Advertisement

ಅನಾಥ ಮಕ್ಕಳನ್ನು “ಜಾತಿರಹಿತ’ವರ್ಗದಲ್ಲಿ ಗುರುತಿಸಿ

06:40 AM Sep 01, 2018 | |

ಬೆಂಗಳೂರು: ಅನಾಥ ಮಕ್ಕಳಿಗೆ “ಜಾತಿರಹಿತ’ವರ್ಗ ಎಂದು ಗುರುತಿಸಿ ಅವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಬೇಕು.

Advertisement

ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸೇರಿ ಕನಿಷ್ಠ ಎಸ್ಸಿ/ಎಸ್ಟಿ ವರ್ಗದ ಮಕ್ಕಳಿಗೆ ಸಿಗುವ ಸರ್ಕಾರಿ ಸೌಲಭ್ಯಗಳನ್ನು ಈ ಮಕ್ಕಳಿಗೆ ಒದಗಿಸಬೇಕು. ಸ್ವಯಂ ಉದ್ಯೋಗಕ್ಕೆ ಅವರಿಗೆ ಆರ್ಥಿಕ ನೆರವು ಕಲ್ಪಿಸಬೇಕೆಂದು ರಾಜ್ಯ ಕಾನೂನು ಆಯೋಗ ಶಿಫಾರಸು ಮಾಡಿದೆ.

ಕರ್ನಾಟಕ ರಾಜ್ಯ ಕಾನೂನು ಆಯೋಗ ಇತ್ತೀಚೆಗೆ ಸರ್ಕಾರಕ್ಕೆ ಸಲ್ಲಿಸಿದ ತನ್ನ 49ನೇ ವರದಿಯಲ್ಲಿ ಹಲವು ಮಹತ್ವದ
ಶಿಫಾರಸುಗಳನ್ನು ಮಾಡಿದೆ. ಅನಾಥರ ಬಗ್ಗೆ ಕಾಳಜಿ ವಹಿಸುವುದು ನಾಗರಿಕ ಸಮಾಜದ ಲಕ್ಷಣ. ಅನಾಥ ಮಕ್ಕಳ ಆರೈಕೆ ಮತ್ತು ಕಲ್ಯಾಣಕ್ಕಾಗಿ ಒತ್ತು ಕೊಡುವುದು ಪ್ರತಿ ಜವಾಬ್ದಾರಿಯುತ ಸರ್ಕಾರದ ಹೊಣೆ. ಈ ಹಿನ್ನೆಲೆಯಲ್ಲಿ ಸದ್ಯ 18 ವರ್ಷದವರೆಗೆ ಅನಾಥ ಮಕ್ಕಳಿಗೆ ಆರೈಕೆ ಮಾಡುವ ವ್ಯವಸ್ಥೆ ಸರ್ಕಾರದಲ್ಲಿದೆ. ಅದರ ಬದಲಿಗೆ 25 ವರ್ಷದವರೆಗೆ ಅವರನ್ನು ಸರ್ಕಾರದ ಆರೈಕೆಯಲ್ಲೇ ಇಡಬೇಕು. ಈ ಅವಧಿಯಲ್ಲಿ ಅವರಿಗೆ ಸರ್ಕಾರದಿಂದಲೇ ಉಚಿತ ಶಿಕ್ಷಣ ನೀಡಬೇಕು. ಅಲ್ಲಿಂದ ಹೊರ ಬಂದ ಮೇಲೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಮರ್ಪಕ ಯೋಜನೆಗಳನ್ನು ರೂಪಿಸಬೇಕು. ಅದಕ್ಕಾಗಿ ಸರ್ಕಾರಿ ಉದ್ಯೋಗಗಳಲ್ಲಿ ವಿಶೇಷ ಮೀಸಲಾತಿ ಕಲ್ಪಿಸಬೇಕು. ಸ್ವಂತ ಉದ್ಯೋಗಕ್ಕೆ ಸಾಲ ಸೌಲಭ್ಯ, ಆರ್ಥಿಕ ನೆರವು ಒದಗಿಸಬೇಕು ಎಂದು ಆಯೋಗದ ವರದಿಯಲ್ಲಿ ಹೇಳಲಾಗಿದೆ.

