Advertisement

ರಾಜ್ಯದ ಹಣಕಾಸು ಸ್ಥಿತಿ ನನ್ನೊಬ್ಬನಿಗೆ ಗೊತ್ತು

11:30 PM Oct 18, 2019 | Lakshmi GovindaRaju |

ಬೆಂಗಳೂರು/ಕುಣಿಗಲ್‌: “ರಾಜ್ಯದ ಹಣಕಾಸಿನ ಸ್ಥಿತಿ ಏನೆಂಬುದು ಹಣಕಾಸು ಸಚಿವನೂ ಆಗಿರುವ ನನ್ನೊಬ್ಬನಿಗೆ ಮಾತ್ರ ಗೊತ್ತು’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಎಡೆಯೂರು ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

Advertisement

“ನಾನು ರಾಜಕೀಯದ ಬಗ್ಗೆ ಮಾತನಾಡಲು ಹೋಗುವುದಿಲ್ಲ. ರಾಜ್ಯದ ಹಣಕಾಸಿನ ಸ್ಥಿತಿ ಏನೆಂಬುದು ಹಣಕಾಸು ಸಚಿವನೂ ಆಗಿರುವ ನನ್ನೊಬ್ಬನಿಗೆ ಮಾತ್ರ ಗೊತ್ತು. ನಾನು ಸಿಎಂ ಆಗಿ ಕೇವಲ ಎರಡು ತಿಂಗಳಾಗಿದೆ. ರಾಜ್ಯದ ಹಣಕಾಸಿನ ಲಭ್ಯತೆ ನೋಡಿಕೊಂಡು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಅತಿವೃಷ್ಠಿಯಿಂದ ಎರಡು ಲಕ್ಷ ಮನೆ ನೆಲ ಸಮವಾಗಿದೆ. 7 ಲಕ್ಷ ಹೆಕ್ಟೇರ್‌ ಭೂಮಿ ಸಂಪೂರ್ಣ ನಾಶವಾಗಿದೆ. ಸಂತ್ರಸ್ತರಿಗೆ ಹಣ ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ. ರೈತ ಕಂಗಾಲಾಗಿ ಬೀದಿಯಲ್ಲಿ ನಿಂತಿದ್ದಾನೆ. ಇದಕ್ಕೆ ಹಣ ಒದಗಿಸಲು ಹಾಗೂ ಹಿಂದಿನ ಸರ್ಕಾರ ಕೈಗೊಂಡಿದ್ದ ರೈತರ ಸಾಲಮನ್ನಾಕ್ಕೆ ಹಣ ಒದಗಿಸಲು ಮೊದಲು ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿಗಳ ಹಣವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದರು.

ಎಡೆಯೂರು ಸಿದ್ದಲಿಂಗೇಶ್ವರಗೆ ವಿಶೇಷ ಪೂಜೆ: ತಮ್ಮ ಮನೆ ದೇವರು ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು. ಬಿಎಸ್‌ವೈ ಅವರು, ಪುತ್ರರಾದ ಸಂಸದ ರಾಘವೇಂದ್ರ, ವಿಜಯೇಂದ್ರ, ಪುತ್ರಿಯರಾದ ಉಮಾದೇವಿ, ಅರುಣಾ ದೇವಿ ಹಾಗೂ ಇತರ ಕುಟುಂಬ ಸದಸ್ಯರ ಜತೆ ಗುರು ವಾರವೇ ಎಡೆಯೂರಿಗೆ ಆಗಮಿಸಿದ್ದರು.

ಶುಕ್ರವಾರ ಬೆಳಗ್ಗೆ 9 ಗಂಟೆಗೆ ದೇವಾಲಯಕ್ಕೆ ಆಗಮಿಸಿದ ಮುಖ್ಯ ಮಂತ್ರಿಯನ್ನು ಸಕಲ ಗೌರವದೊಂದಿಗೆ ಬರಮಾಡಿ ಕೊಳ್ಳಲಾಯಿತು. ದೇವಸ್ಥಾನವನ್ನು ಸುಮಾರು 4 ಲಕ್ಷ ರೂ.ವೆಚ್ಚದಲ್ಲಿ ಹೂವಿನಿಂದ ಅಲಂಕರಿಸಲಾಗಿತ್ತು. ಬಳಿಕ, ಸ್ವಾಮಿಗೆ ಏಕಾದಶ ರುದ್ರಾಭಿಷೇಕ, ರಾಜೋಪಚಾರ, ರುದ್ರಾಭಿಷೇಕ, ಬೆಳ್ಳಿರಥೋತ್ಸವ ಸಹಿತ ವಿಶೇಷ ಪೂಜೆ ನೆರವೇರಿಸಿದರು.

