Advertisement

ಇ-ತ್ಯಾಜ್ಯ ಅರಿವು ಮೂಡದಿದ್ದರೆ ಆಪತ್ತು

12:52 PM Mar 30, 2018 | Team Udayavani |

ಬೀದರ: ಹಳೆಯ, ಉಪಯೋಗಕ್ಕೆ ಬಾರದ ವಿದ್ಯುನ್ಮಾನ ಮತ್ತು ವಿದ್ಯುತ್‌ ಉಪಕರಣಗಳು ಆರೋಗ್ಯ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಇದರ ವಿಲೇವಾರಿಯನ್ನು ಸೂಕ್ತ ಸಮಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕಾದ ಅಗತ್ಯವಿದೆ ಎಂದು ಗುಲಬರ್ಗಾ ವಿವಿ ಪ್ರಾಧ್ಯಾಪಕ ಪ್ರೊ| ಎಸ್‌.ಎನ್‌. ಮೂಲಗೆ ಹೇಳಿದರು.

Advertisement

ನಗರದ ಕರ್ನಾಟಕ ಕಾಲೇಜಿನಲ್ಲಿ ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಸಚಿವಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಗಾರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇ-ತ್ಯಾಜ್ಯದ ಬಗ್ಗೆ ಅರಿವು ಮೂಡಿಸದಿದ್ದಲ್ಲಿ ಭವಿಷ್ಯದಲ್ಲಿ ಆಪತ್ತಾಗುವ ಯಾವುದೇ ಸಂದೇಹವಿಲ್ಲ ಎಂದು ಎಚ್ಚರಿಕೆ ನೀಡಿದರು.

ಮನುಷ್ಯರು ಉಪಯೋಸಿದ ನಂತರ ವ್ಯರ್ಥ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಭೂಮಿಗೆ ಎಸೆಯುವುದರಿಂದ ಮಣ್ಣು, ನೀರು ಮತ್ತು ವಾತಾವರಣ ಕಲುಷಿತಗೊಳ್ಳುತ್ತದೆ. ಅದರಿಂದ ಹೊರಸೂಸುವ ಅನಿಲಗಳಾದ ಅರ್ಸೆನಿಕ್‌, ಪಾದರಸ, ಲೆಡ್‌, ನಿಕ್ಕಲ್‌ ಕ್ಯಾಡ್ಮಿಯಂ ಆಕ್ಸೈಡ್‌ ಸೆಲೇನಿಯಂ ಮುಂತಾದ ವಿಷಯುಕ್ತ ಅನಿಲಗಳಿಂದ ಆರೋಗ್ಯ ಮತ್ತು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

ಕೆಆರ್‌ಇ ಸಂಸ್ಥೆ ಸಂಯೋಜನಾಧಿಕಾರಿ ಪ್ರೊ|ಅಭಯಕುಮಾರ ಪಾಟೀಲ ಮಾತನಾಡಿ, ಭಾರತದಲ್ಲಿ ಸಮಸ್ಯೆಗಳ ಬಗ್ಗೆ ಅರಿವು ಬಂದಾಗ ತೋರುವ ನಿಷ್ಕಾಳಜಿಯಿಂದಾಗಿ ದೊಡ್ಡ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ. ಇ-ತ್ಯಾಜ್ಯ ಮಾನವನ ಆರೋಗ್ಯ, ನರ ದೌರ್ಬಲ್ಯ, ಬುದ್ಧಿ ಹೀನತೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಮಾರವಾಗಿದೆ ಎಂದು ಹೇಳಿದರು. 