ಶಿಫಾರಸ್ಸಿಗೆ ಹಿನ್ನೆಲೆ: ತನ್ನ ಜಾತಿ ಗೊತ್ತಿಲ್ಲದ ಮಂಡ್ಯ ಜಿಲ್ಲೆಯ ರಘು ಎಂಬ ಅನಾಥ ಯುವಕ, ಜಾತಿ ಪ್ರಮಾಣ ಪತ್ರ ಪಡೆಯಲು ಅಲೆದಾಡಿ ಸೋತು ಹೋಗಿದ್ದ. ತನ್ನ ಕಷ್ಟಕ್ಕೆ ಪರಿಹಾರ ದೊರಕಿಸಿಕೊಡು ಎಂದು ಆತ ಕಾನೂನು ಆಯೋಗಕ್ಕೆ ಮನವಿ ಸಲ್ಲಿಸಿದ್ದ. ಈ ಮನವಿ ಆಲಿಸಿದ ಕಾನೂನು ಆಯೋಗದ ಅಧ್ಯಕ್ಷ ನ್ಯಾ.ಎಸ್‌.ಆರ್‌.ನಾಯಕ್‌, “ಅನಾಥ’ ಎಂಬ ಪದಕ್ಕೆ ಇರುವ ಸಾಮಾಜಿಕ ಪರಿಭಾಷೆ, ಕಾನೂನಿನ ವ್ಯಾಖ್ಯಾನ, ಇಂತಹುದೇ ಪ್ರಕರಣಗಳಲ್ಲಿ ದೇಶದ ವಿವಿಧ ನ್ಯಾಯಾಲಯಗಳು ವ್ಯಕ್ತಪಡಿಸಿದ ಅಭಿಪ್ರಾಯಗಳು, ವಿಶ್ವಸಂಸ್ಥೆ ನೀಡಿದ ವಿವರಣೆಗಳನ್ನುಕೂಲಂಕುಷವಾಗಿ ಪರಾಮರ್ಶಿಸಿ ಅನಾಥರಿಗೆ “ಜಾತಿರಹಿತ’ ವರ್ಗ ಎಂದು ಪರಿಗಣಿಸಿ ಅವರಿಗೆ ಪ್ರಮಾಣ ಪತ್ರ ನೀಡಲು ಸರ್ಕಾರಕ್ಕೆ
ಶಿಫಾರಸು ಮಾಡಿದ್ದಾರೆ.

ಆಯೋಗದ ಪ್ರಮುಖ ಶಿಫಾರಸುಗಳು
– ಅನಾಥ, ರಾಜ್ಯದ ಮಾನವ ಸಂಪನ್ಮೂಲ. ಆತನಿಗೊಂದು ನೆಲೆ ಇಲ್ಲ ಎಂದಾದರೆ ಆತ ಸಮಾಜಘಾತಕ ಶಕ್ತಿಗಳ ಜಾಲಕ್ಕೆ ಸಿಲುಕಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ, ಸಮಾಜಕ್ಕೆ ಮಾರಕನಾಗುತ್ತಾನೆ. ಹಾಗಾಗಿ, ಅನಾಥರನ್ನು ಹೊರೆಯನ್ನಾಗಿ ಅಲ್ಲ, ಆಸ್ತಿಯನ್ನಾಗಿ ಮಾಡಿ.

Advertisement

– ಅನಾಥ ಮಕ್ಕಳನ್ನು “ಜಾತಿರಹಿತ’ ಎಂದು ಗುರುತಿಸಿ ಅವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವುದು.