Advertisement

ನಂತರ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ದೇವಾಲಯದ ಪ್ರವೇಶ ಪ್ರಾಂಗಣ, ನಡು ಪ್ರಾಂಗಣ, ರುದ್ರಾಭಿಷೇಕ ಮಂಟಪ, ಪ್ರದಕ್ಷಿಣಾ ಪ್ರಾಂಗಣ ಹಾಗೂ ಸಿದ್ದಲಿಂಗೇಶ್ವರಸ್ವಾಮಿ ಪವಾಡ ದೃಶ್ಯಗಳಿಗೆ ಬಟನ್‌ ಒತ್ತುವ ಮೂಲಕ ಚಾಲನೆ ನೀಡಿದರು. ಬಳಿಕ, ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡುತ್ತಿರುವ ದಿ.ಮೈತ್ರಿದೇವಿ-ಬಿ.ಎಸ್‌.ಯಡಿಯೂರಪ್ಪ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮಿ ಈ ವೇಳೆ ಹಾಜರಿದ್ದರು.

ಪಾದ ತೊಳೆದ ಕಾರ್ಯಕರ್ತ: ಈ ಮಧ್ಯೆ, ಯಡಿಯೂರಪ್ಪನವರು ದೇವಾಲಯಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ಕಾರ್ಯಕರ್ತ ಅಪ್ಪು ಹರೀಶ್‌ ಎಂಬುವರು ಬಿಎಸ್‌ವೈ ಅವರ ಪಾದ ತೊಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಾವರ್ಕರ್‌ ಕುರಿತ ಸಿದ್ದು ಹೇಳಿಕೆಗೆ ಖಂಡನೆ: “ದೇಶಪ್ರೇಮಿ ವಿನಾಯಕ ದಾಮೋದರ್‌ ಸಾವರ್ಕರ್‌ ಅವರನ್ನು ನಾಥೂರಾಮ್‌ ಗೋಡ್ಸೆಗೆ ಹೋಲಿಸಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿರುವುದು ಕೀಳು ಅಭಿರುಚಿಯ ಪ್ರತೀಕವೆನಿಸಿದೆ. ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಕೂಡಲೇ ಸಿದ್ದರಾಮಯ್ಯ ಅವರು ನಾಡಿನ ಜನತೆಯ ಕ್ಷಮೆ ಯಾಚಿಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಈ ಸಂಬಂಧ ಶುಕ್ರವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಿದ್ದರಾಮಯ್ಯ ಅವರು ಸಾವರ್ಕರ್‌ ಕುರಿತು ಲಘುವಾಗಿ ಹೇಳಿಕೆ ನೀಡಿರುವುದು ಅವರ ಘನತೆಗೆ ತಕ್ಕದ್ದಲ್ಲ. ವೀರ ಸಾವರ್ಕರ್‌ ಅವರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಅಪ್ಪಟ ದೇಶ ಪ್ರೇಮಿಯಾಗಿದ್ದು, ಅವರಿಗೆ ಭಾರತರತ್ನ ನೀಡುವ ಬಗ್ಗೆ ಕೆಲ ಕಾಂಗ್ರೆಸ್‌ ನಾಯಕರು ಬೆಂಬಲ ಸೂಚಿಸಿದ್ದಾರೆ.

ಅಂತವರ ವಿರುದ್ಧ ಲಘುವಾದ ಹೇಳಿಕೆ ನೀಡುವ ಮೂಲಕ ಅಗ್ಗದ ಪ್ರಚಾರ ಗಿಟ್ಟಿಸಿಕೊಳ್ಳುವ ಹುನ್ನಾರ ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ಳುವುದು ಸೂಕ್ತ. ಈ ರೀತಿ ಅಸಂಬದ್ಧವಾಗಿ ಹೇಳಿಕೆ ನೀಡುವುದರಿಂದ ತಾವೊಬ್ಬ ಉತ್ತಮ ವಾಗ್ಮಿ, ಬುದ್ದಿವಂತ ಎಂದು ಭಾವಿಸಿದ್ದರೆ ಅದು ಅವರ ಭ್ರಮೆ ಎಂದು ಕಿಡಿ ಕಾರಿದ್ದಾರೆ.

ಎಡೆಯೂರು ಕ್ಷೇತ್ರದಲ್ಲಿ ನನ್ನ ಶ್ರೀಮತಿ ಮೈತ್ರಿದೇವಿ ಹೆಸರಿನಲ್ಲಿ 4 ಕೋಟಿ ರೂ.ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಆಗಿದೆ. ನನ್ನ ಸ್ವಂತ ಹಣದಿಂದ ನಾಳೆಯಿಂದಲೇ ಕಾಮಗಾರಿ ಪ್ರಾರಂಭ .
-ಯಡಿಯೂರಪ್ಪ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next