Advertisement

ಬಾಲಕೋಟ್‌ನಲ್ಲಿತ್ತು ರೆಸಾರ್ಟ್‌ ಮಾದರಿ ತರಬೇತಿ ಕೇಂದ್ರ

12:30 AM Feb 27, 2019 | |

ಇಂಗ್ಲಿಷ್‌ನಲ್ಲೊಂದು ಮಾತಿದೆ. ‘Hunting the ducks is easy when they  are on water, rather than when they are in flight’ ಅಂತ.  ಬಾತುಕೋಳಿಗಳನ್ನು ಅವುಗಳು ಹಾರಾಡುವಾಗ ಕೊಲ್ಲುವುದಕ್ಕಿಂತ ಅವು ನೀರಿನ ಮೇಲೆ ಕುಳಿತಾಗ ಬೇಟೆಯಾಡುವುದು ಸುಲಭ ಎಂಬುದು ಇದರರ್ಥ. ಶತ್ರುವಿನ ಮೇಲಿನ ಇಂಥ ದಾಳಿಯನ್ನು ‘Sitting duck target’ ಎಂದು ಕರೆಯಲಾಗುತ್ತದೆ. ಪಾಕಿಸ್ಥಾನದ ಬಾಲ್‌ಕೋಟ್‌ ಬಳಿಯ ಪಾತಕಿಗಳನ್ನು ಅವರು ಸುಖನಿದ್ರೆಯಲ್ಲಿದ್ದಾಗಲೇ “ಚಿರನಿದ್ರೆ’ಗೆ ಕಳಿಸಿದ ಭಾರತೀಯ ವಾಯುಪಡೆಯ ಕಾರ್ಯಾಚರಣೆಯನ್ನು ಈಗ ಅದೇ ಹೆಸರಿನಿಂದಲೇ ಬಣ್ಣಿಸಲಾಗುತ್ತಿದೆ. 

Advertisement

ಎಲ್ಲಿತ್ತು ಕ್ಯಾಂಪ್‌?
ಖೈಬರ್‌ ಪಖು¤ಂಖ್ವಾ ಪ್ರಾಂತ್ಯದ ಪಾಕಿಸ್ಥಾನ -ಭಾರತ ಗಡಿ ನಿಯಂತ್ರಣ ರೇಖೆಯಿಂದ ಕೇವಲ 80 ಕಿ.ಮೀ. ದೂರದಲ್ಲಿದೆ ಬಾಲಕೋಟ್‌ ನಗರ. 2011ರಲ್ಲಿ ಒಸಾಮಾ ಬಿನ್‌ ಲಾಡೆನ್‌ ಅಡಗಿದ್ದ ಅಬ್ಬೊàಟಾಬಾದ್‌ಗೂ ಇದು ತುಂಬಾ  ಹತ್ತಿರ. ಬಾಲಕೋಟ್‌ನಿಂದ ಬರೀ ಇಪ್ಪತ್ತೇ ಕಿ.ಮೀ. ದೂರದಲ್ಲಿ,  ಕುಹ್ನರ್‌ ನದಿ ದಡದಲ್ಲಿತ್ತು ಆ ಜೈಶ್‌- ಎ- ಮೊಹಮ್ಮದ್‌ ತರಬೇತಿ ಕ್ಯಾಂಪ್‌.  ಅದು ಕೇವಲ ಉಗ್ರರ ತರಬೇತಿ ಕೇಂದ್ರ ಎಂದರೆ ತಪ್ಪಾಗುತ್ತೆ. ಏಕೆಂದರೆ, ಅದೊಂದು ರೆಸಾರ್ಟ್‌ ಮಾದರಿಯ, ಐಶಾರಾಮಿ ವ್ಯವಸ್ಥೆಗಳುಳ್ಳ ಆ ಕೇಂದ್ರದಲ್ಲಿ “ಸುಖವಾಗಿ’ ತರಬೇತಿ ಪಡೆಯಲು ಏನೇನು ಬೇಕೋ ಅದೆಲ್ಲವೂ ಇತ್ತು. ಸಾಮಾನ್ಯವಾಗಿ 500ರಿಂದ 700 ಮಂದಿಗೆ ಇಲ್ಲಿ ತರಬೇತಿ ನೀಡಲಾಗುತ್ತಿದ್ದರೂ, ದಾಳಿ ನಡೆದ ಹೊತ್ತಿನಲ್ಲಿ 300ರಿಂದ 400 ಮಂದಿ ತರಬೇತಿ ಪಡೆಯುತ್ತಿದ್ದರು ಎನ್ನಲಾಗಿದೆ. ಇವರೊಂದಿಗೆ 25ರಿಂದ 27 ತರಬೇತುದಾರರೂ ಇಲ್ಲಿ ವಾಸ್ತವ್ಯ ಹೂಡಿದ್ದರು. ಇವರೆಲ್ಲರ ಜತೆಗೆ, ಜೈಶ್‌ ಎ ಮೊಹಮ್ಮದ್‌ ಸಂಸ್ಥಾಪಕ ಮಸೂದ್‌ ಅಜರ್‌ನ ಭಾಮೈದ ಯೂಸುಫ್ ಅಜರ್‌ ಕೂಡ ಇಲ್ಲೇ ಇದ್ದ. 1999ರ ಏರ್‌ ಇಂಡಿಯಾ ವಿಮಾನ ಹೈಜಾಕ್‌ ಪ್ರಕರಣದಲ್ಲಿ ಸಿಬಿಐಗೆ ಬೇಕಾಗಿದ್ದವ ಈತ.  ಇವರೆಲ್ಲರಿಗೂ ಆಹಾರ ಸಿದ್ಧಪಡಿಸಲು  ಅಡುಗೆಯವರು, ಶಿಬಿರದ ಶುಭ್ರತೆ ಕಾಪಾಡಲು ನೈರ್ಮಲ್ಯ ಸಿಬಂದಿ ಹಾಗೂ ಸಹಾಯಕ ಸಿಬಂದಿ ಸೇರಿ  ಈ ಶಿಬಿರದ ಮೇಲೆ ದಾಳಿ ನಡೆದ ಹೊತ್ತಿನಲ್ಲಿ ಏನಿಲ್ಲವೆಂದರೂ 400ರವರೆಗೆ ಜನರಿದ್ದರು.