– ಅನಾಥ ಮಕ್ಕಳಿಗೆ “ಜಾತಿರಹಿತ’ ವರ್ಗ ಎಂದು ಪರಿಗಣಿಸಿ ಪ್ರಮಾಣ ಪತ್ರ ನೀಡಲು ತಹಶೀಲ್ದಾರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಥವಾ ಹಿಂದುಳಿದ ವರ್ಗಗಳ ಅಧಿಕಾರಿಗಳಿಗೆ ಅಧಿಕಾರ ನೀಡುವುದು.

–  ಹೆಚ್ಚು ಅನಾಥಾಲಯಗಳನ್ನು ಸ್ಥಾಪಿಸ ಬೇಕು, ಇಲ್ಲವೇ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಅನಾಥಾಶ್ರಮಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕು.

– ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸೇರಿದಂತೆ ಎಸ್ಸಿ, ಎಸ್ಟಿ ವರ್ಗಗಳಿಗೆ ದೊರಕುವ ವಿವಿಧ ಸರ್ಕಾರಿ ಸೌಲಭ್ಯ
ಗಳನ್ನು ಅನಾಥ ಮಕ್ಕಳಿಗೂ ವಿಸ್ತರಿಸಬೇಕು.ಸ್ವಯಂ ಉದ್ಯೋಗಕ್ಕೆ ಅವರಿಗೆ ಆರ್ಥಿಕ ಸಹಾಯ ನೀಡಬೇಕು.

ಒಬ್ಬ ವ್ಯಕ್ತಿಯನ್ನು ಗುರುತಿಸಲು ಮತ್ತು ಆತನಿಗೆ ಸರ್ಕಾರದ ವಿವಿಧ ಸೌಲಭ್ಯಗಳು ಸಿಗಲು ಜಾತಿ ಪ್ರಮಾಣ ಪತ್ರ ಪ್ರಮುಖ ಆಧಾರ. ಆದರೆ, ಜಾತಿ ಗೊತ್ತಿಲ್ಲದ ಕಾರಣಕ್ಕೆ ಅನಾಥ ಮಕ್ಕಳು ಸಮಸ್ಯೆ ಎದುರಿಸಬೇಕಾಗುತ್ತದೆ.
– ಆರ್‌. ಚಂದ್ರಶೇಖರ್‌
ಸದಸ್ಯ ಕಾರ್ಯದರ್ಶಿ, ರಾಜ್ಯ ಕಾನೂನು ಆಯೋಗ

ಕಾನೂನು ಆಯೋಗದ ವರದಿ ಇನ್ನೂ ಕೈಸೇರಿಲ್ಲ. ಇಲಾಖೆಗೆ ವರದಿ ಬಂದ ಮೇಲೆ ಪರಿಶೀಲಿಸಲಾಗುವುದು.
– ಎನ್‌.ಸಿ. ಶ್ರೀನಿವಾಸ್‌, ಪ್ರಧಾನ ಕಾರ್ಯದರ್ಶಿ,
ಕಾನೂನು ಇಲಾಖೆ

ಅನಾಥ ಮಕ್ಕಳಿಗೆ “ಜಾತಿರಹಿತ ವರ್ಗ’ ಎಂದು ಗುರುತಿಸಿ ಅವರಿಗೆ ಪ್ರಮಾಣ ಪತ್ರ ನೀಡುವ ಸಂಬಂಧ ಆಯೋಗದ ಅಭಿಪ್ರಾಯ ಕೇಳಿ ಸಚಿವಾಲಯದಿಂದ ಪತ್ರ ಬಂದಿದೆ. ಕಾನೂನಿನ ಅವಕಾಶಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ಅಭಿಪ್ರಾಯ ಕಳಿಸಿಕೊಡಲಾಗುವುದು.
– ಕಾಂತರಾಜ್‌, ಅಧ್ಯಕ್ಷರು, ಹಿಂದುಳಿದ ವರ್ಗಗಳ ಆಯೋಗ

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next