Advertisement

ಕೃಷ್ಣನಿದ್ದಲ್ಲಿ ಜಯ-ಮಹಾಭಾರತದ ಥೀಂ

09:01 AM Oct 23, 2017 | |

ಉಡುಪಿ: ಕೃಷ್ಣನಿದ್ದಲ್ಲಿ ಜಯ ಎನ್ನುವುದು ಮಹಾಭಾರತ ಗ್ರಂಥದ ಮುಖ್ಯ ಥೀಂ ಎಂದು ಹಿರಿಯ ವಿದ್ವಾಂಸ ಡಾ| ಬನ್ನಂಜೆ ಗೋವಿಂದಾಚಾರ್ಯ ಹೇಳಿದರು. ಮಣಿಪಾಲ ವಿ.ವಿ.ಯ ಯುರೋಪಿಯನ್‌ ಸ್ಟಡೀಸ್‌ ವಿಭಾಗದ ದ್ವೆ„ತ ಫಿಲಾಸಫಿ ರಿಸೋರ್ಸ್‌ ಸೆಂಟರ್‌ ಶನಿವಾರ ಆಯೋಜಿಸಿದ ಮಹಾಭಾರತ ಕುರಿತ ಉಪನ್ಯಾಸ ಮಾಲಿಕೆಯಲ್ಲಿ ಅವರು ಆರಂಭದ ಉಪನ್ಯಾಸ ನೀಡಿದರು.

Advertisement

ಪ್ರಸ್ತುತ ಮಹಾಭಾರತದ ನಾಲ್ಕು ಮುದ್ರಿತ ಪ್ರತಿಗಳು ಲಭ್ಯ ಇದೆ. ಇವುಗಳಲ್ಲಿ ವ್ಯತ್ಯಾಸವೂ ಇದೆ. ತಪ್ಪಾಗಿ ಸೇರಿಸಿರುವುದು, ತಮಗೆ ಬೇಡವೆಂದುಕೊಂಡದ್ದನ್ನು ತೆಗೆದುಹಾಕಿದ್ದು, ಅಜ್ಞಾನದಿಂದ ತಪ್ಪು ಬರೆದದ್ದು ನಡೆದಿದೆ. ಮಧ್ವಾಚಾರ್ಯರು 700 ವರ್ಷಗಳ ಹಿಂದೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಲಭ್ಯವಿದ್ದ ನೂರಾರು ಪಠ್ಯಗಳನ್ನು ಸಂಗ್ರಹಿಸಿ ಅಪೂರ್ವ ಸಂಪಾದನಾ ಕಾರ್ಯವನ್ನು ನಿರ್ವಹಿಸಿದರು ಎಂದರು.

ಮೂರು ಅರ್ಥಗಳು, ಬಹುಮುಖಗಳು
ಮನಃಶಾಸ್ತ್ರೀಯವಾಗಿ (ಸಾರ ಭಗವದ್ಗೀತೆ), ಆಸ್ತೀಕವಾದ (ಸಾರ ವಿಷ್ಣುಸಹಸ್ರನಾಮ), ಭಗವಂತನ ಮಹಿಮೆ (ಇಡೀ ಪಠ್ಯ) ಹೀಗೆ ಮೂರು ತೆರನಾಗಿ ಮಹಾಭಾರತಕ್ಕೆ ಅರ್ಥಗಳಿವೆ ಎಂದು ವ್ಯಾಸರು ಹೇಳಿದ್ದಾರೆ. ಕೃಷ್ಣನಿಗೆ   ಅನೇಕ ಆರೋಪ  ಹೊರಿಸುತ್ತಾರೆ. ಆದರೆ ಯಥಾರ್ಥ ಬೇರೆ ಇದೆ. ದ್ರೋಣಾಚಾರ್ಯರು ದಿನಕ್ಕೆ 10,000 ಜನರನ್ನು ಕೊಲ್ಲಲು ಹೊರಟಾಗ ಸುಳ್ಳು ಹೇಳಿ ಕೊಲ್ಲಿಸಲಾಯಿತು.

ಲೋಕದ ಸಜ್ಜನಿಕೆಗೆ ಯಾವುದು ಪೂರಕವೋ ಅದೇ ಸತ್ಯ ಎಂಬ ಸಂದೇಶ ಇಲ್ಲಿದೆ. ಯುದ್ಧವನ್ನು ನಿಲ್ಲಿಸಲು ಕೃಷ್ಣ ಬಹಳ ಪ್ರಯತ್ನ ಪಟ್ಟಿದ್ದ, ರಾಜಿಗೂ ಯತ್ನಿಸಿದ್ದ. ನರಕಾಸುರನ ಅಧೀನವಿದ್ದ 16,100 ಹೆಮ್ಮಕ್ಕಳನ್ನು ಬಿಡಿಸಿದಾಗ ಅವರು ತಮ್ಮ ಮನೆಯಲ್ಲಿ ಸೇರಿಸಿಕೊಳ್ಳುವುದಿಲ್ಲವೆಂದರು. ಆ ಕಾರಣ ಅವರನ್ನು ಮದುವೆಯಾಗಿ ಬೇಕಾದ ವ್ಯವಸ್ಥೆ ಮಾಡಿಸಿದ್ದ. ಕೃಷ್ಣನ ಒಂದೊಂದು ಕ್ರಿಯೆ ಹಿಂದೆ ತಣ್ತೀಜ್ಞಾನ ಅಡಗಿದೆ. ಒಬ್ಬೊಬ್ಬರಿಗೆ ಒಂದೊಂದು ತೆರನಾಗಿ ಕಾಣುತ್ತಾನೆ ಎಂದರು.

ಗಣಿತ ಗೊಂದಲ
ರಾಮ ಒಂದೆಡೆ 13,000 ವರ್ಷ, ಇನ್ನೊಂದೆಡೆ 11,000 ವರ್ಷ ಬದುಕಿದ ಎಂದಿದೆ. ಇದು 30 ದಿನಗಳ ಲೆಕ್ಕದ ತಿಂಗಳು, 27 ದಿನಗಳ (ನಕ್ಷತ್ರಗಳ ಲೆಕ್ಕ) ತಿಂಗಳಿನ ಪ್ರಕಾರ ಎರಡೂ ಸರಿ ಎಂದು ಮಧ್ವಾಚಾರ್ಯರು ತಿಳಿಸಿದ್ದರು. ಇಂತಹ ಸಂಶೋಧನ ಚಿಂತನೆ ಅಗತ್ಯ ಎಂದು ಬನ್ನಂಜೆ ಹೇಳಿದರು. 

Advertisement

ಕೇಂದ್ರದ ಸಮನ್ವಯಕಾರ ಶ್ರೀನಿವಾಸ ಕುಮಾರ್‌ ಎನ್‌. ಆಚಾರ್ಯ ಸ್ವಾಗತಿಸಿ ಅರ್ಜುನ ಎಸ್‌.ಆರ್‌. ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next