Advertisement

ಬಾಂಬ್‌ ಶಬ್ದ ಬಿಟ್ಟು ಬೇರೇನೂ ಕೇಳಿಸುತ್ತಿರಲಿಲ್ಲ

11:58 PM Feb 27, 2022 | Team Udayavani |

ಬೆಂಗಳೂರು: ಇಂದು ಅಥವಾ ರಾತ್ರಿ ವೇಳೆಗೆ ದೊಡ್ಡ ಮಟ್ಟದ ಬಾಂಬ್‌ ದಾಳಿಯಾಗಬಹುದು. ಖಾರ್ಕಿವ್ ನಗರದ ಎಲ್ಲ ಕಟ್ಟಡಗಳ ಮೇಲೆಯೂ ಬಾಂಬ್‌ ದಾಳಿ ನಡೆಸುತ್ತವೆ ಎಂದು ರಷ್ಯನ್‌ ಎಂಬಸಿ ಮೆಸೇಜ್‌ ಕಳುಹಿಸಿತ್ತು. ಈ ಸಂದೇಶ ನೋಡಿದ ಅನಂತರ ನಾವು ಬದುಕುತ್ತೇವೆಂಬ ಆಸೆ ಬಿಟ್ಟು, ಸಾವು- ಬದುಕಿನ ನಡುವೆ ಜೀವನ ನಡೆಸುತ್ತಿದ್ದೇವೆ.

Advertisement

ಇದು ಖಾರ್ಕಿವ್ ಇಂಟರ್‌ ನ್ಯಾಷನಲ್‌ ಮೆಡಿಕಲ್‌ ಯೂನಿ ವರ್ಸಿಟಿಯಲ್ಲಿ ಮೊದಲ ವರ್ಷದ ವೈದ್ಯಕೀಯ ಕೋರ್ಸ್‌ ವ್ಯಾಸಂಗ ಮಾಡುತ್ತಿರುವ ಬೆಂಗಳೂರಿನ ಕೆ.ಆರ್‌. ಪುರದ ರೀಚಾ ಸೋನು ಅವರು ಮಾಧ್ಯಮದೊಂದಿಗೆ ಆಡಿದ ಆತಂಕದ ನುಡಿಗಳು.

ನಾನು ಇದೇ ಫೆ. 6ರಂದು ಉಕ್ರೇನ್‌ ತಲುಪಿದ್ದೇನೆ. ಯುದ್ದ ಆರಂಭವಾಗುವ ಒಂದು ವಾರದ ಹಿಂದೆಯಷ್ಟೇ ಬಂದಿದ್ದೇನೆ.

ಇಲ್ಲಿ ನರಕಯಾತನೆ
ಇದೀಗ ಜೀವನ ನರಕಯಾತನೆ ಯಾಗಿದೆ. ಕಳೆದ ನಾಲ್ಕು ದಿನಗಳಿಂದ ಅಲ್ಲಲ್ಲಿ ಬಾಂಬ್‌ ಬ್ಲಾಸ್ಟ್‌ ಶಬ್ದವಷ್ಟೇ ಕೇಳಿಸುತ್ತಿದೆ. ಬೇರೇನೂ ಕೇಳಿಸುತ್ತಿಲ್ಲ. ಇದೀಗ ರಷ್ಯನ್‌ ಎಂಬಸಿ ಮೆಸೇಜ್‌ ನೋಡಿದ ಮೇಲೆ ನಾವು ಬದುಕುತ್ತೇವೆಂಬ ಭರವಸೆಯನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದರು.

ಮೊಬೈಲ್‌ ಫ್ಲೈಟ್‌ ಮೋಡ್‌ಗೆ ಇಡಲು ರಷ್ಯಾ ಸೂಚನೆ
ಯಾರೊಬ್ಬರೂ ತಮ್ಮ ಮೊಬೈಲ್‌ಗ‌ಳಲ್ಲಿ ಮಾತನಾಡಬೇಡಿ ಮತ್ತು ಸಂದೇಶಗಳನ್ನು ಕಳುಹಿಸಬೇಡಿ. ಮೊಬೈಲ್‌ಗ‌ಳನ್ನು ಫ್ಲೈಟ್‌ ಮೋಡ್‌ಗೆ ಹಾಕಿ ಎಂಬ ಕಟ್ಟಪ್ಪಣೆ ನೀಡಲಾಗಿದೆ. ಮನೆಯವರ ಜತೆ ಮಾತನಾಡಲು ಸಹ ನೆಟ್‌ವರ್ಕ್‌ ಸಮಸ್ಯೆಯಾಗುತ್ತಿದೆ ಏನು ಮಾಡಬೇಕೆಂಬುದೇ ತಿಳಿಯುತ್ತಿಲ್ಲ ಎಂದು ತಿಳಿಸಿದರು.

