Advertisement

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಹಲವು ಮಂದಿ ಜೈಲುಪಾಲು: ಎಚ್‌ಡಿಕೆ

11:54 AM Dec 29, 2017 | Team Udayavani |

ಮಂಗಳೂರು: ಎತ್ತಿನಹೊಳೆ ಯೋಜನೆ ದುಡ್ಡು ಕೊಳ್ಳೆ ಹೊಡೆಯುವ ಯೋಜನೆ ಎಂದು ಸಾಬೀತಾಗುತ್ತಿದ್ದು, ಜೆಡಿಎಸ್‌ ಸರಕಾರ ಬಂದರೆ ಈ ಯೋಜನೆಯಲ್ಲಿ ಒಳಗೊಂಡಿರುವ ಹಲವು ಮಂದಿ ಜೈಲುಪಾಲಾಗಲಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಮಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಗೆ 12,800 ಕೋ.ರೂ. ನಿಗದಿಪಡಿಸಲಾಗಿದೆ. ಕಳೆದ 5 ವರ್ಷಗಳಲ್ಲಿ ಇದಕ್ಕೆ ವೆಚ್ಚ ಮಾಡಿದ್ದು ಕೇವಲ 2,800 ಕೋ.ರೂ. ಮಾತ್ರ. ಅಂದರೆ ಯೋಜನಾ ವೆಚ್ಚದ ಶೇ. 10 ಮಾತ್ರ ವಿನಿಯೋಗವಾಗಿದೆ. ಹೀಗೆಯೇ ಮುಂದುವರಿದರೆ ಯೋಜನೆ ಪೂರ್ಣಗೊಳ್ಳಲು ಎಷ್ಟು ವರ್ಷ ಬೇಕಾಗಬಹುದು ಎಂಬುದನ್ನು ಜನತೆ ಆಲೋಚಿಸಬೇಕಾಗಿದೆ. ಯೋಜನೆಯ ಕಾಮಗಾರಿ 2014ರಲ್ಲಿ ಆರಂಭಗೊಂಡಿತ್ತು. ಕಾಮಗಾರಿ ಆರಂಭಗೊಂಡ ಒಂದೇ ವರ್ಷದಲ್ಲಿ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ನೀಡುವುದಾಗಿ ಕಾಂಗ್ರೆಸ್‌ ಸರಕಾರ ಹೇಳಿತ್ತು. ಆದರೆ ಕಾಮಗಾರಿ ಸಕಲೇಶಪುರದಿಂದ ಮುಂದಕ್ಕೆ ಹೋಗಿಲ್ಲ ಎಂಬುದು ವಾಸ್ತವ ಎಂದರು.

ಎತ್ತಿನಹೊಳೆಯಲ್ಲಿ 9 ಟಿಎಂಸಿ ನೀರು ಮಾತ್ರ ಲಭ್ಯ ಎಂದು ತಜ್ಞರು ಹೇಳಿದ್ದಾರೆ. ಆದರೆ ಸರಕಾರ ಅಲ್ಲಿ 24 ಟಿಎಂಸಿ ನೀರು ಇದೆ ಎಂದು ಬಿಂಬಿಸಿ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಇದೊಂದು ದುಡ್ಡು ಕೊಳ್ಳೆ ಹೊಡೆಯುವ ಯೋಜನೆ ಎಂದು ನಾನು ಆರಂಭದಲ್ಲೇ ಹೇಳಿದ್ದೆ. ಇದರ ನಡುವೆ ಕೋಲಾರ, ಚಿಕ್ಕಬಳ್ಳಾಪುರ ಪ್ರದೇಶಕ್ಕೆ ಬೆಂಗಳೂರಿನಿಂದ ಕೊಳಚೆ ನೀರನ್ನು ಸಂಸ್ಕರಿಸಿ ಕೊಂಡೊಯ್ಯುವ 1,500 ಕೋ.ರೂ. ಮೊತ್ತದ ಯೋಜನೆ ರೂಪಿಸಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಪ್ರದೇಶದಲ್ಲಿ ಕುಡಿಯುವ ನೀರಿಗೆ ತತ್ವಾರವಿದೆ. ಎತ್ತಿನಹೊಳೆ ಯೋಜನೆಯಿಂದ ನೀರು ಸಿಗಲಾರದು ಎಂಬುದನ್ನು ನಾನು ಹಿಂದೆ ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ. ಇದೀಗ ಕೋಲಾರ ಭಾಗದ ಜನರಲ್ಲೂ ಈ ಯೋಜನೆಯಿಂದ ನೀರು ಸಿಗುವ ಬಗ್ಗೆ ಅನಿಶ್ಚಿತತೆ ಆವರಿಸತೊಡಗಿದೆ. ವಿಫಲ ಯೋಜನೆಯ ಮೂಲಕ ಜನರ ಹಣವನ್ನು ಸರಕಾರ ದುರ್ಬಳಕೆ ಮಾಡಲು ಹೊರಟಿದೆ ಎಂದರು.