ಡಾ| ಮಲ್ಲಿಕಾರ್ಜುನ ಹಂಗರಗಿ ಮಾತನಾಡಿ, ನಾವು ಕಾರ್ಯಕ್ರಮವನ್ನು ಕೇವಲ ಹೆಸರಿಗೆ ಮಾತ್ರ ಮಾಡದೇ ವಾಸ್ತವಿಕವಾಗಿ ಎಲ್ಲಾ ಶಿಬಿರಾರ್ಥಿ ಹಾಗೂ ಇಲಾಖೆ ಮುಖ್ಯಸ್ಥರಿಗೆ ಮುಟ್ಟಿಸುವ ಮೂಲಕ ಆಗಬಹುದಾದ ಅನಾಹುತಗಳನ್ನು ತಪ್ಪಿಸುವ ಉದ್ದೇಶವಿದೆ. ಇದಕ್ಕೆ ಜಿಲ್ಲಾಡಳಿತದ ಎಲ್ಲಾ ಇಲಾಖೆಗಳು ಕೈ ಜೋಡಿಸಿರುವುದರಿಂದ ಯಶಸ್ವಿ ಕಾರ್ಯಗಾರವಾಗಿದೆ ಎಂದು ಹೇಳಿದರು. 

Advertisement

ಕಾರ್ಯಕ್ರಮ ಸಂಯೋಜಕ ಪ್ರೊ| ರಾಜೇಂದ್ರ ಬಿರಾದಾರ 2016ರ ಇ-ತ್ಯಾಜ್ಯ ಕಾಯ್ದೆ ಬಗ್ಗೆ ಮಾತನಾಡಿ, ಪ್ರತಿಯೊಬ್ಬರಿಗೆ ಸಂಬಂಧಪಟ್ಟ ಕಾನೂನು ಹಾಗೂ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಿದರು. ರಾಜ್ಯ ಹಾಗೂ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜವಾಬ್ದಾರಿ ಹಾಗೂ ಪ್ರತಿ ವರ್ಷ ಮಾಲಿನ್ಯ ಮಂಡಳಿಗೆ ರಿಟರ್ನ್ ಫೈಲ್‌ ಮಾಡುವ ಕುರಿತು ಮಾಹಿತಿ ನೀಡಿದರು.

ಪ್ರಾಚಾರ್ಯ ಡಾ| ಎಂ.ಎಸ್‌. ಪಾಟೀಲ ಅಧ್ಯಕ್ಷತೆ ಮಾತನಾಡಿದರು. ಶಿಬಿರಾರ್ಥಿಗಳಿಗಾಗಿ ಇ-ತ್ಯಾಜ್ಯದ ಬಗ್ಗೆ ರಸ ಪ್ರಶ್ನೆ ಕಾರ್ಯಕ್ರಮ ಹಾಗೂ ಅವರನ್ನೊಳಗೊಂಡ ಇ-ತ್ಯಾಜ್ಯದ ಪೆನಾಲ್‌ ಗುಂಪು ಸಂದರ್ಶನ ಆಯೋಜಿಸಲಾಗಿತ್ತು. ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಬಹುಮಾನ ವಿತರಿಸಲಾಯಿತು.

ಪ್ರೊ| ಭರತರಾಜ, ಪ್ರೊ| ಎ.ಡಿ. ಶೆಟಕಾರ, ಪ್ರೊ| ರಮೇಶ ಪಾಟೀಲ ಪ್ರೊ| ವೈಜಿನಾಥ ಚಿಕಬಸ್ಸೆ, ಪ್ರೊ| ಅಶೋಕ ಹುಡೆದ, ಡಾ| ಯು.ಎಸ್‌. ಪಾಟೀಲ, ಸೋಮನಾಥ ಬಿರಾದಾರ, ಡಾ| ಹೆಬ್ಟಾಳೆ, ಸಚೀನ ವಿಶ್ವಕರ್ಮ, ವಿಶಾಲಾಕ್ಷಿ, ಶಿವಲೀಲಾ ಹಾಗೂ ಪ್ರೊ| ರವಿಚಂದ್ರನ್‌ ಸೇರಿದಂತೆ ಒಟ್ಟು 45 ಇಲಾಖೆಗಳಿಂದ ವಿವಿಧ ಜಿಲ್ಲೆಗಳಿಂದ ಒಟ್ಟು 135 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಪ್ರೊ| ವಿನೋದಕುಮಾರ ನಿರೂಪಿಸಿದರು. ಪ್ರೊ| ರಾಜೇಂದ್ರ ಬಿರಾದಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next