Advertisement

ಯಾನ್‌ ಟೀಚರ್‌ ಮೇರ್‌ ಎನ್ನ ಗುರು!

10:23 AM Jan 18, 2020 | mahesh |

ಎಂಥ ಅಪರೂಪದ ದೃಶ್ಯವಿದು! ಎರಡೂ ಪಾದಗಳನ್ನು ಒತ್ತಾಗಿ ಇರಿಸಿಕೊಂಡು, ಅಂಗಳದ ಅಂಚಿನಲ್ಲಿ ನಿಂತಿರುವ ಮನೆಯ ಯಜಮಾನ. ತಾಮ್ರದ ತಂಬಿಗೆಯಲ್ಲಿ ನೀರು ತಂದುಕೊಡುತ್ತಿರುವ ಪತ್ನಿ ! “ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌ ಅವರ ಮನೆ ಯಾವ ಕಡೆ ಬರುತ್ತದೆ?’ ಎಂದು ಅವರ ಬಳಿ ಕೇಳಬೇಕೆನ್ನುವಷ್ಟರಲ್ಲಿ ಹಿಂಗಾಲುಗಳಿಗೆ ನೀರು ಹೊಯ್ಯುತ್ತ ಆ ವ್ಯಕ್ತಿ ತಲೆ ಎತ್ತಿದರು. “ಬಲೆ ಬಲೆ ! ಯಾನೇ ದಯಾನಂದ ಕತ್ತಲಸಾರ್‌’ ಎನ್ನುತ್ತ ಇದಿರುಗೊಂಡರು. ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಆಗಾಗ ಅವರ ಫೊಟೊ ಎಲ್ಲರೂ ನೋಡಿದವರೇ.”ಸಾದಿ ಮಿನಿ ಬಂದ್ ಆಂಡ?’ ಎಂದು ಮಾತಿಗೆ ತೊಡಗಿದವರು. ಮಂಗಳೂರು ಪೇಟೆಯಿಂದ ಶಕ್ತಿನಗರಕ್ಕೆ ಬಂದು ವಿಶ್ವಕೊಂಕಣಿ ಕೇಂದ್ರ ದಾಟಿದರಾಯಿತು, ಅಲ್ಲಿಯೇ ಸಂಜಯನಗರದಲ್ಲಿ ದಯಾನಂದರ ಮನೆ. “ಕತ್ತಲ್‌ಸಾರ್‌ ಹುಟ್ಟೂರಾದರೂ ಶಕ್ತಿನಗರದಲ್ಲೇ ನಾನು ಅಂಚೆ ಬಟವಾಡೆ ಮಾಡುತ್ತಿದ್ದುದರಿಂದ ಇಲ್ಲೇ ಮನೆ ಮಾಡಿಕೊಂಡೆ’ ಎನ್ನುತ್ತ ಒಳನಡೆಯುತ್ತಿರುವ ಅವರನ್ನು ಅನುಸರಿಸಿದೆವು. “ಬಾಜೆಲ್‌ಗ…?’ ಎನ್ನುತ್ತ ಕೇಳಿದ್ದಾರಷ್ಟೆ; ಮನೆಯ ಯಜಮಾನಿ¤ ಶೈಲಜಾ ಕಂಪು ಬೀರುವ ಓಷಧೀಯ ಸಣ್ತೀದ ನೀರನ್ನು ತಂದು ಟೀಪಾಯಿ ಮೇಲಿಟ್ಟರು.

Advertisement

“ನೋಡು ಶೈಲಜಾ, ಇವರು ನಿನ್ನ ಬಳಿಯೇ ಮಾತನಾಡಲು ಬಂದವರು… ‘ಎನ್ನುತ್ತ ದಯಾನಂದರು ಪತ್ನಿಗೆ ನಮ್ಮ ಪರಿಚಯ ಮಾಡಿಕೊಟ್ಟರು. “ನಾನೇನು ಮಾತನಾಡಲಿ!’ ಎನ್ನುತ್ತ ಮಾತಿಗೆ ಶುರುವಿಟ್ಟ ಶೈಲಜಾ, ಸಹಜ ಶೈಲಿಯಲ್ಲಿ, ಬಹಳ ಕಾಲದ ಬಳಿಕ ಭೇಟಿಯಾಗುತ್ತಿರುವ ಸಹಪಾಠಿಯಂತೆ ಸುಖಕಷ್ಟ ಹಂಚಿಕೊಳ್ಳತೊಡಗಿದರು.

