Advertisement

ಪ್ರೀತಿ ಗೀತಿ ಫ‌ಜೀತಿ

09:18 AM Feb 13, 2020 | mahesh |

ಒಂದು ದಿನ ಮಗಳು, ಯಾರನ್ನೋ ತಮ್ಮ ಮುಂದೆ ತಂದು ನಿಲ್ಲಿಸಿ “ನಿಮ್ಮ ಅಳಿಯ’ ಎಂದುಬಿಟ್ಟರೆ.. ಬರಿಯ ವಿಚಾರವೇ ಸಹ್ಯವಾಗುತ್ತಿಲ್ಲ. ಒಬ್ಬಳೇ ಮಗಳ ಮದುವೆ ಯನ್ನು ವಿಜೃಂಭಣೆಯಿಂದ ಮಾಡಬೇಕು ಅಂತ ಅವರಪ್ಪ ದುಡ್ಡು ಕೂಡಿಸಿ ಇಟ್ಟಿದ್ದಾರೆ. ಇವಳು ಯಾರನ್ನೋ ಕಟ್ಟಿಕೊಂಡರೆ ಏನು ಮಾಡುವುದು? ಮದುವೆಗೆ ಯಾರನ್ನೂ ಕರೆಯಲಾಗುವುದಿಲ್ಲ. ಸಂಪ್ರದಾಯದಂತೆ ಕನ್ಯಾದಾನ ಮಾಡಲೂ ಆಗುವುದಿಲ್ಲ.

Advertisement

“ಅಮ್ಮಾ, ಇವನು ಸಲ್ಮಾನ್‌. ನಾವಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದೇವೆ. ಮದುವೆ ಮಾಡ್ಕೊàತೀವಿ. ನೀವು ಒಪ್ಪಿ, ಮದುವೆ ಮಾಡಿಕೊಟ್ಟರೆ ಸರಿ. ಇಲ್ಲಾಂದರೆ ರಿಜಿಸ್ಟರ್‌ ಮದುವೆ ಆಗ್ತಿವಿ…’ ಮಗಳು ಅದಿತಿಯ ಮಾತುಗಳಿಗೆ ಬೆಚ್ಚಿ ಬಿದ್ದಳು ಲತಾ. ನಿನ್ನೆ ಮೊನ್ನೆ ಫ್ರಾಕ್‌ ಹಾಕಿಕೊಂಡು, ಬಾಂಬೆಮಿಠಾಯಿ ಬೇಕು ಎಂದು ಹಠ ಮಾಡುತ್ತಿದ್ದಳಲ್ಲವೇ ಇವಳು? ಯಾವಾಗ ಇಷ್ಟು ದೊಡ್ಡವಳಾಗಿಬಿಟ್ಟಳು? ಮದುವೆಯವರೆಗೂ ಇವಳ ಪ್ರೇಮ ಮುಂದುವರಿದರೂ, ಹೆತ್ತವರಾದ ತಮಗೆ ಗೊತ್ತೇ ಆಗಿಲ್ಲವಲ್ಲಾ? ಭಗವಂತಾ! ವೆಂಕತ್ತೆ, ನಾಣಿ ಮಾವ, ಶೀನಣ್ಣ ಎಲ್ಲರಿಗೂ ಏನು ಹೇಳುವುದು. ತಲೆಯ ಮೇಲೆ ಕೈಹೊತ್ತು ಕುಳಿತಳು. ಹೊಟ್ಟೆಯಲ್ಲಿ ಅವಲಕ್ಕಿ ಕುಟ್ಟಿದಂತಾಯಿತು. ಹಾಳು ಶಾಲೆ, ಕಾಲೇಜುಗಳ ಪ್ರಭಾವವೇ ಇದು. ಅತೀ ಮಾರ್ಡನ್‌ ಗಿರಿ. ಕೈಗೆ ಬಳೆ ಇಲ್ಲ, ಹಣೆಗೆ ಕುಂಕುಮ ಇಲ್ಲ. ಸಂಸ್ಕಾರದ ಮಾತೇ ಇಲ್ಲ…