“ದೌರಾ-ಎ-ಖಾಸ್‌’ ಎಂಬ ಖತರ್ನಾಕ್‌ ತರಬೇತಿ
ಬಾಲಕೋಟ್‌ನಿಂದ ಕೇವಲ 20 ಕಿ.ಮೀ. ದೂರವಿರುವ ಈ ಶಿಬಿರದಲ್ಲಿ, ಬರೀ ಮಷಿನ್‌ಗನ್‌ಗಳ ಬಳಕೆ ಮಾತ್ರವಲ್ಲದೆ, ಆಧುನಿಕ ಯುದ್ಧದ ಸಕಲ ಕಲೆಗಳನ್ನು, ಎದುರಾಳಿ ದೇಶದೊಳಗೆ ನುಗ್ಗಿ ವಿಧ್ವಂಸಕ ಕೃತ್ಯಗಳನ್ನು ಎಸಗುವ ಬಗೆಗಿನ ಹುನ್ನಾರಗಳ ಬಗ್ಗೆ ಹೇಳಿಕೊಡಲಾಗುತ್ತಿತ್ತು. ಇದರಲ್ಲಿ ಬಹು ಮುಖ್ಯವಾದದ್ದು “ದೌರಾ-ಎ-ಖಾಸ್‌’. ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆಯನ್ನು ಕಲಿಸುವ ವಿಧಾನವಿದು. ಇದರಡಿ, ಆತ್ಮಾಹುತಿ ದಾಳಿ, ಸುಧಾರಿತ ಸ್ಫೋಟಕಗಳ ತಯಾರಿಕೆ, ಭದ್ರತಾ ಪಡೆಗಳ ಮೇಲೆ ದಾಳಿ ಮಾಡುವ ಕ್ರಮ, ಸ್ಫೋಟಕಗಳ ಬಳಕೆ, ಯುದ್ಧ ಭೂಮಿಯಲ್ಲಿ ಅನುಸರಿಸಬೇಕಾದ ತಂತ್ರಗಾರಿಕೆ, ಆತ್ಮಾಹುತಿ ದಾಳಿಗಳಲ್ಲಿ ವಾಹನಗಳನ್ನು ಬಳಸುವ ತಂತ್ರಗಳು, ದಾಳಿ ನಡೆಸಿದ ಮೇಲೆ ತಪ್ಪಿಸಿಕೊಳ್ಳುವ ರೀತಿಗಳನ್ನು ಪ್ರಾಯೋಗಿಕ ಮಾದರಿಯಲ್ಲಿ ಕಲಿಸಿಕೊಡಲಾಗುತ್ತಿತ್ತು. ಇಲ್ಲಿ ತರಬೇತಿ ಸಿಬಂದಿಯೆಲ್ಲವೂ ಪಾಕಿಸ್ಥಾನ ದ ಸೈನ್ಯದ ನಿವೃತ್ತ ಸೇನಾಧಿಕಾರಿಗಳೇ. ವಿಶಾಲ ಈಜುಕೊಳದಲ್ಲಿ ನೀರಿನಡಿ ಕೈಗೊಳ್ಳಬಹುದಾದ ವಿಧ್ವಂಸಕ ಕೃತ್ಯಗಳು, ತಪ್ಪಿಸಿಕೊಳ್ಳುವ ವಿಧಾನಗಳನ್ನು ಹೇಳಿಕೊಡಲಾಗುತ್ತಿತ್ತು. ಜತೆಗೆ, ಆಗಾಗ ಧರ್ಮ ಬೋಧಕರಿಂದ ಜಿಹಾದ್‌ ಬಗ್ಗೆ ಪ್ರವಚನ ನೀಡಿ, ಅಭ್ಯರ್ಥಿಗಳ ರಾಕ್ಷಸಿತನವನ್ನು ಜಾಗೃತವಾಗಿಡಲಾಗುತ್ತಿತ್ತು. ಇಲ್ಲಿ ಜೈಶ್‌ ರಕ್ಕಸರ ಜತೆಗೆ, ಲಷ್ಕರ್‌ ಎ ತೊಯ್ಬಾ, ಹಿಜ್ಬುಲ್‌ ಮುಜಾಹಿದೀನ್‌ನ ಪಾತಕಿಗಳೂ ತರಬೇತಿ ಪಡೆಯುತ್ತಿದ್ದರು. 

