Advertisement

ಮುಂದಿನ ಜನುಮದಲ್ಲಿ ಕನ್ನಡಿಗನಾಗಿ ಹುಟ್ಟುವೆ…:ಎಸ್ ಪಿಬಿ ಮನದಾಳ

10:51 AM Sep 26, 2020 | Nagendra Trasi |

ಹತ್ತು ವರ್ಷಗಳ ಹಿಂದಿನ ಮಾತು. ಜೆ.ಪಿ.ನಗರದ ಆರ್‌.ವಿ. ಡೆಂಟಲ್‌ ಕಾಲೇಜು ಸಭಾಂಗಣ ದಲ್ಲಿ, ಗಾಯಕಿ ಅರ್ಚನಾ ಉಡುಪ ಅವರ ಗಾಂಧಾರ್‌ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ. ಇಡೀ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಯಾಗಿದ್ದವರು ಎಸ್‌. ಪಿ. ಬಾಲ ಸುಬ್ರಹ್ಮಣ್ಯಂ. ಇರುವೆ ನುಸುಳಲೂ ಜಾಗವಿಲ್ಲದಂತೆ, ಜನ ಕಿಕ್ಕಿರಿದು ತುಂಬಿದ್ದರು. ಪ್ರಾಸ್ತಾವಿಕ ಮಾತುಗಳು ಮುಗಿದು ಕಾರ್ಯಕ್ರಮ ಆರಂಭವಾಗಿಯೇಬಿ ಟ್ಟಿತು. ಆರಂಭದ ಮೂರು ಗೀತೆಗಳು ಮುಗಿದವು.

Advertisement

ಜನರಿಗೆ ಏನೋ ಚಡಪಡಿಕೆ. ಇನ್ನೂ ಎಸ್ಪಿ ಬರಲಿಲ್ಲವಲ್ಲ… ಅವರು ಎಷ್ಟನೇ ಹಾಡಿಗೆ ಬರ್ತಾರೆ? ಒಟ್ಟು ಎಷ್ಟು ಹಾಡಿಗೆ ದನಿಯಾಗ್ತಾರೆ? ಕೆಲವರಂತೂ ತಮ್ಮ ಅನುಮಾನವನ್ನು ಪಕ್ಕದಲ್ಲಿ ಕೂತವರೊಂದಿಗೆ ಹೇಳಿಕೊಂಡರು. ಆಗಲೇ ನಿರೂಪಕಿ ಅಪರ್ಣಾ ಹೇಳಿದರು: ಈಗ, ದೇವರ ಗುಡಿ ಚಿತ್ರದ ಗೀತೆ. ಗಾಯಕರು- ಎಸ್‌. ಪಿ. ಬಾಲಸುಬ್ರಹ್ಮಣ್ಯಂ. ಅಷ್ಟೆ; ಜನ ಹೋ ಎಂದು ಕೂಗಿದರು. ಚಪ್ಪಾಳೆ ಹೊಡೆದು ಸಂಭ್ರಮಿಸಿದರು. ಆಸನಗಳಿಂದ ಎದ್ದು ನಿಂತು ತಮ್ಮ ಗೌರವ ವ್ಯಕ್ತಪಡಿಸಿದರು.