“ಮನೇಲಿ ನೀನೇನು ಮಾಡ್ತಾ ಇದ್ದಿ, ತಾಯಿಯಾದವಳು. ..’ ವೆಂಕತ್ತೆ ಕುಟುಕಿದಂತಾಯಿತು. ಬಳಗದವರು, ಅಕ್ಕಪಕ್ಕದ ಮನೆಯವರು ಇವರಿಗೆಲ್ಲಾ ಏನು ಹೇಳುವುದು? ಇವಳ ತಮ್ಮನಿಗೆ ಮುಂದೆ ಯಾರು ಹೆಣ್ಣು ಕೊಡುತ್ತಾರೆ? ಈ ಹುಡುಗಿಯಾದರೂ ಹೇಗೆ ತಾನೆ ಅವರ ಮನೆಯಲ್ಲಿ ಸಂಸಾರ ಮಾಡುತ್ತಾಳೆ? ಅವರೆಲ್ಲಾ ಸೇರಿ ಇವಳಿಗೇನಾದರೂ ಮಾಡಿಬಿಟ್ಟರೆ… ಇಂಥದೊಂದು ಯೋಚನೆಯ ಕಾರಣಕ್ಕೆ ದುಃಖ ಉಕ್ಕಿ ಬಂದು ಬಿಕ್ಕಿ ಬಿಕ್ಕಿ ಅತ್ತಳು.

“ಇದೇನಮ್ಮಾ, ಸಂಜೆಯಾದರೂ ಲೈಟ್‌ ಹಾಕದೇ, ಬಾಗಿಲು ತೆರೆದೇ ಕತ್ತಲಲ್ಲಿ ಕೂತಿದೀಯಾ?…’ ಕಾಲೇಜಿನಿಂದ ಬಂದ ಮಗಳು ಜೋರಾಗಿ ಕೇಳಿದಾಗ, ಸೋಫಾದ ಮೇಲೆ ಕುಳಿತಿದ್ದ ಲತಾ ಬೆಚ್ಚಿಬಿದ್ದಳು. ಇಷ್ಟೊತ್ತು ತಾನು ಕಂಡಿದ್ದು ಕನಸೋ, ನಿಜವೋ ಗೊತ್ತಾಗಲಿಲ್ಲ. ಕೈಯಲ್ಲಿದ್ದ ಮೊಬೈಲ್‌ನಲ್ಲಿ ಮಗಳ ವಾಟ್ಸಪ್‌ ಡಿಪಿ ದೊಡ್ಡದಾಗಿ ಕಾಣುತ್ತಿತ್ತು. ಓಹ್‌.. ಯಾವುದೋ ಹುಡುಗನ ಜೊತೆ ಇವಳು ಹಾಕಿಕೊಂಡಿರುವ ಈ ಡಿಪಿ ನೋಡಿ ತನ್ನ ತಲೆ ಇಷ್ಟೆಲ್ಲಾ ಓಡಿದ್ದಾ ಅನ್ನಿಸಿ ನಾಚಿಕೆಯಾಯಿತು.

“ಯಾರೇ ಇದು ನಿನ್ನ ವಾಟ್ಸಪ್‌ ಡಿಪಿಯಲ್ಲಿರುವ ಹುಡುಗ? ಅದೇನು ಗಂಡು ಹುಡುಗರ ಜೊತೆಗೆ ಫೋಟೋ ಹಾಕ್ಕೋಳ್ಳೋದು ಅಸಹ್ಯ…’ ಅಂತ ಮಗಳನ್ನು ಕೇಳಿದಾಗ ನಕ್ಕುಬಿಟ್ಟಳು ಅವಳು. “ಅವನು ನನ್ನ ಫ್ರೆಂಡ್‌ ಸಚ್ಚಿನ್‌. ಇವತ್ತು ಅವನ ಬರ್ತಡೇನಮ್ಮಾ. ಬರ್ತಡೇ ದಿನ ಎಲ್ಲರೂ ಹಾಗೆಯೇ ಡಿಪಿ ಹಾಕ್ಕೋತಾರೆ. ಏನಮ್ಮಾ ನೀನು…’ ಅವಳು ಛೇಡಿಸಿದಾಗ ತಾನು ಅಷ್ಟೊಂದು ಹಳೆಯ ಕಾಲದವಳೇ ಅನ್ನಿಸಿತು. ಸದ್ಯ, ಅವನ ಹೆಸರು ಸಚ್ಚಿನ್‌ ತಾನೇ… ತನ್ನ ವಿಚಾರಕ್ಕೆ ತನಗೇ ನಗು ಬಂತು.