ಅತಿ ಜಾಣ್ಮೆಯೇ ಮುಳುವಾಯ್ತು!
ಇಂಥದ್ದೊಂದು ಐಶಾರಾಮಿ ತರಬೇತಿ ಶಿಬಿರದ ಬಗ್ಗೆ ಸುಳಿವು ಕೊಟ್ಟಿದ್ದಕ್ಕೆ ಭಾರತೀಯ ಗುಪ್ತಚರ ಇಲಾಖೆಗೆ ಒಂದು ಮೆಚ್ಚುಗೆಯ ಥ್ಯಾಂಕ್ಸ್‌ ಹೇಳಲೇಬೇಕು. ಏಕೆಂದರೆ, ಪುಲ್ವಾಮಾ ದಾಳಿಯ ನಂತರ ಭಾರತ ಸಿಡಿದೇಳಲಿದೆ. ಹಾಗೆ ಸಿಡಿದೆದ್ದಾಗ ಅದು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ (ಪಿಒಕೆ) ಉಗ್ರರ ನೆಲೆಗಳ ಮೇಲೆ ಖಂಡಿತವಾಗಿಯೂ ದಾಳಿ ನಡೆಸುತ್ತದೆ ಎಂದು ಅಂದಾಜು ಮಾಡಿದ್ದ ಪಾಕಿಸ್ಥಾನ , ಪಿಒಕೆಯಲ್ಲಿದ್ದ ಎಲ್ಲಾ ಜೈಶ್‌- ಎ -ಮೊಹಮ್ಮದ್‌ ಸಂಘಟನೆಯ ತರಬೇತಿ ಕ್ಯಾಂಪ್‌ಗ್ಳನ್ನು ಪುಲ್ವಾಮಾ ಘಟನೆಯ ಬೆನ್ನಲ್ಲೇ ಬಾಲಕೋಟ್‌ ತರಬೇತಿ ಕೇಂದ್ರಕ್ಕೆ ಸ್ಥಳಾಂತರ ಮಾಡಿತ್ತು. ಇದರ ಸುಳಿವನ್ನು ಭಾರತೀಯ ಗುಪ್ತಚರ ಇಲಾಖೆ ಪತ್ತೆ ಹಚ್ಚಿದ್ದೇ “ಸರ್ಜಿಕಲ್‌ ಸ್ಟ್ರೈಕ್‌ 2.0’ನ ಯಶಸ್ಸಿನ ಮೂಲ.  ಹಾಗೆ, ಅಂಗಳದಲ್ಲಿದ್ದ ದಾಳಿಕೋರರನ್ನೆಲ್ಲಾ ತನ್ನ ಮನೆಯ ಮೂಲೆಯೊಂದರ ಕೊಠಡಿಯಲ್ಲಿ ಬಚ್ಚಿಟ್ಟು ತಾನು ಮಾತ್ರ ಮುಂಬಾಗಿಲು ಭದ್ರಪಡಿಸಿ ಮೈಮರೆತಿದ್ದ ಪಾಕಿಸ್ಥಾನ ಕ್ಕೆ ಉಗ್ರರು ಅಡಗಿರುವ ಕೋಣೆಯ ಮೇಲೇ ನೇರವಾಗಿ ಬಾಂಬ್‌ ಬಂದು  ಬೀಳಲಿದೆ  ಎಂಬ ವಿಚಾರ ಕನಸು ಮನಸ್ಸಿನಲ್ಲೂ ಹೊಳೆದಿರಲಿಲ್ಲ. ಉಗ್ರರನ್ನು ಸುರಕ್ಷಿತವಾಗಿಟ್ಟಿದ್ದೇವೆ ಎಂದು ಒಳಗೊಳಗೇ ಸಂತಸದಿಂದ ಬೀಗುತ್ತಿದ್ದ ಪಾಕಿಸ್ಥಾನ ಕ್ಕೆ “ಸರ್ಜಿಕಲ್‌ ಸ್ಟ್ರೈಕ್‌ 2.0′ ಮರ್ಮಾಘಾತ ನೀಡಿರುವುದಂತೂ ಅಪ್ಪಟ ಸತ್ಯ. 

1.7 ಕೋಟಿ ರೂ.  ಮೌಲ್ಯದ ಬಾಂಬ್‌
ಪಾಕಿಸ್ಥಾನ ದ ಬಾಲಕೋಟ್‌ನಲ್ಲಿರುವ ಜೈಶ್‌ ಉಗ್ರ ಸಂಘಟನೆಯ ಅತಿದೊಡ್ಡ ತರಬೇತಿ ಕೇಂದ್ರದ ಮತ್ತು ಇತರ ಮೂರು ಸ್ಥಳಗಳ ಮೇಲೆ ಐಎಎಫ್ ಮಿರಾಜ್‌ 2000 ಯುದ್ಧ ವಿಮಾನಗಳು 1.7 ಕೋಟಿ ರೂ.ಮೌಲ್ಯದ ಬಾಂಬ್‌ಗಳನ್ನು ಹಾಕಿವೆ. 1 ಸಾವಿರ ಕೆಜಿ ತೂಕ ಇರುವ ಒಂದೊಂದು ಬಾಂಬ್‌ನ  ಮೌಲ್ಯ 56 ಲಕ್ಷ ರೂ. ಆಗಿದೆ. ಐಎಎಫ್ 6,300 ಕೋಟಿ ರೂ. ಮೌಲ್ಯದ ಸೇನಾ ಸಲಕರಣೆಗಳನ್ನು ಕಾರ್ಯಾಚರಣೆಗೆ ಬಳಕೆ ಮಾಡಿಕೊಂಡಿತ್ತು. ಜತೆಗೆ 3,686 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳನ್ನು ಪ್ರತ್ಯೇಕವಾಗಿಯೇ ಸಿದ್ಧವಾಗಿರಿಸಿಕೊಂಡಿತ್ತು. ಪಾಕಿಸ್ಥಾನ  ಕಡೆಯಿಂದ ನಭದಿಂದ ನಡೆಯಬಹುದಾದ ದಾಳಿಯನ್ನು ನಿಯಂತ್ರಿಸಲು 1,750 ಕೋಟಿ ರೂ. ಮೌಲ್ಯದ ವಾಯು ಮಾರ್ಗದ ಮೂಲಕ ದಾಳಿ ಸೂಚಕ ಮತ್ತು ನಿಯಂತ್ರಣ ವ್ಯವಸ್ಥೆ (ಎಡಬ್ಲೂéಎಸಿಎಸ್‌)ಯನ್ನು 36 ಡಿಗ್ರಿ ಕೋನದಲ್ಲಿ ಸಿದ್ಧವಾಗಿರಿಸಿತ್ತು ಐಎಎಫ್. ಇದರ ಜತೆಗೆ ರಷ್ಯಾ ನಿರ್ಮಿತ ಸುಖೋಯ್‌ ಎಸ್‌ಯು-30ಎಂಕೆಐ ವಿಮಾನ (ಪ್ರತಿಯೊಂದು ವಿಮಾನದ ಬೆಲೆ 358 ಕೋಟಿ ರೂ.) ಅನ್ನು ಭಾರತದ ಪ್ರದೇಶ ವ್ಯಾಪ್ತಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಿತ್ತು. 154 ಕೋಟಿ ರೂ. ಮೌಲ್ಯದ ಐದು ಮಿಗ್‌ 29 ಯುದ್ಧ ವಿಮಾನಗಳನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು.