ನನ್ನ ತವರು ಮನೆ ಇಲ್ಲೇ ಪಕ್ಕದಲ್ಲಿದೆ. ಬಾಲ್ಯದಲ್ಲಿ ಮೈಲುಗಟ್ಟಲೆ ನಡೆದು ಶಾಲೆಗೆ ಹೋಗುವುದು, ಮನೆಯಲ್ಲಿ ಕೆಲಸ ಕಲಿಯುವುದರ ಹೊರತಾಗಿ ಹೆಚ್ಚೇನೂ ಅರಿವಿರಲಿಲ್ಲ. ಅಮ್ಮ ಸುಂದರಿ ದುಡಿಯುತ್ತಿ ದ್ದರು. ಮುಂಬಯಿಯಲ್ಲಿ ದುಡಿಮೆ ಮಾಡುತ್ತಿದ್ದ ದೊಡ್ಡಮ್ಮ ಭಾರತಿ ನಮಗೆ ಹೊಟ್ಟೆಬಟ್ಟೆಗೆ ಕೊರತೆ ಆಗದಂತೆ ನೋಡಿಕೊಂಡರು. ಪದವಿ ಎರಡನೆಯ ವರ್ಷ ಓದುವಾಗಲೇ ನನಗೆ ಇವರೊಡನೆ ಮದುವೆ ಯಾಯಿತು. ಮುಂದಕ್ಕೆ ನನಗೆ ಇವರೇ ಕಾಲೇಜು ಓದಿಸಿದರು. ಬಿಎಡ್‌ಪದವಿಯನ್ನೂ ಪಡೆದು ಹೈಸ್ಕೂಲ್‌ ಟೀಚರ್‌ ಆದೆ.

ಮದುವೆಗೆ ಮುನ್ನ ಮನೆಯ ಕಷ್ಟವನ್ನಷ್ಟೇ ಅರಿತಿದ್ದೆ. ಆದರೆ, ಮದುವೆಯಾಗಿ ಬಜ್ಪೆ ಬಳಿಯ ಕತ್ತಲ್‌ಸಾರ್‌ಗೆ ಹೋದ ಬಳಿಕ ಇವರ ಮಾತುಗಳಿಗೆ ಕಿವಿಯಾಗುತ್ತ, ನನಗೆ ಹೊಸಲೋಕವೇ ತೆರೆದು ಕೊಂಡಂತಾಯಿತು. ಮೊದಲನೆಯದಾಗಿ, ಇವರು ನೇಮದ ಮುದ್ರೆ ಧರಿಸಿದವರಾದ್ದರಿಂದ ದೈನಂದಿನ ಆಚರಣೆಗಳನ್ನು ಕಲಿಯಬೇಕಾಗಿತ್ತು. ನನ್ನ ಅತ್ತಿಗೆ ಜಯಂತಿ ಅದನ್ನೆಲ್ಲ ಪ್ರೀತಿಯಿಂದ ಹೇಳಿಕೊಟ್ಟರು. ಮಾವ ಗುರುವಪ್ಪ ಬಂಗೇರ ಅವರಿಂದ ನೇಮಕಟ್ಟುವ ಮುದ್ರೆ ಇವರಿಗೆ ದೊರೆಯಿತು. ಅವರು ನೇಮಕಟ್ಟಲು ಹೋಗುವಾಗ ಅತ್ತೆ ಭವಾನಿಯವರ ಜೊತೆ ನಾನೂ ಹೋಗುತ್ತಿದ್ದೆ.

