Advertisement

ಕ್ಷೇತ್ರದ ಜನತೆಗೆ ನನ್ನ ಅಭಿವೃದ್ಧಿಯ ಲೆಕ್ಕವನ್ನು ಕೊಡುತ್ತೇನೆ : ಡಾ.ಜಿ.ಪರಮೇಶ್ವರ್

09:54 PM Dec 09, 2022 | Team Udayavani |

ಕೊರಟಗೆರೆ: ಕ್ಷೇತ್ರದ ಜನತೆಗೆ ನನ್ನ ಅಭಿವೃದ್ಧಿಯ ಲೆಕ್ಕವನ್ನು ಕೊಡುತ್ತೇನೆ, ವಡ್ಡಗೆರೆ ಪಂಚಾಯಿತಿಗೆ 5 ವರ್ಷಗಳಲ್ಲಿ ಸುಮಾರು 21 ಕೋಟಿ 80 ಲಕ್ಷ ಅಭಿವೃದ್ದಿ ಕೆಲಸವನ್ನು ಮಾಡಿದ್ದೇನೆ ಎಂದು ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.

Advertisement

ಅವರು ತಾಲೂಕಿನ ಕಸಬಾ ಹೋಬಳಿಯ ರಂಗನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಗಳ ಶಂಕುಸ್ಥಾಪನೆ ಮಾಡಿ ಕಲ್ಕರೆ ಗ್ರಾಮದಲ್ಲಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಮಾತನಾಡಿ 2018 ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನರು ನನ್ನನ್ನು ಮತ್ತೆ ಆಯ್ಕೆ ಮಾಡಿದಾಗ ರಾಜ್ಯದ ಉಪಮುಖ್ಯಮಂತ್ರಿಯಾದೆ, ಕ್ಷೇತ್ರಕ್ಕೆ ಸಾಕಷ್ಟು ಅಭಿವೃದಿ ಕೆಲಸಗಳನ್ನು ಮಾಡಿದೆ, ನಮ್ಮ ಸಂಮಿಶ್ರ ಸರ್ಕಾರ ಪತನವಾದರೂ ಸಹ ಕ್ಷೇತ್ರದ ಅಭಿವೃದಿಯನ್ನು ನಿಲ್ಲಿಸದೇ ಸಾಕಷ್ಟು ಶ್ರಮವಹಿಸಿದ್ದೇನೆ. ಇನ್ನು ಹಲವಾರು ಗ್ರಾಮಗಳಲ್ಲಿ ಅಭಿವೃದ್ದಿ ಕೆಲಸಗಳು ಆಗಬೇಕಿವೆ, ನನ್ನ ಅಭಿವೃದ್ದಿ ಕೆಲಸಗಳನ್ನು ಕ್ಷೇತ್ರದ ಜನರ ಮನೆ ಬಾಗಿಲಿಗೆ ತಲುಪಿಸುತ್ತೇನೆ. ನಾನು ಮಧುಗಿರಿಯಲ್ಲಿ 20 ವರ್ಷ, ಕೊರಟಗೆರೆ ಕ್ಷೇತ್ರದಲ್ಲಿ15 ವರ್ಷ ರಾಜಕೀಯ ಮಾಡಿ ಜನರ ಒಡನಾಟ ಹೊಂದಿದ್ದೇನೆ. ಆದರೆ ಇತ್ತೀಚೆಗೆ ರಾಜಕೀಯಕ್ಕೆ ಕೆಲವರು ಜನರ ಬಳಿ ನೃತ್ಯಗಳನ್ನು ಮಾಡಲು ಬರುತ್ತಿದ್ದಾರೆ. ಜನರು ಅದನ್ನು ತೀರ್ಮಾನಿಸುತ್ತಾರೆ. ಕ್ಷೇತ್ರದ ಜನರ ಋಣ ತೀರಿಸುವ ಕೆಲಸವನ್ನು ಮಾಡುತ್ತಿದ್ದೇನೆ ಎಂದರು.

ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಸತತವಾಗಿ 8ವರ್ಷಗಳ ಕಾಲ ಕುಳಿತು ನಿಭಾಯಿಸಿದ್ದೇನೆ.ಅದು ಅಷ್ಟು ಸುಲಭವಾದ ಮಾತಲ್ಲ ಕಾಂಗ್ರೆಸ್ ಪಕ್ಷ ಅಷ್ಟು ಜವಾಬ್ದಾರಿಯನ್ನು ನನ್ನ ಮೇಲೆ ನಂಬಿಕೆ ಇಟ್ಟು ನೀಡಿತ್ತು.ಇಡೀ ರಾಜ್ಯದಲ್ಲಿ ಪಕ್ಷದ ಆಗು ಹೋಗುಗಳನ್ನು ನಿಭಾಯಿಸಲು ಡಿ.ಕೆ ಶಿವಕುಮಾರ್ ಕೂಡ ಹೆಣಗಾಡುತ್ತಿದ್ದಾರೆ ಎಂದರು.