Advertisement

ಜಬ್ಟಾ ಟಾಪ್‌ ಮೇಲೆಯೇ ದಾಳಿ: ಭಾರತದ ಸ್ಪಷ್ಟನೆ
ಭಾರತ ನಡೆಸಿರುವ “ಸರ್ಜಿಕಲ್‌ ಸ್ಟ್ರೈಕ್‌ 2.0′ ಕಾರ್ಯಾಚರಣೆಯನ್ನು ಪಾಕಿಸ್ಥಾನ  ನಿರಾಕರಿಸಿದ ಬೆನ್ನಲ್ಲೇ, ಈ ದಾಳಿ ಪಾಕಿಸ್ಥಾನ ದೊಳಗಿನ ಬಾಲಕೋಟ್‌ನ ಬಳಿಯ ಉಗ್ರರ ತರಬೇತಿ ಕೇಂದ್ರದ ಮೇಲಾಗಿದೆಯೇ ಅಥವಾ ಗಡಿ ನಿಯಂತ್ರಣ ರೇಖೆಯಲ್ಲಿರುವ ಬಾಲಕೋಟ್‌ ಎಂಬ ಪುಟ್ಟ ಊರಿನ ಮೇಲಾಗಿದೆಯೇ ಎಂಬ ಬಗ್ಗೆ ಗೊಂದಲವೆದ್ದಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಭಾರತದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಜಯ್‌ ಗೋಖಲೆ, ಈ ಬಾರಿಯ ಸರ್ಜಿಕಲ್‌ ಸ್ಟ್ರೈಕ್‌, ಕರಾರುವಾಕ್‌ ಆಗಿ ಜೈಶ್‌ ತರಬೇತಿ ಕೇಂದ್ರದ ಮೇಲೆಯೇ ಆಗಿದೆ ಎಂದು ಖಚಿತಪಡಿಸಿದ್ದಾರೆ. ಜೈಶ್‌ ಹಿಡಿತವಿರುವ ಜಬ್ಟಾ ಟಾಪ್‌ ಎಂಬ ಪ್ರಾಂತ್ಯದಲ್ಲಿರುವ ತರಬೇತಿ ಕೇಂದ್ರ ಸೇರಿದಂತೆ ಆರು ಕಡೆ ದಾಳಿ ನಡೆಸ ಲಾಗಿದೆ ಎಂದು ಗೋಖಲೆ ತಿಳಿಸಿದ್ದಾರೆ.

ಮುಹೂರ್ತ ಫಿಕ್ಸ್‌ ಆಗಿದ್ದು ಹೀಗೆ
ಯಾವತ್ತು 40 ಜನ ಯೋಧರ ನೆತ್ತರು ಪುಲ್ವಾಮದ ನೆಲಕ್ಕೆ ಬಿದ್ದಿತ್ತೋ, ಅವತ್ತಿನಿಂದಲೇ ಭಾರತ ಇಂಥದ್ದೊಂದು ಗಳಿಗೆಗಾಗಿ ಕಾದು ಕೂತಿತ್ತು. ಪಾಕಿಸ್ಥಾನ ದ ಬೆಟ್ಟಗುಡ್ಡ ಪ್ರದೇಶಗಳಲ್ಲಿ ತಲೆಮರೆಸಿಕೊಂಡು ಸಂಚು ಹೂಡುತ್ತಿದ್ದ ಜೈಶ್‌ ಉಗ್ರರ ಹುಟ್ಟಡಗಿಸಲು ಭಾರತೀಯ ಸೇನೆ ಮಾರನೇ ದಿನದಿಂದಲೇ ಸ್ಕೆಚ್‌ ಹಾಕಲಾರಂಭಿಸಿತ್ತು. ಅದಕ್ಕೊಂದು ಮುಹೂರ್ತ ಫಿಕ್ಸ್‌ ಆಗುವುದಷ್ಟೇ ಬಾಕಿ ಇತ್ತು. ಅದುವೇ ಫೆ. 26ರ ಮುಂಜಾನೆ 3.30. ವಾಯುಪಡೆಯ ಮುಖ್ಯಸ್ಥ ಬಿ.ಎಸ್‌.ಧನೋವಾ ಅವರು ಸಲ್ಲಿಸಿದ ಕಾರ್ಯಾಚರಣೆಯ ಪ್ರಸ್ತಾಪಕ್ಕೆ ಸರ್ಕಾರ ಒಪ್ಪಿಗೆ ನೀಡುತ್ತಿದ್ದಂತೆಯೇ, ಈ ಮಹತ್ವದ ಕಾರ್ಯಾಚರಣೆಗೆ ಹಂತ ಹಂತದ ತಯಾರಿ ಶುರುವಾಯಿತು. ಫೆ.14ರ ಬಳಿಕದ 11 ದಿನಗಳ ಸಿದ್ಧತೆ ಹೇಗಿತ್ತು ಎಂಬ ಮಾಹಿತಿ ಇಲ್ಲಿದೆ.