ಇವರು ವೈಯಕ್ತಿಕವಾಗಿಯೂ ಸ್ವಲ್ಪ ಹಠವಾದಿಯೇ. ಮದುವೆಗೆ ಮುಂಚೆ ಆರ್ಯಸಮಾಜದಲ್ಲಿ ನಾಲ್ಕು ವರ್ಷ ಋಗ್ವೇದ ಅಧ್ಯಯನ ಮಾಡಿದ್ದರು. ತುಳುಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳು, ಅಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಈಗಲೂ ಓದುತ್ತಾರೆ. ನನಗೆಲ್ಲಿ ಅದೆಲ್ಲ ತಲೆಗೆ ಹೋಗುತ್ತದೆ! ನಾನು ಟೀಚರ್‌ ಆದರೂ ಅವರೇ ನನ್ನ ಬದುಕಿಗೆ ಗುರು. ಮದುವೆಗೆ ಮುಂಚೆ ಅವರು ಪಟ್ಟ ಕಷ್ಟವನ್ನು ಆಗಾಗ ನನ್ನಲ್ಲಿ ಹೇಳಿಕೊಂಡಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿ ಇವರು ಕರ್ನಾಟಕ ಪಾಲಿಟೆಕ್ನಿಕ್‌ನಲ್ಲಿ ಇಲೆಕ್ಟ್ರಾನಿಕ್‌ ಮತ್ತು ಕಮ್ಯುನಿಕೇಷನ್ಸ್‌ ಓದಲು ಆಯ್ಕೆಯಾಗಿದ್ದರಂತೆ. ಆದರೆ, ಫೀಸು, ಪುಸ್ತಕ, ಹೊಟ್ಟೆಬಟ್ಟೆ ಹೊಂದಿಸುವುದು ಸಾಧ್ಯವಾಗದೆ, ಕೊನೆಗೆ ಮೇಸ್ತ್ರಿ ಕೆಲಸ, ಬಸ್‌ ಕಂಡಕ್ಟರ್‌ ಕೆಲಸ, ಪೈಂಟಿಂಗ್‌, ಐಸ್‌ಕ್ರೀಮ್‌ ತಯಾರಿಕೆ ಎಲ್ಲವನ್ನೂ ಮಾಡಿದವರು. ಕೊನೆಗೆ ಸುಂಕದಕಟ್ಟೆ ನಿರಂಜನ ಸ್ವಾಮೀಜಿಯವರು ಇವರಿಗೆ ವಸತಿ, ಶಿಕ್ಷಣ ಕೊಟ್ಟರು. ಪಿಯುಸಿ ಮುಗಿಸಿದ ಬಳಿಕ ಸುಧೀರ್‌ಪ್ರಸಾದ್‌ ಶೆಟ್ಟಿಯವರ ನೆರವಿನಿಂದ ಅವರಿಗೆ ಅಂಚೆಯ ಉದ್ಯೋಗ ಸಿಕ್ಕಿತು. ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುವಾಗ ಇವರ ಕಣ್ಣಲ್ಲಿ ಈಗಲೂ ನೀರು ಕಾಣುತ್ತದೆ. ಕಷ್ಟದ ದಿನಗಳನ್ನು ದಾಟಿದ್ದರಿಂದಲೇ ಅವರಿಗೆ ಬೇರೆಯವರ ಕಷ್ಟ ಅರ್ಥವಾಗುತ್ತದೆ. ಅಂಚೆ ಬಟವಾಡೆ ಕೆಲಸ ಮಾಡುತ್ತಿದ್ದಾಗ, ಪ್ರತಿದಿನ ಅಪರಾಹ್ನ ಬಿಡುವು ಇರುತ್ತಿತ್ತು. ಶಕ್ತಿನಗರದ ಸುಮಾರು 60 ಮಂದಿ ಹಿರಿಯ ನಾಗರಿಕರಿಗೆ “ಸಂಧ್ಯಾಸುರಕ್ಷಾ’ ಯೋಜನೆಯ ಅರ್ಜಿ ತುಂಬಿ, ಪೆನ್ಶನ್‌ ಬರುವಂತೆ ಮಾಡಿಕೊಟ್ಟಿದ್ದರು. ನಾನೂ ಇವರೊಂದಿಗೆ ಕೈ ಜೋಡಿಸಿದ್ದೆ.

