Advertisement
ನನಗೊಬ್ಬ ಅಣ್ಣ ಖಂಡಿತ ಬೇಕು. ಅದರಲ್ಲೂ ನನ್ನ ಈಗಿನ ವಯಸಿನಲ್ಲಿ ಅಣ್ಣನ ಅನುಪಸ್ಥಿತಿ ತುಂಬಾ ಕಾಡುತ್ತಿದೆ. “ಕುದುರೇನ ತಂದೀನಿ ಜೀನವಾ ಬಿಟ್ಟಿವ್ನಿ’ ಅಂತ ಜನಪದದ ಅಣ್ಣ ಹಾಡಿದ. “ಪಂಚಮಿ ಹಬ್ಬಕ್ಕೆ ಅಣ್ಣ ಯಾಕ ಬರಲಿಲ್ಲ ಕರೆಯಾಕ?’ ಅಂತ ಜನಪದದ ತಂಗಿ ಹಾಡಿದಳು. ಆ ತಂಗಿ ನೋವು ಅಣ್ಣನ್ನಿಲ್ಲದ ನನ್ನಂಥ ಹುಡುಗಿಯರಿಗೆ ಮಾತ್ರ ತುಂಬಾ ಚೆನ್ನಾಗಿ ಅರ್ಥವಾಗುತ್ತಿ¤ದೆ. ಯಾಕೆ ಅಂತೀರ ಕೇಳಿ.
Related Articles
Advertisement
ಅನೇಕ ಸಲ ಯಾವುದೋ ಕಾರ್ಯಕ್ರಮಗಳಿಗೆ, ಯಾವುದೋ ಸಿನಿಮಾಗೆ ಹೋಗಬೇಕೆಂದು ಅಮ್ಮನ ಒಪ್ಪಿಗೆ ಕೇಳಿದರೆ, “ಹುಡುಗೀರು ಹಾಗೆಲ್ಲ ಒಬ್ಬೊಬ್ಬಳೇ ಹೊರಗೆ ಹೋಗಬಾರದು’ ಅಂತಾರೆ. ಆಗಲೂ ಅನ್ನಿಸುತ್ತಿತ್ತು- ಅಣ್ಣ ಬೇಕು ಅಂತ. ಇಂತಹದ್ದೇ ನೂರು ಸಂದರ್ಭಗಳನ್ನು ನಾನು ವಿವರಿಸಬಲ್ಲೆ. ಅಣ್ಣ ಎಂಬ ಶಬ್ದ ಕೊಡೋ ಕಾನ್ಫಿಡೆನ್ಸೇ ಅಂಥಾದ್ದು. ಅವನ ಸ್ಥಾನವನ್ನು ಯಾವ ಗೆಳಯ, ಗೆಳತಿ, ಬಾಯ್ಫ್ರೆಂಡೂ ತುಂಬಲಾರ. ಅದಕ್ಕೇ ಹೇಳಿದ್ದು, ನನಗೂ ಒಬ್ಬ ಅಣ್ಣ ಬೇಕಿತ್ತು ಅಂತ. ಕೇವಲ ರಕ್ಷಾಬಂಧನದಂದು ಅವನಿಂದ ಉಡುಗೊರೆ ತೆಗೆದುಕೊಳ್ಳಲು, ಪಂಚಮಿ ಹಬ್ಬಕ್ಕೆ ಕರೆಯೋಕೆ ಮಾತ್ರ ನನಗೆ ಅಣ್ಣ ಬೇಕಾಗಿಲ್ಲ. ಬದಲಾಗಿ, ನಾನೀಗ ಜೀವನದ ಅನೇಕ ತಿರುವುಗಳನ್ನು ಪಡೆದುಕೊಳ್ಳುವ ಹಂತದಲ್ಲಿ ಬಂದು ನಿಂತಿದ್ದೇನೆ. ಭವಿಷ್ಯದ ನಿರ್ಧಾರ ತೆಗೆದುಕೊಳ್ಳುವ ಕವಲು ದಾರಿಯಲ್ಲಿ ನಿಂತಿದ್ದೇನೆ. ಈ ಹಂತದಲ್ಲಿ ಖಂಡಿತ ಅಣ್ಣನೊಬ್ಬ ಬೇಕಿದ್ದ ಅಂತ ಅನ್ನಿಸುತ್ತಾ ಇದೆ.
ಅಣ್ಣನಿಲ್ಲವೆಂಬ ನೋವು ಆಗಾಗ ನನ್ನನ್ನು ಕಾಡ್ತಾನೆ ಇರುತ್ತದೆ, ಪ್ರತಿವರ್ಷ ರಕ್ಷಾಬಂಧನ ಬಂದಾಗಲೆಲ್ಲ ಗೆಳತಿಯರು ರಾಖೀ ಕೊಂಡುಕೊಳ್ಳುವ ಗಡಿಬಿಡಿಯಲ್ಲಿರುವಾಗ ನನ್ನ ಮನಸ್ಸು ಅದೇಕೋ ಸಪ್ಪೆಯಾಗಿ ಬಿಡುತ್ತದೆ. “ಅವರು ನನ್ನ ಅಣ್ಣನ ಹಾಗೆ. ಇವರು ನನ್ನ ಅಣ್ಣನ ಹಾಗೆ’ ಅಂತ ಅಂದುಕೊಳ್ಳುವುದಕ್ಕೂ ಅವನೇ ನನ್ನ ಅಣ್ಣ ಅಂತ ಅನ್ನುವುದಕ್ಕೂ ತುಂಬಾ ವ್ಯತ್ಯಾಸ ಇದೆ. ಅದಕ್ಕೆ ಗುನುಗುತ್ತಿದ್ದೇನೆ- “ನನಗೂ ಒಬ್ಬ ಅಣ್ಣ ಬೇಕು’. ಪಿನಾಕಿನಿ ಪಿ. ಶೆಟ್ಟಿ
ಸ್ನಾತಕೋತರ ಪದವಿ ಕೆನರಾ ಕಾಲೇಜು, ಮಂಗಳೂರು