Advertisement

ಮರುದಿನ ವಾಕಿಂಗ್‌ ಹೋದಾಗ, ಅಲ್ಲಿಯೂ ಪ್ರೇಮವಿವಾಹದ್ದೇ ಡಿಸ್ಕಶನ್ನು. ಮೆಡಿಕಲ್‌ ಓದುತ್ತಿದ್ದ ಕುಲಕರ್ಣಿಯವರ ಮಗಳು ಆಟೋ ಡ್ರೈವರ್‌ ಒಬ್ಬನೊಟ್ಟಿಗೆ ಓಡಿ ಹೋಗಿ ಮದುವೆ ಮಾಡಿಕೊಂಡಿದ್ದರೆ, ಕೊನೆಯ ಮನೆಯ ಆಶಾ ಮಗಳು, ಯಾರದೋ ಜೊತೆಗೆ ಲಿವ್‌ಇನ್‌ ರಿಲೇಶನ್‌ಶಿಪ್‌ ಅಲ್ಲಿದಾಳಂತೆ. “ಲತಾ, ನೀವು ನಿಮ್ಮ ಮಗಳ ಬಗ್ಗೆಯೂ ಗಮನ ಇಡಿ. ಈಗಿನ ಕಾಲಮಾನ ಸರಿಯಿಲ್ಲ…’ ಅಂತ ಗೀತಾ ಹೇಳಿದಾಗ ಎದೆ ಧಸಕ್ಕೆಂದಿತು. ವಿಶ್ವದ ಎಲ್ಲರೂ ಅಂಗೈಯಲ್ಲಿ ಒಂದಾಗಿರುವ ಈ ದಿನಗಳಲ್ಲಿಯೂ ನಿಜಕ್ಕೂ ಇದೊಂದು ಇಷ್ಟು ದೊಡ್ಡ ಸಮಸ್ಯೆಯೇ? ಲತಾಳಿಗೆ ಅರ್ಥವಾಗಲಿಲ್ಲ. ಇಂದಿಗೂ, ನಿರ್ಧರಿಸಿದ ಮದುವೆಗೆ ವಿರುದ್ಧ ಪದ ಎಂಬಂತೆ ಬಳಸಲ್ಪಡುವ ಪ್ರೇಮವಿವಾಹ, ಸಾಧಕವೋ ಬಾಧಕವೋ.. ಜಗತ್ತಿನಲ್ಲಿ ಬೇರೆಯವರು ಏನು ಮಾಡಿದರೂ ಪರವಾಗಿಲ್ಲ. ತನ್ನ ಮಗಳು ಮಾತ್ರ ಪ್ರೇಮದಲ್ಲಿ ಬೀಳಬಾರದು… ಎಲ್ಲಾ ಅಮ್ಮಂದಿರೂ ಹೀಗೇ ಯೋಚಿಸುತ್ತಾರಲ್ಲವೆ? ಅನಿಸಿ, ಅರೆಕ್ಷಣ ಬುದ್ಧಿ ಮಂಕಾದಂತಾಯಿತು.