Advertisement

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಾನು ಇಂಗ್ಲಿಷ್‌ ಡಿಪ್ಲೊಮಾ ಮಾಡಿದ್ದೇನೆ- ಮದುವೆಯಾದ ಮೇಲೆ. ಇವರದು ಕನ್ನಡ ಡಿಪ್ಲೊಮಾ ಆಗಿದೆ. ಇಬ್ಬರೂ ಒಂದುವಾರ ತರಗತಿಗೆಂದು ಮೈಸೂರಿಗೆ ತೆರಳಿ, ಒಟ್ಟಾಗಿ ಓದಿದ್ದು ಈಗಲೂ ನೆನಪಿದೆ. ಹಾಗೇ ಮೈಸೂರು ಸುತ್ತಾಡಿದೆವು. ಬಹಳ ಚೆಂದದ ದಿನಗಳವು. “ಇವಳನ್ನು ಮದುವೆಯಾದ ಮೇಲೆ ನನಗೆ ಒಳ್ಳೆಯ ದಿನಗಳು ಬಂದವು’ ಅಂತ ಇವರು ಆಗಾಗ ಬೇರೆಯವರಲ್ಲಿ ಹೇಳುತ್ತಾರೆ. ನನಗೆ ತುಂಬ ಖುಷಿ.

ಇತ್ತೀಚೆಗೆ ಇವರು ಎಫ್ಎಂನಲ್ಲಿ, ತುಳು ಅಕಾಡೆಮಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ತುಂಬ ಸಕ್ರಿಯರಾಗಿದ್ದಾರೆ. ಹಾಗಾಗಿ, ನಾನು ಟೀಚರ್‌ ಕೆಲಸ ಬಿಟ್ಟಿದ್ದೇನೆ. ವೈಯಕ್ತಿಕ ಸಮಸ್ಯೆ ಹೆಚ್ಚಾದಾಗ ನಮ್ಮ ಸಮುದಾಯದವರು ದುಶ್ಚಟಗಳನ್ನು ಅಂಟಿಸಿಕೊಳ್ಳುವುದು ಬೇಗ. ಆದರೆ, ಇವರೆಂದೂ ಯಾವುದೇ ವ್ಯಸನಕ್ಕೆ ಶರಣಾದವರಲ್ಲ. ಆದ್ದರಿಂದ, ನಾವು ಈ ಸಂಜಯನಗರದಲ್ಲಿ ಚೆ‌ಂದದ ಹೊಸಮನೆ ಕಟ್ಟಿಕೊಳ್ಳುವುದು ಸುಲಭವಾಯಿತು.

ಜಗಳವೂ ಆಗುತ್ತದೆ ಎನ್ನಿ!
ಹೆಗಲ ಮೇಲಿನ ಶಾಲನ್ನು, ಕರವಸ್ತ್ರವನ್ನು ಎಲ್ಲೆಂದರಲ್ಲಿ ಹಾಕುವುದು ಅವರ ಕೆಟ್ಟಬುದ್ಧಿ. ಅದೇ ವಿಷಯಕ್ಕೆ ನಮ್ಮ ನಡುವೆ ಜಗಳವಾಗುತ್ತದೆ. ನಾನು ಎಲ್ಲವನ್ನೂ ಒಪ್ಪವಾಗಿ ಇಡುತ್ತೇನೆ ಎಂಬ ಬಗ್ಗೆ ಅವರ ಮನಸ್ಸಿನಲ್ಲಿ ಗೌರವವಿದೆ. ಆದರೂ ಸುಮ್ಮನೆ ಜಗಳ ನಡೆಯುತ್ತದೆ. 8ನೆಯ ತರಗತಿಯಲ್ಲಿರುವ ಮಗ ಕೀರ್ತನ್‌ ನಮ್ಮ ಜಗಳ ನೋಡಿ ನಗುತ್ತಾನೆ.