ಯೋಜನೆಯನ್ನು ಅನುಷ್ಠಾನಗೊಳಿಸಿದವರು ಡಿ.ವಿ. ಸದಾನಂದ ಗೌಡ. ಆದರೆ ಇಲ್ಲಿ ಅವರದೇ ಪಕ್ಷದ ಸಂಸದರು ಯೋಜನೆಯ ವಿರುದ್ಧ ಪಾದಯಾತ್ರೆ ಮಾಡುತ್ತಾರೆ ಎಂದವರು ಟೀಕಿಸಿದರು.

ಕಾಮಗಾರಿ ಇಲ್ಲ; ಪ್ರಚಾರ ಮಾತ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಸಭೆಗಳನ್ನು ಆಯೋಜಿಸಿ ಕೋಟ್ಯಂತರ ರೂ. ಸರಕಾರಿ ಹಣವನ್ನು ವ್ಯಯ ಮಾಡುತ್ತಿದ್ದಾರೆ. ಒಂದೊಂದು ಸಭೆಗೆ 50ರಿಂದ 60 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಯೋಜನೆಗಳ ಉದ್ಘಾಟನೆ ಎಂದು ಹೇಳಲಾಗುತ್ತದೆ. ಆದರೆ ಅವರೇ ನೀಡುವ ಜಾಹೀರಾತುಗಳು “ಆಯಾ ಯೋಜನೆಗಳು ಪ್ರಗತಿಯಲ್ಲಿವೆ, ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ, ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗಿದೆ’ ಎಂದು ಹೇಳುತ್ತಿವೆ. ಕಾಂಗ್ರೆಸ್‌ ಸಭೆಗಳಲ್ಲಿ ಸಿ.ಎಂ. ಇಬ್ರಾಹಿಂ ಅವರಿಂದ ಖಾಲಿಯಾಗಿರುವ ವಿದೂಷಕನ ಸ್ಥಾನವನ್ನು ಸಿದ್ದರಾಮಯ್ಯ ಅವರು ತುಂಬಿದ್ದಾರೆ ಎಂದು ಕಾಂಗ್ರೆಸ್‌ನವರೇ ಆಡಿಕೊಳ್ಳುತ್ತಿದ್ದಾರೆ ಎಂದವರು ಟೀಕಿಸಿದರು.