ತಾಲೂಕಿನ ನರಸಿಂಹಗಿರಿ ಕ್ಷೇತ್ರದ ಹನುಮಂತನಾಥ ಸ್ವಾಮಿಜಿ ಮಾತನಾಡಿ, ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಡಾ.ಜಿ. ಪರಮೇಶ್ವರ ರವರಂತ ಜನಪ್ರತಿನಿಧಿಗಳ ಅತ್ಯಗತ್ಯವಿದೆ. ಕ್ಷೇತ್ರದಲ್ಲಿ15 ವರ್ಷಗಳಿಂದ ಶಾಸಕರು ಪೊಲೀಸ್ ಠಾಣೆಗಳಲ್ಲಿ ಯಾವುದೇ ಸುಳ್ಳು ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸಿರುವ ಮತ್ತು ಅಧಿಕಾರಿಗಳ ಬಳಿ ಲಂಚ ಪಡೆದಿರುವ ದೂರುಗಳಿಲ್ಲ. ಮುಂದೆ ತುಮಕೂರು ಜಿಲ್ಲೆಯಲ್ಲೇ ರಾಜ್ಯದಲ್ಲಿ ಉನ್ನತ ಪದವಿಗೆ ಹೋಗುವ ಏಕೈಕ ವ್ಯಕ್ತಿ. ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಕೆಲಸ ಮಾಡಿರುವ ಡಾ ಜಿ ಪರಮೇಶ್ವರ ರವರನ್ನು ಜನರು ಆಶೀರ್ವದಿಸಬೇಕಿದೆ ಎಂದರು.

ಶ್ರೀ ಕ್ಷೇತ್ರ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಮಾತನಾಡಿ, ಡಾ ಜಿ ಪರಮೇಶ್ವರ್ ರವರು ರಾಜ್ಯ ಕಂಡ ಸಜ್ಜನ ರಾಜಕಾರಣಿ, ಎಲ್ಲಾ ಪಕ್ಷದವರಲ್ಲೂ ಉತ್ತಮ ಭಾಂದವ್ಯವುಳ್ಳವರು. ಅಭಿವೃದ್ದಿ ವಿಚಾರದಲ್ಲಿ ಪಕ್ಷ ಭೇದ ಮಾಡದೇ ರಾಜಕೀಯವನ್ನು ಚುನಾವಣೆ ಸಮಯದಲ್ಲಿ ಮಾತ್ರ ಮಾಡುವ ವ್ಯಕ್ತಿ. ನಮ್ಮ ಸಿದ್ದರಬೆಟ್ಟ ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲೂ ಪಕ್ಷ ಭೇದ ಭಾವ ಮಾಡದೇ ಅವರು ಶಾಸಕರಾಗಿದ್ದ ಕಾಲದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನವರನ್ನು ಭೇಟಿ ಮಾಡಿ ಕ್ಷೇತ್ರಕ್ಕೆ ಬರುವಲ್ಲಿ ಕಾರಣೀಕರ್ತರು. ಇಂತಹ ರಾಜಕಾರಣಿಗಳು ಅಪರೂಪ ಎಂದರು.

Advertisement

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವಥನಾರಾಯಣ, ಗ್ರಾ, ಪಂ ಅಧ್ಯಕ್ಷ ವಸಂತರಾಜು ಉಪಾಧ್ಯಕ್ಷೆ ಗೌರಮ್ಮ, ಸದಸ್ಯೆ ಶಾಂತಮ್ಮ, ತುಮುಲ್ ನಿರ್ದೇಶಕ ಈಶ್ವರಯ್ಯ, ಪ.ಪಂ ಸದಸ್ಯ ಎ.ಡಿ ಬಲರಾಮಯ್ಯ, ಮುಖಂಡರುಗಳಾದ ಪುಟ್ಟಹರಿಯಪ್ಪ, ಸಿದ್ದಲಿಂಗಪ್ಪ, ಎಲ್ ರಾಜಣ್ಣ, ಗಟ್ಲಹಳ್ಳಿ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next