಸ್ತುವಾರಿ ಸುಖ್ಜಿಂದರ್ ಸಿಂಗ್ ರಾಂಧವಾ ವಿವಾದವನ್ನು ಹುಟ್ಟುಹಾಕಿದ್ದಾರೆ.
ಗೌತಮ್ ಅದಾನಿ ಅವರಂತಹ ಕೈಗಾರಿಕೋದ್ಯಮಿಗಳನ್ನು ತೊಡೆದುಹಾಕಲು ಬಯಸಿದರೆ ಪ್ರಧಾನಿ ಮೋದಿಯನ್ನು ಸೋಲಿಸಿ ಎಂದು ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ರಾಂಧವಾ ಈ ಹೇಳಿಕೆಗಳನ್ನು ನೀಡಿದ್ದಾರೆ.
ಅದಾನಿ ಗ್ರೂಪ್ ವಿರುದ್ಧ ಯುಎಸ್ ಸಂಸ್ಥೆ ಹಿಂಡೆನ್ಬರ್ಗ್ ಮಾಡಿರುವ ಆರೋಪಗಳನ್ನು ಪರಿಶೀಲಿಸಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸಲು ಒಪ್ಪದ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಜೈಪುರದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಕಾಂಗ್ರೆಸ್ ನಾಯಕ ಮಾತನಾಡಿದರು.
“ಮೋದಿ ದೇಶವನ್ನು ನಾಶಪಡಿಸುತ್ತಿದ್ದಾರೆ ಮತ್ತು ಕೇಂದ್ರದಲ್ಲಿರುವ ಬಿಜೆಪಿ ರಾಷ್ಟ್ರವನ್ನು ಮಾರಾಟ ಮಾಡುತ್ತಿದೆ, ಆದ್ದರಿಂದ ನಮ್ಮ ಹೋರಾಟವು ಅದಾನಿಯೊಂದಿಗೆ ಅಲ್ಲ ಆದರೆ ನೇರವಾಗಿ ಬಿಜೆಪಿಯೊಂದಿಗೆ” ಎಂದರು. “ಎಲ್ಲರೂ ಮೋದಿ ಬಗ್ಗೆ ಮಾತನಾಡುವಾಗ ಅದಾನಿ ಬಗ್ಗೆ ಮಾತನಾಡುತ್ತಿದ್ದಾರೆ. ಅದಾನಿಯನ್ನು ತೊಲಗಿಸಲು ಅವರ ಸೋಲು ಮುಖ್ಯವಾಗಿದೆ ಎಂದು ರಾಂಧವ ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿಸಿದರು.