Advertisement

ದೇವರು ಪ್ರತ್ಯಕ್ಷನಾದರೆ ನೀನೇನು ವರ ಕೇಳಬೇಕು?

06:00 AM Dec 04, 2018 | |

ದೇವರನ್ನೇ ನಂಬಿ ಬದುಕುತ್ತಿರುವವನಿಗೆ ಆಗಾಗ ದೇವರು ಬೋನಸ್‌ ಕೊಡುತ್ತಾನೆಯೇ ಹೊರತು ಭಕ್ತನ ಹಿಂದಿನ ಜನ್ಮದ ಕರ್ಮಕ್ಕೆ ದೇವರು ಹೊಣೆಯಲ್ಲ, ಆ ಕರ್ಮವನ್ನು ಎಲ್ಲರೂ ಅನುಭವಿಸಲೇಬೇಕು. ದೇವರು ವರ ಕೊಡಲು ಭೂಮಿಗಿಳಿದರೆ, ಜನರು ಅವನಿಗೆ ವಾಪಸ್‌ ಹೋಗಲು ಬಿಡುವುದೇ ಅನುಮಾನ!

Advertisement

ಜನರು ದೇವರನ್ನು ನಂಬುತ್ತಾರೋ, ಬಿಡುತ್ತಾರೋ, ಆದರೆ ಎಲ್ಲರ ತಲೆಯಲ್ಲೂ ದೇವರ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ದೇವರೇ ಇಲ್ಲ ಎಂದು ನಂಬುವ ನಾಸ್ತಿಕನ ಮನಸ್ಸಿನಲ್ಲೂ ಕೂಡ ಒಂದು ವೇಳೆ ದೇವರು ಇದ್ದರೆ ಎಂಬ ಯೋಚನೆ ಆಗಾಗ ಬರಬಹುದು. ಇನ್ನು ದೇವರನ್ನು ನಂಬುವವರ ಮನದಲ್ಲಂತೂ ಸಾಕಷ್ಟು ಪ್ರಶ್ನೆಗಳು ಏಳುತ್ತಿರುತ್ತವೆ. ದೇವರು ಎಲ್ಲಿದ್ದಾನೆ? ಇಲ್ಲೇ ಇದ್ದಾನಾ? ದೂರ ಇದ್ದಾನಾ? ನಮ್ಮೊಳಗೆ ಇದ್ದಾನಾ? ಅವನು ನೋಡಲು ಹೇಗಿರುತ್ತಾನೆ? ನಮ್ಮ ಪುರಾಣಗಳಲ್ಲಿ ವರ್ಣಿಸಿರುವಂತೆ ಇದ್ದಾನಾ? ಯಾವಾಗಲೂ ಕಿರೀಟ ಹಾಕಿಕೊಂಡು ಆಭರಣ ಹೇರಿಕೊಂಡು, ರೇಷ್ಮೆ ವಸ್ತ್ರ ತೊಟ್ಟುಕೊಂಡು ಓಡಾಡುತ್ತಾನಾ? ಅಥವಾ ಇನ್ನೂ ಸಿಂಪಲ್ಲಾಗಿರುತ್ತಾನಾ? ದೇವರು ನಿಜವಾಗಿಯೂ ಇದ್ದಾನೆ ಅಂದರೆ ನಮ್ಮ ಕಣ್ಮುಂದೆ ಯಾಕೆ ಒಮ್ಮೆಯೂ ಬರೋದಿಲ್ಲ? ಯಾಕೆ ದೇವರು ನಮ್ಮ ಕಣ್ಣಿಗೆ ಕಾಣಿಸದಂತೆ ಅವಿತುಕೊಂಡಿದ್ದಾನೆ? ನಮ್ಮನ್ನು ಅವನೇ ಸೃಷ್ಟಿ ಮಾಡಿದ್ದಾನೆ ಅಂದ ಮೇಲೆ ನಮಗೆ ನಮ್ಮ ಸೃಷ್ಟಿಕರ್ತನನ್ನು ನೋಡುವ ಯೋಗ್ಯತೆ ಇಲ್ಲವಾ? ಗಂಭೀರವಾಗಿ ದೇವರ ಬಗ್ಗೆ ಯೋಚಿಸುವವರಿಗೆಲ್ಲ ಇಂತಹ ಇನ್ನಷ್ಟು ಪ್ರಶ್ನೆಗಳು ಎದುರಾಗುತ್ತವೆ. 

ಕಣ್ಣಿಗೆ ಕಾಣದ ದೇವರಿಗೆ ಪ್ರತಿ ದಿನ ಪೂಜೆ ಮಾಡಿ, ಅವನ ಜೊತೆ ಮಾತನಾಡುತ್ತೇವೆ. ಮನದಲ್ಲಿ ಇರುವುದನ್ನು ಅವನ ಜೊತೆ ಚರ್ಚೆ ಮಾಡುತ್ತೇವೆ. ಅದೆಲ್ಲ ನಮ್ಮ ಭ್ರಮೆಯೋ ಅಥವಾ ಅದರಿಂದ ನಿಜವಾಗಿ ಏನಾದರೂ ಪ್ರಯೋಜನವಿದೆಯೋ ಎಂಬ ಬಗ್ಗೆ ನಮಗೆ ಖಾತ್ರಿಯಿಲ. ಇನ್ನು ಒಂದು ದಿನ ದೇವರೇ ನಮ್ಮ ಕಣ್ಮುಂದೆ ಬಂದು ಬಿಟ್ಟರೆ? ಆಗ ಡೈರೆಕ್ಟಾಗಿ ಸುಖ-ದುಃಖ ಹಂಚಿಕೊಳ್ಳಬಹುದಲ್ಲ? ನಮ್ಮ ಸಮಸ್ಯೆಗಳಿಗೆಲ್ಲ ಪರಿಹಾರ ಕೇಳಬಹುದಲ್ಲ? ಆದರೆ ನಿಜವಾಗಿಯೂ ದೇವರು ನಮ್ಮ ಕಣ್ಮುಂದೆ ಪ್ರತ್ಯಕ್ಷವಾದರೆ ಅವನನ್ನು ನಾವು ದೇವರು ಅಂತ ನಂಬುತ್ತೇವಾ ಅಥವಾ ಜೋರಾಗಿ ಕಿರುಚಿಕೊಂಡು ಓಡುತ್ತೇವಾ? ಅಥವಾ ನೀನು ನಾಟಕದವನು ಎಂದು ಬೈದು ಕಳಿಸುತ್ತೇವಾ?

ಸರಿದಾರಿ ಮತ್ತು ತಪ್ಪು ದಾರಿ
ಕುರುಬರ ಪಿಳ್ಳೆ ಕುರಿ ಕಾಯುವವನು ಬೀರಪ್ಪ ಕಾಳಿಯ ಪರಮ ಭಕ್ತನಾದರೂ ಅವನ ಮುಂದೆ ಕಾಳಿ ಸೌಮ್ಯ ಸ್ವರೂಪದಲ್ಲೇ ಪ್ರತ್ಯಕ್ಷಳಾದಾಗ ಕೂಡ ಅವನಿಗೆ ದೇವಿಯನ್ನು ಮಾತನಾಡಿಸಲು ಭಯ ಆಗಿತ್ತಂತೆ. ಕೊನೆಗೆ ಹಟ ಮಾಡಿ ದೇವಿಯಿಂದ ವಿದ್ಯಾಬುದ್ಧಿಯನ್ನು ಪಡೆದು, ಓಂಕಾರವನ್ನು ನಾಲಿಗೆಯ ಮೇಲೆ ಬರೆಸಿಕೊಂಡು ಕಾಳಿದಾಸನಾದ. ಅಜಾಮಿಳ ಸಹ ಪುರಾಣಗಳಲ್ಲಿ ಬರುವ ಒಬ್ಬ ಬ್ರಾಹ್ಮಣ. ಆತ ವೇದ ಪಾರಂಗತನಾಗಿ ಎಲ್ಲ ವೈದಿಕ ಧರ್ಮಾಚರಣೆಗಳನ್ನು ನಡೆಸುತ್ತಾ, ಜೀವನದಲ್ಲಿ ಕೊನೆಗೆ ಪರಮಾತ್ಮನನ್ನು ಸೇರಿ ಮುಕ್ತಿಯನ್ನು ಹೊಂದುವುದೇ ಪರಮ ಗುರಿ ಎಂಬ ಅರಿವಿದ್ದರೂ, ಒಂದು ದಿನ ಒಬ್ಬ ವೇಶ್ಯೆಯನ್ನು ಕಂಡು ಮೋಹಗೊಂಡು ಅವಳ ಸಂಗ ಮಾಡುತ್ತಾನೆ. ಕೊನೆಗೆ ಅವಳ ಜೊತೆಗೇ ಜೀವನ ನಡೆಸುತ್ತಾ ಎಲ್ಲವನ್ನೂ ಮರೆತು ಮುಕ್ತಿಯನ್ನೂ ಕಡೆಗಣಿಸಿ ಬದುಕುತ್ತಾನೆ. ಆದರೂ ಅವನು ಹಿಂದೆ ನಿಷ್ಠೆಯಿಂದ ಮಾಡಿದ ಧರ್ಮಾಚರಣೆಗಳಿಂದ ದೇವರು ಅವನಿಗೆ ವರ ಕೊಡಬೇಕೆಂದು ಅವನ ಮುಂದೆ ಪ್ರತ್ಯಕ್ಷನಾಗುತ್ತಾನೆ. ಎಲ್ಲಾ ಜ್ಞಾನವಿದ್ದರೂ ಮನುಷ್ಯ ಕ್ಷಣಿಕ ಸುಖದಲ್ಲಿ ಜೀವನದ ಪರಮಾರ್ಥವನ್ನೇ ಮರೆಯುತ್ತಾನೆ. ಹಾಗೇ ಅಜಾಮಿಳನೂ ಸಹ ಎಲ್ಲವನ್ನೂ ಅರಿತ ನಂತರವೂ ದೇವರನ್ನು ಅವನು ಕೇಳಿದ ವರವೇನೆಂದರೆ, ತನ್ನ ಪಂಚೇಂದ್ರಿಯಗಳು ಎಂದೆಂದಿಗೂ ಆರೋಗ್ಯದಿಂದ ಕಾರ್ಯಾಚರಣೆಯಲ್ಲಿರಬೇಕು, ಎಷ್ಟೇ ವಯಸ್ಸಾದರೂ ತನ್ನ ದೈಹಿಕ ಸುಖಕ್ಕೆ ಅಡಚಣೆಯೂ ಬರಕೂಡದು ಎಂದು. ದೇವರು ಸುಮ್ಮನೆ ಹಸನ್ಮುಖೀಯಾಗಿ ತಥಾಸ್ತು ಎಂದ.

ಯಾರು, ಯಾವ ವರ ಕೇಳುತ್ತಾರೆ?
ಜನಸಾಮಾನ್ಯರ ಮುಂದೆ ದೇವರು ಪ್ರತ್ಯಕ್ಷನಾಗಿ ಏನು ವರಬೇಕು ಅಂತ ಕೇಳಿದರೆ ಯಾರ್ಯಾರು ಏನೇನು ಕೇಳಬಹುದು ಎಂಬ ಕುತೂಹಲಕ್ಕೆ ಕೆಲವರನ್ನು ಕೇಳಿದೆ. ಕೆಲ ಯುವಕರು ಹೇಳಿದರು. ಅವರು ನನಗೆ ನೂರು ಕೋಟಿ ಕೊಡು ದೇವ್ರೆ, ಇನ್ನೇನೂ ಬೇಡ. ನಾನು ಹಾಕೋ ಕೆಲಸಗಳೆಲ್ಲ ಸಕ್ಸಸ್‌ ಆಗ್ಬೇಕು ಅಂತ ಕೇಳುತ್ತಾರಂತೆ. ಇನ್ನು ಕೆಲವರು ನಾನು ಕರ್ನಾಟಕದ ಮುಖ್ಯಮಂತ್ರಿಯಾಗಬೇಕು ಅಂತ ಕೇಳುತ್ತಾರಂತೆ.

Advertisement

ಕೆಲ ಮಧ್ಯವಯಸ್ಕರು ಕೇಳುವುದು ಏನು ಗೊತ್ತಾ? ನಮ್ಮ ಜೀವನ ಹೇಗೋ ಆಯ್ತು, ನಮ್ಮ ಮಕ್ಕಳನ್ನಾದರೂ ದೊಡ್ಡ ವ್ಯಕ್ತಿಗಳನ್ನಾಗಿ ಮಾಡು. ನನ್ನ ಮಗ ಫಾರಿನ್‌ಗೆ ಹೋಗ್ಬೇಕು, ಮಗಳು ಒಳ್ಳೆ ಮನೆಗೆ ಸೊಸೆಯಾಗಬೇಕು. ನಮಗೆ ಸ್ವಂತ ಮನೆ ಬೇಕು. ನನಗೊಂದು ಒಳ್ಳೆ ಕೆಲಸಬೇಕು, ನಾನು ಕಷ್ಟಪಟ್ಟು ದುಡಿದು ತಿಂತೀನಿ.ವಯಸ್ಸಾದವರಲ್ಲಿ ಕೆಲವರಿಗೆ ವಿಪರೀತ ವ್ಯಾಮೋಹ. ನನ್ನ ಇಷ್ಟು ಬೇಗ ಕರೆಸಿಕೊಳ್ಳಬೇಡಪ್ಪಾ, ಇನ್ನೂ ನನ್ನ ಮೊಮ್ಮಕ್ಕಳ ಮದುವೆ ನೋಡಬೇಕು. ನಾನು ಇನ್ನೊಬ್ಬರಿಗೆ ಭಾರವಾಗಿದ್ದೀನಿ ಅನ್ನಿಸ್ತಾ ಇದೆ, ನನಗೆ ಸ್ವಾವಲಂಬಿಯಾಗಿರೋದಕ್ಕೆ ಶಕ್ತಿ ಕೊಡು. ಒಳ್ಳೆಯ ಆಯಸ್ಸು ಆರೋಗ್ಯ ಕೊಡು ಸಾಕು.

ದೇವರು ಕೊಡೋದೆಲ್ಲ ಬೋನಸ್‌!
ಹುಟ್ಟು ಸಾವಿನ ಸತ್ಯವನ್ನು ಅರಿತುಕೊಂಡವರು ಮಾತ್ರ ದೇವರ ಬಳಿ ಕೇಳುವುದು ಒಂದೇ ವರವನ್ನು. ದೇವ್ರೆ ನನ್ನನ್ನು ನಿನ್ನ ಹತ್ತಿರ ಪ್ರೀತಿಯಿಂದ ಕರೆದುಕೋ, ನಿನ್ನ ಜೊತೆ ಇರೋದಕ್ಕಿಂತ ಹೆಚ್ಚಿನದು ಈ ಲೌಕಿಕ ಜಗತ್ತಿನಲ್ಲೆನೂ ಇಲ್ಲ, ಹುಟ್ಟು ಸಾವುಗಳ ಜಂಜಾಟದಿಂದ ನನಗೆ ಮುಕ್ತಿ ನೀಡು. ನಿನ್ನ ಬಿಟ್ರೆ ನನಗೆ ಇನ್ನೇನೂ ಬೇಡ. ಆದರೆ ನಾವು ಕೇಳಿದ್ದೆಲ್ಲಾ ದೇವರು ಕೊಡಲು ಸಾಧ್ಯವೇ? ಯಾಕೆ ಕೊಡಲು ಸಾಧ್ಯವಿಲ್ಲ? ಅವನು ದೇವರು ತಾನೆ, ಕೊಡಲಿ ಮತ್ತೆ! ನಮ್ಮನ್ನು ಹುಟ್ಟಿಸಿದ್ದು ಅವನೇ. ಹಾಗಿದ್ದ ಮೇಲೆ ನಮಗೆ ಬೇಕಾದ್ದನ್ನೆಲ್ಲಾ ಕೊಡಲಿ ಎನ್ನುತ್ತಾರೆ ಕೆಲವರು. ಅಷ್ಟು ಲಕ್ಷ ಕೋಟಿ ಜೀವರಾಶಿಗಳ ಬೇಡಿಕೆಗಳನ್ನೆಲ್ಲ ಈಡೇರಿಸುತ್ತಾ ಹೋದರೆ ಈ ಪ್ರಪಂಚದಲ್ಲಿ ಜಾಗವೇ ಸಾಲದೆ ಹೋದೀತು! ದೇವರು ಇನ್ನೊಂದು ಪ್ರಪಂಚವನ್ನು ಸೃಷ್ಟಿಸಬೇಕಾದೀತು. ಯಾಕೆಂದರೆ ಮನುಷ್ಯ ಯಾವತ್ತೂ ಒಂದು ಬೇಡಿಕೆಗೆ ತೃಪ್ತನಾಗುವುದಿಲ್ಲ. ಒಂದು ಕೊಟ್ಟರೆ ಇನ್ನೊಂದು ಕೇಳುತ್ತಾನೆ. ಅವನು ಕೇಳಿದ್ದನ್ನೆಲ್ಲ ಕೊಟ್ಟರಷ್ಟೇ ದೇವರು ಒಳ್ಳೆಯವನು, ಇಲ್ಲವಾದರೆ ದೇವರು ಕೂಡ ಕೆಟ್ಟವನು.