Advertisement

ತಮ್ಮ ನೋವು ಆಲಿಸದ ಇಂಡಿಯನ್‌ ಎಂಬಸಿ
ಇಂಡಿಯನ್‌ ಎಂಬಸಿಯು ಪಶ್ಚಿಮ ಉಕ್ರೇನ್‌ನಲ್ಲಿ ಸುರಕ್ಷಿತವಾಗಿರುವ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆಸಿಕೊಳ್ಳುತ್ತಿದೆ. ಚೆರ್ನಿಸ್ಟಿ ಬುಕೊವಿನಿಯನ್‌ ಸ್ಟೇಟ್‌ ಮೆಡಿಕಲ್‌ ಯೂನಿವರ್ಸಿಟಿ ವಿದ್ಯಾರ್ಥಿಗಳನ್ನು ಮಾತ್ರ ರಕ್ಷಣೆ ಮಾಡಿದೆ. ಆದರೆ, ಯುದ್ಧಪೀಡಿತ ಪ್ರದೇಶವಾಗಿರುವ ಖಾಕೀìವ್‌ ನಗರದಲ್ಲಿ ಭಾರತದ ಸುಮಾರು 30 ಸಾವಿರಕ್ಕೂ ಹೆಚ್ಚಿನ ಭಾರತೀಯರಿದ್ದಾರೆ. ಇಲ್ಲಿರುವ ಯಾವೊಬ್ಬ ವಿದ್ಯಾರ್ಥಿಗಳನ್ನು ಇಂಡಿಯನ್‌ ಎಂಬಸಿ ಸಂಪರ್ಕಿಸಿಲ್ಲ. ನಾವು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ನಾನು ಈ ಮೂಲಕ ಭಾರತೀಯ ರಾಯಭಾರಿಗಳನ್ನು ಕೇಳಿಕೊಳ್ಳುವುದು ಇಷ್ಟೇ. ಸುರಕ್ಷಿತ ಪ್ರದೇಶಕ್ಕಿಂತ ಸಂಕಷ್ಟದಲ್ಲಿ ಇರುವವರ ರಕ್ಷಣೆಗೆ ಮೊದಲು ದಾವಿಸುವಂತೆ ಮನವಿ ಮಾಡಿದ್ದಾರೆ.

4 ದಿನಗಳಿಂದ ಊಟ, ನೀರಿಲ್ಲ
ಕಳೆದ ನಾಲ್ಕು ದಿನಗಳಿಂದ ಹಾಸ್ಟೆಲ್‌ ನೆಲಮಹಡಿಯಲ್ಲಿ ಕೊಠಡಿಯೊಂದರಲ್ಲಿ ಕೂಡಿ ಹಾಕಲಾಗಿದೆ. ಊಟ, ನೀರಿಲ್ಲ. ನಳ್ಳಿ ನೀರನ್ನೇ ಕುಡಿಯುತ್ತಿದ್ದೇವೆ. ಸಮರ್ಪಕ ಶೌಚಾಲಯ ವ್ಯವಸ್ಥೆ ಇಲ್ಲ, ಸ್ನಾನ ಕೂಡ ಆಗಿಲ್ಲ. ದಿನದ 24 ಗಂಟೆಯೂ ಬಾಂಬ್‌ ಬ್ಲಾಸ್ಟ್‌ ಶಬ್ದವನ್ನಷ್ಟೇ ಕೇಳಿಸುತ್ತಿದೆ. ಬೇರೆನೂ ಕೇಳಿಸುತ್ತಿಲ್ಲ ಎಂದು ಪರಿಸ್ಥಿತಿಯ ಭೀಕರತೆಯನ್ನು ವಿವರಿಸಿದರು.

ಕೀವ್‌ ಮತ್ತು ಖಾರ್ಕಿವ್ ಪ್ರದೇಶದಲ್ಲಿರುವ ಯಾರೊಬ್ಬರನ್ನು ಭಾರತೀಯ ರಾಯಭಾರಿ ಕಚೇರಿ ಈ ವರೆಗೆ ಸಂಪರ್ಕಿಸಿಲ್ಲ. ದಿನದ 24 ಗಂಟೆಯೂ ಬಾಂಬ್‌ ಬ್ಲಾಸ್ಟ್‌ ಅಷ್ಟೇ ಕೇಳಿಸುತ್ತಿದ್ದು, ನಾವು ಬದುಕುತ್ತೇವೆಂಬ ಆಸೆ ಕ್ಷಣದಿಂದ ಕ್ಷಣಕ್ಕೆ ಕಮರಿ ಹೋಗುತ್ತಿದೆ.
– ರೀಚಾ ಸೋನು, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next