Advertisement

ಕಂಬಳ ಪರ ಕಾನೂನು ಹೋರಾಟಕ್ಕೆ ಸರ್ವ ಕ್ರಮ :ಸಚಿವ ಡಿವಿಎಸ್‌

09:56 AM Oct 07, 2018 | |

ಮಂಗಳೂರು: ಪೇಟಾದವರು ಕಂಬಳ ಕ್ರೀಡೆಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹೊಸದಾಗಿ ಸಲ್ಲಿಸಿರುವ ಅರ್ಜಿಯ ವಿರುದ್ಧ ಸಮರ್ಥ ಕಾನೂನು ಹೋರಾಟ ನಡೆಸಲು ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರಾವಳಿಯ ಶ್ರಮ ಸಂಸ್ಕೃತಿಯ ಪ್ರತೀಕವಾಗಿರುವ ಕಂಬಳ ಕ್ರೀಡೆಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಅಂಕಿಅಂಶ ಸಚಿವ ಡಿ.ವಿ. ಸದಾನಂದ ಗೌಡ ಸ್ಪಷ್ಟಪಡಿಸಿದ್ದಾರೆ.

Advertisement

ಮಂಗಳೂರಿನ ತನ್ನ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೇಟಾದವರು ಸಲ್ಲಿಸಿರುವ ಅರ್ಜಿಯು ಸೋಮವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಇದಕ್ಕೆ ಪ್ರತಿಯಾಗಿ ಕೋರ್ಟ್‌ನಲ್ಲಿ ಕಂಬಳದ ಪರವಾಗಿ ಕೇಂದ್ರ ಸರಕಾರದಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರಕಾರದ ಅಟಾರ್ನಿ ಜನರಲ್‌ ಜತೆ ಚರ್ಚೆ ನಡೆಸಲಾಗಿದೆ. ರಾಜ್ಯ ಕಾನೂನು ಸಚಿವರು ಮತ್ತು ಅಡ್ವೊಕೇಟ್‌ ಜನರಲ್‌ ಜತೆ ರಾಜ್ಯದ ವತಿಯಿಂದ ಆಗಬೇಕಾದ ಕ್ರಮಗಳ ಚರ್ಚೆ ನಡೆಸಲಾಗುವುದು ಎಂದು ವಿವರಿಸಿದರು.

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆ ಸಮಸ್ಯೆ ಇಲ್ಲದೆ ನಡೆಯುತ್ತಿದೆ. ಆದರೆ ಕರಾವಳಿಯ ಮಣ್ಣಿನ ಸಂಸ್ಕೃತಿಯಾಗಿರುವ ಕಂಬಳ ಕ್ರೀಡೆಗೆ ಕೆಲವರು ಅಡ್ಡಿ ಸೃಷ್ಟಿಸುತ್ತಿದ್ದಾರೆ. ಕಂಬಳವನ್ನು ಉಳಿಸಿಕೊಳ್ಳಲು ಪ್ರಬಲ ಹೋರಾಟ ನಡೆಸಲಾಗುವುದು. ಒಂದೊಮ್ಮೆ ನ್ಯಾಯಾಲಯದಲ್ಲಿ ಕಂಬಳಕ್ಕೆ ಹಿನ್ನಡೆಯಾದರೆ ಕಾನೂನು ರಚಿಸಿಯಾದರೂ ಇದನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.

ಕಂಬಳದಲ್ಲಿ ಎತ್ತುಗಳಿಗೆ ಹಿಂಸೆ ಮಾಡಲಾಗುತ್ತಿದೆ ಎಂದು ಪೇಟಾದವರು ವಾದಿಸುತ್ತಿದ್ದಾರೆ. ಕಂಬಳದ
ಕೋಣಗಳನ್ನು ಅತ್ಯಂತ ಪ್ರೀತಿಯಿಂದ ಸಾಕಲಾಗುತ್ತದೆ. ಓಟದ ಸಂದರ್ಭದಲ್ಲಿ ಬೆತ್ತ ಹಿಡಿಯುವುದು ಹೊಡೆಯಲಲ್ಲ; ಅದು ಕೇವಲ ಸಾಂಕೇತಿಕ. ಪೇಟಾದವರು ಕಂಬಳ ಕ್ರೀಡೆಗೆ ತೊಂದರೆ ಮಾಡುವ ಮೂಲಕ ಈ ಕ್ರೀಡೆಯೊಂದಿಗೆ ಆಪ್ತವಾಗಿರುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಜನರಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದರು. 