ಭಾರತೀಯ ಪರಂಪರೆಯಲ್ಲಿ ವಿವಾಹ, ಜನ್ಮಜನ್ಮಾಂತರದಲ್ಲಿ ಸಾಗಿಬರುವ ಪವಿತ್ರ ಅನುಬಂಧ. ಅದು ಸ್ವರ್ಗದಲ್ಲೇ ನಿರ್ಧರಿತ ಎಂಬುದು ನಿಜವೇ ಆಗಿದ್ದಲ್ಲಿ, ಪ್ರೇಮವಿವಾಹವನ್ನು ಸಮಾಜ ಈ ಮಟ್ಟಿಗೆ ಏಕೆ ವಿರೋಧಿಸುತ್ತದೆ? ಅದೂ ಭಗವದಿಚ್ಛೆ ತಾನೇ. ಒಂದು ಸಂದರ್ಭವನ್ನು ಎದುರಿಸುವ ವಿಷಯದಲ್ಲಿ ಉಪದೇಶ ಹೇಳುವುದು ಬೇರೆ. ಅದನ್ನು ತಾವೇ ಅನುಭವಿಸಬೇಕಾದಾಗ ಜೊತೆಯಾಗುವ ಸಂಕಟವೇ ಬೇರೆ. ತನಗೂ ಈ ಪ್ರೇಮವಿವಾಹದ ವಿಷಯದಲ್ಲಿ ಆಕ್ಷೇಪ ಇದ್ದೇ ಇದೆ. ಡಿಗ್ರಿ ಓದುತ್ತಿರುವ ತನ್ನ ಮಗಳ ಮೊಬೈಲನ್ನು ಆಗಾಗ ಕದ್ದುಮುಚ್ಚಿ ನೋಡುತ್ತೇನೆ. ಅವಳ ಮೇಲೆ ಕಣ್ಣಿಡಲು ತಾನೂ ಇನ್‌ಸ್ಟಾಗ್ರಾಂ ಖಾತೆ ತೆಗೆದಾಗಿದೆ. ಅವಳ ಸ್ನೇಹಿತರನ್ನೆಲ್ಲ ಪರಿಚಯ ಮಾಡಿಕೊಂಡಾಗಿದೆ. ಆದರೂ ಕಳವಳ.

ಆಧುನಿಕ ಜಗತ್ತಿನ ಇತಿಹಾಸ ನೋಡುವುದಾದರೆ, ಸುಮಾರು ಹದಿನೇಳನೇ ಶತಮಾನದಲ್ಲಿ ಯುರೋಪಿನ ಲೇಖಕ ಜೀನ್‌ ಜಾಕ್ವಸ್‌ನ ಪುಸ್ತಕ “ಜೂಲಿ’ ಯಲ್ಲಿ ಮೊತ್ತ ಮೊದಲ ಬಾರಿಗೆ ಪ್ರೇಮವಿವಾಹದ ಉಲ್ಲೇಖ ಇದೆಯಂತೆ. ಹನ್ನೆರಡನೇ ಶತಮಾನದಲ್ಲಿದ್ದ ಒಬ್ಬ ವೇದಾಂತಿಯ ಕಥೆ ಅದು. ತನ್ನ ಶಿಷ್ಯೆಯಲ್ಲಿ ಅನುರಕ್ತನಾಗಿ, ಗೌಪ್ಯವಾಗಿ ಆಕೆಯನ್ನು ಮದುವೆಯಾಗುತ್ತಾನೆ. ಅವರಿಗೊಂದು ಮಗುವೂ ಆಗುತ್ತದೆ. ಈ ಸುದ್ದಿ ಆ ಹುಡುಗಿಯ ತಂದೆಗೆ ಗೊತ್ತಾದಾಗ ಕೋಪಗೊಂಡು ಆ ವೇದಾಂತಿಯ ವೃಷಣಗಳನ್ನು ಸೀಳಿಸುತ್ತಾನೆ. ಹೀಗೆ ಜಗತ್ತಿನಲ್ಲಿ ಪ್ರಥಮವಾಗಿ ಗುರುತಿಸಲ್ಪಟ್ಟ ಪ್ರೇಮವಿವಾಹ, ದುರಂತ ಅಂತ್ಯ ಕಾಣುತ್ತದೆ.

ನಮ್ಮ ಭಾರತೀಯ ಪರಂಪರೆಯಲ್ಲಿ ಯುಗಯುಗಗಳ ಹಿಂದೆಯೇ ಎಂತೆಂಥ ವಿವಾಹಗಳ ಉಲ್ಲೇಖ ಇದೆ. ಲತಾಳ ಮುಖದಲ್ಲಿ ಕಿರುನಗೆ ಹಾದುಹೋಯಿತು. ಮಹಾದೇವನೇ ಮನುಷ್ಯ ಮಾತ್ರಳಾದ ಗಿರಿಜೆಯನ್ನು ವರಿಸಲಿಲ್ಲವೇ? ಅಪ್ಸರೆಯರು ಮನುಷ್ಯರ ಸಂಬಂಧ ಬೆಳೆಸಿದ ಎಷ್ಟು ಉಲ್ಲೇಖಗಳಿಲ್ಲ? ರಾಕ್ಷಸ ಕನ್ಯೆಯರನ್ನು ಮಹಾಬ್ರಾಹ್ಮಣರು ಮದುವೆಯಾಗಿದ್ದಾರೆ. ಒಂದು ಕ್ಷಣ ಎಷ್ಟು ಸಹಜ ಇದು ಎನ್ನಿಸಿತವಳಿಗೆ. ಆದರೆ, 2014ರಲ್ಲಿ ಸುದ್ದಿ ಸಂಸ್ಥೆಯೊಂದು ನಡೆಸಿದ ಸರ್ವೇಯ ಪ್ರಕಾರ, ಭಾರತದ ವರದಕ್ಷಿಣೆ ಸಾವುಗಳಲ್ಲಿ ಬಹುತೇಕ ಸಾವುಗಳು, ಪ್ರೇಮವಿವಾಹದಲ್ಲೇ ಸಂಭವಿಸಿರುವುದಂತೆ. ಆ ಸುದ್ದಿ ಓದಿದಾಗ ಎದೆ ಝಲ್ಲೆಂದಿತು.