ನೇಮ ಮುಗಿಸಿ ಅವರು ಮನೆಗೆ ಬರುವಾಗ ನಾನು ಕಾಲಿಗೆ ನೀರು ಕೊಟ್ಟು ಬರಮಾಡಿಕೊಳ್ಳಬೇಕು. ಹೊರಡುವ ಮುನ್ನವೇ ಐದು ಮಡಿವಸ್ತ್ರಗಳನ್ನು, ಕುಡಿಯಲು ಬಿಸಿನೀರನ್ನು ಸಿದ್ಧಮಾಡಿಕೊಡುವುದು ಇದ್ದೇ ಇದೆ. ಆದರೆ, ಅವರು ಬಜ್ಪೆ ಬಳಿಯ ಪೆರಾರದಲ್ಲಿ ಮೂರು ದಿನ ಪಿಲಿಚಾಮುಂಡಿ, ಉಳ್ಳಾಕ್ಲು, ಬಲವಂಡಿ ನೇಮ ನೆರವೇರಿಸುವುದು ನೋಡುವಾಗ ನನಗೆ ಮೈ ಝುಂ ಅನ್ನುತ್ತದೆ. ಮೊದಲ ದಿನ ಪಿಲಿಚಾಮುಂಡಿ ನೇಮ ಮಾಡಿ, ಮರುದಿವಸ ಉಳ್ಳಾಕ್ಲು ನೇಮ ಮಾಡುತ್ತಾರೆ. ಉಳ್ಳಾಕ್ಲು ದೈವ ಗಗ್ಗರವಿಟ್ಟ ಬಳಿಕ ಚಿಕ್ಕ ಅಣಿಯಲ್ಲಿ ಕುಣಿತ ಮಾಡಿ, 1001 ಹಾಳೆಗಳ ದೊಡ್ಡ ಅಣಿಯನ್ನು ಹೊತ್ತು ಕುಣಿತ ಮಾಡಬೇಕು. ಅದಾದ ಬಳಿಕ ಮತ್ತೆ ಚಿಕ್ಕ ಅಣಿ ಧರಿಸಿ ಪಕ್ಕದ ಬಂಟಕಂಬಳದ ಬಳಿ ತೆರಳಿ ಊರಿನವರ “ವಾಗ್ದೋಷ ನಿವಾರಣೆ’ಯ ನುಡಿ ಹೇಳಬೇಕಾಗುತ್ತದೆ. ನೂರಾರು ಜನರಿಗೆ ವಾಗ್ದೋಷ ನಿವಾರಣೆ ನುಡಿ ಹೇಳಿಮುಗಿಯುವ ಹೊತ್ತಿಗೆ ಮಧ್ಯಾಹ್ನವಾಗಿಬಿಡುತ್ತದೆ. ಸುಮಾರು 24 ಗಂಟೆಗೂ ದೀರ್ಘ‌ಕಾಲ ಉಪವಾಸವಿದ್ದುಕೊಂಡು ನೇಮ ಮಾಡಬೇಕು. ನೋಡಿಯೇ ದಣಿಯುವಷ್ಟು ದೀರ್ಘ‌ ಪ್ರಕ್ರಿಯೆ ಅದು. ಮೂರನೆಯ ದಿನ ಬಲವಂಡಿ ನೇಮವನ್ನು ಅವರಣ್ಣ ಸತೀಶ್‌ ಮಾಡುತ್ತಾರೆ. ಈ ಎಲ್ಲ ಕೈಂಕರ್ಯಗಳನ್ನು ನಡೆಸುವುದಕ್ಕೆ ದೈವವೇ ಅವರಿಗೆ ಶಕ್ತಿ ನೀಡುವುದೆಂದು ನಾನು ನಂಬಿದ್ದೇನೆ. ಹಾಗೆ ನೇಮ ಮುಗಿಸಿ ಅವರು ಮನೆಗೆ ಬರುವಾಗ ಬಹಳ ದಣಿದಿರುತ್ತಾರೆ. ಬೇರೆಯವರ ಹೆಗಲ ಮೇಲೆ ಕೈಯಿಟ್ಟು , ಬಸವಳಿದು ಅವರು ಒಳಬರುತ್ತಿರಬೇಕಾದರೆ ಅತ್ತೆಯ ಕಣ್ಣಲ್ಲೂ ನೀರು ಮೂಡುತ್ತದೆ.