ಫ‌ೆ.15    ಪುಲ್ವಾಮಾ ಘಟನೆಗೆ ವೈಮಾನಿಕ ದಾಳಿಯ ಮೂಲಕವೇ ಪ್ರತೀಕಾರ ತೀರಿಸುವುದು ಸೂಕ್ತ ಎಂಬ ಪ್ರಸ್ತಾಪ ಮುಂದಿಟ್ಟ ಏರ್‌ ಚೀಫ್ ಮಾರ್ಷಲ್‌ ಬೀರೇಂದರ್‌ ಸಿಂಗ್‌ ಧನೋವಾ. ಪ್ರಸ್ತಾಪಕ್ಕೆ ಸರ್ಕಾರದ ಅಂಗೀಕಾರ.
ಫೆ. 16-20    ಭಾರತೀಯ ವಾಯುಪಡೆ ಮತ್ತು ಸೇನೆಯಿಂದ ಹೆರಾನ್‌ ಡ್ರೋನ್‌ಗಳ ಮೂಲಕ ಎಲ್‌ಒಸಿಯಲ್ಲಿ ವೈಮಾನಿಕ ಕಣ್ಗಾವಲು ಪ್ರಕ್ರಿಯೆ
ಫೆ.20-22    ವಾಯುಪಡೆ ಮತ್ತು ಗುಪ್ತಚರ ಸಂಸ್ಥೆಗಳಿಂದ ಯಾವ್ಯಾವ ಪ್ರದೇಶಗಳ ಮೇಲೆ ದಾಳಿ ಮಾಡಬಹುದು ಎಂಬ “ಟಾರ್ಗೆಟ್‌ ಟೇಬಲ್ಸ್‌’ ರಚನೆ
ಫೆ.21  ವೈಮಾನಿಕ ದಾಳಿಯ ಟಾರ್ಗೆಟ್‌ ಆಯ್ಕೆಗಳ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ಗೆ ಮಾಹಿತಿ
ಫೆ.22  ದಾಳಿಗಾಗಿ ವಾಯುಪಡೆಯ 1 ಸ್ಕ್ವಾಡ್ರನ್‌ “ಟೈಗರ್ಸ್‌’ ಮತ್ತು 7 ಸ್ಕ್ವಾಡ್ರನ್‌ “ಬ್ಯಾಟಲ್‌ ಆಕ್ಸೆಸ್‌’ ಅನ್ನು ಸಕ್ರಿಯಗೊಳಿಸಿ, 12 ಯುದ್ಧ ವಿಮಾನಗಳನ್ನು ನಿಗದಿಪಡಿಸಿದ ವಾಯುಪಡೆ
ಫೆ. 24  ಮುನ್ನೆಚ್ಚರಿಕಾ ಜೆಟ್‌ ಮತ್ತು ಹಾರಾಟದ ವೇಳೆಯೇ ಇಂಧನ ತುಂಬಿಸಿಕೊಳ್ಳುವ ಟ್ಯಾಂಕರ್‌ ಮೂಲಕ ಮಧ್ಯ ಭಾರತದಲ್ಲಿ ಪ್ರಾಯೋಗಿಕ ಪರೀಕ್ಷೆ
ಫೆ.25-26 ಆಪರೇಷನ್‌ ಆರಂಭ. ಲೇಸರ್‌-ಗೈಡೆಡ್‌ ಬಾಂಬ್‌ಗಳನ್ನು ಹೊತ್ತ 12 ಮಿರಾಜ್‌ 2000 ಯುದ್ಧ ವಿಮಾನಗಳು ಒಂದರ ನಂತರ ಒಂದರಂತೆ ಗ್ವಾಲಿಯರ್‌ನಿಂದ ಟೇಕ್‌ ಆಫ್.

    ಭಟಿಂಡಾದಿಂದ ವಾಯುಪಡೆಯ ಮುನ್ಸೂಚನಾ ಜೆಟ್‌, ಆಗ್ರಾದಿಂದ ಹಾರಾಟದ ವೇಳೆಯೇ ಇಂಧನ ತುಂಬಿಸಿಕೊಳ್ಳುವ ಟ್ಯಾಂಕರ್‌ ಟೇಕ್‌ ಆಫ್. ರಹಸ್ಯ ಏರ್‌ಫೀಲ್ಡ್‌ನಿಂದ ಹಾರಿದ ವಾಯುಪಡೆಯ ಹೆರಾನ್‌ ಕಣ್ಗಾವಲು ಡ್ರೋನ್‌
    ಟಾರ್ಗೆಟ್‌ ಬಗ್ಗೆ ಕೊನೇ ಹಂತದ ತಪಾಸಣೆ ನಡೆಸಿದ ಮಿರಾಜ್‌ ಪೈಲಟ್‌ಗಳು. ಮುಂದೆ ಸಾಗುವಂತೆ ನಿಯಂತ್ರಣ ಕೇಂದ್ರದಿಂದ ಅನುಮತಿ. ಮುಜಾಫ‌ರಾಬಾದ್‌ ಸಮೀಪದ 
ಎಲ್‌ಒಸಿಯುದ್ದಕ್ಕೂ ಕೆಳಮಟ್ಟದಲ್ಲೇ ಸಂಚರಿಸಿದ ವಿಮಾನಗಳು. ಲೇಸರ್‌ ಪಾಡ್‌ಗಳನ್ನು ಬಳಸಿ, ಬಾಂಬ್‌ಗಳನ್ನು ಉಗ್ರ ನೆಲೆಯತ್ತ ಎಸೆತ. 3.20ರಿಂದ 3.30ರ ವೇಳೆಗೆ ಮಿಷನ್‌ ಕಂಪ್ಲೀಟ್‌.