ಆಗಲೇ ಒಂದು ಪರಿಶುದ್ಧ ಮುಗುಳ್ನಗೆಯೊಂದಿಗೆ, ಒಂದೊಂದೇ ಹೆಜ್ಜೆ ಯಿಡುತ್ತ ಬಂದೇಬಿಟ್ಟರು ಎಸ್ಪಿ. ಅಷ್ಟೂ ಸಭಿಕರಿಗೆ ಶಿರಬಾಗಿ ನಮಿಸಿ, ಹಾಡಲು ನಿಂತರು.
ಎಸ್‌ಪಿಬಿ ಅವರಿಗೆ ಅತೀ ಅನ್ನುವಷ್ಟು ಖ್ಯಾತಿ ತಂದುಕೊಟ್ಟ ಹಾಡು, ದೇವರಗುಡಿ ಚಿತ್ರದ- ಮಾಮರ ವೆಲ್ಲೋ ಕೋಗಿಲೆಯೆಲ್ಲೋ… ಅವರೀಗ ಹಾಡಬೇಕಿದ್ದುದು ಅದೇ ಗೀತೆಯನ್ನು. ಎಸ್ಪಿ ಅವರು ಮೈಕ್‌ ಕೈಗೆತ್ತಿಕೊಂಡಾಗ ಮತ್ತೂಮ್ಮೆ ಅಭಿಮಾನದ ಶಿಳ್ಳೆ-ಚಪ್ಪಾಳೆ. ಆಗ ಎಸ್ಪಿ ಭಾವು ಕರಾಗಿ ಹಾಡಿದರು; “ಆಂಧ್ರವು ಎಲ್ಲೋ ಕನ್ನಡ ವೆಲ್ಲೋ ಏನೀ ಸ್ನೇಹಾ ಸಂಬಂಧ… ಎಲ್ಲಿಯದೋ ಈ ಅನುಬಂಧ…’ ಈ ಸಾಲುಗಳನ್ನು ಕೇಳುತ್ತಿದ್ದಂತೆಯೇ ಹಾಡುತ್ತಿದ್ದವರಿಗೂ, ಅದನ್ನು ಕೇಳುತ್ತಿದ್ದವರಿಗೂ ಒಮ್ಮೆಲೇ ಗಂಟಲು ಕಟ್ಟಿಕೊಂಡಿತ್ತು!

ಇದನ್ನೂ ಓದಿ: ಸರ್ಕಾರಿ ಗೌರವದೊಂದಿಗೆ ಫಾರ್ಮ್ ಹೌಸ್ ನಲ್ಲಿ SPB ಅಂತ್ಯಕ್ರಿಯೆ: ಅಂತಿಮ ದರ್ಶನಕ್ಕೆ ವ್ಯವಸ್ಥೆ

ಆ ಹಾಡು ಮುಗಿಯುತ್ತಿದ್ದಂತೆಯೇ ಎಸ್ಪಿ ಹೇಳಿದರು. ಆಂಧ್ರದವನಾದ ನನ್ನನ್ನು ಮನೆ ಮಗನಿಗಿಂತ ಹೆಚ್ಚಾಗಿ ಪ್ರೀತಿಸ್ತೀರಲ್ಲ? ನಿಮಗೆ ಈ ಹಾಡುಗಳ ಬದಲಾಗಿ ನಾನಾದರೂ ಬೇರೇನೂ ಕೊಡಬಲ್ಲೇ? ಇನ್ನೊಂದು ಜನ್ಮ ಅಂತೇನಾದರೂ ಇದ್ದರೆ, ನಾನು ಕನ್ನಡಿಗನಾಗಿ ಹುಟ್ಟುವೆ… ಸುಮಧುರ ಗಾಯನ ದಿಂದ ಮಾತ್ರವಲ್ಲ, ಸವಿಯಾದ ಮಾತುಗಳಿಂದಲೂ ಎಸ್ಪಿ ಅವರು ಜನಮನವನ್ನು ಗೆಲ್ಲುತ್ತಿದ್ದುದು ಹೀಗೆ.

Advertisement

ಪೂರ್ತಿ 45 ವರ್ಷಗಳ ಕಾಲ ಕನ್ನಡ ಚಿತ್ರರಂಗದ ಏಕಮೇವಾದ್ವಿತೀಯ ಗಾಯಕನಾಗಿ ಮೆರೆದವರು ಎಸ್ಪಿ. ಸಾಮಾನ್ಯವಾಗಿ ಒಬ್ಬ ಗಾಯಕನ ಧ್ವನಿ, ಒಬ್ಬರು
ಅಥವಾ ಇಬ್ಬರು ನಾಯಕರಿಗೆ ಹೊಂದಿಕೆ ಆಗುತ್ತದೆ. ಆದರೆ ಎಸ್ಪಿ ಅವರ ವಿಷಯದಲ್ಲಿ ಹಾಗಾಗಲಿಲ್ಲ. ಕನ್ನಡದ 15ಕ್ಕೂ ಹೆಚ್ಚು ನಾಯಕರಿಗೆ ಅವರ ಧ್ವನಿ
“ಪಫೆìಕ್ಟ್’ ಅನ್ನುವಂತೆ ಹೊಂದಿಕೆ ಆಗಿಬಿಟ್ಟಿತು. ಚಂದನದ ಗೊಂಬೆ/ ಬಯಲುದಾರಿ ಚಿತ್ರದ ಹಾಡುಗಳನ್ನು ಕೇಳಿದಾಗ ನಮಗೆ ಅನ್ನಿಸುವುದು,
ಅನಂತನಾಗ್‌ ಹಾಡ್ತಾ ಇದ್ದಾರೆ ಅಂತಲೇ.