ಅವರಿಗೆ ಊಟ ಸಿದ್ಧಮಾಡುವುದು ನನಗೆ ಸಂಭ್ರಮ. ಪ್ರತಿದಿನ ತಲೆಗೆ ಮಿಂದು ಅಡುಗೆ ಕೆಲಸ ಶುರುಮಾಡಬೇಕು. ಮುದ್ರೆ ಧರಿಸಿದವರು ಉಣ್ಣುವಾಗ ದೀಪ ಆರಬಾರದು ಎಂಬ ನಿಯಮವಿದೆ. ಆದ್ದರಿಂದ, ದೇವರಿಗೆ ದೀಪ ಹಚ್ಚಿ ಅವರು ಊಟಕ್ಕೆ ಕುಳಿತುಕೊಳ್ಳುತ್ತಾರೆ. ಅವರು ಅಪ್ಪಟ ಸಸ್ಯಾಹಾರಿ. “ಉಪ್ಪಡ್‌ ಪಚ್ಚಿರ್‌’ ಎಂದರೆ ಅವರಿಗೆ ಪಂಚಪ್ರಾಣ. ಮುದ್ರೆ ಧರಿಸಿದವರು ಕಾಲುಂಗುರ, ಮುದ್ರೆಯ ಕಡಗ, ಜುಟ್ಟು, ತಿಲಕ, ಕಿವಿಯಲ್ಲಿ ಒಂಟಿ ಧರಿಸಿರಬೇಕು ಎಂಬ ನಿಯಮವನ್ನೂ ಅವರು ಅನುಸರಿಸುತ್ತಾರೆ.

ಹೇಗೋ ಬದುಕು ಸಾಗಿದರಾಯಿತು ಎಂದುಕೊಂಡಿದ್ದವಳು ನಾನು. ದೇವರು ಇಷ್ಟು ದೂರ ಚೆನ್ನಾಗಿಯೇ ನಡೆಸಿ ತಂದಿದ್ದಾನೆ, ಮುಂದೆಯೂ ನಡೆಸುತ್ತಾನೆ ಎಂಬ ನಂಬಿಕೆ-ಭರವಸೆಯನ್ನು ದೇವರು ಇವರ ಮೂಲಕ ನನಗೆ ಕೊಟ್ಟಿದ್ದಾನೆ ಎನಿಸುತ್ತದೆ.

ಕೋಪಕ್ಕೆ ಮದ್ದು
ಇವರು ಸ್ವಲ್ಪ ಶೀಘ್ರಕೋಪಿ. ಕೆಲಸಕಾರ್ಯಗಳ ಒತ್ತಡದಲ್ಲಿ ಕೆಲವೊಮ್ಮೆ ಎದುರಿಗೆ ಯಾರಿದ್ದಾರೆ ಎಂದು ಗಮನಿಸದೇ ರೇಗುತ್ತಾರೆ. ಆ ಸಂದರ್ಭದಲ್ಲಿ ನಾನು ಒಂದು ಮಾತು ಕೇಳಿದರೆ ತಕ್ಷಣ ಅವರು ಕೋಪ ಕಡಿಮೆ ಮಾಡಿಕೊಂಡು ಸಮಾಧಾನ ಚಿತ್ತದಿಂದ ಆಲಿಸುತ್ತಾರೆ. ಅವರ ಈ ಸ್ವಭಾವ ನನಗೆ ಬಹಳವೆಂದರೆ ಬಹಳ ಇಷ್ಟ
-ಶೈಲಜಾ ದಯಾನಂದ

ಶೈಲಜಾ ದಯಾನಂದ್‌

Advertisement

Udayavani is now on Telegram. Click here to join our channel and stay updated with the latest news.

Next