ಕಂಬಳ ಮಸೂದೆಯಲ್ಲಿ ಕೆಲವು ನಿಯಮಗಳನ್ನು ತಿದ್ದುಪಡಿ ಮಾಡುವ ಅಗತ್ಯವಿದೆ. ಮಸೂದೆಯಲ್ಲಿ 37 ಸೆ. ಉಷ್ಣಾಂಶದಲ್ಲಿ ಕೋಣಗಳನ್ನು ಓಡಿಸಬಾರದು ಎಂಬ ನಿಯಮವಿದೆ. ಕರಾವಳಿಯಲ್ಲಿ ಬೇಸಗೆಯಲ್ಲಿ ಇಷ್ಟು ಉಷ್ಣಾಂಶ ಸಾಮಾನ್ಯ. ಕಂಬಳ ಕರೆಯ ಉದ್ದವನ್ನು ನಿರ್ದಿಷ್ಟಗೊಳಿಸುವ ಆವಶ್ಯಕತೆ ಇಲ್ಲ. ನ್ಯಾಯಾಲಯದ ನಿಲುವು ನೋಡಿಕೊಂಡು ತಿದ್ದುಪಡಿ ಕುರಿತಂತೆ ಈ ಬಗ್ಗೆ ರಾಜ್ಯ ಕಾನೂನು ಸಚಿವರ ಜತೆ ಚರ್ಚಿಸಲಾಗುವುದು ಎಂದು ಡಿವಿಎಸ್‌ ಹೇಳಿದರು.

Advertisement

ಕಂಬಳ ಸಮಿತಿ ಚರ್ಚೆ
ಪೇಟಾದವರು ಸಲ್ಲಿಸಿರುವ ಅರ್ಜಿ ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಂಬಳ ಸಮಿತಿಯ ಪದಾಧಿಕಾರಿಗಳು ಸಚಿವ ಡಿ.ವಿ. ಸದಾನಂದ ಗೌಡ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್‌. ಶೆಟ್ಟಿ, ಮಾಜಿ ಅಧ್ಯಕ್ಷ ಭಾಸ್ಕರ ಕೋಟ್ಯಾನ್‌, ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ, ಕೋಶಾಧಿಕಾರಿ ಸುರೇಶ್‌ ಕೆ. ಪೂಜಾರಿ, ಕಂಬಳ ಪರ ಕಾನೂನು ಹೋರಾಟಗಾರ ಆಶೋಕ್‌ ಕುಮಾರ್‌ ರೈ, ಸಮಿತಿ ಮಾಜಿ ಸಂಚಾಲಕ ಸೀತಾರಾಮ ಶೆಟ್ಟಿ, ತೀರ್ಪುಗಾರ ವಲೇರಿಯನ್‌ ಡೇಸಾ ಉಪಸ್ಥಿತರಿದ್ದರು.

ಕಂಬಳ ಬೆತ್ತ ಪರಿಷ್ಕರಣೆ
ಕಂಬಳ ಸಂದರ್ಭದಲ್ಲಿ ಹಿಡಿಯುವ ಬೆತ್ತವನ್ನು ಕಂಬಳ ಸಮಿತಿ ಪರಿಷ್ಕರಿಸಿ ಹೊಸ ರೀತಿಯಲ್ಲಿ ಸಿದ್ಧಪಡಿಸಿದೆ. ಹೊಡೆದರೂ ಕೋಣಗಳಿಗೆ ನೋವಾಗದಂತೆ ವಿನ್ಯಾಸಗೊಳಿಸಲಾಗಿದೆ. ಬೆತ್ತದ ತುದಿಯಲ್ಲಿ ಎರಡು ಕಡೆ ಸುಮಾರು 2 ಇಂಚು ಅಗಲ, ಅರ್ಧ ಅಡಿ ಉದ್ದದ ಫೋಮ್‌ ಹೊದಿಕೆಯನ್ನು ಜೋಡಿಸಲಾಗಿದೆ. ಹೀಗಾಗಿ ಹೊಡೆದರೂ ಕೋಣಗಳಿಗೆ ನೋವಾಗದು. ಪ್ರಸ್ತುತ ಕಂಬಳದಲ್ಲಿ ಬೆತ್ತವನ್ನು ಸಾಂಕೇತಿಕವಾಗಿ ಬಳಸಲಾಗುತ್ತದೆ. ಅಗತ್ಯ ಬಿದ್ದರೆ ಸುಪ್ರೀಂ ಕೋರ್ಟ್‌ಗೆ ಹೊಸ ವಿನ್ಯಾಸದ ಬೆತ್ತವನ್ನು ಪರಿಶೀಲನೆಗೆ ಒಪ್ಪಿಸಲಾಗುವುದು ಎಂದು ಜಿಲ್ಲಾ ಕಂಬಳ ಸಮಿತಿ ಮಾಜಿ ಸಂಚಾಲಕ ಸೀತಾರಾಮ ಶೆಟ್ಟಿ ತಿಳಿಸಿದ್ದಾರೆ.