ಹಾಗೆಯೇ, ಸ್ನೇಹದ ಕಡಲಲ್ಲಿ ಹಾಡು ಕೇಳಿದಾಗ ಶ್ರೀನಾಥ್‌, ಈ ಭೂಮಿ ಬಣ್ಣದ ಬುಗುರಿ.. ಅಂದಾಗ ವಿಷ್ಣುವರ್ಧನ್‌, ಜೊತೆಯಲಿ ಜೊತೆಜೊತೆಯಲಿ… ಅಂದಾಗ ಶಂಕರ್‌ನಾಗ್‌, ಶಿವ ಶಿವ ಎಂದರೆ ಭಯವಿಲ್ಲಾ.. ಅನ್ನುವಾಗ ಲೋಕೇಶ್‌, ರಾಮ ಕೃಷ್ಣ ಗಾಂಧೀ ಬುದ್ಧ ಅನ್ನುವಾಗ ಅಂಬರೀಷ್‌, ನಮ್ಮೂರು ಮೈಸೂರು ನಿಮ್ಮೂರು ಯಾವೂರು ಅನ್ನುವಾಗ ದ್ವಾರಕೀಶ್‌, ಟುವ್ವಿ ಟುವ್ವಿ ಟುವ್ವಿ…ಅಂದಾಗ ಶಿವರಾಜ್‌ ಕುಮಾರ್‌ ಚಿತ್ರಗಳೇ ಕಣ್ಮುಂದೆ ಬರುತ್ತವೆ. ತಮ್ಮ ಧ್ವನಿಯನ್ನು ಆಯಾ ನಾಯಕರಿಗೆ ಹೊಂದುವಂತೆ ಬದಲಿಸಿಕೊಳ್ಳುವ ಮ್ಯಾಜಿಕ್‌ ಅದು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ ಅವರು ನನಗೆ ಅದೆಲ್ಲ ಗೊತ್ತಾಗುವುದಿಲ್ಲ.
ಹಾಡುವುದು ಮಾತ್ರ ನನ್ನ ಕೆಲಸ. ಮೈಕ್‌ ಮುಂದೆ ನಿಂತಾಗ ಹೇಗೆ ತೋಚುತ್ತದೋ ಹಾಗೆ ಹಾಡಿಬಿಡುತ್ತೇನೆ… ” ಎಂದು ನಗುತ್ತಿದ್ದರು.

ಇದನ್ನೂ ಓದಿ: ಕೊನೆಗೂ ‘ಆ ದಿನ’ ಬರಲೇ ಇಲ್ಲ: ‘2ದಿನಗಳಲ್ಲಿ ಮರಳಿ ಬರುವೆ’ ಎಂದಿದ್ದ SPB ಬಾರದ ಲೋಕಕ್ಕೆ ಪಯಣ