ಮಗಳ ರೂಮಿನಿಂದ ನಗುವ ಸದ್ದು ಕೇಳಿಬಂದಾಗ, ಬಾಗಿಲು ಸರಿಸಿ, ನಿಧಾನವಾಗಿ ಬಗ್ಗಿ ನೋಡಿದಳು. “ಅಯ್ಯೋ, ಎಷ್ಟಮ್ಮಾ ಪತ್ತೇದಾರಿಕೆ ಮಾಡ್ತೀಯಾ? ಕಾಮಿಡಿ ಮೂವಿ ನೋಡ್ತಾ ಇದೀನಿ ಅಷ್ಟೇ. ಯಾರನ್ನಾದ್ರೂ ಲವ್ವೋ ಗಿವ್ವೋ ಮಾಡಿದರೆ, ಮೊದಲು ನಿನ್ನ ಮುಂದೇನೇ ನಿಲ್ಲಿಸಿ ಪರ್ಮಿಶನ್‌ ತಗೋತೀನೀ, ಆಯ್ತಾ?…’ ಮೊಬೈಲ್‌ ನೋಡುತ್ತಿದ್ದ ಮಗಳು, ನಗುತ್ತಾ ಮಗ್ಗುಲು ಬದಲಾಯಿಸಿದಾಗ ತನ್ನ ಬಗ್ಗೆ ತನಗೇ ನಾಚಿಕೆಯಾದಂತಾದರೂ, ಕಾಳಜಿ ಮಾಡುವುದು ತಾಯಿಯಾದ ತನ್ನ ಜವಾಬ್ದಾರಿ ಎಂದು ಸಮಜಾಯಿಷಿ ಕೊಟ್ಟುಕೊಂಡಳು ಲತಾ.