“ಸರ್ಜಿಕಲ್‌ ಸ್ಟ್ರೈಕ್‌ 2′ ಹೇಗೆ ವಿಭಿನ್ನ?
 ಉರಿ ಸೇನಾ ನೆಲೆ ಮೇಲೆ ದಾಳಿ ನಡೆದು 11ನೇ ದಿನಕ್ಕೆ ಭಾರತ ಸೇನೆ ರಾತ್ರೋರಾತ್ರಿ ಸರ್ಜಿಕಲ್‌ ಸ್ಟ್ರೈಕ್‌ ಮಾಡಿತ್ತು. ಈಗ ಪುಲ್ವಾಮ ದಾಳಿ ನಡೆದ 12ನೇ ದಿನದಲ್ಲಿ ಇನ್ನೊಂದು ದಾಳಿ ನಡೆದಿದೆ. 
 ಇದೇ ಮೊದಲ ಬಾರಿಗೆ ಭಾರತದ ಯುದ್ಧ ವಿಮಾನಗಳು ಪಾಕಿಸ್ಥಾನ ದ ಗಡಿಯೊಳಗೆ ಹೋಗಿ ದಾಳಿ ನಡೆಸಿ ಬಂದಿವೆ. 
 ಒಂದೇ ದಾಳಿಯಲ್ಲಿ ಅತಿ ಹೆಚ್ಚು ಉಗ್ರವಾದಿಗಳನ್ನು ಹೊಸಕಿಹಾಕಿದ್ದು ಇದೇ ಮೊದಲ ಬಾರಿ. ಉಗ್ರರಷ್ಟೇ ಅಲ್ಲ, ಅವರ  ತರಬೇತುದಾರರು, ಹಿರಿಯ ಕಮಾಂಡರ್‌ಗಳೆಲ್ಲರೂ ಏಕಕಾಲದಲ್ಲಿ ಅಸುನೀಗಿದ್ದಾರೆ.
 ಸತ್ತವರಲ್ಲಿ ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ ಸಂಸ್ಥಾಪಕ, ಮಸೂದ್‌ ಅಜರ್‌ನ ಭಾಮೈದ ಮೌಲಾನಾ ಯೂಸುಫ್ ಅಜರ್‌ (ಉಸ್ತಾದ್‌ ಘೌರಿ) ಕೂಡ ಒಬ್ಬ. 
 1971ರ ನಂತರ ಇದೇ ಮೊದಲ ಬಾರಿಗೆ ಗಡಿ ನಿಯಂತ್ರಣ ರೇಖೆಯನ್ನು 
(ಎಲ್‌ಒಸಿ) ದಾಟಿ ಹೋಗಿ ದಾಳಿ ನಡೆಸಿರುವ ಭಾರತೀಯ ವಾಯು ಸೇನೆ (ಐಎಎಫ್). 1999ರ ಕಾರ್ಗಿಲ್‌ ಯುದ್ಧದ ವೇಳೆಯಲ್ಲೂ ವಾಯು ಪಡೆಯ ವಿಮಾನಗಳು ಗಡಿ ನಿಯಂತ್ರಣ ರೇಖೆ ದಾಟಿರಲಿಲ್ಲ.