ಎದೆ ತುಂಬಿ ಹಾಡುವೆನು
ಕನ್ನಡದಲ್ಲಿ ಈಗ ಸಾಕಷ್ಟು ರಿಯಾಲಿಟಿ ಶೋಗಳಿವೆ. ಆದರೆ ರಿಯಾಲಿಟಿ ಶೋಗಳು ಹೆಚ್ಚು ಜನಪ್ರಿಯವಲ್ಲದ ಕಾಲದಲ್ಲೇ ಕಿರುತೆರೆಯಲ್ಲಿ ರಿಯಾಲಿಟಿ ಶೋವೊಂದನ್ನು ಮಾಡಿ, ಅದನ್ನು ಯಶಸ್ವಿಗೊಳಿಸಿದವರು ಎಸ್‌ಪಿಬಿ. ಅದು ಎದೆ ತುಂಬಿ ಹಾಡುವೆನು. ಈಟಿವಿ ವಾಹಿನಿಯಲ್ಲಿ 2008ರಲ್ಲಿ ಆರಂಭವಾದ ಈ ಟ್ಯಾಲೆಂಟ್‌ ಶೋವನ್ನು ಎಸ್‌ಪಿಬಿ ಅವರು ನಡೆಸಿಕೊಡುತ್ತಿದ್ದರು. 2012ರ ವರೆಗೆ ಇದು ನಡೆಯಿತು. ಈ ಮೂಲಕ ಸಾಕಷ್ಟು ಪ್ರತಿಭೆಗಳು ಹೊರಬಂದವು.

ಕನ್ನಡಿಗರ ಉಸಿರು
ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಯಾವುದೇ ಒಂದು ಭಾಷೆಯಲ್ಲಿ ಕಟ್ಟಿಕೊಡೋದು ಸ್ಪಲ್ಪ ಕಷ್ಟದ ಕೆಲಸವೇ ಸರಿ. ಏಕೆಂದರೆ ಅವರು ಯಾವುದೇ ಒಂದು ಭಾಷೆಗೆ ಸೀಮಿತರಾದವರಲ್ಲ. ಯಾವ ಭಾಷೆಗೆ ಹೋದರೂ ಆ ಮಣ್ಣಿನ ಮಗನಾಗುತ್ತಿದ್ದರು. ಅದೇ ಎಸ್‌ಪಿಬಿ ಅವರ ಜನಪ್ರಿಯತೆಯ ಗುಟ್ಟಲ್ಲೊಂದು ಕೂಡಾ.

ಅದೇ ಕಾರಣದಿಂದ ತೆಲುಗು ಮೂಲದ ಎಸ್‌ಪಿಬಿ ಅವರು ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿಯುವಂತಾಯಿತು. ಕನ್ನಡದ ಸ್ಟಾರ್‌ ನಟರಿಗೆ ಹಾಡುತ್ತಾ, ಸ್ಟಾರ್‌ ಗಾಯಕರಾಗಿ ಮೆರೆದವರು ಎಸ್‌ಪಿಬಿ. ಪ್ರತಿಯೊಬ್ಬ ಸ್ಟಾರ್‌ ನಟನೂ ಕೂಡಾ ತನ್ನ ಚಿತ್ರಗಳಲ್ಲಿ ಎಸ್‌ಪಿಬಿ ಅವರ ಹಾಡಿರಲಿ ಎಂದು ಬಯಸುವ ಮಟ್ಟಕ್ಕೆ ಅವರು ಖ್ಯಾತರಾಗಿದ್ದರು.

ಪ್ರಶಸ್ತಿಗಳು
ಎಸ್‌ಪಿಬಿ ಅವರಿಗೆ ಹಿನ್ನೆಲೆ ಗಾಯನಕ್ಕಾಗಿ ಆರು ಬಾರಿ ರಾಷ್ಟ್ರಪ್ರಶಸ್ತಿ ಬಂದಿದೆ. ಜತೆಗೆ ಭಾರತ ಸರಕಾರ ಪದ್ಮಶ್ರೀ ಹಾಗೂ ಪದ್ಮ ಭೂಷಣ ನೀಡಿ ಗೌರವಿಸಿದೆ. ಇದಲ್ಲದೇ ಬೇರೆ ಬೇರೆ ರಾಜ್ಯಗಳ ರಾಜ್ಯ ಪ್ರಶಸ್ತಿ, ಖಾಸಗಿ ಸಂಸ್ಥೆಗಳು ನೀಡುವ ಹಲವಾರು ಪ್ರಶಸ್ತಿ ಗೌರವಗಳಿಗೆ ಎಸ್‌ಪಿಬಿ ಭಾಜನರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next