Advertisement

ಬಿಜೆಪಿ ಸಂಸದರು ವಿವರಿಸಲಿ
ಮಹಾದಾಯಿ ಯೋಜನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರವೇಶಿಸಿ ಪರಿಹಾರ ರೂಪಿಸುವ ಕಾರ್ಯವನ್ನು ರಾಜ್ಯದ ಬಿಜೆಪಿ ಸಂಸತ್‌ ಸದಸ್ಯರು ಮಾಡಬೇಕು. ರಾಜ್ಯದಲ್ಲಿ 17 ಮಂದಿ ಬಿಜೆಪಿ ಸಂಸದರು ಇದ್ದಾರೆ. ಆದರೆ ಪ್ರಧಾನಿಯವರಿಗೆ ವಾಸ್ತವಾಂಶಗಳನ್ನು ಮನದಟ್ಟು ಸಾಮರ್ಥ್ಯ ಇವರಾರಿಗೂ ಇಲ್ಲ. ಈ ಹಿಂದೆ ಕಾವೇರಿ ವಿಚಾರದಲ್ಲಿ ಈ ರೀತಿಯ ಸಮಸ್ಯೆ ತಲೆದೋರಿದಾಗ ಪ್ರಧಾನಿಯಾಗಿದ್ದ ಎಚ್‌.ಡಿ. ದೇವೇಗೌಡರು ಮಧ್ಯಪ್ರವೇಶಿಸಿ ಪರಿಹಾರ ರೂಪಿಸಿದ್ದರು ಎಂದು ಕುಮಾರಸ್ವಾಮಿ ಹೇಳಿದರು. ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್‌, ಶಾಸಕ ಬಿ.ಬಿ. ನಿಂಗಯ್ಯ, ಮುಖಂಡರಾದ ಅಮರನಾಥ ಶೆಟ್ಟಿ, ಭೋಜೇ ಗೌಡ, ಎಂ.ಬಿ. ಸದಾಶಿವ, ಮಹಮ್ಮದ್‌ ಕುಂಞಿ, ರಾಂ ಗಣೇಶ್‌, ಅಕ್ಷಿತ್‌ ಸುವರ್ಣ, ಹೈದರ್‌ ಪರ್ತಿಪ್ಪಾಡಿ, ಅಲ್ತಾಫ್‌, ಸುಮತಿ ಹೆಗ್ಡೆ, ಇಕ್ಬಾಲ್‌ ಅಹಮ್ಮದ್‌, ಯೋಗೀಶ್‌ ಶೆಟ್ಟಿ ಉಪಸ್ಥಿತರಿದ್ದರು.

ರೈತರಿಗೆ “ಆತ್ಮಹತ್ಯೆ ಭಾಗ್ಯ’
ಅನ್ನ ಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ ಮುಂತಾದ ಭಾಗ್ಯಗಳ ಸರಮಾಲೆಯನ್ನೇ ಪ್ರಕಟಿಸಿದ ಕಾಂಗ್ರೆಸ್‌ ಸರಕಾರ ರೈತರಿಗೆ ಆತ್ಮಹತ್ಯೆ ಭಾಗ್ಯವನ್ನೂ ನೀಡಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯದಲ್ಲಿ 3,500ಕ್ಕಿಂತಲೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಕಾರ ಮಾಡಿರುವ ಸಾಲಮನ್ನಾ ಇನ್ನೂ ರೈತರನ್ನು ತಲುಪಿಲ್ಲ. ಸಾಲ
ಮನ್ನಾ ಘೋಷಣೆಯಾದ ಬಳಿಕ 400ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಚ್‌ಡಿಕೆ ಆರೋಪಿಸಿದರು.

ಸರಕಾರ ಸಂಪೂರ್ಣ ವಿಫಲ
ಕರಾವಳಿ ಭಾಗದಲ್ಲಿ ಕಾನೂನು, ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಅಹಿತಕರ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಅಭಿವೃದ್ಧಿಗಿಂತ ಧರ್ಮದ ಹೆಸರನ್ನು ಮುಂದು ಮಾಡಿಕೊಂಡು ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಕಾರ್ಯವನ್ನು ಬಿಜೆಪಿ, ಕಾಂಗ್ರೆಸ್‌ ಮಾಡುತ್ತಿವೆ. ಇದು ಸಂಪೂರ್ಣವಾಗಿ ನಿಲ್ಲಬೇಕು. ಜಿಲ್ಲೆಯಲ್ಲಿ ಅಭಿವೃದ್ಧಿಗೆ ಇರುವ ವಿಪುಲ ಅವಕಾಶಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದು ಕುಮಾರಸ್ವಾಮಿ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next