ಕನಸಿನಲ್ಲಿ ಕಂಡಂತೆ ಒಂದು ದಿನ ಮಗಳು, ಯಾರನ್ನೋ ತಮ್ಮ ಮುಂದೆ ತಂದು ನಿಲ್ಲಿಸಿ “ಇವನೇ ನಿಮ್ಮ ಅಳಿಯ’ ಎಂದುಬಿಟ್ಟರೆ… ಅಂಥದೊಂದು ವಿಚಾರವನ್ನು ಸುಮ್ಮನೇ ಕೇಳಿಸಿಕೊಳ್ಳುವುದಕ್ಕೂ ಮನಸ್ಸು ಒಪ್ಪುತ್ತಿಲ್ಲ. ತನಗೋ, ಬುದ್ಧಿ ಬಲಿಯುವ ಮೊದಲೇ ಮದುವೆ ಆಗಿಬಿಟ್ಟಿತ್ತು. ಪ್ರೇಮ, ಗೀಮ ಏನೊಂದೂ ಗೊತ್ತೇ ಆಗಲಿಲ್ಲ. ಈಗ ಕಾಲ ಹಾಗಿಲ್ಲ. ಒಬ್ಬಳೇ ಮಗಳ ಮದುವೆಯನ್ನು ವಿಜೃಂಭಣೆಯಿಂದ ಮಾಡಬೇಕು ಅಂತ ಅವರಪ್ಪ ದುಡ್ಡು ಕೂಡಿಸಿ ಇಟ್ಟಿದ್ದಾರೆ. ಇವಳು ಯಾರನ್ನೋ ಕಟ್ಟಿಕೊಂಡರೆ ಏನು ಮಾಡುವುದು? ಮದುವೆಗೆ ಯಾರನ್ನೂ ಕರೆಯಲಾಗುವುದಿಲ್ಲ. ಸಂಪ್ರದಾಯದಂತೆ ಕನ್ಯಾದಾನ ಮಾಡಲೂ ಆಗುವುದಿಲ್ಲ. ಹೀಗೆಲ್ಲಾ ಯೋಚಿಸಿದಾಗ, ಅಳು ಬಂದಂತಾಯಿತು ಅವಳಿಗೆ. ಸಂಜೆ ಪತಿಯ ಮುಂದೆ ಏನೋ ಹೇಳಹೊರಟಾಗ, “ಅಯ್ಯೋ ಹಾಗೇನಾದರೂ ಆದಾಗ ನೋಡಿದ್ರಾಯ್ತು. ಇನ್ನೂ 22 ವರ್ಷ ಅದಕ್ಕೆ. ಪಾಪ ಮಗು. ಹಾಯಾಗಿರಲಿ ಎರಡು ದಿನ…’ ಎಂದುಬಿಟ್ಟರು. “ಮಗಳ ಮೊಬೈಲ…, ಲ್ಯಾಪ್‌ಟಾಪ್‌ ಆಗಾಗ್ಗೆ ಚೆಕ್‌ ಮಾಡ್ತಾ ಇರಿ. ಅವಳ ಚಲನವಲನಗಳ ಬಗ್ಗೆ ಗಮನ ಇಡಿ’ ಎಂದು ಗಂಡನಿಗೆ ಹೇಳಬೇಕೆಂದುಕೊಂಡ ಮಾತುಗಳು ಗಂಟಲಿನಿಂದ ಆಚೆ ಬರಲೇ ಇಲ್ಲ. ಎಲ್ಲಾ ಚಿಂತೆ ನನಗೇ ಎಂದು ಹಣೆ ಚಚ್ಚಿಕೊಂಡಳು.

ಪ್ರವಚನದಲ್ಲಿ ಆಚಾರ್ಯರು ಹೇಳಿದ ಮಾತು ನೆನಪಾಯಿತು- “ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯಃ’. ಎಲ್ಲವೂ ಋಣಾನುಬಂಧ ಇದ್ದಂತೆಯೇ ನಡೆಯುತ್ತದೆ. ನಮ್ಮ ಕೈಲೇನಿದೆ ಅಂತ ತುಸು ಸಮಾಧಾನ ಆದಂತಾಯಿತು. ಅಷ್ಟರಲ್ಲಿ ವಾಟ್ಸಪ್‌ ಟಿಂಗ್‌ ಎಂದಿತ್ತು. “ನಿಮ್ಮ ಮಗಳು ಯಾವುದೋ ಹುಡುಗನನ್ನು ಇಷ್ಟಪಡುತ್ತಿದ್ದೇನೆ, ಮದುವೆಯಾಗುತ್ತೇನೆ ಎಂದು ಹೇಳಿದರೆ, ಅವಳು ಹುಡುಗನನ್ನೇ ಇಷ್ಟಪಡುತ್ತಿ¨ªಾಳೆ ಮತ್ತು ಮದುವೆಯನ್ನೂ ಆಗಬಯಸುತ್ತಿದ್ದಾಳೆ ಎಂದು ಸಂತೋಷ ಪಡಿ’- ಗ್ರೂಪ್‌ ಒಂದರಲ್ಲಿ ಬಂದಿದ್ದ ಆ ಮೆಸೇಜ್‌ ಓದಿ ಬಿದ್ದು ಬಿದ್ದು ನಕ್ಕಳು ಲತಾ. “ಕಾಲಾಯ ತಸ್ಮೆ ನಮಃ.’ ಎಂದುಕೊಳ್ಳುತ್ತಾ, ಮಗಳ ಪ್ರೇಮವಿವಾಹದ ಕನಸಿಗೆ ಇತಿಶ್ರೀ ಹಾಡಿದಳು ಲತಾ…

-ದೀಪಾ ಜೋಶಿ

Advertisement

Udayavani is now on Telegram. Click here to join our channel and stay updated with the latest news.

Next