1971ರ ಅನಂತರ ಮೊದಲ ಬಾರಿಗೆ ಎಲ್‌ಒಸಿ ದಾಟಿದ ವಾಯುಸೇನೆ
1971ರ ಯುದ್ಧದ ಅನಂತರ  ಮೊದಲ ಬಾರಿಗೆ ಐಎಎಫ್ ವಿಮಾನಗಳು, ಗಡಿನಿಯಂತ್ರಣ ರೇಖೆಯನ್ನು ದಾಟಿವೆ. ಅಂತಾರಾಷ್ಟ್ರೀಯ ನಿಯಮಗಳ ಪ್ರಕಾರ, ಒಂದು ದೇಶದ ಸೇನೆ, ಇನ್ನೊಂದು ದೇಶದ ವಾಯುಸೀಮೆ ದಾಟುತ್ತದೆ ಎಂದರೆ ಯುದ್ಧಕ್ಕೆ ಕರೆ ಎಂದೇ ಅರ್ಥ. ಪ್ರಸ್ತುತ ಭಾರತೀಯ ವಾಯುಸೇನೆ, ನಿಯಂತ್ರಣ ರೇಖೆಗೆ ಸಮೀಪವಿರುವ ಚಿಕೋಟಿ, ಮುಜಾಫ‌ರಾಬಾದ್‌ ದಾಟಿದ್ದು ಮಾತ್ರವಲ್ಲ, ಇನ್ನೂ ದೂರಕ್ಕೆ ಸಾಗಿ ಹೋಗಿದೆ. ಪಾಕಿಸ್ಥಾನ ದ ರಾಜಧಾನಿ ಇಸ್ಲಾಮಾಬಾದ್‌ಗೆ ಕೇವಲ 190 ಕಿಮೀ ಹತ್ತಿರವಿರುವ ಬಾಲಕೋಟ್‌ ಮೇಲೆಯೇ ದಾಳಿ ನಡೆಸಿದೆ. ಈ ಮೂಲಕ ಪಾಕಿಸ್ಥಾನ ದ ಎದೆಯಲ್ಲಿ ನಡುಕ ಹುಟ್ಟಿಸಿದೆ. ಒಂದು ವೇಳೆ, ಈ ದಾಳಿಗೆ ಪಾಕ್‌ ಸೇನೆಯೇನಾದರೂ ಪ್ರತಿಕ್ರಿಯೆ ನೀಡಿದ್ದೇ ಆದಲ್ಲಿ, ಅದು ಸ್ಪಷ್ಟವಾಗಿ ಎರಡೂ ದೇಶಗಳ ನಡುವೆ ಯುದ್ಧಾರಂಭವಾಗಿರುವುದರ 
ಅಧಿಕೃತ ಘೋಷಣೆಯಾಗುತ್ತದೆ. 1999ರಲ್ಲಿ ನಡೆದ ಪಾಕಿಸ್ಥಾನ  ವಿರುದ್ಧದ ಕಾರ್ಗಿಲ್‌ ಯುದ್ಧದಲ್ಲೂ ಭಾರತದ ಸೇನೆ ಗಡಿ ನಿಯಂತ್ರಣ ರೇಖೆಯನ್ನು ದಾಟಿರಲಿಲ್ಲ. ಆದರೆ 1971ರಲ್ಲಿ ಬಾಂಗ್ಲಾದೇಶದ ವಿಮೋಚನೆಗಾಗಿ ಭಾರತ ಯುದ್ಧ ನಡೆಸಿದ್ದಾಗ ಗಡಿ ನಿಯಂತ್ರಣ ರೇಖೆಯನ್ನು ದಾಟಬೇಕಾಗಿ ಬಂದಿತ್ತು. ಪಾಕಿಸ್ಥಾನ ದ 99,000 ಯೋಧರು ಭಾರತಕ್ಕೆ ಶರಣಾಗಿದ್ದ ಆ ಯುದ್ಧದಲ್ಲಿ, 
ನಿಯಂತ್ರಣ ರೇಖೆಯನ್ನು ದಾಟಿ ಮುಂದೆ ಹೋಗಲಾಗಿತ್ತು.

“ಉಗ್ರ’ ದಾಳಿಗೆ ಬಳಸಿದ ಸಾಧನಗಳೇನು ಗೊತ್ತಾ?
ಮುಂಜಾನೆ 3.30ರ ಹೊತ್ತಿಗೆ ಭಾರತ-ಪಾಕಿಸ್ಥಾನದ ಜನರೆಲ್ಲ ಮುಸುಕು ಹೊದ್ದು ಮಲಗಿದ್ದಾಗ, ಭಾರತೀಯ ವಾಯುಸೇನೆ, ಪಾಕಿಸ್ಥಾನ ದ ಬಾಲಕೋಟ್‌, ಮುಜಾಫ‌ರಾಬಾದ್‌, ಚಕೋತಿ ಉಗ್ರ ನೆಲೆಗಳಲ್ಲಿ ದಾಳಿ ನಡೆಸಿ, 300ಕ್ಕೂ ಅಧಿಕ ಉಗ್ರರನ್ನು ಕೊಲ್ಲಲಾಗಿದೆ. ಈ ದಾಳಿಗೆ ಭಾರತೀಯ ವಾಯುಸೇನೆ ಬಳಸಿದ ಸಾಧನ, ಶಸ್ತ್ರ, ಅವುಗಳ ಶಕ್ತಿಯೇನು ಎಂಬ ವಿವರ ಇಲ್ಲಿದೆ.

 ಮಿರಾಜ್‌ 2000 ಫೈಟರ್‌ ಜೆಟ್ಸ್‌
12 ಮಿರಾಜ್‌ 2000 ಯುದ್ಧ ವಿಮಾನಗಳನ್ನು ಬಳಸಿಕೊಳ್ಳಲಾಗಿತ್ತು. ಡಸ್ಸಾಲ್ಟ್ ಏವಿಯೇಷನ್‌ ನಿರ್ಮಿಸಿದ ಈ ಮಿರಾಜ್‌ಗಳು ಬಹುಕೋನದಲ್ಲಿ ದಾಳಿ ನಡೆಸಬಲ್ಲವು.

ಎಂಬಿಡಿಎ ಬಿಜಿಎಲ್‌ 1000 ಲೇಸರ್‌ ಬಾಂಬ್‌
ವಿಮಾನದೊಳಗಿನಿಂದಲೇ ಶತ್ರುಗಳ ನೆಲೆಯನ್ನು ಸ್ವಯಂಚಾಲಿತವಾಗಿ ಗುರುತಿಸುವ ಆಟಿÉಸ್‌ 2 ಸಾಧನ (ಆ್ಯಟೋಮ್ಯಾಟಿಕ್‌ ಟ್ರ್ಯಾಕಿಂಗ್‌ ಲೇಸರ್‌ ಇಲ್ಯುಮಿನೇಷನ್‌ ಸಿಸ್ಟಂ).

ಮಸಾಜ್‌ 1 ಯುಎವಿ
ಇದು ಇಸ್ರೇಲ್‌ ನಿರ್ಮಿಸಿದ ಮಾನವರಹಿತ ವಿಮಾನ. ಭೂಮಿಯಿಂದ 35, 000 ಅಡಿ ಎತ್ತರದಲ್ಲಿ ಹಾರಬಲ್ಲ (ಮಧ್ಯಮ ಎತ್ತರ), 52 ಗಂಟೆಗಳ ದೀರ್ಘ‌ ಕಾಲ ಕಾರ್ಯಾಚರಿಸುವ ಕ್ಷಮತೆಯುಳ್ಳ ಸಾಧನ. ಇದರ ಮೂಲಕ ಗಡಿರೇಖೆಯಲ್ಲಿ ವಸ್ತುಸ್ಥಿತಿಯ ಪರಿಶೀಲನೆ ಸಾಧ್ಯ.