“ಬೆಂಗಳೂರಿನಿಂದಲೇ ಸ್ಪರ್ಧೆ’
ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನಿಂದಲೇ ಸ್ಪರ್ಧಿಸುವುದಾಗಿ ಸಚಿವ ಡಿ.ವಿ. ಸದಾನಂದಗೌಡ ಅವರು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರವಾಗಿ 300ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ. ನಾವು ಯಾವತ್ತೂ ಸಮೀಕ್ಷೆಗಳನ್ನು ನಂಬಿಲ್ಲ. ಚುನಾವಣೆಗೆ ಪೂರಕ ಸಿದ್ಧತೆಗಳನ್ನು ಪಕ್ಷ ಆರಂಭಿಸಿದೆ ಎಂದರು.
ಚುನಾವಣೆಗೆ ಮುನ್ನವೇ ರಾಜ್ಯ ಸಮ್ಮಿಶ್ರ ಸರಕಾರ ಪತನಗೊಳ್ಳಲಿದೆ. ಭಾಗೀದಾರಿ ಪಕ್ಷಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಇದನ್ನು ದೃಢಪಡಿಸುತ್ತಿವೆ. ರಾಜ್ಯ ಸರಕಾರದ ಆಡಳಿತ ವೈಫಲ್ಯದ ಬಗ್ಗೆ ಜನ ಬೇಸತ್ತಿದ್ದಾರೆ. ರಾಮ ನಗರ ಸೇರಿದಂತೆ ವಿಧಾನಸಭಾ ಉಪಚುನಾ ವಣೆಗಳಲ್ಲಿ ಇದು ಪ್ರತಿಫಲಿಸಲಿದೆ. ಕರಾವಳಿಯ ಜನತೆ ನನ್ನನ್ನು ಶಾಸಕ, ಸಂಸದನನ್ನಾಗಿಸಿದ್ದಾರೆ. ಮುಖ್ಯಮಂತ್ರಿಯೂ ಆಗಿದ್ದೇನೆ. ಈಗ ಕೇಂದ್ರ ಸಚಿವನಾಗಿದ್ದೇನೆ. ಕರಾವಳಿಯ ಯಾವುದೇ ವಿಚಾರ ಬಂದಾಗ ಪರವಾಗಿ ಹೋರಾಡಿದ್ದೇನೆ ಎಂದರು. 

ಎತ್ತಿನ ಹೊಳೆ ಯೋಜನೆ: ದಕ್ಷಿಣ ಕನ್ನಡ ಜಿಲ್ಲೆಗೆ ಸಮಸ್ಯೆ ಇಲ್ಲ 
ಎತ್ತಿನ ಹೊಳೆ ಯೋಜನೆ ಬಗ್ಗೆ ನನ್ನ ವಿರುದ್ಧ ವೃಥಾ ಆರೋಪಗಳನ್ನು ಮಾಡಲಾಯಿತು. ಈ ಯೋಜನೆಯಿಂದ ದ. ಕ. ಜಿಲ್ಲೆಗೆ ಸಮಸ್ಯೆ ಇಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ಎಲ್ಲರಿಗೂ ಕುಡಿಯುವ ನೀರು ನೀಡುವ ಜವಾಬ್ದಾರಿ ನನ್ನ ಮೇಲಿತ್ತು. ಅದನ್ನು ನಿರ್ವಹಿಸಿದ್ದೇನೆ. ಮಳೆಗಾಲದಲ್ಲಿ ನದಿಗಳು ಉಕ್ಕಿ ಹರಿಯುತ್ತವೆ. ಆ ಸಮಯದಲ್ಲಿ ಮಾತ್ರ ನೀರು ಎತ್ತಲಾಗುತ್ತದೆ ಎಂದು ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next