ದೇವರು ಜಗತ್ತನ್ನು ಒಂದು ಕಂಪನಿಯ ರೀತಿ ಸೃಷ್ಟಿಸಿ ಮೇಲ್ವಿಚಾರಕರನ್ನು ಒಂದೊಂದು ಕೆಲಸಕ್ಕೆ ನೇಮಿಸಿದ್ದಾನೆ. ನಮ್ಮ ಪಾಪ ಪುಣ್ಯ ಕರ್ಮಗಳ ಖಾತೆಯ ಪ್ರಕಾರ ನಮಗೆ ಏನು ಬೇಕು ಅನ್ನುವುದನ್ನು ನಾವೇ ಜಮೆ ಮಾಡುತ್ತಿರುತ್ತೇವೆ. ಒಳ್ಳೆಯ ಕೆಟ್ಟದ್ದು ಎಲ್ಲವನ್ನೂ ನಿಮ್ಮ ಮುಂದೆ ದೇವರು ಬಿಸಾಕಿದ್ದಾನೆ, ಏನು ಬೇಕು ಅನ್ನುವುದನ್ನು ನೀವೇ ಸೆಲೆಕ್ಟ್ ಮಾಡಿಕೊಳ್ಳಬೇಕು. ದೇವರನ್ನೇ ನಂಬಿ ಬದುಕುತ್ತಿರುವವನಿಗೆ ಆಗಾಗ ದೇವರು ಬೋನಸ್‌ ಕೊಡುತ್ತಾನೆಯೇ ಹೊರತು ಭಕ್ತನ ಹಿಂದಿನ ಜನ್ಮದ ಕರ್ಮಕ್ಕೆ ದೇವರು ಹೊಣೆಯಲ್ಲ, ಆ ಕರ್ಮವನ್ನು ಎಲ್ಲರೂ ಅನುಭವಿಸಲೇಬೇಕು.

ದೇವರು ವರ ಕೊಡಲು ಭೂಮಿಗಿಳಿದರೆ, ಜನರು ಅವನಿಗೆ ವಾಪಸ್‌ ಹೋಗಲು ಬಿಡುವುದೇ ಅನುಮಾನ! ಅದಕ್ಕೆ ದೇವರು ನಮ್ಮ ಅಂತರಂಗದಲ್ಲೇ ಒಂದು ಚೈತನ್ಯವಾಗಿ ಇದ್ದುಕೊಂಡು ಆಗಾಗ ನಿಧಾನವಾಗಿ ಒಂದೊಂದೇ ಸತ್ಯವನ್ನು ತಿಳಿಸುತ್ತಾ ಹೋಗುತ್ತಾನೆ. ನಮ್ಮ ಪಂಚೇಂದ್ರಿಯಗಳನ್ನು ನಾವು ನಿಗ್ರಹಿಸಿಕೊಳ್ಳದೆ, ಅರಿಷಡ್ವರ್ಗಗಳನ್ನು ಸಾಯಿಸದೆ ಇದ್ದರೆ ನಾವು ದೇವರನ್ನು ಪ್ರತ್ಯಕ್ಷವಾಗಿ ಕಾಣಲು ಯೋಗ್ಯರೇ ಅಲ್ಲ.

Advertisement

Udayavani is now on Telegram. Click here to join our channel and stay updated with the latest news.

Next