ಎಂಬ್ರೇಸರ್‌ 145 ನೇತ್ರ
ಡಿಆರ್‌ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಅಧೀನದಲ್ಲಿರುವ ಕ್ಯಾಬ್ಸ್ ಎಂಬ ಪ್ರಯೋಗಾಲಯದಲ್ಲಿ ಎಂಬ್ರೇಸರ್‌ 145 ನೇತ್ರ ಎಂಬ ವಿಶೇಷ ಸಾಧನ ಅಭಿವೃದ್ಧಿಪಡಿಸಲಾಗಿದೆ. ಇದು 200 ಕಿ.ಮೀ. ವ್ಯಾಪ್ತಿಯೊಳಗೆ ಭೂಮಿ, ಆಗಸ ಹಾಗೂ ಸಮುದ್ರ…ಹೀಗೆ ಎಲ್ಲೆ ಇರುವ ಶತ್ರುಗಳ  ಪ್ರತಿರೋಧಕ ಕ್ಷಿಪಣಿ, ಜೆಟ್‌ಗಳನ್ನು ಪತ್ತೆಹಚ್ಚಬಲ್ಲದು.

ಐಎಲ್‌-78 ರೀಫ್ಯೂಯೆಲರ್‌ ಏರ್‌ಕ್ರಾಫ್ಟ್
ನಾಲ್ಕು ಎಂಜಿನ್‌ಗಳಿರುವ ರಷ್ಯಾ ನಿರ್ಮಿತ ಯುದ್ಧ ವಿಮಾನವಿದು. ಇದರ ನೆಲೆ ಆಗ್ರಾ. ಯುದ್ಧ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿರುವಾಗಲೇ ಅವಕ್ಕೆ ಇಂಧನಗಳನ್ನು ತುಂಬಿಸಲು ಇದು ನೆರವು ನೀಡುತ್ತದೆ.

ಎಸ್‌ಯು 30 ಎಂಕೆಐ
ರಷ್ಯಾದ ಸುಖೋಯ್‌ನಿಂದ ಅಭಿವೃದ್ಧಿಪಡಿಸಿದ ಬಹೂಪಯೋಗಿ ಯುದ್ಧ ವಿಮಾನ. ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಇದನ್ನು ದೇಶೀಯವಾಗಿ ಜೋಡಿಸಿದೆ. ಯಾವುದೇ ಅಪಾಯಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ.

ಪೆಕೊರಾ ಕ್ಷಿಪಣಿಗಳು
ರಷ್ಯಾ ನಿರ್ಮಿತ, ಭೂಮಿಯಿಂದ  ಆಗಸಕ್ಕೆ ಹಾರಬಲ್ಲ ಕ್ಷಿಪಣಿಯಿದು. ಇದರ ವ್ಯಾಪ್ತಿ 32 ಕಿ.ಮೀ. ಮಾತ್ರ. ಈ ವ್ಯಾಪ್ತಿಯಲ್ಲಿ ಇರುವ ಯಾವುದೇ  ಶತ್ರುರಾಷ್ಟ್ರದ ವಿಮಾನ, ಕ್ಷಿಪಣಿ ಹಾಗೂ ಇತರೆ ತಾಣಗಳನ್ನು ನಾಶ ಮಾಡಬಲ್ಲದು.

ಹೆಜ್ಜೆ ಹೆಜ್ಜೆಗೂ ದ್ವೇಷ!
ತರಬೇತಿ ಶಿಬಿರದ ಕಟ್ಟಡದ ಮೇಲಂತಸ್ತುಗಳಿಗೆ ಸಾಗುವ ಮೆಟ್ಟಿಲುಗಳ ಮೇಲೆ, ಕಾರಿಡಾರ್‌ಗಳ ಮೇಲೆ ಅಮೆರಿಕ, ಇಸ್ರೇಲ್‌ಗ‌ಳ ಧ್ವಜಗಳನ್ನು ಚಿತ್ರಿಸಲಾಗಿತ್ತು. ತರಬೇತಿ ಅಭ್ಯರ್ಥಿಗಳು, ಸಿಬಂದಿ ಅವುಗಳ ಮೇಲೆ ಕಾಲಿಟ್ಟುಕೊಂಡೇ ನಡೆದಾಡುತ್ತಿದ್ದರು. 

ಪುಲ್ವಾಮಾ ದಾಳಿಯಲ್ಲಿ ನಮ್ಮ ಯೋಧರು ಹುತಾತ್ಮರಾದ ದಿನದಿಂದ ಪ್ರತಿ ಭಾರತೀಯನ ಎದೆಯೊಳಗೆ ಮಡುಗಟ್ಟಿದ್ದ 
ದುಃಖಕ್ಕೆ ಈಗ ಸಾಂತ್ವನ ಸಿಕ್ಕಿದೆ. ಇಂಥ ಸೂಕ್ಷ್ಮ ಕಾರ್ಯಾಚರಣೆ ನಡೆಸಿರುವಂಥ ವಾಯುಪಡೆಗೆ ವಂದನೆಗಳು. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ತಂಡದ ಇಚ್ಛಾಶಕ್ತಿಗೆ ದೊರೆತ ಜಯವೂ ಹೌದು.

ರಾಮ್‌ ಮಾಧವ್‌, ಬಿಜೆಪಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next